Sidlaghatta : ತಾಲ್ಲೂಕಿನ SSLC ಪರೀಕ್ಷಾ ಕೇಂದ್ರಗಳಲ್ಲಿ ನಾಳೆಯಿಂದ ಪರೀಕ್ಷೆ ಬರೆಯಲಿರುವ ಸರ್ಕಾರಿ, ವಸತಿಯುತ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಂತರ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಕಲ್ಪಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಜಿಲ್ಲಾ ಅಕ್ಷರದಾಸೋಹ ಶಿಕ್ಷಣಾಧಿಕಾರಿ ಆಂಜನೇಯ ತಿಳಿಸಿದ್ದಾರೆ.
ಈ ಕುರಿತು ವಿವರಿಸಿದ ಅವರು, ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಗೊತ್ತುಪಡಿಸಿದ ನಾಲ್ಕು ಬಿಸಿಯೂಟ ತಯಾರಿಕೆ ಶಾಲಾಕೇಂದ್ರಗಳಲ್ಲಿ ಆಹಾರವನ್ನು ಪಡೆಯಬಹುದಾಗಿದೆ. ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆ, ಜಂಗಮಕೋಟೆ ಸರ್ಕಾರಿ ಪ್ರೌಢಶಾಲೆ, ಬಶೆಟ್ಟಹಳ್ಳಿ ಕೆಪಿಎಸ್ ಶಾಲೆ, ಮಳ್ಳೂರು ಸ್ವಾಮಿವಿವೇಕಾನಂದ ಪ್ರೌಢಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ದಿನಗಳಂದು ಮಧ್ಯಾಹ್ನ ಪರೀಕ್ಷೆ ನಂತರ ಬಿಸಿಯೂಟ ಪಡೆಯಬೇಕು. ಒಟ್ಟು ಸುಮಾರು 1129 ವಿದ್ಯಾರ್ಥಿಗಳು ಬಿಸಿಯೂಟ ಪ್ರಯೋಜನ ಪಡೆಯುವ ನಿರೀಕ್ಷೆ ಹೊಂದಲಾಗಿದೆ ಎಂದು ಅವರು ವಿವರಿಸಿದ್ದಾರೆ.
Sidlaghatta : ಶಿಡ್ಲಘಟ್ಟ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಾರಾಯಣಸ್ವಾಮಿ ಅವರು ಆಯ್ಕೆಯಾಗಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ರಂಗಮಂದಿರದಲ್ಲಿ ಶನಿವಾರ ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ಅವರು ನಿಕಟಪೂರ್ವ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರಿಗೆ ಅಭಿನಂದನಾ ಪತ್ರವನ್ನು ಹಾಗೂ ನಾರಾಯಣಸ್ವಾಮಿ ಅವರಿಗೆ ನೂತನ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನೂ ನೀಡಿದರು.
ಶಿಡ್ಲಘಟ್ಟದ ತಾಲ್ಲೂಕು ಕಸಾಪ ಐದು ವರ್ಷದ ಅಧ್ಯಕ್ಷರ ಅವಧಿಯಲ್ಲಿ ಮೊದಲ ಎರಡು ವರ್ಷವನ್ನು ಬಿ.ಆರ್.ಅನಂತಕೃಷ್ಣ ಅವರಿಗೆ ಮತ್ತು ನಂತರದ ಮೂರು ವರ್ಷದ ಅವಧಿಯನ್ನು ನಾರಾಯಣಸ್ವಾಮಿ ಅವರಿಗೆ ನೀಡುವುದೆಂದು ಈ ಹಿಂದೆ ಒಡಂಬಡಿಕೆಯಾಗಿತ್ತು. ಅದರಂತೆ ವಿಭಿನ್ನ ರೀತಿಯಲ್ಲಿ ಕಸಾಪ ಮೂಲಕ ಅತಿ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿರುವ ಬಿ.ಆರ್.ಅನಂತಕೃಷ್ಣ ಅವರಿಗೆ ಅಭಿನಂದನಾ ಪತ್ರವನ್ನು ನೀಡಿದರು. ನಾರಾಯಣಸ್ವಾಮಿ ಅವರೂ ಸಹ ನಿಕಟಪೂರ್ವ ಅಧ್ಯಕ್ಷರ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡುವಂತೆ ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ ಅವರು ತಿಳಿಸಿದರು.
