ರೇಷ್ಮೆಗೆ ಹೆಸರುವಾಸಿಯಾಗಿರುವ ತಾಲ್ಲೂಕಿನಲ್ಲಿ ಇತ್ತೀಚೆಗೆ ನೀರಿನ ಅಭಾವದಿಂದಾಗಿ ರೇಷ್ಮೆ ಬೆಳೆ ಕುಸಿಯುತ್ತಿದ್ದು ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾಗಿದೆ. ಹಾಗಾಗಿ ಈ ಉದ್ಯಮದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವುದರೊಂದಿಗೆ ರೈತರು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೃತಪಟ್ಟ ರಾಸುಗಳಿಗೆ ವಿಮೆ ಹಾಗು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು ಹಾಲಿನ ಉತ್ಪಾದನೆ ಹೆಚ್ಚಿಸುವುದರ ಜೊತೆಗೆ ಗುಣಮಟ್ಟದ ಹಾಲು ಸರಬರಾಜು ಮಾಡಿದಲ್ಲಿ ಒಕ್ಕೂಟವೂ ಉಳಿಯುವುದರೊಂದಿಗೆ ಈ ಭಾಗದ ಜನರ ಜೀವನಾಡಿಯಾಗುತ್ತದೆ ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ ಗುಣಮಟ್ಟದ ಹಾಲು ಉತ್ಪಾದನೆ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯಕ್ಕೆ ಅವಕಾಶ ನೀಡದೆ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದರೊಂದಿಗೆ ಸಹಕಾರಿ ಸಂಘಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಹಾಲಿನಲ್ಲಿ ಶೇ. ೩.೫ ರಷ್ಟು ಫ್ಯಾಟ್ ಮತ್ತು ಕನಿಷ್ಠ ಶೇ ೮.೫ ಎಸ್ಎನ್ಎಫ್ ಇರಲೆಬೇಕು. ಇಲ್ಲವಾದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ ನೀಡುತ್ತಿರುವ ೪ ರೂಪಾಯಿಗಳ ಪ್ರೋತ್ಸಾಹದನ ಸೇರಿದಂತೆ ಇತರೆ ಸರ್ಕಾರಿ ಸವಲತ್ತುಗಳಿಗೆ ಕಡಿವಾಣ ಬೀಳಲಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬಳಿ ನಿರ್ಮಾಣವಾಗುತ್ತಿರುವ ಕೋಚಿಮುಲ್ ಮೆಗಾಡೈರಿ ಕಾಮಗಾರಿ ಶೇ. ೭೦ ರಷ್ಟು ಮುಗಿದಿದ್ದು ಸ್ಥಳೀಯರಿಗೆ ಉದ್ಯೋಗವಾಕಾಶ ಕಲ್ಪಿಸುವುದರೊಂದಿಗೆ ಪ್ರತಿನಿತ್ಯ ೫ ಲಕ್ಷ ಲೀ ಗುಡ್ಲೈಫ್ ಫ್ಲೆಕ್ಸಿ ಪ್ಯಾಕ್ ಹಾಲು ಸಿದ್ದವಾಗುತ್ತದೆ. ಹಾಗಾಗಿ ಗುಣಮಟ್ಟದ ಹಾಲಿನ ಪೂರೈಕೆಗೆ ರೈತರು ಸಹಕರಿಸಬೇಕೆಂದರು.
ಕಳೆದ ವರ್ಷ ಮೃತಪಟ್ಟ ಸುಮಾರು ೨೭ ರಾಸುಗಳಿಗೆ ತಲಾ ೪೦ ಸಾವಿರದಂತೆ ಹಾಗು ೨೧ ವಿದ್ಯಾರ್ಥಿಗಳಿಗೆ ಒಟ್ಟು ೧,೫೭ ಸಾವಿರ ರೂ ವಿದ್ಯಾರ್ಥಿವೇತನದ ಚೆಕ್ಕನ್ನು ವಿತರಿಸಲಾಯಿತು.
ಕೋಚಿಮುಲ್ ಹಾಲು ಒಕ್ಕೂಟದ ಶಿಡ್ಲಘಟ್ಟ ಶಿಬಿರದ ವ್ಯವಸ್ಥಾಪಕ ಡಾ.ಕೆ.ಜಿ.ಈಶ್ವರಯ್ಯ, ಸಹಕಾರಿ ಯೂನಿಯನ್ ನಿರ್ದೇಶಕ ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಚೆಕ್ ವಿತರಣೆ ಕಾರ್ಯಕ್ರಮ
ಕಾಯಕವೆಂದರೆ
ಕಾಯವೆಂದರೆ ದೇಹ, ಕಾಯಕವೆಂದರೆ ದೇಹಶ್ರಮವೆಂದು ಅತ್ಯಂತ ಸರಳವಾಗಿ ಹೇಳುವವರೇ ಬಹಳ. ಅದು ತಪ್ಪೆಂದು ಹೇಳಲಾಗದಿದ್ದರು ಅದೇ ಸಂಪೂರ್ಣ ಸರಿ ಎಂದೂ ವಾದಿಸಲಿಕ್ಕಾಗದು. ಕಾಯಕವನ್ನು ಕೆಲಸದೊಂದಿಗೆ ಸಮೀಕರಿಸಿ ಮಾತನಾಡುವುದನ್ನು ನಾವು ಕಾಣುತ್ತೇವೆ. ಒಂದೊಮ್ಮೆ ಅದೇ ಸರಿ ಎಂದಾಗಿದ್ದರೆ ಬಸವಣ್ಣನವರು ಅತ್ಯಂತ ಸರಳವಾಗಿ ‘ಕೆಲಸವೇ ಕೈಲಾಸ’ ಎಂದು ಬಿಡುತ್ತಿದ್ದರೇನೋ, ಬದಲಿಗೆ ಅವರು ‘ಕಾಯಕವೇ ಕೈಲಾಸ’ ಎಂದಿದ್ದರ ಹಿಂದೆ ಬಹುಶಃ ‘ಕೆಲಸ’ದ ಕಲ್ಪನೆ ಮಾತ್ರ ಅಡಗಿದ್ದಿರಲು ಸಾಧ್ಯವಿಲ್ಲವೆನ್ನಿಸುತ್ತದೆ. ಬಹುಶಃ ಕಾಯಕವೆಂದರೆ. ಜವಾಬ್ದಾರಿಯ – ಎಚ್ಚರಿಕೆಯ ಕೆಲಸ ಅಥವಾ ಕೆಲಸದಲ್ಲಿ ಜವಾಬ್ದಾರಿ ಎಚ್ಚರಿಕೆ. ಮುಂದುವರೆದು ಹೇಳುವುದಾದರೆ ‘ಹೊಣೆಗಾರಿಕೆ’. ಇಷ್ಟೇ ಅಲ್ಲ ಕಾಯಕವು ಕೈಲಾಸವನ್ನೊದಗಿಸುವ ಸನ್ನೆಯಾಗಬೇಕೆಂದಾದರೆ, ಅದು ಪ್ರಾಮಾಣಿಕತೆಯಿಂದ ಪರಿಶುದ್ಧತೆಯಿಂದ ಮತ್ತು ಆತ್ಮಸಾಕ್ಷಿಗನುಗುಣವಾಗಿ ನೆರವೇರುವಂಥದ್ದಾಗಿರಬೇಕು ಅದು ಕೇವಲ ‘ಕೆಲಸ’ವಾಗದೆ ಕರ್ತವ್ಯವಾಗುವುದು ಅಗತ್ಯವೆನ್ನಿಸುತ್ತದೆ.
ಸ್ವಲ್ಪ ವಿಷದವಾಗಿ ಹೇಳುವುದಾದರೆ, ಇಂಗ್ಲೀಷ್ನಲ್ಲಿ Seeing and observing ನೋಡುವುದು ಮತ್ತು ಗ್ರಹಿಸುವುದು, ಕೆಲವರು ಸುಮ್ಮನೆ ನೋಡುತ್ತಾರೆ, ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ, ದೇವಸ್ಥಾನಕ್ಕೆ ಹೋಗಿ ದೇವರನ್ನು ನೋಡಿ, ಕೈಮುಗಿದು ಬರುವುದು ಬೇರೆ ಮತ್ತೆ ಅದೇ ದೇವಸ್ಥಾನಕ್ಕೆ ಹೋಗಿ ದೇವರನ್ನು ನೋಡಿ, ಕೈಮುಗಿದು ಬರುವುದು ಬೇರೆ ಮತ್ತೆ ಅದೇ ದೇವಸ್ಥಾನದ ಕುರಿತು, ಅಲ್ಲಿನ ಶಿಲ್ಪಕಲೆ ಕುರಿತು, ಸಂಪ್ರದಾಯದ ಕುರಿತು ಮಾಹಿತಿ ಪಡೆದು ಬರುವುದು ಬೇರೆ, ಒಂದು ಬರಿದೆ ನೋಡುವುದು ಇನ್ನೊಂದು ಚಿಕಿತ್ಸಕ ದೃಷ್ಟಿಯಿಂದ ನೋಡುವುದು, ಹಾಗೇ,hearing and listening ಕೇಳುವುದು ಮತ್ತು ಆಲಿಸುವುದು. ನಮ್ಮ ಕಿವಿಯ ಮೇಲೆ ಬೀಳುವ ಧ್ವನಿಗಳನ್ನು ಕೇಳುತ್ತವೆ ಸಹಜ. ಆದರೆ ಉದ್ದೇಶಪೂರ್ವಕವಾಗಿ ಏನನ್ನಾದರೂ ಲಕ್ಷಗೊಟ್ಟು ಕೇಳಿದರೆ ಅದು ಆಲಿಸುವ ಪ್ರಕ್ರಿಯೆಯಾಗುತ್ತದೆ, ಅಲ್ಲಿ ಕೇಳಿದ್ದು ನಮ್ಮೊಳಗೆ ಇಳಿದಿರುತ್ತದೆ, ಸುಮ್ಮನೆ ಹಾದು ಹೋಗಿರುವುದಿಲ್ಲ, ಬಹುಶಃ ಹೀಗೇ Work and duty ಕೆಲಸ ಮತ್ತು ಕರ್ತವ್ಯ, ಕರ್ತವ್ಯವೂ ಕೆಲಸವೇ ಹೌದಾದರೂ ಅಲ್ಲಿ ಕೆಲಸಕ್ಕೆ ಒಂದು ವಿಶಿಷ್ಟ ಜವಬ್ದಾರಿ ಇರುತ್ತದೆ, ಅದರ ಅರಿವಿರುತ್ತದೆ, ಅಲ್ಲಿ ಬದ್ಧತೆ, ಸಿದ್ಧತೆಗಳೆರಡೂ ಇರುತ್ತದೆ, ಇದು ಸಾಧ್ಯವಾಗುವುದು ಮನುಷ್ಯರಿಗೆ ಮಾತ್ರ, ಕತ್ತೆ ಹೊರೆಯನ್ನು ಹೊರುವ ಕೆಲಸಮಾಡುತ್ತದೆ, ನಿಜ ಆದರೆ ಅಲ್ಲಿ ಅವುಗಳಿಗೆ ಜವಬ್ದಾರಿಯ ಪ್ರಶ್ನೆ ಎದುರಾಗುವುದಿಲ್ಲ, ಅದು ಕೇವಲ ಅವುಗಳ ದೈಹಿಕ ಶ್ರಮವಾಗಬಹುದೇ ವಿನಃ ಅದಕ್ಕೆ ಬೌದ್ಧಿಕ ಆಯಾಮ ಲಭ್ಯವಾಗಿರುವುದಿಲ್ಲ, ಅದೇ ಮನುಷ್ಯರ ‘ಕಾಯಕ’ವೆಂದರೆ ಅಲ್ಲಿ ದೈಹಿಕ ಶ್ರಮದೊಟ್ಟಿಗೆ ಬೌದ್ಧಿಕತೆಯೂ ಸಕ್ರಿಯವಾಗಿ ಸ್ಪಂದಿಸಿರುತ್ತದೆ, ಬುದ್ಧಿ ಭಾವಗಳು ಕೂಡ ಮಿಳಿತವಾಗುವುದು, ಹೀಗಿರುವುದರಿಂದ ಕಾಯಕವೆಂದರೆ ದೇಹದ ಶ್ರಮ ಎನ್ನುವುದರ ಜೊತೆಗೇ ಇದೇ ದೇಹದ ಅಂಗವಾದ ಮಿದುಳಿನ ಶ್ರಮವನ್ನು ಮರೆಯಲಾಗದು. ಬೇರ್ಪಡಿಸಿ ವ್ಯಾಖ್ಯಾನಿಸುವೂದೂ ಅಪ್ರಸ್ತುತವಾಗಿಬಿಡಬಹುದು.
