J Venkatapura, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಜೆ.ವೆಂಕಟಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಮಿತ್ತನಹಳ್ಳಿ ಗ್ರಾಮದ ಸದಸ್ಯೆ ಎಸ್.ನಯನಾ ಅಧ್ಯಕ್ಷೆ ಆಗಿ ಚುನಾಯಿತರಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಮಿತ್ತನಹಳ್ಳಿ ಗ್ರಾಮದ ಸದಸ್ಯೆ ಎಸ್.ನಯನಾ ಹಾಗೂ ಬೈರಸಂದ್ರ ಗ್ರಾಮದ ಶಶಿಕಲಾ ನಾಮಪತ್ರ ಸಲ್ಲಿಸಿದ್ದರು.
ಒಟ್ಟು 17 ಮಂದಿ ಸದಸ್ಯತ್ವ ಬಲ ಹೊಂದಿರುವ ಗ್ರಾ.ಪಂ ಯಲ್ಲಿ ಎಸ್.ನಯನಾ ಅವರಿಗೆ 10 ಮತ ಹಾಗು ಶಶಿಕಲಾ ಅವರಿಗೆ 7 ಮತಗಳು ಬಂದಿದ್ದು ಎಸ್.ನಯನಾ ಅವರು ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕೃಷಿ ಸಹಾಯಕ ನಿರ್ದೇಶಕ ಪಿ.ರವಿ ಘೋಷಣೆ ಮಾಡಿದರು.
ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರು, ಅಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರಿಂದ ಪಕ್ಷದ ಸದಸ್ಯರಲ್ಲೆ ಗೊಂದಲವುಂಟಾಗಿತ್ತು. ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ ಅವರು ಬೆಳಗ್ಗೆಯಿಂದ ಸಂಧಾನ ನಡೆಸಿದರಾದರೂ ಸಂಧಾನ ವಿಫಲವಾಗಿದ್ದರಿಂದ ಚುನಾವಣೆ ಪ್ರಕ್ರಿಯೆ ನಡೆಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಇಂದಿರಾ, ಮಾಜಿ ಅಧ್ಯಕ್ಷ ನಾಗೇಶ್, ಮಿತ್ತನಹಳ್ಳಿ ಹರೀಶ್, ಸುಗಟೂರು ದೇವರಾಜ್, ಸತೀಶ್, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ವಿರೂಪಾಕ್ಷಪ್ಪ, ಸುಧಾಕರ್, ಬಿಜ್ಜವಾರ ನಾಗರಾಜ್, ಮಿತ್ತನಹಳ್ಳಿ ಮುನಿಆಂಜಿನಪ್ಪ, ಪರಮೇಶಪ್ಪ, ನಾರಾಯಣಸ್ವಾಮಿ, ದ್ಯಾವಪ್ಪ, ನಾಗೇಶ್, ದೇವರಾಜ್, ಶಿವಶಂಕರ್, ತಿರುಪಳ್ಳಪ್ಪ, ಹಾಜರಿದ್ದರು.
Sidlaghatta : ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕಾ ಕೆಂಪನಿಗಳ ಸ್ದಾಪನೆಗೆ ಒತ್ತಾಯಿಸಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆಯನ್ನು ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಕೆಐಎಡಿಬಿ ರೈತ ಪರ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟಿನ್ ಮುಂದಿನಿಂದ
ತಾಲ್ಲೂಕು ಕಚೇರಿಯವರೆಗೆ ಬೃಹತ್ ಪ್ರತಿಭಟನೆಯನ್ನು ಜಂಗಮಕೋಟೆ ಕೆಐಎಡಿಬಿ,13 ಹಳ್ಳಿಗಳ ರೈತ ಪರ ಹೋರಾಟ ಸಮಿತಿ ಹಾಗೂ ತಾಲ್ಲೂಕು ದಲಿತಪರ ಸಂಘಟನೆಗಳ ಓಕ್ಕೂಟಗಳು ಹಮ್ಮಿಕೊಂಡಿದ್ದವು.