Sidlaghatta : ಮೆಗಾ ಕುಟುಂಬದ ಹೆಸರಿನಲ್ಲಿ ಪ್ರತಿವರ್ಷ ಉತ್ತಮವಾದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಆ ಕುಟುಂಬದ ಒಬ್ಬೊಬ್ಬರ ಹುಟ್ಟು ಹಬ್ಬ ಬಂದಾಗ ಕರ್ನಾಟಕಾದ್ಯಂತ ಒಂದೊಂದು ತಾಲ್ಲೂಕಿನಲ್ಲಿ ರಕ್ತದಾನ ಶಿಬಿರಗಳು, ಬಡವರಿಗೆ ಸಹಾಯ ಮಾಡುವ ಕಾರ್ಯಗಳನ್ನು ಮಾಡುತ್ತಿದ್ದೇವೆ ಎಂದು ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಸೇವಾ ಸಂಘದ ರಾಜ್ಯಾಧ್ಯಕ್ಷ ಮುರಳಿಗೌಡ ಹೇಳಿದರು.
ನಗರದ ಕೋಟೆ ವೃತ್ತದ ಶ್ರೀರಾಮ ದೇವಾಲಯದಲ್ಲಿ ಭಾನುವಾರ ತೆಲುಗು ಚಲನಚಿತ್ರ ನಟ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜ್ ರವರ 39 ನೇ ಹುಟ್ಟು ಹಬ್ಬದ ಅಂಗವಾಗಿ ಅಖಿಲ ಕರ್ನಾಟಕ ಚಿರಂಜೀವಿ ಯೂತ್ ಮೆಗಾ ಪವರ್ ಫ್ಯಾನ್ಸ್ ಅಸೋಸಿಯೇಷನ್ ಹಾಗೂ ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ ಅಭಿಮಾನಿಗಳ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಮೇಗಾ ಕುಟುಂಬದ ಸಂಘಟನೆಗಳ ಪದಾಧಿಕಾರಿಗಳು ರಕ್ತದಾನ ಮಾಡುವ ಮೂಲಕ ಪ್ರಾಣಾಪಾಯದ ಅಂಚಿನಲ್ಲಿರುವರನ್ನು ರಕ್ಷಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲೂ ಪವನ್ ಕಲ್ಯಾಣ್ ಅಭಿಮಾನಿಗಳು, ಚಿರಂಜೀವಿ ಅಭಿಮಾನಿಗಳು ಹಾಗೂ ರಾಮಚರಣ್ ಅಭಿಮಾನಿಗಳು ಸೇರಿ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಕರ್ನಾಟಕದಲ್ಲಿ ಉತ್ತಮ ಹೆಸರು ಮಾಡಬೇಕೆಂದರು.
ಕಾರ್ಯಕ್ರಮದ ಆಯೋಜಕರಾದ ಅಖಿಲ ಕರ್ನಾಟಕ ಚಿರಂಜೀವಿ ಯುವ ಕಾರ್ಯದರ್ಶಿ, ತಾಲ್ಲೂಕು ಸಂಘದ ಗೌರವ ಅಧ್ಯಕ್ಷ ಜೆ.ವಿ.ದಿನೇಶ್ ಬಾಬು ಮಾತನಾಡಿ, ಚಿರಂಜೀವಿರವರ ಹೇಸರಿನಲ್ಲಿ ನಾಲ್ಕು ಬಾರಿ, ಪವನ್ ಕಲ್ಯಾಣ್ ರವರ ಹೆಸರಲ್ಲಿ ಎರಡು ಬಾರಿ ರಾಮ್ ಚರಣ್ ರವರ ಹೆಸರಿನಲ್ಲಿ ಎರಡು ಬಾರಿ ರಕ್ತದಾನ ಶಿಬಿರಗಳನನ್ನು ಮಾಡಿದ್ದೇವೆ. ಈಗ ಎಂಟನೇ ಭಾರಿ ಈ ಕಾರ್ಯಕ್ರಮವನ್ನು ಅಯೋಜಿಸಿದ್ದೇವೆ ಎಂದರು.
ಅಭಿಮಾನಿಗಳು ಹಾಗೂ ಸಾರ್ವಜನಿಕರು 36 ಯೂನಿಟ್ ರಕ್ತದಾನ ಮಾಡಿದರು. ಮೆಗಾ ಫ್ಯಾನ್ಸ್ ಅಸೋಸಿಯೇಷನ್ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.