ಕಾಯಕಕ್ಕೆ ಪರ್ಯಾಯವಾಗಿ ‘ದುಡಿಮೆ’ ಎಂದರೂ ಸರಿಯಾಗಲಾರದು ಕಾರಣವಿಷ್ಟೇ ‘ದುಡಿಮೆ’ ಕೆಲಸವಾದರೂ ಅದು ಪ್ರತಿಫಲವನ್ನು ನಿರೀಕ್ಷಿಸುವಂಥದ್ದು, ದುಡಿದದ್ದಕ್ಕೆ ಕೂಲಿ ಯಾ ಸಂಬಳವನ್ನು ಬಯಸುವಂಥದ್ದು, ಅದು ಬದುಕಿನ ನಿರ್ವಹಣೆಗೆ ಅಗತ್ಯವಾದದ್ದು, ಇಂದು ನಾವು ಸಾಮಾನ್ಯವಾಗಿ ಹೇಳುವ ‘ವೃತ್ತಿಯ’ ಹಿಂದಿನ ಮನಸ್ಥಿತಿಯೂ ಇದೇ ಬಗೆಯದ್ದು ‘ವಿತ್ತ’ ಮೂಲಧಾರದ್ದು. ನಾವಿಂದು ಎಲ್ಲೆಡೆಗೆ ಕಾಣುವ ಸಾಮಾನ್ಯ ಸಂಗತಿಯೆಂದರೆ ವಿತ್ತದ ಮೇಲಿನ ಪ್ರೀತಿ, ಹಾಗಾಗಿಯೇ ಎಲ್ಲ ಬುಕ್ಗಳಿಗಿಂತ ಚೆಕ್ ಬುಕ್ ಮಹತ್ವವುಳ್ಳದ್ದಾಗಿರುವುದು!
ದಿನನಿತ್ಯದ ಬದುಕಿನಲ್ಲಿ ನಿಜವಾದ ಅರ್ಥದಲ್ಲಿ duty ಗೆ ಹೋಗುವವರೇ ಬೇರೆ, ಕೇವಲ ಶಬ್ದವನ್ನಷ್ಟೇ ಉದುರಿಸಿದರೆ ಪ್ರಯೋಜನವಿಲ್ಲ ಕೆಲಸಕ್ಕೆ, ಗೇಯಲು ಹೋಗುವವರೇ ಬೇರೆ, ವೃತ್ತಿಯ ಮೇಲಿನ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುವವರು ‘ಕಾಯಕ’ ದವರು. ಕೇವಲ ಹೊತ್ತು ಕಳೆದು – ಸಂಬಳಕ್ಕಾಗಿ ಕೈಯೊಡ್ಡುವುದಕಷ್ಟೇ ಸೀಮಿತವಾದರು ‘ಕಾಯಕ’ದವರಲ್ಲ, ಕೆಲಸದ ಹೆಸರಿನಡಿ ಮೋಸ ಮಾಡುವವರು ಕಂಡಕಂಡದ್ದಕ್ಕೆಲ್ಲ ಕೈಯೊಡ್ಡಿ, ಮನಃಶಾಂತಿಯನ್ನು ಕೆಡಿಸಿಕೊಂಡು ಒಂದಿಷ್ಟು ಕುಡಿದೇ ನಿದ್ದೆಮಾಡುವವರೇ ವಿನಃ ಮನಃಶಾಂತಿಯಿಂದ ಸಹಜವಾಗಿ ನಿದ್ದೆ ಕೂಡ ಮಾಡಲಾರದವರು, ಇಂಥ ಕೆಲಸವನ್ನು ಬಹುಶಃ ಬಸವಣ್ಣನವರ ಕಾಯಕ ತತ್ವ ಖಂಡಿತ ಬೆಂಬಲಿಸುವುದಿಲ್ಲ. ಬಸವಣ್ಣನವರು ಪ್ರತಿಪಾದಿಸಿದ ‘ಕಾಯಕ ತತ್ವ’ ಬದುಕಿನ ಆದರ್ಶಗಳಲ್ಲಿ ಅಳವಡಿಸಿಕೊಳ್ಳುವ ಅಗತ್ಯವುಳ್ಳದ್ದು, ಕಾಯಕವೆಂದರೆ ದೇಹಶ್ರಮದಿಂದ ದುಡಿದು ಉಣ್ಣುವುದು ಎಂಬ ಅರ್ಥದಲ್ಲಿ ವ್ಯಾಖ್ಯಾನಿಸಲು ಹೊರಟಾಗಲು ಕೂಡ ಅದಕ್ಕೆ ಒಂದು ನಿಯತ್ತು ಇರಬೇಕಾದದ್ದು ಅನಿವಾರ್ಯ. ರಾಜನಾಗಲಿ, ಮಂತ್ರಿಯಾಗಲಿ ದೇಹಶ್ರಮವಿರದೆ ಉಣ್ಣಬಾರದು, ಎಂದರೆ ಒಂದು ಅವರ ದೇಹಾರ್ಯೋಗ್ಯದ ಪರಿಪಾಲನೆಯ ಸೂತ್ರವದರಲ್ಲಿ ಅಡಗಿರಬಹುದು. ‘Sound mind in the sound body’ ಎಂಬ ತತ್ವಕ್ಕನುಗುಣವಾಗಿ ಅವರ ಬೌದ್ದಿಕತೆಯ ಪುಷ್ಟಿಗಾಗಿ, ದೇಹದ ಪುಷ್ಟಿ ಅಗತ್ಯವಾಗಿರುವುದರಿಂದ ಹಾಗೇ ಕುಳಿತಲ್ಲೇ ಎಲ್ಲವನ್ನೂ ನಿರ್ಧರಿಸುವ ಬದಲು ಸ್ವಲ್ಪ ಎದ್ದು ಓಡಾಡಿ, ಖುದ್ದಾಗಿ ಜನರ ಸ್ಥಿತಿ ಗತಿ ತಿಳಿದು ವ್ಯವಹರಿಸುವ ಸದ್ಬುದ್ಧಿ ಬರಲೆಂಬ ಆಶಯವೂ ಅದರಲ್ಲಿ ಅಡಕವಾಗಿದ್ದೀತು. ಕೇವಲ ಕಡತಗಳ ಮೂಲಕ ಅಭಿವೃದ್ಧಿಯನ್ನು ಅಳೆದು ಹೇಳುವವರಿಗೆ ಇದು ಅಗತ್ಯ ಪಾಠವೂ ಆದೀತು. ತತ್ವ ಹೇಳಲಿಕ್ಕಾಗಿರುವುದಲ್ಲ, ಅದರ ಅರಿವಿದ್ದರಷ್ಟೇ ಸಾಲದು ಅದರ ಆಚರಣೆ ಕೂಡ ಅಷ್ಟೇ ಮುಖ್ಯ, ಹಾಗಾಗಿ ಪ್ರತಿಯೊಬ್ಬರೂ ಒಂದಲ್ಲ ಒಂದು ಕೆಲಸದಲ್ಲಿ, ವೃತ್ತಿಯಲ್ಲಿ, ದುಡಿಮೆಯಲ್ಲಿ ತೊಡಗಿಕೊಳ್ಳುವುದು ಅನಿವಾರ್ಯ ಅಗತ್ಯ. ಆದರೆ ಅದೇ ಸಂದರ್ಭದಲ್ಲಿ ಮಾಡುವ ಕೆಲಸದ ಕುರಿತು, ವೃತ್ತಿಯ ಕುರಿತು, ದುಡಿಮೆಯ ಕುರಿತು ಪ್ರೀತಿ ಶ್ರದ್ಧೆ ಮತ್ತು ಬದ್ದತೆ ಇದ್ದಲ್ಲಿ ಅದು ಕಾಯಕವಾಗಿ ಆಗ ಅವರ ಕಾಯಕವೇ ಕೈಲಾಸವಾದೀತು, ಒಂದೆ ಕೆಲಸಕ್ಕಾಗಿ ಕೆಲಸವೆಂಬ ತತ್ವ ಒಳ್ಳೆಯದಲ್ಲ, ಕಾಯಕಕ್ಕಾಗಿ ಕೆಲಸವೆಂಬಂತಿರಬೇಕು. ಇದನ್ನು ಸ್ಪಷ್ಟವಾಗಿ ಅರಿತ ಇಂಗ್ಲೀಷ್ ಕವಿ ತನ್ನ ‘Work’ ಎಂಬ ಕವಿತೆಯಲ್ಲಿ ಈ ರೀತಿ ಉದ್ಧರಿಸಿದ್ದಾನೆ, ಅದರ ಕನ್ನಡಾನುವಾದ ಈ ರೀತಿ ಇದೆ,
ಕಾಯಕವೇ ಅರ್ಥವಿಲ್ಲ
ಅದು ನಿನ್ನಲ್ಲಿ ಆವಾಹನೆಗೊಳ್ಳದಿದ್ದಲ್ಲಿ
ಆಟದೊಳಗೆ ಮಗ್ನಗೊಂಡಂತೆ
ಅದು ನಿನ್ನನ್ನೂ ಆವರಿಸಿಕೊಳ್ಳದಿದ್ದಲ್ಲಿ
ಅದು ಎಂದೂ ವಿನೋದವೆನ್ನಿಸದಿದ್ದಲ್ಲಿ
ಕೈ ಹಾಕದಿರು ಅದಕ್ಕೆ.
(ಅಂತರಂಗದ ಮಾತು, ಸಂಕಲನದಿಂದ)
ಅಂದರೆ ವ್ಯಕ್ತಿಯೋರ್ವ ನಿರ್ವಹಿಸುವ ಕೆಲಸದಲ್ಲಿ ಆತ ತನ್ಮಯನಾಗದೆ ಅದು ಆವಾಹಿಕೊಳ್ಳದೆ, ಖುಷಿಯಿರದೆ ಕಾಟಾಚಾರಕ್ಕೆಂಬಂತಾದರೆ ಅದು ಅರ್ಥಹೀನ, ಕಾಯಕವೆನ್ನುವುದು ಅರ್ಥಹೀನ ಚಟುವಟಿಕೆಯಾಗಬಾರದು. ಅದು ಸಿದ್ಧತೆ, ಬದ್ದತೆ, ಶ್ರದ್ಧೆ ನಿಯತ್ತುಗಳಿಂದ ಕೂಡಿದ್ದಾದರೆ ಮಾತ್ರ ಕಾಯಕ, ಕೈ ಬಾಯಿ ಶುದ್ಧವಾಗಿದ್ದು, ಅತ್ಮಸಾಕ್ಷಿಗನುಗುಣವಾಗಿ ನಿರ್ವಹಿಸುವ ಕರ್ತವ್ಯದಿಂದ ಮಾತ್ರ ಕುಟುಂಬ, ಸಮಾಜದ ಒಳಿತು ಸಾಧ್ಯ. ಕೆಲಸ ಯಾವುದೇ ಆಗಿರಲಿ ಅದು ಚಿಕ್ಕದಲ್ಲ, ಅದಕ್ಕೆ ಅದರದ್ದೇ ಆದ ಘನತೆ ಇದ್ದೇ ಇರುತ್ತದೆ. ಆ ಘನತೆಗೆ ಮುಕ್ಕುಬಾರದು ಎಚ್ಚರ ಸದಾ ಜಾಗೃತವಾಗಿದ್ದಲ್ಲಿ ಮಾಡುವ ಕೆಲಸ, ಕರ್ತವ್ಯದಿಂದ, ಕಾಯಕದ ಅರ್ಥಪ್ರಾಪ್ತಿಯಾಗುತ್ತದೆ, ದಿವ್ಯತೆಯೊದಗುತ್ತದೆ, ಅಂದಾಗ ಮಾತ್ರ ಕಾಯಕವೇ ಕೈಲಾಸ, ಹಾಗಲ್ಲದಿದ್ದಲ್ಲಿ ಅದು ಕೇವಲ ತೌಡುಕಟ್ಟುವ ಕೆಲಸ.