ಸರ್ಕಾರ ಅಧಿಸೂಚನೆ ಹೊರಡಿಸಿರುವ 2823 ಎಕರೆಯಲ್ಲಿ ಸರ್ಕಾರಿ ಜಮೀನು ಹೊರತುಪಡಿಸಿ, ಉಳಿದ ಗ್ರಾಮಗಳಿಗೆ ಹೊಂದಿಕೊಂಡಿರುವ ನೀರಾವರಿ ಪ್ರದೇಶವನ್ನು ಕೈಬಿಡಬೇಕು. ಕೈಗಾರಿಕೆಗಳನ್ನು ಪ್ರಾರಂಭ ಮಾಡಲು ಸರ್ಕಾರ ತ್ವರಿತಗತಿಯಲ್ಲಿ ಪ್ರಕ್ರಿಯೆಗಳನ್ನು ನಡೆಸುವಂತೆ ಒತ್ತಾಯಿಸಿದರು. ಚುರುಕುಗತಿಯಲ್ಲಿ ಭೂಸ್ವಾದೀನ ಪಡಿಸಿಕೊಂಡು ಭೂಮಿ ನೀಡಿದ ರೈತರಿಗೆ ಉತ್ತಮ ಭೂಪರಿಹಾರ, ಮನೆಗೊಂದು ಶಾಶ್ವತ ಕೆಲಸ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಂಗಮಕೋಟೆ ಹೋಬಳಿಯಲ್ಲಿ 520 ಎಕರೆ ಸಂಪೂರ್ಣವಾಗಿ ಪಿ.ಎಸ್.ಎಲ್ ಕೆಂಪನಿಯ ಹೆಸರಿನಲ್ಲಿದೆ. ಆ ಜಮೀನುಗಳ ಮೂಲ ರೈತರಿಗೆ ಸರ್ಕಾರದ ಭೂಪರಿಹಾರದ ಹಣ ಜಮಾ ಆಗಬೇಕು. ಪಿ.ಎಸ್. ಎಲ್ ಕೆಂಪನಿಯಿಂದ ಮೋಸ ಹೊಗಿರುವ ರೈತರಿಗೆ ನ್ಯಾಯ ಸಿಗುವವರೆವಿಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ. ನಮ್ಮ ಹೋರಾಟ ಕೆಐಎಡಿಬಿ ಪರ ಅಲ್ಲ, ಅಭಿವೃದ್ದಿಯ ಕಡೆಗೆ ನಮ್ಮ ಹೋರಾಟ.
ಭೂಮಿ ನೀಡಿದ ರೈತನ ಪ್ರತಿ ಎಕರೆಗೆ 3 ಕೋಟಿ ರೂ ಭೂ ಪರಿಹಾರ ನೀಡಲು ಕ್ರಮ ವಹಿಸಬೇಕು. ಜಂಗಮಕೋಟೆ ಹೋಬಳಿಯಲ್ಲಿ ಪಿ.ಎಸ್.ಎಲ್ ಕಂಪನಿಯ ಹೆಸರಿನಲ್ಲಿ ಕೆಲ ಮದ್ಯವರ್ತಿಗಳು ಅಮಾಯಕ ಮುಖ್ಯ ರೈತರಿಗೆ ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಒಂದು ಎಕರೆಗೆ 50 ಸಾವಿರ,1 ಲಕ್ಷ ಹಣ ನೀಡಿ ಜಿಪಿಎ ಆಗ್ರಿಮೆಂಟ್ ಗಳನ್ನು ಮಾಡಿಕೊಂಡು ಹಣ ನೀಡದೆ ಮೋಸ ಮಾಡಿರುತ್ತಾರೆ. ಬಡವರಿಗೆ ನ್ಯಾಯಾಲಯಕ್ಕೆ ಹೊಗುವ ಶಕ್ತಿ ಇಲ್ಲ. ಹಾಗಾಗಿ ಸರ್ಕಾರ ಸಂಬಂಧಪಟ್ಟ ಕಾನೂನು ಇಲಾಖೆ ಮುಖಾಂತರ ರೈತರ ಪರವಾಗಿವಕೀಲರನ್ನು ನೇಮಿಸಿ ಕೆಲ ರೈತರ ಪಹಣಿಗಳಲ್ಲಿ ನಮೂದು ಆಗಿರುವ ತಡೆಯಾಜ್ಞೆ ಆದೇಶವನ್ನು ರದ್ದುಗೊಳಿಸಲು ಕ್ರಮ ವಹಿಸಬೇಕು.
