
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕಹಳ್ಳಿಯ ಗೋಮಾಳ ಜಮೀನಿನ ಒತ್ತುವರಿ ತೆರವುಗೊಳಿಸಿ ಗೋಮಾಳದಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡಲು ಕ್ರಮವಹಿಸುವಂತೆ ಆಗ್ರಹಿಸಿ ಗ್ರಾಮದ ಕಲಾವಿದ ಈಧರೆ ಪ್ರಕಾಶ್ ತನ್ನ ಕುಟುಂಬ ಸಮೇತ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಹೊಂದಿಕೊಂಡಂತೆ ಗೋಮಾಳ ಜಮೀನು ಇದೆ. ಸದರಿ ಗೋಮಾಳವನ್ನು ಕೆಲ ಬಲಾಢ್ಯರು ಒತ್ತುವರಿ ಮಾಡಿಕೊಂಡಿದ್ದಾರೆ. ಆದರೆ ದಲಿತರು ಸೇರಿದಂತೆ ನಿವೇಶನ ಮತ್ತು ವಸತಿ ರಹಿತರು ಕಸ ಕಡ್ಡಿ ಹಾಕಿಕೊಳ್ಳಲು ತಿಪ್ಪೆಗೂ ಅಡ್ಡಿಪಡಿಸುತ್ತಿದ್ದಾರೆ.
ಸಾಕಷ್ಟು ಜಾನುವಾರುಗಳಿದ್ದು ಜಾನುವಾರುಗಳಿಗೆ ಮೇಯಲು ಮೇವು ಇಲ್ಲದಂತಾಗಿದೆ. ಗೋಮಾಳದಲ್ಲಿ ಜಾನುವಾರುಗಳನ್ನು ಮೇಯಲು ಬಿಡದಂತೆ ಬಲಾಢ್ಯರು ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿ ಈ ಧರೆ ಪ್ರಕಾಶ್ ತನ್ನ ಪತ್ನಿ, ಮಕ್ಕಳೊಂದಿಗೆ ಅಂಬೇಡ್ಕರ್ ಭಾವಚಿತ್ರ ಹಿಡಿದು ಕುರಿ ಮೇಕೆಯೊಂದಿಗೆ ವರದನಾಯಕನಹಳ್ಳಿಯಿಂದ ತಾಲ್ಲೂಕು ಕಚೇರಿಯವರೆಗೂ ತಮಟೆ ಬಾರಿಸಿಕೊಂಡು ಪಾದಯಾತ್ರೆ ಮೂಲಕ ಆಗಮಿಸಿ ಪ್ರತಿಭಟನೆಗೆ ಕುಳಿತರು.
ನಮ್ಮ ಕುಟುಂಬ ಸೇರಿದಂತೆ ಗ್ರಾಮದ ಅನೇಕ ಕುಟುಂಬಗಳು ಜೀವನೋಪಾಯಕ್ಕಾಗಿ ಗೋಮಾಳ ಜಮೀನಿನ ಮೇಲೆ ಅವಲಂಬಿತವಾಗಿದೆ. ಅದನ್ನು ಉಳಿಸಿಕೊಡಬೇಕು ಹಾಗೂ ಅಕ್ರಮಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಜತೆಗೆ ತಾಲ್ಲೂಕಿನಲ್ಲಿನ ಭ್ರಷ್ಟಾಚಾರ, ಸಮಸ್ಯೆಗಳು, ಅಭಿವೃದ್ದಿಗೆ ಅನುದಾನಕ್ಕಾಗಿ ಸದನದಲ್ಲಿ ಮಾತನಾಡುವ ಕ್ಷೇತ್ರದ ಶಾಸಕರು ದಲಿತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಸದನದಲ್ಲಿ ಪ್ರಸ್ತಾಪಿಸಬೇಕು ಮತ್ತು ಸ್ಥಳೀಯವಾಗಿ ಸಮಸ್ಯೆ ನಿವಾರಿಸಲು ಗಮನ ಹರಿಸಬೇಕೆಂದು ಆಗ್ರಹಿಸಿದರು.
ತಹಶೀಲ್ದಾರ್ ಗಗನ ಸಿಂಧು ಅವರು ಈಧರೆ ಪ್ರಕಾಶ್ ಅವರ ಮನವಿ ಆಲಿಸಿ “ಗೋಮಾಳ ಜಮೀನಿನ ಒತ್ತುವರಿ ತಡೆಯಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.