ರವೀಂದ್ರ ಭಟ್, ಕುಳಿಬೀಡು.
ರೈತರ ಭೂಮಿಯನ್ನು ಉಳಿಸಿಕೊಳ್ಳಲು ಹಾಗೂ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ
ರೈತರ ಭೂಮಿಯನ್ನು ಉಳಿಸಿಕೊಳ್ಳಲು ಹಾಗೂ ಬಯಲು ಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಪಾದಯಾತ್ರೆಯನ್ನು ಕೈಗೊಂಡಿದ್ದು, ಏಪ್ರಿಲ್ 28 ರಂದು ವಿಧಾನಸೌಧಕ್ಕೆ ತೆರಳಿ ಪ್ರತಿಭಟಿಸುವುದಾಗಿ ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ತಿಳಿಸಿದರು.
ನಗರದಲ್ಲಿ ಶನಿವಾರ ಘೋಷಣೆಗಳನ್ನು ಕೂಗುತ್ತಾ ರೈತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ದೂರದೃಷ್ಟಿ ಯೋಜನೆಗಳನ್ನು ರೂಪಿಸಬೇಕು. ಭೂ ಸ್ವಾಧೀನ ಕಾಯ್ದೆ ವಾಪಸ್ ಪಡೆಯಬೇಕು. ಬರಪೀಡಿತ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಡಿ.ವೈ.ಎಫ್.ಐ ರಾಜ್ಯ ಸಮಿತಿ ಸದಸ್ಯ ಮುನೀಂದ್ರ, ಫಯಾಜುಲ್ಲಾ, ಗುಲ್ಜಾರ್, ಮಂಜುನಾಥ್, ನರಸಿಂಹಪ್ಪ, ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮುನಿಕೆಂಪಣ್ಣ, ಪ್ರತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ನಗರದ ಸಿದ್ದಾರ್ಥನಗರದ ಮಾನಸ ಆಸ್ಪತ್ರೆಯಲ್ಲಿ ಭಾನುವಾರ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಇ.ಸಿ.ಜಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದ ಡಿ.ವೈ.ಎಸ್.ಪಿ ಸಣ್ಣತಿಮ್ಮಪ್ಪ, ‘ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ. ರಕ್ತದೊತ್ತಡ, ಮಧುಮೇಹ ಮುಂತಾದ ಖಾಯಿಲೆಗಳು ಒತ್ತಡದ ಜೀವನ ಹಾಗೂ ಕಲುಶಿತ ವಾತಾವರಣದ ಬಳುವಳಿಗಳಾಗಿದ್ದು, ಆರೋಗ್ಯ ತಪಾಸಣಾ ಶಿಬಿರದಲ್ಲಿ ಪೊಲೀಸರು ಕುಟುಂಬ ಸಮೇತ ಭಾಗವಹಿಸಿ, ಆರೋಗ್ಯವನ್ನು ಪರೀಕ್ಷಿಸಿಕೊಳ್ಳಿ’ ಎಂದು ಪೊಲೀಸರಿಗೆ ಕರೆ ನೀಡಿದರು.
ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ್, ಡಾ.ಮೋಹನ್ ಭಾರ್ಗವ್, ಪೊಲೀಸ್ ಬಿಬ್ಬಂದಿ ಹಾಜರಿದ್ದರು.
ರೈತರು ತಮ್ಮ ಬೆಳೆಗಳಿಗೆ ತಪ್ಪದೆ ವಿಮೆ ಮಾಡಿಸಬೇಕು
ರೈತರು ತಮ್ಮ ಬೆಳೆಗಳಿಗೆ ತಪ್ಪದೆ ವಿಮೆ ಮಾಡಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಕಾವೇರಿ ಹೇಳಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು ಮುಂತಾದ ಕಡೆಗಳಲ್ಲಿ ಬಿದ್ದಿದ್ದ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ನಷ್ಟಕ್ಕೀಡಾಗಿದ್ದ ಪ್ರದೇಶಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿ, ಬೆಳೆಗಳನ್ನು ಇಡುವಂತಹ ರೈತರು ತಮ್ಮ ಬೆಳೆಗಳಿಗೆ ವಿಮೆಯನ್ನು ಮಾಡಿಸುವಲ್ಲಿ ಹಿಂದೆ ಇದ್ದಾರೆ, ಇದರಿಂದಾಗಿ ಪ್ರಕೃತಿ ವಿಕೋಪಗಳು ಸಂಭವಿಸಿದಾಗ, ಅಪಾರ ಪ್ರಮಾಣದಲ್ಲಿ ಬೆಳೆಗಳು ನಷ್ಟವಾದಾಗ ಸರ್ಕಾರದಿಂದ ಬರುವಂತಹ ಸಹಾಯಧನಕ್ಕಿಂತ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಮಾ ಸೌಲಭ್ಯ ಸಿಗಲಿದ್ದು, ರೈತರಿಗೆಅಗತ್ಯವಾಗಿರುವ ಎಲ್ಲಾ ಮಾಹಿತಿಗಳನ್ನು ಅಧಿಕಾರಿಗಳು ನೀಡಬೇಕು. ವಿಮಾ ಸೌಲಭ್ಯಗಳ ಬಗ್ಗೆ ದ್ರಾಕ್ಷಿ ಬೆಳೆಗಾರರ ಸಂಘಗಳಿಗೆ ಮಾಹಿತಿಗಳನ್ನು ನೀಡಿ, ವ್ಯಾಪಕ ಪ್ರಚಾರ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸುಮಾರು ೧೦ ಕೋಟಿ ರೂಪಾಯಿಗಳಷ್ಟು ಬೆಳೆಗಳು ನಷ್ಟವಾಗಿವೆ, ಈ ಬಗ್ಗೆ ಪರಿಶೀಲನೆ ನಡೆಸಿ, ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗುತ್ತದೆ ಎಂದರು.
ಇದೇ ವೇಳೆ ಅಪಾರ ಪ್ರಮಾಣದಲ್ಲಿ ದ್ರಾಕ್ಷಿ, ಮಾವು, ತರಕಾರಿ ಬೆಳೆಗಳು ನಷ್ಟವುಂಟಾಗಿವೆ, ದ್ರಾಕ್ಷಿಯನ್ನು ಪ್ರತಿ ಕೆ.ಜಿಗೆ ೩೦ ರೂಪಾಯಿಗಳಂತೆ ಮಾರಾಟ ಮಾಡಿದ್ದೆವು, ೫೦ ಸಾವಿರ ಮುಂಗಡ ಹಣವನ್ನು ನೀಡಿದ್ದರು, ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿರುವುದರಿಂದ ಕೆ.ಜಿ.ದ್ರಾಕ್ಷಿಯನ್ನು ೮ ರೂಪಾಯಿಗಳಿಗೆ ಕೇಳುತ್ತಿದ್ದಾರೆ, ಮುಂಗಡ ಹಣವನ್ನು ವಾಪಸ್ಸು ಪಡೆದುಕೊಂಡು ಹೋಗಿದ್ದಾರೆ, ಮಾರುಕಟ್ಟೆಯ ಸೌಲಭ್ಯವಿಲ್ಲ, ಅವರು ಕೇಳಿದ ಧರಕ್ಕೆ ದ್ರಾಕ್ಷಿಯನ್ನು ಮಾರಾಟ ಮಾಡಬೇಕು, ಮಾರಾಟ ಮಾಡಿದ ನಂತರ ಕಟಾವು ಮಾಡಬೇಕಾದರೂ, ಏಜೆಂಟರ ಬಳಿಯಲ್ಲಿ ಹೋಗಿ ಗೋಗರೆಯಬೇಕು, ಅವರು ನೀಡುವಂತಹ ಬಿಲ್ಲುಗಳು ಅಧಿಕೃತವಾಗಿರುವುದಿಲ್ಲ, ಒಂದುಚೀಟಿಯಲ್ಲಿ ಬರೆದುಕೊಡುತ್ತಾರೆ, ಆ ಚೀಟಿಗಳು ಕಳೆದು ಹೋದರೆ ನಾವು ದ್ರಾಕ್ಷಿಯನ್ನು ಮಾರಾಟ ಮಾಡಿರುವ ಬಗ್ಗೆ ಖಾತ್ರಿಯಿರುವುದಿಲ್ಲ, ಆದ್ದರಿಂದ ರೈತರಿಗೆ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸಿಕೊಡುವಂತೆ ರೈತಗೋವಪ್ಪ ಅಧಿಕಾರಿಗಳ ಬಳಿಯಲ್ಲಿ ಮನವಿ ಮಾಡಿದರು.
ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಎಂ.ಗಾಯಿತ್ರಿ ಮಾತನಾಡಿ, ಮಹಾರಾಷ್ಟ್ರದ ಮಾದರಿಯಲ್ಲಿ ದ್ರಾಕ್ಷಿ ಬೆಳೆಗಾರರ ಸಂಘಗಳ ಮುಖಾಂತರವೇ ದರವನ್ನು ನಿಗಧಿ ಮಾಡುವಂತಹ ವ್ಯವಸ್ಥೆಯನ್ನು ಮಾಡಲು ಚಿಂತನೆ ನಡೆಸಲಾಗಿದೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ, ರೇಷ್ಮೆಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ತೋಟಗಾರಿಕಾ ಸಹಾಯಕ ನಿರ್ದೇಶಕ ಆನಂದ್ ಮುಂತಾದವರು ಹಾಜರಿದ್ದರು.
ಮಾರುತಿ ನಗರದಲ್ಲಿ ಉಟ್ಲು ಮಹೋತ್ಸವ
ನಗರದ ಹೊರವಲಯದ ಇದ್ಲೂಡು ರಸ್ತೆಯ ಮಾರುತಿ ನಗರದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶನಿವಾರ 20ನೇ ವರ್ಷದ ಉಟ್ಲು ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಯಿತು. ಹಾಲು ಉಟ್ಲು ಹಾಗೂ ಮನರಂಜನಾ ಉಟ್ಲು ಮಹೋತ್ಸವಕ್ಕೆ ನೂರಾರು ಜನರು ಸಾಕ್ಷಿಯಾದರು. ಲಕ್ಷ್ಮಣ, ವೆಂಕರಾಯಪ್ಪ, ಯರ್ರಪ್ಪನವರ ಕುಟುಂಬದವರು ಹಾಗೂ ಸಂಗಡಿಗರು ಉಟ್ಲು ಕಾಯನ್ನು ಹೊಡೆಯುವುದನ್ನು ಜನರು ವೀಕ್ಷಿಸಿ ಹುರಿದುಂಬಿಸಿದರು.
ಇದ್ಲೂಡಿನಲ್ಲಿ ಜಾತ್ರೆಯಂತೆ ಜನರು ಸೇರಿದ್ದು, ಸಾಕಷ್ಟು ಸಿಹಿ ತಿಂಡಿಗಳ, ಬತ್ತಾರು, ಖಾರ ಸೇರಿದಂತೆ ವಿವಿಧ ಆಟಿಕೆಗಳ ಅಂಗಡಿಗಳು ರಸ್ತೆ ಬದಿಯಲ್ಲಿ ಹಾಕಲಾಗಿತ್ತು. ಆಗಮಿಸಿದ್ದ ಜನರಿಗೆ ಹೆಸರುಬೇಳೆ ಹಾಗೂ ಪಾನಕವನ್ನೂ ವಿತರಿಸಲಾಯಿತು. ಅನ್ನದಾನವನ್ನು ಸಹ ದೇವಾಲಯದ ವತಿಯಿಂದ ಆಯೋಜಿಸಲಾಗಿತ್ತು. ಮಾರುತಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು.
