Sidlaghatta : “ಅಸಂಘಟಿತ ಕಾರ್ಮಿಕರ ಬದುಕಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಆದ್ಯತೆಯಾಗಿದೆ. ಇಂತಹ ಶ್ರಮಿಕರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ, ಅವರ ಮನೆಬಾಗಿಲಿಗೆ ಯೋಜನೆಗಳನ್ನು ತಲುಪಿಸುವ ಕಾರ್ಯ ಶ್ಲಾಘನೀಯ,” ಎಂದು ನಗರಸಭೆ ಪೌರಾಯುಕ್ತೆ ಜಿ.ಅಮೃತಾ ತಿಳಿಸಿದರು.
ನಗರದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಸಂಘಟಿತ ಕಾರ್ಮಿಕರ ನೋಂದಣಿ, ಆಯುಷ್ಮಾನ್ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಹಿರಿಯ ಕಾರ್ಮಿಕರ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕರ ಮನೆಬಾಗಿಲಿಗೆ ಸೌಲಭ್ಯ: ಬೀದಿ ಬದಿ ವ್ಯಾಪಾರಿಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಸೇವೆಯನ್ನು ಗುರುತಿಸಿ ಅವರಿಗೆ ಜೀವ ವಿಮೆ ಹಾಗೂ ಆರೋಗ್ಯ ಭದ್ರತೆ ಒದಗಿಸಲು ನಗರಸಭೆ ಸದಾ ಬದ್ಧವಾಗಿದೆ. ವಿವೇಕಾನಂದರ ಜಯಂತಿಯ ಈ ಶುಭ ಸಂದರ್ಭದಲ್ಲಿ ಶ್ರಮಿಕರನ್ನು ಗೌರವಿಸುತ್ತಿರುವುದು ಅರ್ಥಪೂರ್ಣ ಎಂದು ಅವರು ಬಣ್ಣಿಸಿದರು.
ಸಕಾಲಕ್ಕೆ ತಲುಪಲಿ ಸೌಲಭ್ಯ: ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, “ಕಾರ್ಮಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳು ವಿಳಂಬವಿಲ್ಲದೆ ಸಮರ್ಪಕವಾಗಿ ತಲುಪಬೇಕು. ಅವರ ಜೀವಕ್ಕೆ ಭದ್ರತೆ ನೀಡುವ ವಿಮಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವುದು ಅಭಿನಂದನೀಯ,” ಎಂದರು.
ಕಾರ್ಯಕ್ರಮದಲ್ಲಿ ನೂರಾರು ಕಾರ್ಮಿಕರಿಗೆ ಆಯುಷ್ಮಾನ್ ಆರೋಗ್ಯ ಕಾರ್ಡ್ಗಳನ್ನು ನೋಂದಾಯಿಸಿ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯ ಕಾರ್ಮಿಕರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಡಾ.ಡಿ.ಟಿ.ಸತ್ಯನಾರಾಯಣರಾವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
Sidlaghatta : “ವ್ಯಕ್ತಿಯ ಹಿನ್ನೆಲೆ ಅಥವಾ ಬಡತನ ಆತನ ಪ್ರಗತಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ. ಸಂವಿಧಾನ ನೀಡಿರುವ ಶಿಕ್ಷಣದ ಹಕ್ಕು ಒಬ್ಬ ಸಾಮಾನ್ಯ ವ್ಯಕ್ತಿಯನ್ನೂ ಅತ್ಯುನ್ನತ ಸ್ಥಾನದಲ್ಲಿ ಕೂರಿಸುವ ಶಕ್ತಿ ಹೊಂದಿದೆ,” ಎಂದು ಪ್ರಖ್ಯಾತ ಲೇಖಕಿ ಹಾಗೂ ಪ್ರಗತಿಪರ ಚಿಂತಕಿ ಡಾ. ಬಿ.ಟಿ. ಲಲಿತಾ ನಾಯಕ್ ತಿಳಿಸಿದರು.
ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಸವಿ ಸ್ಫೂರ್ತಿ 2026” – ಯುವ ಮನಸ್ಸುಗಳಿಗೊಂದು ಪ್ರೇರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಕಗಳಿಗಿಂತ ಮೌಲ್ಯ ದೊಡ್ಡದು: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆದಿಶೇಷರಾವ್ ಮಾತನಾಡಿ, “ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನವಿದ್ದರೆ ಸಾಲದು, ನೈತಿಕ ಶಿಕ್ಷಣವೂ ಅಷ್ಟೇ ಮುಖ್ಯ. ಅಂಕಗಳಿಗಿಂತ ಮಾನವೀಯ ಮೌಲ್ಯಗಳು ಹೆಚ್ಚಿನ ತೂಕ ಹೊಂದಿರುತ್ತವೆ. ಗುರು-ಹಿರಿಯರನ್ನು ಗೌರವಿಸದವನು ಬದುಕಿನಲ್ಲಿ ಯಶಸ್ಸು ಕಂಡ ಉದಾಹರಣೆಯೇ ಇಲ್ಲ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೊಬೈಲ್ ಬಿಟ್ಟು ಕನಸಿನ ಹಿಂದೆ ಹೋಗಿ: ಡಾಲ್ಫಿನ್ಸ್ ಸಂಸ್ಥೆಯ ಅಧ್ಯಕ್ಷ ಎ. ನಾಗರಾಜ್ ಮಾತನಾಡಿ, “ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ಮೊಬೈಲ್ ಪ್ರಪಂಚದಲ್ಲಿ ಕಳೆದು ಹೋಗದೆ, ಸದಾ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಇಂದಿನ ವಿದ್ಯಾರ್ಥಿಗಳು ಸಮಾಜವನ್ನು ಸರಿ ದಾರಿಗೆ ಕೊಂಡೊಯ್ಯುವ ನಾಳಿನ ಬುದ್ಧಿಜೀವಿಗಳು,” ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳಿಗೆ ಮೆಡಲ್ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿ ಗೌರವಿಸಲಾಯಿತು. ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಪ್ರಾಂಶುಪಾಲ ಪ್ರೊ. ಎನ್. ಶ್ರೀನಿವಾಸ ಮೂರ್ತಿ ಸೇರಿದಂತೆ ಹಲವು ಶಿಕ್ಷಣ ತಜ್ಞರು ಉಪಸ್ಥಿತರಿದ್ದರು.
Nadipinayakanahalli, sidlaghatta : “ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿ ದೊಡ್ಡದು ಎಂದು ಭಾವಿಸಿದರೆ ದೇಶದಲ್ಲಿ ಭ್ರಷ್ಟಾಚಾರ ಇರುವುದಿಲ್ಲ. ಶಿಸ್ತು ಮತ್ತು ಸಾರ್ವಜನಿಕ ಮೌಲ್ಯಗಳನ್ನು ಗೌರವಿಸುವುದೇ ಪ್ರಗತಿಯ ಹಾದಿ,” ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆ, ಕಪಿಲಮ್ಮ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವದ 90ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಅಭಿವೃದ್ಧಿ ಹೊಂದಿದ ದೇಶಗಳ ಯಶಸ್ಸಿನ ರಹಸ್ಯ ಅಲ್ಲಿನ ಜನರ ‘ಸಾಮಾಜಿಕ ಶಿಸ್ತು’ ಎಂದು ಬಣ್ಣಿಸಿದರು.
ಯಶಸ್ಸಿಗೆ ನೆರವಾದ ಶಿಕ್ಷಕರ ಮಾತು: ತಮ್ಮ ಜೀವನದ ಮೇಲೆ ಪ್ರಭಾವ ಬೀರಿದ ಘಟನೆಯನ್ನು ನೆನಪಿಸಿಕೊಂಡ ಮೂರ್ತಿಯವರು, “ಮೈಸೂರಿನ ಶಾರದಾ ವಿಲಾಸ್ ಶಾಲೆಯಲ್ಲಿ ನಾನು ಓದುವಾಗ ಕೆ.ವಿ. ನಾರಾಯಣ್ ಎಂಬ ಶಿಕ್ಷಕರು ಒಂದು ಮಾತು ಹೇಳಿದ್ದರು—’ನಮ್ಮ ವೈಯಕ್ತಿಕ ಆಸ್ತಿಗಿಂತ ಸಮುದಾಯದ ಆಸ್ತಿಯನ್ನು ಹೆಚ್ಚು ಜಾಗರೂಕತೆಯಿಂದ ನಿರ್ವಹಿಸಬೇಕು’. ಈ ಮೌಲ್ಯವೇ ನಾನು ಇನ್ಫೋಸಿಸ್ ಸಂಸ್ಥೆಯನ್ನು ಯಶಸ್ವಿಯಾಗಿ ಕಟ್ಟಲು ಅಡಿಪಾಯವಾಯಿತು,” ಎಂದು ತಿಳಿಸಿದರು.