ಸರ್ಕಾರದಿಂದ ಭೂಮಿ ನೀಡಿದ ರೈತರಿಗೆ ಕೊಡುವ ಭೂ ಪರಿಹಾರ ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಜಮಾ ಮಾಡಬೇಕು. ಕೆಐಎಡಿಬಿ ಪರ ಇರುವ ಕೆಲ ರೈತರ ಮೇಲೆ ಕೆಲವರು ಹಲ್ಲೆ ದಬ್ಬಾಳಿಕೆಗಳನ್ನು ಮಾಡುತ್ತಿದ್ದು, ಅಂತಹವರ ವಿರುದ್ಧ ಕೂನೂನು ರೀತಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಎನ್.ಭಾಸ್ಕರ್ ಅವರಿಗೆ ನೀಡಿದರು. ಎ.ಸಿ ಅಶ್ವಿನ್, ಡಿ.ವೈ.ಎಸ್.ಪಿ ಮುರಳೀಧರ್ ಮತ್ತು ತಹಶೀಲ್ದಾರ್ ಗಗನಸಿಂಧು ಹಾಜರಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಕೆಐಎಡಿಬಿ 13 ಹಳ್ಳಿಗಳ ಹೋರಾಟ ಸಮಿತಿಯ ಮುಖಂಡರಾದ ನಡುಪಿನಾಯಕನಹಳ್ಳಿ ಸುಬ್ರಮಣಿ, ವಾಸುದೇವ ಮೂರ್ತಿ, ಪ್ರಮೋದ್, ಬಸವಪಟ್ಟಣ ಆಂಜಿನಪ್ಪ, ಪ್ರಭುದೇವ್, ತಿಪ್ಪೇಗೌಡ, ರಾಮದಾಸ್, ನಾಗರಾಜ್, ಯಣ್ಣಂಗೂರು ಹರೀಶ್, ಗಂಗಾಧರ್, ಈರಪ್ಪ, ಮಧು, ನರಸಿಂಹಮೂರ್ತಿ, ಭಕ್ತರಹಳ್ಳಿ ವಿಶ್ವನಾಥ್, ಮುನಿಶಾಮಿ, ಜಂಗಮಕೋಟೆ ಜೆ.ಸಿ.ಮಂಜುನಾಥ್, ಮುನಿರಾಜು, ನಾಗರಾಜ್, ಚೀಮಂಗಲ ಚಿನ್ನಪ್ಪ, ಅತ್ತಿಗಾನಹಳ್ಳಿ ಮುನೇಗೌಡ, ನವೀನಕುಮಾರ್, ಮುನಿಕೆಂಚಪ್ಪ, ಹೀರೆಪಾಳ್ಯ ಕದೀರೇಗೌಡ, ಬೀಮಣ್ಣ, ನಾಗವೇಣಿ, ಗಾಯಿತ್ರೀ, ಶ್ಯಾಮ್, ರಾಜೇಶ್, ವಾರಹುಣಸೇನಹಳ್ಳಿ ನರಸಿಂಹ ಮೂರ್ತಿ, ಕರ್ನಾಟಕ ಕಸ್ತೂರಿ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜಿನಪ್ಪ, ಪ್ರಕಾಶ, ಮಾನವ ಹಕ್ಕುಗಳ ಸಂಘಟನೆಯ ಮಳ್ಳೂರು ಅಶೋಕ್, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಚಲಪತಿ, ಕೃಷ್ಣಪ್ಪ ಹಾಜರಿದ್ದರು.