ಭಗೀರಥ ಜಯಂತ್ಯುತ್ಸವ
ಕಠಿಣ ಶ್ರಮ, ತಪೋನಿಷ್ಠೆ, ಏಕಾಗ್ರತೆ, ದೈವಭಕ್ತಿ ಮತ್ತು ಸಾಹಸಕ್ಕೆ ‘ಭಗೀರಥ ಪ್ರಯತ್ನ’ ಎಂಬ ನುಡಿಗಟ್ಟಿಗೆ ಕಾರಣರಾದ ಭಗೀರಥ ಪುಣ್ಯಪುರುಷ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಉಪ್ಪಾರ ಸಂಘದ ಸಹಯೋಗದಲ್ಲಿ ಆಚರಿಸಿದ ಭಗೀರಥ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಪ್ಪಾರ ಜನಾಂಗ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಯಾಗುವುದರೊಂದಿಗೆ ಸಮಾಜಮುಖಿ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.
ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ದೊಡ್ಡತೇಕಹಳ್ಳಿ ಟಿ.ಗಂಗಪ್ಪ ಮಾತನಾಡಿ, ‘ಸೂರ್ಯವಂಶದ ಕ್ಷತ್ರಿಯರು ಕ್ಷತ್ರಿಯತ್ವವನ್ನು ತ್ಯಜಿಸಿ ‘ಉಪವೀರ’ ಎಂಬ ಹೆಸರಿನಿಂದ ಭೂಮಿಯ ಮಣ್ಣಿನ ಕ್ಷಾರ ಲವಣದಿಂದ ಉಪ್ಪು ತಯಾರಿಸಿ ವೃತ್ತಿ ಜೀವನ ನಡೆಸಿ ಉಪ್ಪಾರರಾಗಿದ್ದಾರೆ. ಕ್ಷತ್ರಿಯ ಕುಲದಲ್ಲಿ ಹುಟ್ಟಿ ತನ್ನ ತಪೋಬಲದಿಂದ ಮಹರ್ಷಿ ಎನಿಸಿಕೊಂಡ ಭಗೀರಥ ನಮ್ಮ ಕುಲದೈವವಾಗಿದ್ದು, ಪ್ರತಿವರ್ಷ ಆತನ ಜಯಂತ್ಯುತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ಈ ಬಾರಿಯಿಂದ ಸರ್ಕಾರವೂ ಆಚರಣೆಯಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.
ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಕಾರ್ಯನಿರ್ವಾಹಣಾಧಿಕಾರಿ ಡಿ.ಎನ್.ಗುರುಬಸಪ್ಪ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಎಇಇ ಶಿವಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ರಘುನಾಥರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಭಾವನಾ ಮಹರ್ಷಿ ಜಯಂತ್ಯುತ್ಸವ
ತಾಲ್ಲೂಕು ಪದ್ಮಶಾಲಿ ಸಂಘದ ವತಿಯಿಂದ ನಗರದಲ್ಲಿ ಭಾವನಾ ಮಹರ್ಷಿ ಜಯಂತ್ಯುತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಉಲ್ಲೂರುಪೇಟೆಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವೈಶಾಖ ಶುದ್ಧ ಸಪ್ತಮಿ ಶನಿವಾರ ಭಾವನಾ ಮಹರ್ಷಿ ಜಯಂತ್ಯುತ್ಸವದ ಅಂಗವಾಗಿ ಗಂಗಾಪೂಜೆ, ಕಳಶಸ್ಥಾಪನೆ, ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ವೀರಾಂಜನೇಯಸ್ವಾಮಿ, ಭದ್ರಾವತಿ ಹಾಗೂ ಭಾವನಾ ಮಹರ್ಷಿಗಳ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿದ್ದ ಹೂವಿನ ಪಲ್ಲಕ್ಕಿಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ತಮಟೆ ವಾದ್ಯ ವೃಂದದೊಂದಿಗೆ ಮೆರವಣಿಗೆ ಮಾಡಲಾಯಿತು. ತಾಲ್ಲೂಕು ಪದ್ಮಶಾಲಿ ಸಂಘದ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಪೂಜೆಯಲ್ಲಿ ಪಾಲ್ಗೊಂಡರು. ಪದ್ಮಶಾಲಿ ಸಂಘದ ಅಧ್ಯಕ್ಷ ಎಸ್.ಕೆ.ನಾಗರಾಜ, ಟಿ.ಲಕ್ಷ್ಮೀನಾರಾಯಣ, ಸಿ.ಎನ್.ವಾಸು, ಎಲ್.ಕೃಷ್ಣಮೂರ್ತಿ, ಬಿ.ಲಕ್ಷ್ಮಿನಾರಾಯಣ, ಪಾರ್ಥಸಾರತಿ, ಎನ್.ಲಕ್ಷ್ಮೀನಾರಾಯಣ, ಮಂಜುನಾಥ್, ರಾಜ್ಕುಮಾರ್, ಯಶ್ವಂತ್, ಪ್ರದೀಪ್, ಮುರಳಿ, ಪೃಥ್ವಿ, ಪವನ್, ಚೇತನ್, ಗುರು, ಸುರೇಶ್ ಮತ್ತಿತರರು ಹಾಜರಿದ್ದರು.
ಡಾ.ರಾಜ್ಕುಮಾರ್ ಜನ್ಮದಿನಾಚರಣೆ
ತಾಲ್ಲೂಕಿನ ಜಂಗಮಕೋಟೆ ಹೋಬಳಿ ತೊಟ್ಲಗಾನಹಳ್ಳಿಯಲ್ಲಿ ಶುಕ್ರವಾರ ಡಾ.ರಾಜ್ಕುಮಾರ್ ಅವರ 87 ನೇ ಜನ್ಮದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರು.
ಗ್ರಾಮವನ್ನೆಲ್ಲಾ ಸಿಂಗರಿಸಿ ವರನಟ ಡಾ.ರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿ ಅನ್ನಸಂತರ್ಪಣೆಯನ್ನು ನಡೆಸಿದರು. ಗ್ರಾಮದ ಯುವಕರು ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರಿಗೆ ಜಯಘೋಷವನ್ನು ಕೂಗುತ್ತಾ ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿದರು.
ಕನಕರಾಜು, ಲೋಕೇಶ್ಗೌಡ, ಚೌಡೇಗೌಡ, ಗೋಪಾಲ್, ಮಂಜುನಾಥ್, ಅಶ್ವತ್ಥ್, ಮುನಿರಾಜು ಮತ್ತಿತರರು ಹಾಜರಿದ್ದರು.
ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮ
ಶಿಡ್ಲಘಟ್ಟದ ಅರಳೆಪೇಟೆಯ ಬಸವೇಶ್ವರ ದೇವಾಲಯದ ಆವರಣದಲ್ಲಿ ಈಚೆಗೆ ನಡೆದ ಸಾಂಸ್ಕೃತಿಕ ರಸ ಸಂಜೆ ಕಾರ್ಯಕ್ರಮದಲ್ಲಿ ಕಡುಗದರೆಯ ಮುನಿರಾಜು ಮತ್ತು ತಂಡದವರು ವಚನ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ
ಕಳೆದ ನಾಲ್ಕು ದಶಕಗಳಿಂದ ಬಯಲು ಸೀಮೆಯ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದ್ದರೂ ಕೂಡಾ ನಮ್ಮನ್ನಾಳುತ್ತಿರುವ ಸರ್ಕಾರಗಳು ಮಾತ್ರ ನಮ್ಮ ಭಾಗಗಳ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಇದರ ಭಾಗವಾಗಿ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಕರ್ನಾಟಕ ಪ್ರಾಂತ ರೈತ ಸಂಘದ ಪದಾಧಿಕಾರಿಗಳು ಹೇಳಿದ್ದಾರೆ.
ನಗರದ ಪ್ರವಾಸಿಮಂದಿರದ ಬಳಿಯಲ್ಲಿ ಆಯೋಜನೆ ಮಾಡಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ, ರೈತ ಸಂಘದ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಜೆಡಿಎಸ್, ಮತ್ತು ಬಿಜೆಪಿ ಪಕ್ಷಗಳ ಯಾವುದೇ ಸರ್ಕಾರಗಳು ನಮ್ಮ ಭಾಗದ ರೈತರುಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದೆ, ನೀರಾವರಿ ಯೋಜನೆಗಳ ವಿಚಾರದಲ್ಲಿ ಮೂಲೆಗುಂಪು ಮಾಡಲು ಹೊರಟಿವೆ, ದಿನಕ್ಕೊಂದು ಹೇಳಿಕೆಗಳನ್ನು ನೀಡುವ ಮೂಲಕ ನಮ್ಮ ಭಾಗದ ಹೋರಾಟಗಾರರು, ರೈತರನ್ನು ದಿಕ್ಕುತಪ್ಪಿಸುವಂತಹ ಹುನ್ನಾರವನ್ನು ನಡೆಸಲಾಗುತ್ತಿದೆ. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದ್ದರೂ ಕೂಡಾ ಯೋಜನೆಯ ಹೆಸರಿನಲ್ಲಿ ಗುತ್ತಿಗೆದಾರರಿಗೆ ಲಾಭಮಾಡಿಕೊಡುವ ಉದ್ದೇಶದಿಂದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಧು ಸೀತಪ್ಪ ಅವರು ತಯಾರಿಸಿರುವ ೯೦ ನಿಮಿಷಗಳ ಕಾಲದ ಸಿ.ಡಿ.ಗಳನ್ನು ರಾಜಕಾರಣಿಗಳು ವೀಕ್ಷಣೆ ಮಾಡಬೇಕು. ಗಾಯದ ಮೇಲೆ ಬರೆಎಳೆದಂತೆ ಕೇಂದ್ರ ಸರ್ಕಾರವೂ ಕೂಡಾ ಭೂಸ್ವಾಧೀನ ಸುಗ್ರಿವಾಜ್ಞೆಯನ್ನು ಜಾರಿಗೆ ತಂದಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ, ೨೮ ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮವನ್ನು ನಡೆಸಲು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯಾಧ್ಯಕ್ಷ ನಾಗರಾಜ್, ಜಿಲ್ಲಾ ಉಪಾಧ್ಯಕ್ಷ ಮುನಿಕೆಂಪಣ್ಣ, ಆನೆಮಡಗು ಶಿವಣ್ಣ, ಹಿತ್ತಲಹಳ್ಳಿ ದೇವರಾಜ್, ದೊಡ್ಡತೇಕಹಳ್ಳಿ ಕದಿರಪ್ಪ ಮುಂತಾದವರು ಹಾಜರಿದ್ದರು.
ಆಲಿಕಲ್ಲಿನ ಮಳೆಯಿಂದಾಗಿ ಅಪಾರ ಬೆಳೆ ಹಾನಿ
ಬುಧವಾರ ಸಂಜೆ ಬಿದ್ದ ಬಾರೀ ಬಿರುಗಾಳಿ ಸಹಿತ ಆಲಿಕಲ್ಲಿನ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಗಂಗನಹಳ್ಳಿ, ಮೇಲೂರು, ಮಳ್ಳೂರು, ಮುತ್ತೂರು ಗ್ರಾಮಗಳಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ದ್ರಾಕ್ಷಿ, ಹಿಪ್ಪುನೇರಳೆ, ಬಾಳೇಗಿಡ ಸೇರಿದಂತೆ ತರಕಾರಿ ಬೆಳೆಗಳು ನಷ್ಟವಾಗಿವೆ.
