
ಶಿಡ್ಲಘಟ್ಟ ತಾಲ್ಲೂಕಿನ ಸೊಣ್ಣೇನಹಳ್ಳಿ ಗ್ರಾಮದ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ನವಗ್ರಹ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ಹಾಗೂ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಗಳು ಭಾನುವಾರ ಮತ್ತು ಸೋಮವಾರ ವಿಜೃಂಭಣೆಯಿಂದ ನಡೆದವು.
ದೇವಾಲಯದ ಆವರಣದಲ್ಲಿದ್ದ ಹಳೆಯ ಅಶ್ವತ್ಥಕಟ್ಟೆಯ ಶಿಲೆ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ, ಅದನ್ನು ತೆರವುಗೊಳಿಸಿ ನೂತನವಾಗಿ ಕಾಂಕ್ರೀಟ್ ಕಾಮಗಾರಿಯೊಂದಿಗೆ ಅಶ್ವತ್ಥಕಟ್ಟೆಯನ್ನು ಪುನರ್ ಪ್ರತಿಷ್ಠಾಪಿಸಲಾಯಿತು. ಅಲ್ಲದೆ, ಗ್ರಾಮದಲ್ಲಿ ನವಗ್ರಹ ಮೂರ್ತಿಗಳ ಕೊರತೆ ಇದ್ದ ಹಿನ್ನೆಲೆಯಲ್ಲಿ ನೂತನ ನವಗ್ರಹ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಆಗಸ್ಟ್ 23 ಮತ್ತು 24ರಂದು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು. ಆಗಸ್ಟ್ 24 ರಂದು ಮಧ್ಯಾಹ್ನ 12ರಿಂದ 12.45ರವರೆಗೆ ಶುಭ ಮುಹೂರ್ತದಲ್ಲಿ ಮಹಾಕುಂಭ ಪ್ರೋಕ್ಷಣೆ ಹಾಗೂ ಮಹಾಮಂಗಳಾರತಿ ನೆರವೇರಿತು.
ಗ್ರಾಮಸ್ಥರ ಸಹಕಾರದಿಂದ ಎರಡು ವರ್ಷಗಳ ಹಿಂದೆ ವಿನಾಯಕ ದೇವಾಲಯವನ್ನು ನಿರ್ಮಿಸಲಾಗಿತ್ತು. ಇದೀಗ ನವಗ್ರಹಗಳ ಪ್ರತಿಷ್ಠಾಪನೆ ಹಾಗೂ ಅಶ್ವತ್ಥಕಟ್ಟೆ ಪುನರ್ ಪ್ರತಿಷ್ಠಾಪನೆಯೊಂದಿಗೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಂತಾಗಿದೆ.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರು, ಮಹಾದಾನಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮಗಳ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಇದೇ ರೀತಿ ತಾಲ್ಲೂಕಿನಲ್ಲಿ ಈ ಹಿಂದೆ ಶ್ರೀ ಸೋಮೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿತ್ತು.
In English: Sonnenahalli village’s Sri Sitaramanjaneya Swamy temple completed its renovation with a two-day celebration featuring the consecration of new Navagraha idols and the rebuilding of a deteriorated ashwattha katte (sacred fig-tree platform) in concrete. Various religious rituals were held over August 23-24, concluding with mahakumbha prokshane and mahamangalarati at an auspicious hour on the 24th. The temple’s renovation follows a Vinayaka temple built with community support two years earlier.