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಇತಿಹಾಸವನ್ನು ಅರಿಯಲು ಶಾಸನಾಧ್ಯಯನ ಬಹಳ ಮುಖ್ಯವಾದದ್ದು. ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆ ನಡೆಸುತ್ತಿರುವುದು ಸ್ವಾಗತಾರ್ಹ. ಮುಂದಿನ ಪೀಳಿಗೆಗೆ ಕ್ಷೇತ್ರದ ಐತಿಹ್ಯಗಳನ್ನು ಹೇಳಬೇಕಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಾವಾರು ಸರ್ವೆಗಾಗಿ ಆಗಮಿಸಿದ್ದ ಶಾಸನತಜ್ಞ ಕೆ.ಧನಪಾಲ್ ಮತ್ತು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಅವರು ಶಾಸಕ ಬಿ.ಎನ್.ರವಿಕುಮಾರ್ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಸಾಕಷ್ಟು ಹಳೆಯ ಕಲ್ಲುಗಳನ್ನು ನೋಡುತ್ತೇವಾದರೂ ಅವುಗಳ ಮಹತ್ವ ಎಲ್ಲರಿಗೂ ಗೊತ್ತಿರುವುದಿಲ್ಲ. ಪುರಾತತ್ವ ಇಲಾಖೆಯಿಂದ ನಡೆಸುತ್ತಿರುವ ಈ ಸರ್ವೆ ಕಾರ್ಯ ಸಂಪೂರ್ಣವಾದ ನಂತರ ಇಡೀ ಕ್ಷೇತ್ರದಲ್ಲಿ ಸಿಕ್ಕಿರುವ ಶಾಸನಗಳ ವಿಚಾರವನ್ನು ಪ್ರಕಟಿಸಬೇಕೆಂದು ಅವರು ಹೇಳಿದರು.
ಶಾಸನತಜ್ಞ ಕೆ.ಧನಪಾಲ್ ಮಾತನಾಡಿ, “ನಾವುಗಳು ಶಿಡ್ಲಘಟ್ಟ ಗ್ರಾಮಾವಾರು ಸರ್ವೆ ಮಾಡುವಾಗ ಹಲವಾರು ಅಪರೂಪದ ಶಾಸನ ಮತ್ತು ವೀರಗಲ್ಲುಗಳನ್ನು ನೋಡುತ್ತಿದ್ದೇವೆ. ಅವುಗಳನ್ನು ಫೋಟೋ ಮತ್ತು ವೀಡಿಯೋ ಮೂಲಕ ದಾಖಲಿಸುತ್ತಾ, ಅವುಗಳ ಮೇಲೆ ಕೆತ್ತಿರುವ ಅಕ್ಷರಗಳನ್ನು ತಜ್ಞರಿಗೆ ಕಳುಹಿಸಿ ಓದಿಸುತ್ತಿದ್ದೇವೆ. ಗಂಗ, ನೊಳಂಬ, ಚೋಳ, ಹೊಯ್ಸಳ, ವಿಜಯನರದ ಅರಸರ ಕಾಲದ ಇತಿಹಾಸದ ಸಂಗತಿಗಳು ತಿಳಿಯುತ್ತಿವೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಇವುಗಳ ಮಹತ್ವವನ್ನು ತಿಳಿಸಿದ್ದೇವೆ. ಗ್ರಾಮಸ್ಥರಲ್ಲಿಯೂ ಈ ಶಾಸನಗಳು ಮತ್ತು ವೀರಗಲ್ಲುಗಳನ್ನು ಉಳಿಸುವಂತೆ ಮನವಿ ಮಾಡಿದ್ದೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೇಲೂರಿನಲ್ಲಿರುವ ಆವತಿ ನಾಡಪ್ರಭು ಗೋಪಾಲಗೌಡರ ದಾನ ಶಾಸನ (ಕ್ರಿ.ಶ. 1698) ದ ಪಠ್ಯವನ್ನು ಮುದ್ರಿಸಿರುವ ಭಿತ್ತಿಪತ್ರವನ್ನು ಶಾಸಕ ಬಿ.ಎನ್.ರವಿಕುಮಾರ್ ಅವರಿಗೆ ಪುರಾತತ್ವ ಇಲಾಖೆಯ ಪರವಾಗಿ ಶಾಸನತಜ್ಞ ಕೆ.ಧನಪಾಲ್ ಅವರು ನೀಡಿದರು.
Melur, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿ ಗ್ರಾಮದಲ್ಲಿ, ಸುಬ್ರಮಣಿ ಎಂಬುವವರಿಗೆ ಸೇರಿದ 8 ಕುರಿಗಳನ್ನು, ಬೀದಿನಾಯಿಗಳು ಕಚ್ಚಿ ಸಾಯಿಸಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.