ಅಕಾಲಿಕ ಮಳೆಯಿಂದ ನಷ್ಟಕ್ಕೀಡಾಗಿದ್ದ ಪ್ರದೇಶಗಳಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಅಮರೇಶ್, ಶಾಸಕ ಎಂ.ರಾಜಣ್ಣ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಸೇರಿದಂತೆ ರೇಷ್ಮೆ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತರನ್ನು ಸಮಾಧಾನಪಡಿಸಿದ ಅಧಿಕಾರಿಗಳು, ನಿಮ್ಮ ಸಂಕಟ ನಮಗೂ ಅರ್ಥವಾಗುತ್ತದೆ, ನಾವು ರೈತರ ಮಕ್ಕಳು, ನಾವು ಅಧಿಕಾರಿಗಳೆನ್ನುವುದಕ್ಕಿಂತ ರೈತರಾಗಿ ನಾವು ದ್ರಾಕ್ಷಿ ಬೆಳೆಯುತ್ತಿದ್ದು, ನಮಗೂ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ಸಮಾಧಾನಪಡಿಸಿದರು.
ನಂತರ ದ್ರಾಕ್ಷಿ ಬೆಳೆಗಳ ವೀಕ್ಷಣೆ ಮಾಡಿದ ಶಾಸಕ ಎಂ.ರಾಜಣ್ಣ ಮಾತನಾಡಿ, ಕಳೆದ ವರ್ಷದಂತೆ ಈ ಭಾಗದಲ್ಲಿ ಈ ವರ್ಷವೂ ಕೂಡಾ ಆಲಿಕಲ್ಲು ಮಳೆಯಿಂದಾಗಿ ರೈತರು ಬಹಳಷ್ಟು ಸಂಕಷ್ಟವನ್ನು ಅನುಭವಿಸುವಂತಾಗಿದೆ, ವಿಧಾನಸಭೆಯ ಅಧಿವೇಶನ ನಡೆಯುತ್ತಿರುವುದರಿಂದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಭಾಗದ ರೈತರುಗಳ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟು ಈ ಭಾಗದ ರೈತರುಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುಂವಂತೆ ಮನವಿ ಮಾಡುವುದಾಗಿ ಹೇಳಿದರು.
ಅಪ್ಪೇಗೌಡನಹಳ್ಳಿ, ಕಂಬದಹಳ್ಳಿ, ಮೇಲೂರು, ಗಂಗನಹಳ್ಳಿ, ಮುತ್ತೂರು, ಮಳ್ಳೂರು ಗ್ರಾಮಗಳಿಗೆ ಬೇಟಿ ನೀಡಿ ಅವರು ಬೆಳೆಗಳನ್ನು ಪರಿಶೀಲನೆ ನಡೆಸಿದರು.
ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್, ರೇಷ್ಮೆ ಇಲಾಖೆ ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಜಿ.ವಿ.ದೇವರಾಜು, ರೈತರಾದ ಸುರೇಂದ್ರಗೌಡ, ಬಚ್ಚೇಗೌಡ, ಮುನಿಶಾಮಿಗೌಡ, ಚಿಕ್ಕಮುನಿಯಪ್ಪ, ಪ್ರಭಾಕರ್, ಶ್ರೀನಿವಾಸಮೂರ್ತಿ, ತ್ಯಾಗರಾಜ್, ಶ್ರೀನಿವಾಸ್, ಪ್ರಭಾಕರ್ ಮುಂತಾದವರು ಹಾಜರಿದ್ದರು.
ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕಾರ
ಬಯಲು ಸೀಮೆಯ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ಸರ್ಕಾರ ಜನರನ್ನು ದಿಕ್ಕುತಪ್ಪಿಸುತ್ತಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ನಾಗರೀಕರು ಪ್ರಮಾಣವಚನ ಸ್ವೀಕಾರ ಮಾಡಿದರು.
ತಾಲ್ಲೂಕಿನ ಈ-ತಿಮ್ಮಸಂದ್ರ ಗ್ರಾಮದಲ್ಲಿ ಗುರುವಾರಶಾಶ್ವತ ನೀರಾವರಿ ಹೋರಾಟ ಸಮಿತಿ, ಯುವಶಕ್ತಿ ಘಟಕ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಜನರಿಂದ ಆಯೋಜನೆಗೊಂಡಿದ್ದ ಸಭೆಯಲ್ಲಿ ಮಹಿಳಾ ಸಂಘಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಮುಂಬರುವ ಚುನಾವಣೆಯಲ್ಲಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ, ನೀರಿಗಾಗಿ ಹೋರಾಟಕ್ಕೆ ಇಳಿಯುವುದಾಗಿ ಪ್ರತಿಜ್ಞೆ ಮಾಡಿದರು.
ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ನೀರಿಗಾಗಿ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದರೂ ಕೂಡಾ, ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆಗಳ ಸಮಯದಲ್ಲಿ ನಮ್ಮ ಬಲಹೀನತೆ ಎಂಬಂತೆ ನೀರಾವರಿ ಯೋಜನೆಗಳನ್ನೆ ಚುನಾವಣೆಯ ಪ್ರಣಾಳಿಕೆಯನ್ನಾಗಿ ಮಾಡಿಕೊಳ್ಳುತ್ತಿರುವ ಜನಪ್ರತಿನಿಧಿಗಳು, ಚುನಾವಣೆಗಳಲ್ಲಿ ಗೆದ್ದ ಮೇಲೆ ನಮ್ಮ ಕಡೆಗೆ ತಿರುಗಿಯೂ ನೋಡದೆ ನಮ್ಮ ನಂಬಿಕೆಗೆ ದ್ರೋಹ ಬಗೆದಿದ್ದಾರೆ.
ಈ ಭಾಗದಿಂದ ಆಯ್ಕೆಯಾಗಿ ಹೋದಂತಹ ಜನಪ್ರತಿನಿಧಿಗಳೂ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಪ್ರಭಾವ ಬೀರುವಂತಹ ಶಕ್ತಿಯನ್ನು ಕಳೆದುಕೊಂಡು ನಿಸ್ಪ್ರಯೋಜಕರಾಗಿದ್ದಾರೆ. ಚುನಾವಣೆಗಳಲ್ಲಿ ಮತದಾನ ಮಾಡಿದರೂ ಕೂಡಾ ನಮಗೆ ಯಾವುದೇ ಪ್ರಯೋಜನವಿಲ್ಲದಿರುವಾಗ ಮತದಾನ ಯಾಕೆ ಮಾಡಬೇಕು ಎಂದು ಪ್ರಶ್ನಿಸಿದರು.
ಉತ್ತರ ಕರ್ನಾಟಕದ ಜನತೆಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು, ಉಚಿತವಾಗಿ ಅಕ್ಕಿಯನ್ನು ಕೊಡುತ್ತಿದ್ದಾರೆ, ನಮಗೆ ನೀರು ಕೊಡಲು ಸಾಧ್ಯವಾಗದೆ ಕೇವಲ ಅಕ್ಕಿಯನ್ನು ಕೊಡುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ತರಾತುರಿಯಲ್ಲಿ ಮತಗಳನ್ನು ಗಳಿಸಿಕೊಳ್ಳುವ ಉದ್ದೇಶದಿಂದ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಅಡಿಗಲ್ಲು ಹಾಕುವ ಮುಖಾಂತರ ಈ ಜನರ ಭಾವನೆಗಳನ್ನು ಕಡೆಗಣಿಸಿದರು. ಎತ್ತಿನಹೊಳೆ ಯೋಜನೆ ಅವೈಜ್ಞಾನಿಕವಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರದ ಭಾಗಗಳಿಗೆ ನೀರು ಬರುವುದಿಲ್ಲ, ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ, ಹೇಳಿಕೆ ನೀಡಿದ್ದಾರೆ.
ಎತ್ತಿನಹೊಳೆಯೋಜನೆಯ ನೀರು ಬರುವುದಿಲ್ಲವೆಂದು ಗೊತ್ತಾದ ಮೇಲೆ ಸರ್ಕಾರ ಈ ಭಾಗದ ಜನರನ್ನು ದಿಕ್ಕು ತಪ್ಪಿಸಲು ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಬಯಲು ಸೀಮೆಯ ಕೆರೆಗಳಿಗೆ ತುಂಬಿಸಿ ಅಂತರ್ಜಲ ಮಟ್ಟವನ್ನು ಅಭಿವೃದ್ಧಿ ಪಡಿಸುವ ನಾಟಕವಾಡುತ್ತಿದ್ದು, ಸರ್ಕಾರದ ಉದ್ದೇಶ ಸ್ಪಷ್ಟವಾಗುತ್ತಿದೆ, ಆದ್ದರಿಂದ ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಾಗಿ ಗ್ರಾಮ ಪಂಚಾಯತಿಯ ಮುಖಂಡರೂ ಸೇರಿದಂತೆ ನಾಗರಿಕರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನೀರಾವರಿ ಹೋರಾಟ ಸಮಿತಿ ಸಂಚಾಲಕ ಮಳ್ಳೂರು ಹರೀಶ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ಚಲಪತಿ, ವೆಂಕಟಸ್ವಾಮಿ, ತಾಲ್ಲೂಕು ಪಂಚಾಯತಿ ಸದಸ್ಯ ಶ್ರೀನಾಥ್, ಕದಿರಪ್ಪ, ಯುವಶಕ್ತಿ ಘಟಕದ ಮುಖಂಡರಾದ ವಿಜಯಭಾವರೆಡ್ಡಿ, ಪ್ರತಾಪ್ರೆಡ್ಡಿ, ಶಿವಕುಮಾರ್, ಮುನಿರೆಡ್ಡಿ, ವಿಶ್ವನಾಥ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡಗಳ ದುರಸ್ಥಿ
ಕಳೆದ ಮೂರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿರುವ ಅಂಗನವಾಡಿ ಕಟ್ಟಡಗಳ ದುರಸ್ಥಿಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಸಭೆಗೆ ವಿವರ ನೀಡಿ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿಎಸ್ಎನ್ ರಾಜು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ತಾಲ್ಲೂಕು ಪಂಚಾಯತಿ ಕಚೇರಿ ಸಭಾಂಗಣದಲ್ಲಿ ಗುರುವಾರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಂಜಿನಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಎಸ್.ದೇವಗಾನಹಳ್ಳಿ, ಬಸವಾಪಟ್ಟಣ ಹಾಗೂ ಎಸ್.ದೇವಗಾನಹಳ್ಳಿಯ ಅಂಗನವಾಡಿ ಕೇಂದ್ರಗಳ ದುರಸ್ಥಿಗೆ ಕ್ರಿಯಾ ಯೋಜನೆ ರೂಪಿಸಿ ೩ ವರ್ಷಗಳಾಗಿದೆ. ಆದರೂ ಇದುವರೆಗೂ ದುರಸ್ಥಿ ಕಾರ್ಯ ಆಗಿಲ್ಲ ಯಾಕೆ ? ಹಣ ಏನಾಗಿದೆ ? ಸಭೆಗೆ ವಿವರಿಸಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಗಣಪತಿ ಸಾಕರೆಯವರು, ಅಂದಾಜು ಕ್ರಿಯಾ ಯೋಜನೆಗೂ ಇರುವ ಹಣದ ಮೊತ್ತಕ್ಕೂ ಹೊಂದಾಣಿಕೆಯಾಗದೆ ದುರಸ್ಥಿ ಕೆಲಸ ನೆನೆಗುದಿಗೆ ಬಿದ್ದಿದೆ ಎಂದು ವಿವರಿಸಿದರು.
ಈ ಕುರಿತು ಶೀಘ್ರವಾಗಿ ಸ್ಪಷ್ಟ ಆದೇಶವನ್ನು ನೀಡುವಂತೆ ಮೇಲಧಿಕಾರಿಗಳಿಗೆ ವಿವರವಾದ ಪತ್ರವನ್ನು ಬರೆಯುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕೃಷಿ ಸಹಾಯಕ ನಿರ್ದೇಶಕ ಬಿ.ಸಿದೇವೇಗೌಡರು ಈಗಾಗಲೆ ತಾಲೂಕಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ೮೦ ಕೃಷಿ ಹೊಂಡಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ವಿವರಿಸಿದರು. ರೇಷ್ಮೆ ಇಲಾಖೆಯ ವಿಸ್ತರಣಾಕಾರಿ ಎಂ.ನಾರಾಯಣಸ್ವಾಮಿ, ೧.೬೦ ಕೋಟಿ ರೂ.ಗಳ ಪ್ರಸ್ತಾವನೆ ಕಳುಹಿಸಿದ್ದು ಅಷ್ಟು ಹಣ ಬಿಡುಗಡೆ ಮಾಡಿದರೆ ೧೦ ರೂ.ಗಳ ಪ್ರೋತ್ಸಾಹದನ ವಿಲೇವಾರಿ ಮಾಡುತ್ತೇವೆ. ಇನ್ನು ೩೦ ರೂ.ಗಳ ಪ್ರೋತ್ಸಾಹದನ ಬಿಡುಗಡೆಯೆ ಆಗಿಲ್ಲ ಎಂದು ವಿವರಿಸಿದರು.