ಪರೀಕ್ಷೆ ಮತ್ತು ಶಿಕ್ಷಣ ವ್ಯವಸ್ಥೆ: ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪರೀಕ್ಷೆಯ ಭಯವನ್ನು ಹೋಗಲಾಡಿಸಲು ಸರಿಯಾದ ವೇಳಾಪಟ್ಟಿ ಮತ್ತು ನಿರಂತರ ತಯಾರಿ ಅಗತ್ಯ ಎಂದರು. ಭಾರತೀಯ ಮತ್ತು ವಿದೇಶಿ ಶಿಕ್ಷಣ ವ್ಯವಸ್ಥೆಯ ನಡುವಿನ ವ್ಯತ್ಯಾಸವನ್ನು ವಿಶ್ಲೇಷಿಸುತ್ತಾ, “ನಮ್ಮಲ್ಲಿ ಪರೀಕ್ಷೆಯಲ್ಲಿ ಅಂಕ ಪಡೆಯಲು ಮಾತ್ರ ಕಲಿಸಲಾಗುತ್ತಿದೆ. ಆದರೆ, ಪ್ರಶ್ನಿಸುವ ಮತ್ತು ಪ್ರಾಯೋಗಿಕವಾಗಿ ಚಿಂತಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ದೊಡ್ಡ ಸಂಶೋಧನೆಗಳು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.
Sidlaghatta : KPCC ಸಂಯೋಜಕ ರಾಜೀವ್ ಗೌಡ, ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಧಮ್ಕಿ ಹಾಕಿ, ನಿಂದಿಸಿರುವ ವಿಷಯವಾಗಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜೀವ್ ಗೌಡ ಪರ ವಕೀಲರು ಚಿಂತಾಮಣಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಶನಿವಾರ ಅರ್ಜಿ ಸಲ್ಲಿಸಿದ್ದರು.
ಜಾಮೀನಿನ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಜನವರಿ 22 ರ ಗುರುವಾರ ಕ್ಕೆ ಮುಂದೂಡಿದೆ.
“ರಾಜೀವ್ ಗೌಡ ತಲೆ ಮರೆಸಿಕೊಂಡಿದ್ದಾರೆ. ಕಾನೂನು ಪ್ರಕಾರವಾಗಿ ಕ್ರಮ ತಗೊಳ್ಳಿ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅವರು ನಮ್ಮ ಪಕ್ಷದವರಾಗಿರಲಿ ಅಥವಾ ಯಾವುದೇ ಪಕ್ಷದವರಾಗಿರಲಿ ಎಂದು ಹೇಳಿದ್ದೇನೆ” ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ತಿಳಿಸಿದ್ದಾರೆ.
Sidlaghatta : “ನೀವು ಒಬ್ಬಂಟಿಯಲ್ಲ, ನಾವೆಲ್ಲರೂ ನಿಮ್ಮ ಜೊತೆಗಿದ್ದೇವೆ” ಎನ್ನುವ ಭರವಸೆಯೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆಯ ಜಿಲ್ಲಾ ಕಾರ್ಯಕರ್ತರು ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾ ಅವರಿಗೆ ಸಾಂತ್ವನ ಹೇಳಿದರು. ರಾಜಕೀಯ ಮುಖಂಡರ ಬೆದರಿಕೆಯಿಂದ ಕುಗ್ಗಿದ್ದ ಮಹಿಳಾ ಅಧಿಕಾರಿಗೆ ಕನ್ನಡಪರ ಸಂಘಟನೆಗಳು ನೀಡಿದ ಬೆಂಬಲ ಹೊಸ ಚೈತನ್ಯ ನೀಡಿದೆ.
ಕರವೇ ಸಿಂಹ ಸೇನೆ ಅಧ್ಯಕ್ಷ ಶ್ರೀನಿವಾಸಗೌಡ ಹಾಗೂ ಮಹಿಳಾ ಕಾರ್ಯಕರ್ತರು ನಗರಸಭೆ ಕಚೇರಿಗೆ ಆಗಮಿಸಿ, ಪೌರಾಯುಕ್ತರಿಗೆ ಅರಿಶಿನ ಕುಂಕುಮ, ಫಲ ತಾಂಬೂಲ ಹಾಗೂ ರೇಷ್ಮೆ ಸೀರೆ ನೀಡಿ ಗೌರವಿಸಿದರು. ಈ ಮೂಲಕ ಒಬ್ಬ ಮಹಿಳಾ ಅಧಿಕಾರಿಯ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಇಡೀ ನಾಡು ಜೊತೆಗಿರುತ್ತದೆ ಎಂಬ ಸಂದೇಶ ರವಾನಿಸಿದರು.