ಸುಭ್ರಮಣಿ ಅವರ ಮನೆಯ ಮುಂಭಾಗದಲ್ಲಿನ ಶೆಡ್ ನಲ್ಲಿ ಕಟ್ಟಿದ್ದ ಕುರಿಗಳ ಮೇಲೆ ದಾಳಿ ನಡೆಸಿರುವ ಬೀದಿ ನಾಯಿಗಳು, ಎಲ್ಲಾ ಕುರಿಗಳನ್ನು ಕಚ್ಚಿ ಸಾಯಿಸಿ, ಎರಡು ಕುರಿಗಳನ್ನು ಅರ್ಧಭಾಗದಷ್ಟು ತಿಂದು ಹಾಕಿವೆ.
ಮಾಲೀಕ ಸುಭ್ರಮಣಿ ಬೆಳಿಗ್ಗೆ ಎದ್ದು, ಕುರಿಗಳಿಗೆ ಮೇವು ಹಾಕುವುದಕ್ಕೆ ಹೋದಾಗ ಕುರಿಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಈ ಕುರಿತು ಮಾತನಾಡಿದ ಕುರಿಗಳ ಮಾಲೀಕ ಸುಭ್ರಮಣಿ, 8 ಕುರಿಗಳನ್ನು ಶೆಡ್ ನಲ್ಲಿ ಕಟ್ಟಿ ಮೇವು ಹಾಕಿ ಹೋಗಿ ಮಲಗಿದ್ದೆ, ಬೆಳಿಗ್ಗೆ ಎದ್ದು ಬಂದು ನೋಡುವಷ್ಟರಲ್ಲಿ 6 ಕುರಿಗಳು 2 ಮರಿಗಳನ್ನು ನಾಯಿಗಳು ಕಚ್ಚಿ ಸಾಯಿಸಿವೆ. ಇದರಿಂದ ಸುಮಾರು 80 ಸಾವಿರ ರೂಪಾಯಿಗಳು ನಷ್ಟವಾಗಿದೆ ಎಂದರು.
Sidlaghatta : ಮನುಷ್ಯರಲ್ಲಿ ಎಷ್ಟೇ ಭಿನ್ನತೆ ಇದ್ದರೂ ಎಲ್ಲರಲ್ಲಿರುವ ಆತ್ಮ ಒಂದೇ. ಆತ್ಮವೇ ಪರಮಾತ್ಮನ ಸ್ವರೂಪ ಎಂದು ಥಿಯಾಸಫಿ ವ್ಯಾಸಂಗದ ರಾಷ್ಟ್ರೀಯ ಉಪನ್ಯಾಸಕ ಡಾ.ಎಲ್.ನಾಗೇಶ್ ತಿಳಿಸಿದರು.
ಶಿಡ್ಲಘಟ್ಟ ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಬ್ರಹ್ಮವಿದ್ಯಾ ಸಮಾಜದ ವತಿಯಿಂದ ಆಯೋಜಿಸಿದ್ದ ಥಿಯಾಸಫಿ ವ್ಯಾಸಂಗದ ಕುರಿತಾದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಥಿಯಾಸಫಿ ಪ್ರಕಾರ, ಮಾನವ ಜೀವನದ ಮುಖ್ಯ ಉದ್ದೇಶವು ಆತ್ಮದ ಆಧ್ಯಾತ್ಮಿಕ ಮುಕ್ತಿ ಮತ್ತು ಜ್ಞಾನಾರ್ಜನೆ. ಇದರಲ್ಲಿ ಪುನರ್ಜನ್ಮ ಮತ್ತು ಆತ್ಮದ ಅನಂತತೆಯ ತತ್ವಗಳೂ ಸೇರಿವೆ. ಈ ವ್ಯಾಸಂಗವು ತತ್ವಶಾಸ್ತ್ರ, ಧರ್ಮ ಮತ್ತು ಮಾನವನ ಆಧ್ಯಾತ್ಮಿಕ ಶಕ್ತಿಗಳ ಅಧ್ಯಯನಕ್ಕೆ ಒತ್ತು ನೀಡುತ್ತದೆ. ಜೀವನದ ಆಳವಾದ ಅರ್ಥ ಮತ್ತು ಸತ್ಯವನ್ನು ಅರಿಯಲು ಪ್ರಯತ್ನಿಸಬೇಕು. ಥಿಯಾಸಫಿ ವ್ಯಾಸಂಗದಲ್ಲಿ ಮಾನವ ಸಮಾಜದಲ್ಲಿ ಜಾತಿ, ಧರ್ಮ, ಲಿಂಗ, ವರ್ಗ ಅಥವಾ ಬಣ್ಣದ ಭೇದವಿಲ್ಲದೆ ಸರ್ವ ಮಾನವರ ನಡುವೆ ಸಹೋದರತ್ವವನ್ನು ಸ್ಥಾಪಿಸುವುದು ಮುಖ್ಯ ಉದ್ದೇಶವಾಗಿದೆ. ಎಲ್ಲಾ ಧರ್ಮಗಳ ತತ್ತ್ವಗಳನ್ನು ಗೌರವಿಸುವುದು ಮತ್ತು ಅವುಗಳ ಮಧ್ಯೆ ಏಕತೆ ಕಂಡುಹಿಡಿಯುವುದು ಗೋಷ್ಠಿಯ ಮುಖ್ಯ ಸಂಗತಿ ಎಂದು ಹೇಳಿದರು.