ಪಶುವೈದ್ಯಕೀಯ ಇಲಾಖೆಯ ಡಾ.ಮುನಿನಾರಾಯಣರೆಡ್ಡಿ, ಆರೋಗ್ಯ ಇಲಾಖೆಯ ಡಾ.ಅನಿಲ್ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಪುರುಷೋತ್ತಮ್, ತೋಟಗಾರಿಕೆ ಇಲಾಖೆಯ ಆನಂದ್, ಬಿಸಿಎಂ ಇಲಾಖೆಯ ಎಸ್.ಶಂಕರ್ ಮತ್ತಿತರರು ತಮ್ಮ ಇಲಾಖೆಯ ಪ್ರಗತಿಯ ವರದಿಯನ್ನು ಸಭೆಗೆ ವಿವರಿಸಿದರು.
ಪ್ರೀತಿ, ವಿಶ್ವಾಸಗಳ ಭಾವನಾತ್ಮಕ ಬೆಸುಗೆ ಸಮಾನತೆಗೆ ಮೂಲ
ಭಾರತೀಯ ಸಮಾಜದಲ್ಲಿ ಈಗಲೂ ಕಾಣಬರುವ ಮೇಲುಕೀಳೆಂಬ ಸಾಮಾಜಿಕ ಅಸಮಾನತೆಯ ವಿರುದ್ಧ ಸಿಡಿದೆದ್ದು ದೊಡ್ಡ ಹೋರಾಟವನ್ನೇ ಬಸವಣ್ಣನವರು ಮಾಡಿದ್ದಾರೆ. ಜಾತಿಯ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಜಾತಿರಹಿತ ಆದರ್ಶ ಸಮಾಜದ ಕನಸು ಕಂಡ ಅವರು ತಿಳಿಸಿದ್ದಾರೆ ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವಸ್ವಾಮಿಗಳು ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ ಸಂಜೆ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ಬಸವೇಶ್ವರ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆದ ಜಗಜ್ಯೋತಿ ಕಲ್ಯಾಣ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಜೊತೆಗೆ ಪ್ರಯಾಣಿಸಿದ ಮಾತ್ರಕ್ಕೆ, ಜೊತೆಯಲ್ಲಿ ಉಂಡ ಮಾತ್ರಕ್ಕೆ ಸಮಾನತೆ ಬಂತೆಂದು ಭಾವಿಸುವುದು ಬರೀ ಭ್ರಮೆ. ಅಂತರಂಗದಲ್ಲಿ ಮೇಲು-ಕೀಳೆಂಬ ಭಾವನೆ ಇನ್ನೂ ಹೋಗಿಲ್ಲ. ಭಾವನಾತ್ಮಕ ಬೆಸುಗೆಯಿಲ್ಲದ ಸಮಾನತೆ ಪರಿಪೂರ್ಣ ಸಮಾನತೆ ಅಲ್ಲ. ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ ಭಾವನಾತ್ಮಕ ಬೆಸುಗೆಯಿಂದ ಕೂಡಿದ್ದು, ಪ್ರೀತಿ ಮತ್ತು ಅಂತಃಕರಣದಿಂದ ಹುಟ್ಟಿದ್ದು. ಎಲ್ಲಿ ಪ್ರೀತಿ, ವಿಶ್ವಾಸಗಳ ಭಾವನಾತ್ಮಕ ಬೆಸುಗೆ ಇರುತ್ತದೆಯೋ ಅಲ್ಲಿ ಅಸಮಾನತೆಯ ಪ್ರಶ್ನೆಯೇ ಹುಟ್ಟುವುದಿಲ್ಲ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಮಾನವ ಜನ್ಮಕ್ಕಿಂತ ಮಾನವೀಯತೆ ದೊಡ್ಡದು ಎನ್ನುವುದನ್ನು ಅಡುವ ಬದಲು ಮಾಡಿ ತೋರಿದ ಸಮಾಜವಾದದ ಚಿಂತಕ ಬಸವಣ್ಣ. ಮಾನವತಾವಾದಿ ಬಸವೇಶ್ವರರ ಕಾಯಕ ಸಿದ್ಧಾಂತವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮೇಲು ಕೀಳುಗಳೆಂಬ ಸಂಕುಚಿತ ಮನೋಭಾವ ತೊಡೆದು ಹಾಕಲು 12ನೇ ಶತಮಾನದಲ್ಲೇ ವೇದಿಕೆ ಸಿದ್ಧಪಡಿಸಿದ ಬಸವಣ್ಣ ನವರು ಜಾತಿ, ಧರ್ಮಗಳೆಂಬ ಗೋಡೆಗಳನ್ನು ಮಾನವೀಯ ಮೌಲ್ಯಗಳ ನೆಲೆಯಲ್ಲಿ ಕೆಡವಿದ ಮಹಾನ್ ದಾರ್ಶನಿಕರೆಂದು ಅಭಿಪ್ರಾಯಪಟ್ಟರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಬಸವೇಶ್ವರ ಸೇವಾ ಟ್ರಸ್ಟ್ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಸಮಾಜ ಕಲ್ಯಾಣ ಇಲಾಖೆಯ ಪುರುಷೋತ್ತಮ್, ಬಿ.ಸಿ.ಎಂ. ಇಲಾಖೆಯ ಶಂಕರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಶಿಕ್ಷಣ ಇಲಾಖೆಯ ಶ್ರೀನಿವಾಸ್, ರಾಮಚಂದ್ರಾಚಾರಿ, ಬಿ.ಜಗದೀಶ್, ಎಂ.ಮಂಜುನಾಥ, ನಿರಂಜನ್ ಬಾಬು, ಕೆ.ಜೆ.ಗಿರಿಧರ್, ರಂಜಿತ್, ಕೆ.ಬಿ.ಮಲ್ಲಿಕಾರ್ಜುನ್, ನಾಗರಾಜ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗ ಮತ್ತಿತರರು ಹಾಜರಿದ್ದರು.
ಚಟುವಟಿಕೆಗಳಿರಲಿ ಚುರುಕುತನಕ್ಕೆ!
ಚುರುಕುತನ ಎಂದರೇನು? : ಯಾವ ವಿಷಯವೇ ಆಗಲಿ ನಮ್ಮ ಪ್ರತಿಕ್ರಿಯೆಯು ನಿರೀಕ್ಷಣೆ ಮಟ್ಟಕ್ಕೆ ಇದ್ದು ಅದರಿಂದ ಇಡೀ ಘಟನೆಗೆ ಉಪಯುಕ್ತವೆನಿಸಿದರೆ ಅದನ್ನು ಚುರುಕುತನ ಎನ್ನಬಹುದು. ಉದಾಹರಣೆಗೆ ರಾಮಾಯಣದ ಹನುಮಂತನಿಗೆ ಶ್ರೀರಾಮನು ಯಾವುದೇ ಜವಾಬ್ದಾರಿಯನ್ನು ವಹಿಸಿದಾಗ ವಿಷಯವನ್ನು ಸಮಗ್ರವಾಗಿ ಅರಿತು ಜವಾಬ್ದಾರಿಯನ್ನು ಯಾವುದೇ ಚ್ಯುತಿ ಇಲ್ಲದೆ ನಿರ್ವಹಿಸುತ್ತಿದ್ದನಂತೆ. ಇವನಂತೆ ನಾವು ಚುರುಕಾಗಿರಬೇಕು.
1. ಸದಾ ಯಾವುದಾದರೂ ಚಟುವಟಿಕೆಗಳಲ್ಲಿನಿಮ್ಮನ್ನು ತೊಡಗಿಸಿಕೊಳ್ಳಿರಿ.
2. ಆಟ-ಪಾಠಗಳ ಹೊರತಾಗಿ ನಿಮಗೆ ಆಸಕ್ತಿಯಿರುವ ಯಾವುದಾದರೂ ಕಲೆ, ಲಲಿತಕಲೆಗಳಲ್ಲಿನಿಮ್ಮನ್ನುತೊಡಗಿಸಿಕೊಳ್ಳಿರಿ.
3. ಮನೆಯ ಅಥವಾ ಶಾಲೆಯ ಸುತ್ತಮುತ್ತಲಿನ ಕೈತೋಟದ ಕೆಲಸಗಳನ್ನು ನಿರ್ವಹಿಸಿ. ಇದರಿಂದ ನಿಮಗೆ ತರಕಾರಿ, ಹೂವು, ಸೊಪ್ಪು, ಸಸ್ಯಗಳ ಬಗ್ಗೆ ಜ್ಞಾನವು ದೊರೆಯುತ್ತದೆ.
4. ಸಂಗೀತ, ನೃತ್ಯ, ಚಿತ್ರಕಲೆ, ಸಂಗೀತವಾದ್ಯ, ಶಿಲ್ಪಕಲೆ ಹೀಗೆ ಯಾವುದಾದರೂ ಒಂದು ನಿಮಗಿಷ್ಟವಾದ ಕಲೆಯನ್ನು ರೂಡಿಸಿಕೊಳ್ಳುವುದು ಒಳ್ಳೆಯದು.
5. ಬಾಲಕಿಯರಾದರೆ ಹೊಲಿಗೆ, ಕಸೂತಿ, ರಂಗೋಲಿ-ಮೊದಲಾದ ಕಲೆಗಳನ್ನು ಕಲೆಯಬಹುದು.
6. ಅಂಚೆ ಚೀಟಿಗಳು, ನಾಣ್ಯಗಳು, ಬೆಂಕಿಪಟ್ಟಣಗಳು, ಅಪರೂಪದ ವ್ಯಕ್ತಿಗಳ ಅಥವಾ ಪ್ರಕೃತಿಯ ದೃಶ್ಯಗಳು ಮೊದಲಾದುವುಗಳನ್ನು ಸಂಗ್ರಹಿಸುವ ಅಭ್ಯಾಸವು ನಿಮ್ಮ ಸಾಮಾನ್ಯಜ್ಞಾನವನ್ನು ಹೆಚ್ಚಿಸುತ್ತದೆ. ನಿಮ್ಮ ಬೌದ್ಧಿಕ ಬೆಳವಣಿಗೆಗೆ ಪೂರಕವಾಗುತ್ತದೆ.
7. ಪಕ್ಷಿ ವೀಕ್ಷಣೆ, ಪ್ರಕೃತಿ ವೀಕ್ಷಣೆ, ಉದ್ಯಾನವನದಲ್ಲಿ ನಡಿಗೆ, ಓದುವುದು ಮೊದಲಾದ ಅಭ್ಯಾಸಗಳು ನಿಮಗೆ ಸಂತೋಷವನ್ನು ತಂದುಕೊಡುತ್ತದೆ.
8. ಹೊಸ ಭಾಷೆಯನ್ನು ಕಲಿಯುವುದು, ಅನುಕರಣೀಯ ಸ್ವಭಾವದ ಹೊಸ ಹೊಸ ಗೆಳೆಯರನ್ನು ಪರಿಚಯ ಮಾಡಿಕೊಳ್ಳುವುದು ಇವೆಲ್ಲಾ ನಮ್ಮ ವ್ಯಕ್ತಿತ್ವವನ್ನು ಧನಾತ್ಮಕವಾಗಿ ಮಾರ್ಪಾಡಿಸುವ ಅಭ್ಯಾಸಗಳು.