ಕನ್ನಡ ಸಂಘಟನೆಯ ಕಾರ್ಯಕರ್ತರು ನೀಡಿದ ಈ ಆತ್ಮೀಯ ಗೌರವ ಮತ್ತು ಸಾಂತ್ವನದ ನುಡಿಗಳನ್ನು ಕೇಳಿದ ಅಮೃತಾ ಗೌಡ ಅವರು ಕೆಲ ಕಾಲ ಭಾವೋದ್ವೇಗಕ್ಕೆ ಒಳಗಾದರು. ಅವರ ಕಣ್ಣಂಚಿನಲ್ಲಿ ಕಣ್ಣೀರು ಜಿನುಗಿತು. “ನಿಮ್ಮೆಲ್ಲರ ಸಹಕಾರ ಮತ್ತು ನೀಡುತ್ತಿರುವ ಧೈರ್ಯದಿಂದ ನನಗೆ ಮತ್ತು ನನ್ನ ಸಿಬ್ಬಂದಿಗೆ ಇನ್ನಷ್ಟು ಉತ್ತಮ ಕೆಲಸಗಳನ್ನು ಮಾಡುವ ಮನೋಸ್ಥೈರ್ಯ ಬಂದಿದೆ,” ಎಂದು ಅವರು ಭಾವುಕರಾಗಿ ನುಡಿದರು.
Sidlaghatta : ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ “ಕಲ್ಟ್” ಸಿನಿಮಾ ಪ್ರಚಾರದ ಫ್ಲೆಕ್ಸ್ ತೆರವುಗೊಳಿಸಿದ ವಿಚಾರವಾಗಿ ದೊಡ್ಡ ರಾದ್ಧಾಂತವೇ ನಡೆದ ಬೆನ್ನಲ್ಲೇ, ಶಿಡ್ಲಘಟ್ಟ ನಗರಸಭೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ನಗರದ ಸೌಂದರ್ಯಕ್ಕೆ ಅಡ್ಡಿಯಾಗಿದ್ದ ಹಾಗೂ ಸಂಚಾರಕ್ಕೆ ತೊಂದರೆ ನೀಡುತ್ತಿದ್ದ ಎಲ್ಲ ಬ್ಯಾನರ್, ಫ್ಲೆಕ್ಸ್ ಮತ್ತು ಬಂಟಿಂಗ್ಸ್ಗಳನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆ ಆರಂಭಿಸಿದ್ದಾರೆ.
ಎಲ್ಲೆಲ್ಲಿ ಕಾರ್ಯಾಚರಣೆ? ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಾದ ಕೋಟೆ ವೃತ್ತ, ತಾಲ್ಲೂಕು ಕಚೇರಿ ಮುಂಭಾಗ, ಬಸ್ ನಿಲ್ದಾಣ ಮತ್ತು ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ರಾಜಕೀಯ ಬ್ಯಾನರ್ಗಳು, ಶುಭಾಶಯದ ಪೋಸ್ಟರ್ಗಳು ಮತ್ತು ಶ್ರದ್ಧಾಂಜಲಿಯ ಫೋಟೋಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು.
ವಿವಾದದ ಹಿನ್ನೆಲೆ: ಕೋಟೆ ವೃತ್ತದಲ್ಲಿ “ಕಲ್ಟ್” ಸಿನಿಮಾದ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಪೌರಾಯುಕ್ತೆ ಜಿ. ಅಮೃತಾ ಅವರಿಗೆ ಕರೆ ಮಾಡಿ ಏಕವಚನದಲ್ಲಿ ನಿಂದಿಸಿದ್ದರು. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಡ್ಲಘಟ್ಟಕ್ಕೆ ಆಗಮಿಸಿದ್ದಾಗ ನಡೆದ ಬ್ಯಾನರ್ ವಿಚಾರವನ್ನು ಪ್ರಸ್ತಾಪಿಸಿ, “ನನ್ನ ತಾಕತ್ತು ಏನೆಂದು ತೋರಿಸಬೇಕಾಗುತ್ತದೆ” ಎಂದು ಧಮ್ಕಿ ಹಾಕಿದ್ದರು.
ತೀವ್ರಗೊಂಡ ಕಾನೂನು ಹೋರಾಟ: ರಾಜೀವ್ ಗೌಡ ಅವರ ಈ ವರ್ತನೆಯು ಕೇವಲ ಸ್ಥಳೀಯ ಪ್ರತಿಭಟನೆಗೆ ಸೀಮಿತವಾಗದೆ, ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಮಹಿಳಾ ಆಯೋಗವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಇತ್ತ ಕೆಪಿಸಿಸಿ (KPCC) ಕೂಡ ರಾಜೀವ್ ಗೌಡ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಪಕ್ಷಕ್ಕೂ ಈ ಘಟನೆ ಮುಜುಗರ ತಂದಿದೆ. ಈ ಎಲ್ಲ ರಾದ್ಧಾಂತಗಳ ನಡುವೆ ಅಧಿಕಾರಿಗಳು ಈಗ ನಗರವನ್ನು ಬ್ಯಾನರ್ ಮುಕ್ತಗೊಳಿಸಲು ಪಣತೊಟ್ಟಿದ್ದಾರೆ.