ಥಿಯಾಸಫಿ ಉಪನ್ಯಾಸಕಿ ಡಾ.ಜ್ಯೋತಿ ನಾಗೇಶ್ ಮಾತನಾಡಿ, ಥಿಯಾಸಫಿ 1875 ರಲ್ಲಿ ಸ್ಥಾಪಿತವಾದ ಒಂದು ತತ್ವಶಾಸ್ತ್ರ ಮತ್ತು ಆಧ್ಯಾತ್ಮಿಕ ಸಂಘಟನೆ. ಇದರ ಮುಖ್ಯ ಉದ್ದೇಶ ಸಮಾಜದಲ್ಲಿ ಯಾವುದೇ ಬೇಧ-ಭಾವ ಇಲ್ಲದ ವಿಶ್ವಭಾತೃತ್ವವನ್ನು ನಿರ್ಮಿಸುವುದು, ವೈಚಾರಿಕತೆಯ ತುಲನಾತ್ಮಕ ಅಧ್ಯಯನ ನಡೆಸುವುದು ಮತ್ತು ಪ್ರಕೃತಿ ನಿಯಮ ಹಾಗೂ ಮಾನವನ ಸುಪ್ತ ಶಕ್ತಿಗಳನ್ನು ಪತ್ತೆ ಹಚ್ಚುವುದಾಗಿದೆ ಎಂದು ಹೇಳಿದರು.
ಬ್ರಹ್ಮವಿದ್ಯಾ ಸಮಾಜದ ಅಧ್ಯಕ್ಷ ಬಿ.ಕೆ.ವೇಣು, ಸದಸ್ಯರಾದ ಬಳೆ ರಘು, ಎಸ್.ಎಸ್.ಶಂಕರ್, ಕೆ.ಶ್ರೀನಾಥ್, ಚಿಕ್ಕಮುನಿಯಪ್ಪ, ಬಿ.ಸಿ.ನಂದೀಶ್ ಹಾಜರಿದ್ದರು.
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿಯ ನಿವೃತ್ತ ಉಪನ್ಯಾಸಕ ಆರ್.ಆಂಜನೇಯ ಅವರ ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳು ವಿಷವನ್ನು ಸಿಂಪಡಿಸಿದ್ದರಿಂದಾಗಿ ರೇಷ್ಮೆ ಹುಳುಗಳು ಸಾವಿಗೀಡಾಗಿವೆ.
ಹಣ್ಣಾದ ಹಂತದಲ್ಲಿದ್ದ ಮತ್ತು ಮೂರನೇ ಹಂತದಲ್ಲಿದ್ದ ಒಟ್ಟಾರೆ 300 ಮೊಟ್ಟೆಗಳ ಹುಳುಗಳು ಸತ್ತಿರುವುದರಿಂದ ರೈತರಿಗೆ ಸುಮಾರು ಎರಡೂವರೆ ಲಕ್ಷ ರೂ ನಷ್ಟವಾಗಿದೆ. ಆರ್.ಆಂಜನೇಯ ಅವರ ನಾಲ್ಕು ಎಕರೆ ಹಿಪ್ಪುನೇರಳೆ ತೋಟದಲ್ಲಿ ಒಂದು ಎಕರೆ ಸೊಪ್ಪಿಗೆ ದುಷ್ಕರ್ಮಿಗಳು ಶನಿವಾರ ವಿಷ ಸಿಂಪಡಿಸಿದ್ದು, ಆ ಸೊಪ್ಪನ್ನು ಹುಳುಗಳಿಗೆ ತಿನ್ನಲು ಹಾಕಿದ್ದರಿಂದ ಸಂಪೂರ್ಣ ಬೆಳೆ ನಾಶವಾಗಿದೆ.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ಮತ್ತು ವಿಸ್ತರಣಾಧಿಕಾರಿ ಎಂ.ಸಿ.ಭಾರತಿ ಅವರು ಸೊಪ್ಪಿಗೆ ವಿಷ ಸಿಂಪಡನೆಯನ್ನು ದೃಢೀಕರಿಸಿದ್ದು, ಅದರಿಂದಲೇ ಹುಳುಗಳು ಸತ್ತಿವೆ ಎಂದು ಹೇಳಿದ್ದಾರೆ. ಈ ವಿಷಯವಾಗಿ ರೈತ ಪೋಲೀಸರಿಗೆ ದೂರು ನೀಡಿದ್ದಾರೆ.
