Home News ಶಿಡ್ಲಘಟ್ಟದಲ್ಲಿ ಮನೆ ಮನೆಗೆ ಪೊಲೀಸ್ ಜಾಗೃತಿ ಅಭಿಯಾನ

ಶಿಡ್ಲಘಟ್ಟದಲ್ಲಿ ಮನೆ ಮನೆಗೆ ಪೊಲೀಸ್ ಜಾಗೃತಿ ಅಭಿಯಾನ

0

Sidlaghatta, Chikkaballapur District : ಶಿಡ್ಲಘಟ್ಟ ನಗರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಮನೆ ಮನೆಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ವೇಳೆ ನಗರಠಾಣೆ ಎಸ್‌ಐ ವೇಣುಗೋಪಾಲ್ ಸಾರ್ವಜನಿಕರಲ್ಲಿ ಮಾತನಾಡಿ, “ನಿಮ್ಮ ಸುತ್ತಮುತ್ತ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಅಥವಾ ಮಕ್ಕಳಿಗೆ ತೊಂದರೆ ಉಂಟಾಗುತ್ತಿದ್ದರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ. ನಿಮ್ಮ ಗುರುತನ್ನು ಸಂಪೂರ್ಣ ಗೌಪ್ಯವಾಗಿ ಕಾಪಾಡಿಕೊಳ್ಳಲಾಗುತ್ತದೆ” ಎಂದು ಮನವಿ ಮಾಡಿದರು.

ನಗರದ 11ನೇ ವಾರ್ಡಿನ ದೇಶದಪೇಟೆಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು — ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆಗಳು, ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಎಚ್ಚರಿಕೆಯ ನಡುವೆಯೂ ಜನ ಮೋಸಹೋಗುತ್ತಿರುವುದು ಆತಂಕಕಾರಿ ಬೆಳವಣಿಗೆ. “ಬುದ್ಧಿವಂತರು, ವಿದ್ಯಾವಂತರು, ಅಧಿಕಾರಿಗಳೇ ಕೂಡ ಇಂತಹ ವಂಚನೆಗೆ ತುತ್ತಾಗುತ್ತಿದ್ದಾರೆ. ಜನರಲ್ಲಿ ನಿಖರವಾದ ಸೈಬರ್ ಜಾಗೃತಿ ಮೂಡಬೇಕಿದೆ” ಎಂದರು.

ಅವರು ರೈತರಿಗೆ ಎಚ್ಚರಿಕೆ ನೀಡುತ್ತಾ, “ಹೆಚ್ಚಿನ ದರದ ಆಮಿಷಕ್ಕೆ ಒಳಗಾಗಿ ರೇಷ್ಮೆಗೂಡನ್ನು ಅನಾಮಧೇಯ ವ್ಯಾಪಾರಿಗಳಿಗೆ ಮಾರಬೇಡಿ. ಕೆಲವರು ಮೊದಲಿಗೆ ಹೆಚ್ಚು ಬೆಲೆ ನೀಡಿ ವಿಶ್ವಾಸ ಗಳಿಸಿ ನಂತರ ಊರು ಬಿಟ್ಟು ಓಡಿಹೋಗುತ್ತಾರೆ. ಇಂತಹವರ ವಿರುದ್ಧ ಎಚ್ಚರದಿಂದ ಇರಬೇಕು” ಎಂದರು.

ಎಸ್‌ಐ ವೇಣುಗೋಪಾಲ್ ಇನ್ನಷ್ಟು ಹೇಳಿ, “ನೀವು ಕೆಲವು ದಿನ ಮನೆ ಬಿಟ್ಟು ಹೊರಗೆ ಹೋಗಬೇಕಾದರೆ ಬೀಟ್ ಪೊಲೀಸರಿಗೆ ತಿಳಿಸಿ. ಅವರು ನಿಮ್ಮ ಮನೆ ಮೇಲೆ ನಿಗಾ ಇರಿಸುತ್ತಾರೆ. ಅಪ್ರಾಪ್ತ ಮದುವೆ, ಬೈಕ್ ವ್ಹೀಲಿಂಗ್ ಅಥವಾ ಅಕ್ರಮ ಚಟುವಟಿಕೆಗಳ ಬಗ್ಗೆ ಕೂಡ ಪೊಲೀಸರಿಗೆ ಮಾಹಿತಿ ನೀಡಿ,” ಎಂದು ಸಾರ್ವಜನಿಕರಲ್ಲಿ ವಿನಂತಿಸಿದರು.

ನಗರಸಭೆ ಪೌರಾಯುಕ್ತೆ ಜಿ. ಅಮೃತ ಮಾತನಾಡಿ, “ಪೊಲೀಸರು ಜನರೊಂದಿಗೆ ನೇರ ಸಂಪರ್ಕ ಸಾಧಿಸಲು ಇದು ಉತ್ತಮ ಕಾರ್ಯಕ್ರಮ. ಅಪರಾಧ ತಡೆಗಟ್ಟುವಿಕೆ, ಮಹಿಳೆಯರ ಸುರಕ್ಷತೆ ಮತ್ತು ಸೈಬರ್ ಭದ್ರತೆ ಕುರಿತ ಮಾಹಿತಿಯನ್ನು ಜನರ ಮನೆಮನೆಗೆ ತಲುಪಿಸುವಲ್ಲಿ ಇದು ಸಹಾಯಕವಾಗಿದೆ,” ಎಂದು ಪ್ರಶಂಸಿಸಿದರು.

ನಗರಸಭೆ ಸದಸ್ಯ ಅನಿಲ್ ಕುಮಾರ್ ಹೇಳಿದರು, “ಮಕ್ಕಳ ಚಟುವಟಿಕೆಗಳ ಮೇಲೆ ಪೋಷಕರು ಕಣ್ಣಿಡಬೇಕು. ಮೊಬೈಲ್‌ಗಳಲ್ಲಿ ಬೆಟ್ಟಿಂಗ್‌ ಆಟಗಳು ಯುವಕರಿಗೆ ಆಕರ್ಷಕವಾಗಿ ಕಾಣುತ್ತಿವೆ — ಅದರಿಂದಾಗುವ ಅಪಾಯಗಳನ್ನು ಮಕ್ಕಳಿಗೆ ತಿಳಿಹೇಳಬೇಕು,” ಎಂದು ಸಲಹೆ ನೀಡಿದರು.

ಪೊಲೀಸ್ ಸಿಬ್ಬಂದಿ, ವಾರ್ಡಿನ ನಾಗರೀಕರು ಹಾಗೂ ಸ್ಥಳೀಯ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

For Daily Updates WhatsApp ‘HI’ to 7406303366

Namma Sidlaghatta WhatsApp Channel

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version