
Sugaturu, Sidlaghatta : ಶಾಲೆಗಳು ಸಮುದಾಯದ ಅಂಶವಾಗಿ ರೂಪುಗೊಳ್ಳಬೇಕು, ಅದರಲ್ಲೂ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯದ ಬೆಂಬಲ ಅತ್ಯಂತ ಅಗತ್ಯ ಎಂಬುದನ್ನು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ರೇಣುಕಾ ಒತ್ತಿ ಹೇಳಿದರು.
ಶಿಡ್ಲಘಟ್ಟ ತಾಲೂಕು ಸುಗಟೂರು ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ನಮ್ಮ ಶಾಲೆ, ನಮ್ಮ ಜವಾಬ್ದಾರಿ’ ಹೋಬಳಿಮಟ್ಟದ ವಿಶೇಷ ಕಾರ್ಯಕ್ರಮ ನಡೆಯಿದ್ದು, ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಹಾಗೂ ಮಧ್ಯಾಹ್ನ ಬಿಸಿಯೂಟ ಯೋಜನೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ರೂಪುಗೊಂಡಿತ್ತು.
ಉದ್ದೇಶವಿರುವಂತಹ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಇಂದು ಗುಣಮಟ್ಟದ ಶಿಕ್ಷಕರು, ವೈಜ್ಞಾನಿಕ ಪ್ರಯೋಗಾಲಯ, ಗ್ರಂಥಾಲಯ, ಡಿಜಿಟಲ್ ಬೋಧನಾ ಸೌಲಭ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂ, ಸಾಕ್ಸ್ ಇತ್ಯಾದಿ ನೀಡಲಾಗುತ್ತಿದ್ದು, ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸೂಕ್ತ ಸದುಪಯೋಗವಾಗುತ್ತಿದೆ ಎಂದರು.
ಅಕ್ಷರದಾಸೋಹ ಸಹಾಯಕ ಶಿಕ್ಷಣಾಧಿಕಾರಿ ಆಂಜನೇಯ ಅವರು, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪೋಷಕಾಂಶಗಳ ಕೊರತೆ ತಡೆಯಲು ಮೊಟ್ಟೆ, ಬಾಳೆಹಣ್ಣು, ದುಗ್ಧಭಾಗ್ಯ ಮತ್ತು ಪೌಷ್ಟಿಕ ಬಿಸಿಯೂಟ ವ್ಯವಸ್ಥೆ ಮಕ್ಕಳಿಗೆ ನಿತ್ಯವೂ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಕೆ.ಎಚ್. ಪ್ರಸನ್ನಕುಮಾರ್ ಮಾತನಾಡಿ, ಸರಕಾರವು ನೀಡುತ್ತಿರುವ ಶೈಕ್ಷಣಿಕ ಸೌಲಭ್ಯಗಳು, ಪೋಷಕರಿಗೆ ಅರಿವಾಗಬೇಕಾಗಿದೆ. ಮಕ್ಕಳ ಹಾಜರಾತಿ ಮತ್ತು ನಿರಂತರ ಕಲಿಕೆಗೆ ಪೋಷಕರ ಸಹಕಾರವೂ ಮುಖ್ಯ ಎಂದರು.
ಕಾರ್ಯಕ್ರಮದ ವೇಳೆ ಶಾಲೆಯ ಸಾಧನೆ, ಹಾಜರಾತಿ ಮತ್ತು ದಾಖಲಾತಿ ಹೆಚ್ಚಳದ ಕುರಿತು ಪಿಪಿಟಿ ಪ್ರದರ್ಶನ, ಚರ್ಚೆ ಮತ್ತು ಸಮೀಕ್ಷೆ ನಡೆಯಿತು.
ಈ ಸಮಾರಂಭದಲ್ಲಿ ತಾ. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ. ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ರುದ್ರೇಶಮೂರ್ತಿ, ಎಸ್ಡಿಎಂಸಿ ಸದಸ್ಯರು, ಗ್ರಾಪಂ ಸದಸ್ಯ ಎ. ಸತೀಶ್ಕುಮಾರ್, ಮುಖ್ಯಶಿಕ್ಷಕಿ ಜಿ.ಎನ್. ನೇತ್ರಾವತಿ ಸೇರಿದಂತೆ ಹಲವಾರು ಶಾಲಾ ಮುಖ್ಯಸ್ಥರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ನ ಪ್ರತಿನಿಧಿಗಳು ಪಾಲ್ಗೊಂಡಿದ್ದರು.