Sidlaghatta : ಶಾಲೆ ವಂಚಿತ ವಲಸೆ ಕಾರ್ಮಿಕ ಮಹಿಳೆ ಲಕ್ಷ್ಮಿಬಾಯಿ ಹೊಸಮನೆ ಅವರ 9 ವರ್ಷದ ಮಗಳು ರೂಪ ರನ್ನು ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲು ಅಸಂಘ ಟಿತ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ದೇವರ ಮಳ್ಳೂರು ವಿ.ಚನ್ನಕೃಷ್ಣ ಮುಂದಾಗಿದ್ದಾರೆ.
ಬಿಜಾಪುರ ಮೂಲದ ಲಕ್ಷ್ಮಿಬಾಯಿ ಹೊಸಮನೆ ಅವರು ತನ್ನ ಮಗಳೊಂದಿಗೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದುದನ್ನು ಕಂಡು ವಿ.ಚನ್ನಕೃಷ್ಣ ಅವರು ಮಗುವನ್ನು ಶಾಲೆಗೆ ಸೇರಿಸಲು ಪೋಷಕರನ್ನು ಮನವೊಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದೇವರ ಮಳ್ಳೂರು ವಿ.ಚನ್ನಕೃಷ್ಣ, “ಶಿಕ್ಷಣ ಎಲ್ಲರ ಬಾಳು ಬೆಳಕಾಗಿಸುತ್ತದೆ. ಸಮಾಜದ ಹಿತ ಕಾಯುತ್ತದೆ. ವಿದ್ಯೆಇರುವ ಮನೆ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ. ಮಗುವನ್ನು ತಪ್ಪದೇ ಶಾಲೆಗೆ ಕಳುಹಿಸುವಂತೆ ಪೋಷಕರಲ್ಲಿ ಮನವಿ ಮಾಡಿರುವೆ. ಆ ಮಗುವಿನ ಶಿಕ್ಷಣಕ್ಕೆ ಬೇಕಾದ ಪೂರಕ ಸಹಾಯ ನಾನು ಮಾಡಿಸುತ್ತೇನೆ ಎಂಬುದಾಗಿ ತಿಳಿಸಿರುವೆ. ಮಗುವನ್ನು ಶಾಲೆಗೆ ಸೇರಿಸುವ ವಿಚಾರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಬಿ.ಆರ್.ಪಿ. ಕೆ. ಮಂಜುನಾಥ, ದೇವರಮಳ್ಳೂರು ಕ್ಲಸ್ಟರ್ ಸಿ.ಆರ್.ಪಿ ಬಿ.ವಿ. ಮಂಜುನಾಥ ಅವರು ಸಹಕಾರ ನೀಡುತ್ತಿದ್ದಾರೆ. ಶಾಲಾ ಮುಖ್ಯ ಶಿಕ್ಷಕರಾದ ಸುದರ್ಶನ್ ಸಹ ಶಾಲೆಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಈ ರೀತಿಯ ಮಕ್ಕಳು ಯಾರಿಗೇ ಕಂಡು ಬಂದರೂ ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಬೇಕು” ಎಂದು ಅವರು ಹೇಳಿದರು.