9. ಪ್ರತಿದಿನ ಒಂದು ಕನ್ನಡ ಪತ್ರಿಕೆ ಮತ್ತು ಆಂಗ್ಲ ಪತ್ರಿಕೆಯನ್ನು ಅವಲೋಕಿಸುವುದು ಒಳ್ಳೆಯದು. ಅದರಲ್ಲೂ ಸಂಪಾದಕೀಯ, ದೀರ್ಘಲೇಖನ, ಪದಬಂಧ ಮುಂತಾದ ವಿಭಾಗಗಳಿಗೆ ಲಕ್ಷ್ಯವನ್ನು ಕೊಟ್ಟರೆ ನಿಮ್ಮ ಜ್ಞಾನದ ಮಟ್ಟ ಹೆಚ್ಚುವುದರಲ್ಲಿ ಸಂದೇಹವೇ ಇಲ್ಲ.
10. ಅನುಕರಣೀಯ ಮತ್ತು ಉತ್ತಮ ಸಾಧನೆಗಳನ್ನು ಮಾಡಿದ ಮಹಾಪುರುಷರ ಜೀವನಚರಿತ್ರೆಗಳನ್ನು ಅಭ್ಯಸಿಸುವುದರಿಂದ ನಮ್ಮ ಜೀವನಕ್ಕೆ ಒಂದು ನಿರ್ದಿಷ್ಟ ಗುರಿ ದೊರೆಯುತ್ತದೆ. ರಾಮಕೃಷ್ಣ ಪರಮಹಂಸರು, ಶಾರದಾದೇವಿ, ಸ್ವಾಮಿ ವಿವೇಕಾನಂದರು, ಸಹೋದರಿ ನಿವೇದಿತಾ, ಸರ್.ಸಿ.ವಿ. ರಾಮನ್, ಮೇಡಂ ಕ್ಯೂರಿ, ಸರ್.ಐಸ್ಯಾಕ್ ನ್ಯೂಟನ್, ಆಲ್ಬರ್ಟ್ ಐನ್ಸ್ಟೈನ್ ಮೊದಲಾದ ಮಹಾವ್ಯಕ್ತಿಗಳ ಜೀವನಚರಿತ್ರೆಯನ್ನು ಸಂಗ್ರಹಿಸಿ ಗಮನವಿಟ್ಟು ಓದಿರಿ. ನಿಮಗೆ ಅದರಲ್ಲಿ ಕಂಡು ಬಂದ ಒಳ್ಳೆಯ ಗುಣಗಳನ್ನು ಅಥವಾ ಅಭ್ಯಾಸಗಳನ್ನು ನೀವೂ ಅನುಕರಿಸಲು ಪ್ರಯತ್ನಿಸಿರಿ.
11. ಪ್ರತಿ ದಿನ ಇಂಗ್ಲಿಷ್, ಕನ್ನಡ, ಸಂಸ್ಕøತ, ಹಿಂದಿ ಮೊದಲಾದ ಭಾಷೆಗಳ ಒಂದು ಹೊಸ ಪದ ಕಲೆಯಲು, ಕಲೆತ ಹೊಸ ಶಬ್ದವನ್ನು ಬಳಸಲು ಪ್ರಯತ್ನಿಸಿ. ನಿಮ್ಮ ಭಾಷೆಯು ಉತ್ತಮಗೊಳ್ಳುತ್ತದೆ. ನಿಮ್ಮ ಶಬ್ದಭಂಡಾರ ಶ್ರೀಮಂತವಾಗುತ್ತದೆ. ನೀವು ಉತ್ತಮ ವಾಗ್ಮಿಗಳಾಗುತ್ತೀರಿ.
12. ಶಾಲೆಯಲ್ಲಿ ನಡೆಯುವ ಇಲ್ಲ ರೀತಿಯ ಕ್ರೀಡಾ-ಸಾಂಸ್ಕøತಿಕ-ಸಾಹಿತ್ಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿರಿ. ಆದರೆ ಬಹುಮಾನದ ನಿರೀಕ್ಷೆಯಿಂದ ಭಾಗವಹಿಸಬೇಡಿರಿ.
13. ವರ್ಷಕ್ಕೊಮ್ಮೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಡಲು ಸಾಧ್ಯವಾದರೆ ಒಳ್ಳೆಯದು ಹಾಗೂ ಆ ಸ್ಥಳದ ಸಂಪೂರ್ಣ ಮಾಹಿತಿಯನ್ನು ಬರೆದುಕೊಂಡು ಸಂಗ್ರಹಿಸಿರಿ.
ಡಾ. ಶ್ರೀವತ್ಸ
ಕೂಲಿ ಕಾರ್ಮಿಕರ ಸಮೀಕ್ಷೆ ನಡೆಸಿ
ಯಾವುದೆ ಕಟ್ಟಡ ಹಾಗೂ ಇತರೆ ನಿರ್ಮಾಣದ ಕೆಲಸ ಕಾರ್ಯಗಳಲ್ಲಿ ೧೪ ವರ್ಷದೊಳಗಿನ ಬಾಲಕ ಬಾಲಕಿಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನು ರೀತಿಯಲ್ಲಿ ಶಿಕ್ಷಾರ್ಹ ಅಪರಾಧ ಮಾತ್ರವಲ್ಲ ಅದು ಸಮಾಜದ ಮೇಲೆ ವಿಪರೀತವಾದ ದುಷ್ಪರಿಣಾಮ ಬೀರುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ್ ಅರಸ್ ಅಭಿಪ್ರಾಯಪಟ್ಟರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ನ್ಯಾಯಾಲಯದ ಕಟ್ಟಡಕ್ಕೆ ಭಾನುವಾರ ಭೇಟಿ ನೀಡಿದ ಅವರು, ಅಲ್ಲಿ ಕೆಲಸದಲ್ಲಿ ತೊಡಗಿರುವ ಕೂಲಿ ಕಾರ್ಮಿಕರು, ಗುತ್ತಿಗೆದಾರರು ಹಾಗೂ ಕಾರ್ಮಿಕ ನಿರೀಕ್ಷಕ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ಇದೀಗ ರಾಜ್ಯದ ಉಚ್ಚ ನ್ಯಾಯಾಲಯವು ಕಟ್ಟಡ ಹಾಗೂ ಇತರೆ ನಿರ್ಮಾಣದಲ್ಲಿ ತೊಡಗಿರುವ ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿದ್ದು ಸಂಬಂದಿಸಿದ ಎಲ್ಲ ಇಲಾಖೆಗಳೂ ಕೂಲಿ ಕಾರ್ಮಿಕರ ಸಮೀಕ್ಷೆ ನಡೆಸಿ ಅವರಿಗೆ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಸಿಗುವ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲು ಸೂಚಿಸಿದೆ ಎಂದರು.
ಈ ತಿಂಗಳ ೨೭ ರೊಳಗೆ ಶೇ. ೧೦೦ರಷ್ಟು ಗುರಿಯನ್ನು ಮುಟ್ಟಲು ಘನ ನ್ಯಾಯಾಲಯವು ಆದೇಶಿಸಿದ್ದು ಅದರಂತೆ ಸಂಬಂದಿಸಿದ ಎಲ್ಲ ಇಲಾಖೆಗಳೂ ಸಹ ಕಾರ್ಯೋನ್ಮುಖರಾಗಬೇಕು. ಈ ಆಂದೋಲನದಲ್ಲಿ ಸಂಘ ಸಂಸ್ಥೆಗಳೂ ಸಹ ಸಾಮಾಜಿಕ ಕಳಕಳಿಯನ್ನು ಮೆರೆಯಬೇಕು ಎಂದು ಮನವಿ ಮಾಡಿದರು.
ನಗರ ಸೇರಿದಂತೆ ತಾಲ್ಲೂಕಿನಲ್ಲಿ ಎಲ್ಲಿಯೇ ಆಗಲಿ ಕಟ್ಟಡ ಇನ್ನಿತರೆ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಕೂಲಿ ಕಾರ್ಮಿಕರ, ಗುತ್ತಿಗೆದಾರರ ವಿವರ ನೀಡಿ ಎಂದು ಸಾರ್ವಜನಿಕವಾಗಿ ಮನವಿ ಮಾಡಿರುವ ಅವರು ಇದರಿಂದ ಎಲ್ಲ ಕೂಲಿ ಕಾರ್ಮಿಕರ ನಿಖರ ಸಂಖ್ಯೆ ತಿಳಿಯಲಿದೆಯಲ್ಲದೆ ಮಂಡಳಿಯಿಂದ ಸವಲತ್ತುಗಳನ್ನು ನೀಡಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಮಿಕ ನಿರೀಕ್ಷಕ ಟಿ.ಡಿ.ರಾಮಯ್ಯ ಮಾತನಾಡಿ, ೧೮-–೬೦ ವರ್ಷದೊಳಗಿನ ಕೂಲಿ ಕಾರ್ಮಿಕರು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸದಸ್ಯತ್ವ ಪಡೆಯಲು ಅರ್ಹರಾಗಿದ್ದು ವರ್ಷದ ಎಲ್ಲ ದಿನಗಳಲ್ಲೂ ಸದಸ್ಯತ್ವವನ್ನು ಮಾಡಿಸಬಹುದೆಂದರು.
ಅರ್ಜಿ ನಮೂನೆ ೫ ಮತ್ತು ೬, ೨ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು, ವಯಸ್ಸಿನ ದೃಡೀಕರಣದ ದಾಖಲೆ, ಚುನಾವಣೆಯ ಗುರ್ತಿನ ಚೀಟಿಯ ಜೆರಾಕ್ಸ್ ಪ್ರತಿ, ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ ಹಾಗು ೩ ವರ್ಷಗಳ ಅವದಿಯ ಸದಸ್ಯತ್ವ ನೋಂದಣಿ ಹಾಗೂ ನವೀಕರಣ ಶುಲ್ಕವಾಗಿ ೧೭೫ ರೂ ಪಾವತಿಸಬೇಕು ಎಂದರು.
ಇದರಿಂದ ಕಾರ್ಮಿಕರ ಇಬ್ಬರು ಮಕ್ಕಳಿಗೆ ೫-–೭ನೇ ತರಗತಿಯವರೆಗೂ ವಾರ್ಷಿಕ ತಲಾ ೨ ಸಾವಿರ, ೮-–೧೦ನೇ ತರಗತಿಯವರೆಗೂ ವಾರ್ಷಿಕ ತಲಾ ೫ ಸಾವಿರ ರೂ, ಪಿಯುಸಿ, ಜೆಒಸಿ, ಎಂಜಿನಿಯರಿಂಗ್ ಇನ್ನಿತರೆ ತಾಂತ್ರಿಕ ತರಗತಿಗಳಿಗೆ ತಲಾ ೫ ಸಾವಿರ ಹಾಗೂ ಉನ್ನತ ಪದವಿಗೆ ತಲಾ ೧೫ ಸಾವಿರ ವಾರ್ಷಿಕ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಜತೆಗೆ ಇಬ್ಬರು ಮಕ್ಕಳ ಮದುವೆಗೆ ತಲಾ ೫೦ ಸಾವಿರ, ಹೆಣ್ಣು ಮಗುವಿನ ಹೆರಿಗೆಯ ಸಮಯ ೧೫ ಸಾವಿರ ರೂಪಾಯಿಯನ್ನು ನೀಡಲಾಗುವುದು. ಕಾರ್ಮಿಕರು ಅಪಘಾತದಲ್ಲಿ ಗಾಯಗೊಂಡರೆ ಅಂಗವಿಕಲತೆಯ ಪ್ರಮಾಣದ ಮೇಲೆ ಪಿಂಚಣಿ, ಚಿಕಿತ್ಸೆಗೆ ಹಣದ ಸಹಾಯವನ್ನು ನೀಡಲಾಗುವುದು. ಸದಸ್ಯತ್ವ ಪಡೆದ ಕಾರ್ಮಿಕರು ಮೃತಪಟ್ಟರೆ ಅವರ ಅಂತಿಮ ಸಂಸ್ಕಾರಕ್ಕೆ ೪ ಸಾವಿರ ರೂ ಹಾಗೂ ನಂತರ ಅವರ ಕುಟುಂಬಕ್ಕೆ ೧೫ ಸಾವಿರ ರೂಪಾಯಿಗಳನ್ನು ನೀಡುವುದರ ಜತೆಗೆ ೨ ಲಕ್ಷ ರೂಗಳ ಪರಿಹಾರವನ್ನು ಸಹ ನೀಡಲಾಗುವುದು.