Sidlaghatta : ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮುಂದಿನ ತಿಂಗಳು ಜುಲೈ 9 ರಂದು ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆವಿ ಭವನದಲ್ಲಿ ನಡೆಯುತ್ತಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಅಂಗನವಾಡಿ ನೌಕರರಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ 50 ವರ್ಷಗಳಾಗಿವೆ. ಐಸಿಡಿಎಸ್ ಯೋಜನೆಯನ್ನು ಖಾಯಂಗೊಳಿಸಬೇಕು, ಐಸಿಡಿಎಸ್ ಯೋಜನೆಗೆ ಮೀಸಲಿಡುವ ಅನುದಾನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಅಂಗನವಾಗಿ ಶಿಕ್ಷಕರು, ಸಹಾಯಕರನ್ನು ಖಾಯಂಗೊಳಿಸಬೇಕು, ಅದುವರೆಗೂ 26 ಸಾವಿರ ರೂ.ಕನಿಷ್ಠ ವೇತನ ನೀಡಬೇಕು ಮತ್ತು ನಿವೃತ್ತಿ ನಂತರ 10 ಸಾವಿರ ರೂ,ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಇದೀಗ ಹೊಸದಾಗಿ ಟಿ.ಎಚ್.ಆರ್ ಮೂಲಕ ಫಲಾನುಭವಿಗಳ ಫೋಷಣ್ ಟ್ರ್ಯಾಕರ್ ಕೆಲಸಗಳಿಗೆ ಅಪ್ ಡೇಟೆಡ್ ಮೊಬೈಲ್ ಹ್ಯಾಂಡ್ ಸೆಟ್ ವಿತರಿಸಬೇಕು, ನೆಟ್ ಗಾಗಿ ವಾರ್ಷಿಕವಾಗಿ ನೀಡುತ್ತಿರುವ 2 ಸಾವಿರ ರೂಗಳನ್ನು ಇನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ತಿಂಗಳೂ ಮಗುವಿನ ಫೋಟೋವನ್ನು ಅಪ್ ಡೇಟ್ ಮಾಡುವ ಕೆಲಸವನ್ನು ಪ್ರತಿ ತಿಂಗಳ ಬದಲಿಗೆ ಮೂರು ತಿಂಗಳಿಗೊಮ್ಮೆ ಫೋಟೋ ಅಪ್ ಡೇಟ್ ಮಾಡಲು ಅವಕಾಶ ನೀಡಬೇಕು ಎಂದರು.
ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ನೌಕರರು ಸಂಘಗಳನ್ನು ರಚಿಸುವ, ಸಂಘಟಿಸುವ ಮತ್ತು ಮುಷ್ಕರ, ಪ್ರತಿಭಟನೆ ನಡೆಸುವ ಹಕ್ಕುಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದ್ದು ತಿದ್ದುಪಡಿ ಮಾಡುವ ಕೆಲಸವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಹಾಗೆಯೆ 2023 ಏಪ್ರಿಲ್ 1 ರಂದು 1972 ರ ಗ್ರಾಜ್ಯುಟಿ ಪಾವತಿ ಕಾಯಿದೆಗೆ ತಿದ್ದುಪಡಿ ತಂದು 287 ಕಾರ್ಯಕರ್ತೆಯರು, 1204 ಸಹಾಯಕಿಯರಿಗೆ ಗ್ರಾಜ್ಯುಟಿ ಪಾವತಿಸಿದ್ದು ಅದೇ ರೀತಿ 2011 ರಿಂದ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೂ ಇದರ ಅನ್ವಯ ಗ್ರಾಜ್ಯುಟಿ ನೀಡಬೇಕೆಂದು ಮನವಿ ಮಾಡಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈಡೇರಿಸುವಂತೆ ಒತ್ತಾಯಿಸಿ ಜುಲೈ 9 ರಂದು ರಾಜ್ಯದ ಎಲ್ಲ ಅಂಗನವಾಗಿ ಕೇಂದ್ರಗಳನ್ನು ಮುಚ್ಚಿ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ಕಾರ್ಯದರ್ಶಿ ಕೆ.ರತ್ನ, ಕೋಲಾರ ಜಿಲ್ಲಾಧ್ಯಕ್ಷೆ ಕಲ್ಪನ, ಕಾರ್ಯದರ್ಶಿ ಆಂಜಿನಮ್ಮ ಹಾಜರಿದ್ದರು.