ಹೀಗೆ ಹತ್ತು ಹಲವು ಯೋಜನೆಗಳು ಇದ್ದು ಎಲ್ಲ ಕೂಲಿ ಕಾರ್ಮಿಕರೂ ಸಹ ಈ ಯೋಜನೆಯ ಸದುಪಯೋಗಪಡೆದುಕೊಳ್ಳುವಂತೆ ಕೂಲಿ ಕಾರ್ಮಿಕರಲ್ಲಿ ಮನವಿ ಮಾಡಿದರಲ್ಲದೆ ಈ ಕುರಿತು ಕೂಲಿ ಕಾರ್ಮಿಕರಿಗೆ ಅರಿವು ಮೂಡಿಸಲು ನಮ್ಮೊಂದಿಗೆ ಕೈ ಜೋಡಿಸುವಂತೆ ಗುತ್ತಿಗೆದಾರರು, ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರೀಕಂಠ, ಸರ್ಕಾರಿ ವಕೀಲೆ ಎಸ್.ಕುಮುದಿನಿ, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಬೈರಾರೆಡ್ಡಿ ಮತ್ತಿತರರು ಹಾಜರಿದ್ದರು.
ಬಸವಜಯಂತ್ಯುತ್ಸವ ಆಚರಣೆ
ತಾಲ್ಲೂಕಿನ ವಿವಿದೆಡೆ ಮಂಗಳವಾರ ಬಸವಜಯಂತ್ಯುತ್ಸವವನ್ನು ಬಸವಣ್ಣ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯ, ಉಲ್ಲೂರುಪೇಟೆಯ ಜೋಡಿ ಬಸವಣ್ಣ ದೇವಾಲಯ, ತಾಲ್ಲೂಕಿನ ಶೆಟ್ಟಿಹಳ್ಳಿ, ಮುಂತಾದೆಡೆ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಿ, ಹೆಸರುಬೇಳೆ ಪಾನಕ ವಿತರಣೆ ನಡೆಯಿತು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ತಾಲ್ಲೂಕು ಆಡಳಿತ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿ ಪರವಾಗಿ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ, ರಜಸ್ವ ನಿರೀಕ್ಷಕರಾದ ಸುಬ್ರಮಣಿ, ಕುಮಾರ್ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಸವೇಶ್ವರ ಸೇವಾ ಟ್ರಸ್ಟ್ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜರಾವ್, ಬಿ.ಜಗದೀಶ್, ಎಂ.ಮಂಜುನಾಥ, ನಿರಂಜನ್ ಬಾಬು, ಕೆ.ಜೆ.ಗಿರಿಧರ್, ರಂಜಿತ್, ಕೆ.ಬಿ.ಮಲ್ಲಿಕಾರ್ಜುನ್, ನಾಗರಾಜ್, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗ ಮತ್ತಿತರರು ಹಾಜರಿದ್ದರು.
ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವ
ಮೊರಸು ನಾಡೆಂದು ಹೆಸರಿದ್ದ ತಮಿಳುನಾಡಿನ ಮೂಲದ ಒಕ್ಕಲಿಗ ಸಮುದಾಯ ಕರ್ನಾಟಕಕ್ಕೆ ಬಂದ ಚಾರಿತ್ರಿಕ ಇತಿಹಾಸವುಳ್ಳ ಹಂಡಿಗನಾಳದ ಈರಣ ್ಣ– ಕೆಂಪಣ್ಣ ದೇವಾಲಯದಲ್ಲಿ ಸೋಮವಾರ ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶಿಥಿಲಗೊಂಡಿದ್ದ ಈರಣ ್ಣ– ಕೆಂಪಣ್ಣ ದೇವಾಲಯವನ್ನು ಎರಡು ದಶಕಗಳ ಹಿಂದೆ ಪುನರ್ಪ್ರತಿಷ್ಠಾಪಿಸಿದ್ದು, ಈಗ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಸುಂದರ ದೇವಾಲಯ, ವಸತಿಗೃಹ ಮತ್ತು ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುತ್ತಿದೆ. ಐದು ವರ್ಷಕ್ಕೊಮ್ಮೆ ನಡೆಯುವ ಗುಡಿಜಾತ್ರೆಯ ದೀಪಾರಾಧನಾ ಮಹೋತ್ಸವಕ್ಕೆ ಹಲವಾರು ಜಿಲ್ಲೆಗಳಿಂದ ಒಕ್ಕಲಿಗ ಸಮುದಾಯದವರು ಬೃಹತ್ ಪ್ರಮಾಣದಲ್ಲಿ ಆಗಮಿಸಿದ್ದರು.
ಹೆಣ್ಣು ಮಕ್ಕಳು ವಿವಿಧ ಹೂಗಳಿಂದ ಅಲಂಕರಿಸಿದ ತಂಬಿಟ್ಟು ದೀಪಗಳನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ದೇವಾಲಯದವರೆಗೂ ಸಾಗಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಆಗಮಿಸಿದ್ದ ಸಾವಿರಾರು ಮಂದಿ ಭಕ್ತರಿಗೆ ದೇವಾಲಯದ ಟ್ರಸ್ಟ್ ವತಿಯಿಂದ ಅನ್ನಸಂತರ್ಪಣೆಯನ್ನು, ಹೆಸರುಬೇಳೆ ಪಾನಕವನ್ನು ಸಹ ಆಯೋಜಿಸಲಾಗಿತ್ತು. ಹಿರಿಯ ದಂಪತಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
‘ಒಕ್ಕಲು ತನಕ್ಕೆ ಮೂಲ ಭೂತಾಯಿ ಮತ್ತು ನೀರು. ಶಾಶ್ವತ ನೀರು ಜಿಲ್ಲೆಗೆ ಬಂದಲ್ಲಿ ನಮ್ಮ ಬಯಲು ಸೀಮೆಯ ಶ್ರಮಿಕರು ಆರ್ಥಿಕವಾಗಿ ಸಬಲರಾಗುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಬೇಕು’ ಎಂದು ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ಆದಿಚುಂಚನಗಿರಿಯ ಮಂಗಳಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಲ್ಲಾಧಿಕಾರಿ ಡಾ.ವೆಂಕಟೇಶ್, ನಿವೃತ್ತ ಐ.ಜಿ.ಪಿ ಶಂಕರ್ ಬಿದಿರಿ, ನಿವೃತ್ತ ಎಸ್.ಪಿ. ಎನ್.ನಾಗರಾಜು, ಡಾಟಿ ಸದಾನಂದಗೌಡ, ವಾಣಿ ಕೃಷ್ಣಾರೆಡ್ಡಿ, ಬಿ.ಕೆ.ನಾರಾಯಣಸ್ವಾಮಿ, ಪಿ.ವಿ.ನಾಗರಾಜ್, ಮುನಿಕೃಷ್ಣಪ್ಪ, ಒಕ್ಕಲಿಗರ ಸಂಘದ ನಿರ್ದೇಶಕ ಸತೀಶ್, ಬಿಳಿಶಿವಾಲೆ ರವಿ. ಕೆಂಪರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕನ್ನಮಂಗಲ ಶಾಲೆಯಲ್ಲಿ ಚಿಣ್ಣರ ಕಾಜಾಣ
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಶಾಲೆಯಲ್ಲಿ ಭಾನುವಾರ ಶಾಲೆಯಲ್ಲಿ ನಡೆಯುತ್ತಿರುವ ‘ಸಹಜ’ ಶಿಬಿರದ ಭಾಗವಾಗಿ ನಡೆದ ‘ಚಿಣ್ಣರ ಕಾಜಾಣ’ ಕಾರ್ಯಕ್ರಮವನ್ನು ಸಾಹಿತಿ ಹಾಗೂ ಚಿಣ್ಣರ ಕಾಜಾಣ ಕಾರ್ಯಕ್ರಮದ ಆಯೋಜಕ ಬೇಲೂರು ರಘುನಂದನ ರವರು ಉದ್ಘಾಟಿಸಿದರು.
‘ಮಕ್ಕಳು ಕವಿಗಳ ಕವಿತೆಗಳನ್ನು ವಾಚಿಸುವುದು ಹಾಗೂ ಕಲಿಯುವದರಿಂದ ಮಕ್ಕಳಲ್ಲೂ ಕವಿತೆ ಬರೆಯುವ ಹವ್ಯಾಸ ಉಂಟಾಗುವುದು. ಇದರಿಂದ ಮಕ್ಕಳ ಕಲ್ಪನಾಶೀಲತೆ ಹೆಚ್ಚುವುದು. ಕನ್ನಮಂಗಲದ ಈ ಶಾಲೆಯಲ್ಲಿ ಉತ್ತಮ ಸಾಹಿತ್ಯಕ ವಾತಾವರಣ ಸೃಷ್ಟಿಯಾಗಿರುವುದು ಸಂತಸದ ವಿಚಾರ’ ಎಂದು ಬೇಲೂರು ರಘುನಂದನ ಅಭಿಪ್ರಾಯಪಟ್ಟರು.
ಕನ್ನಮಂಗಲದ ಹದಿಮೂರು ಮಕ್ಕಳು ಕನ್ನಡದ ಹಲವು ಕವಿಗಳ ಕವಿತೆಗಳನ್ನು ವಾಚಿಸಿದರು. ಕಿರಣ್, ಭವಾನಿ, ಶೇಖರ್, ರಾಜೇಶ, ಧನುಷ್, ಗಾಯತ್ರಿ, ಮೀನಾಕ್ಷಿ, ವರ್ಷ, ಅಮೃತ, ವಾಣಿ, ಶಿಲ್ಪ ಈ ಮಕ್ಕಳು ಕನ್ನಡದ ಪ್ರಖ್ಯಾತ ಕವಿಗಳಾದ ಕುವೆಂಪು, ಅಡಿಗ, ಲಂಕೇಶ್, ವೆಂಕಟೇಶಮೂರ್ತಿ, ಲಕ್ಷ್ಮಣರಾವ್, ನಿಸಾರ್ ಅಹಮದ್, ಶಿವರುದ್ರಪ್ಪ, ನರಸಿಂಹಸ್ವಾಮಿ ಮುಂತಾದವರ ಕವನಗಳನ್ನು ವಾಚಿಸಿದರು.
ಕವನವಾಚನದ ನಂತರ ಮಕ್ಕಳೊಂದಿಗೆ ಬೇಲೂರು ರಘುನಂದನರವರು ಸಂವಾದ ನಡೆಸಿದರು. ಈ ಸಂವಾದದಲ್ಲಿ ಕವಿತೆಗಳನ್ನು ಬರೆಯುವ ಕುರಿತು ಮಕ್ಕಳಿಗೆ ಹಲವು ಸೂಚನೆಗಳನ್ನು ಸಲಹೆಗಳನ್ನು ನೀಡಿದರು. ಹಾಗೆಯೇ ಮಕ್ಕಳನ್ನು ಗುಂಪುಗಳಲ್ಲಿ ಕೂರಿಸಿ ಒಂದೊಂದು ವಿಷಯ ಕೊಟ್ಟು ಅದರ ಬಗ್ಗೆ ಕವಿತೆಗಳನ್ನು ಬರೆಯಲು ಸೂಚಿಸಿದರು.
ಶಾಲೆಯ ಶಿಕ್ಷಕರಾದ ಎಸ್. ಕಲಾಧರ್, ಕೆ.ಶಿವಶಂಕರ್, ಚಿಣ್ಣರ ಕಾಜಾಣ ಸಂಚಾಲಕಿ ಮಂಜುಳಾ, ಯುವ ಸಾಹಿತಿಗಳಾದ ಯೋಗೇಶ್ ಹಾಗೂ ಪುನೀತ್ ಹಾಗೂ ಗೋಕುಲ್ ಸಹೃದಯ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