ಸಂಗ್ರಹಿಸಿದ 36 ಯುನಿಟ್ ರಕ್ತವನ್ನು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಉಪಧ್ಯಕ್ಷ ಕಿರಣ್ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಜೇಂದ್ರನಾಯಕ್, ಗೌರವಾಧ್ಯಕ್ಷ ಜೆ.ವಿ.ದಿನೇಶ್ ಬಾಬು, ರಾಜ್ಯ ಕಾರ್ಯದರ್ಶಿ ಹರೀಶ್, ಸಂಚಾಲಕ ಮುರಳಿ, ರಾಜ್ಯ ಸದಸ್ಯ ಸಂತೋಷ್, ಜಿಲ್ಲಾ ಅಧ್ಯಕ್ಷ ಜಿ.ನಾಯಕ್, ತಾಲ್ಲೂಕು ಅಧ್ಯಕ್ಷ ಪ್ರದೀಪ್ ಜಾನಿ, ಚೌಡಸಂದ್ರ ಶ್ರೀನಿವಾಸ್, ಗೋಪಾಲ್ ಹಾಜರಿದ್ದರು.
Sidlaghatta : ಈ ಹಿಂದೆ NSUI ರಾಜ್ಯ ಸಂಚಾಲಕನಾಗಿದ್ದ ಕುಂದಲಗುರ್ಕಿ ಮುನೀಂದ್ರ ಅವರನ್ನು ಇದೀಗ Youth Congress ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಂಟಿ ಶೇಖಲೆ ಅವರು ಆದೇಶ ಹೊರಡಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ನ ಜಂಟಿ ಕಾರ್ಯದರ್ಶಿ ಕುಂದಲಗುರ್ಕಿ ಮುನೀಂದ್ರ, ಇಡೀ ರಾಜ್ಯದಲ್ಲಿ ಯುವ ಕಾಂಗ್ರೆಸ್ ಸಂಘಟನೆ ಮಾಡುವ ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠ ಮಾಡುವ ನಿಟ್ಟಿನಲ್ಲಿ ಯುವಕರನ್ನು ಇಡೀ ರಾಜ್ಯದಲ್ಲಿ ಮತ್ತು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತೇವೆ. ಇಂದಿನ ಪರಿಸ್ಥಿತಿಯಲ್ಲಿ ಇಡೀ ದೇಶವೇ ಜಾತಿ ಧರ್ಮ ಆಧಾರದಲ್ಲಿ ಒಡೆಯುವಂತಾಗಿದೆ. ಬಿಜೆಪಿ ಪಕ್ಷದವರು ಜನರ ಭಾವನೆಯನ್ನು ಭಾವನಾತ್ಮಕವಾಗಿ ಬದಲಿಸಿ, ಜನರ ಮನಸ್ಸನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಪಕ್ಷ ಜನರ ಮಧ್ಯೆ ಜನರಿಗಾಗಿ ಕೆಲಸ ಮಾಡುವಂತಹ ಪಕ್ಷವಾಗಿದ್ದು ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಯುವ ಕಾಂಗ್ರೆಸ್ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುವ ನಿಟ್ಟಿನಲ್ಲಿ, ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿರುವುದನ್ನು ಗಮನಿಸಿ ಜವಾಬ್ದಾರಿ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ರಾಜ್ಯ ಕಾರ್ಯಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಸೂಚನೆಯಂತೆ ಪಕ್ಷವನ್ನು ಹಾಗೂ ಯುವಜನರನ್ನು ಸಂಘಟಿಸುವುದಾಗಿ ಅವರು ಹೇಳಿದರು.
Sidlaghatta : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ಲಭಿಸಿರುವ ಮತದಾನದ ಹಕ್ಕನ್ನು ಚಾಚು ತಪ್ಪದೇ ಚಲಾಯಿಸಬೇಕು ಜೊತೆಗೆ ನೆರೆಹೊರೆಯವರು ಸಹ ಮತದಾನ ಮಾಡಲು ಪ್ರೇರೇಪಿಸಬೇಕೆಂದು ಶಿಡ್ಲಘಟ್ಟ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಜಿ.ಮುನಿರಾಜ ತಿಳಿಸಿದರು.
ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡುವ ದೃಷ್ಟಿಯಿಂದ ವಿಭಿನ್ನ ರೀತಿಯ ಸ್ವೀಪ್ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ನಾಗರಿಕರು ಸಹ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಉತ್ತಮ ಪ್ರತಿನಿಧಿಯನ್ನು ಆರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬ ಆಗಿರುವ ಚುನಾವಣೆಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು. ಅದರ ಮೂಲಕ ತಮಗೆ ಇಷ್ಟ ಪಟ್ಟ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಮತದಾನದ ಬಗ್ಗೆ ಹಲವರು ಉದಾಸೀನ ಮಾಡುತ್ತಾರೆ. ನಮ್ಮ ಒಂದು ಮತದಾನದಿಂದ ಯಾವ ಬದಲಾವಣೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಕೇವಲ ಒಂದು ಮತಗಳ ಅಂತರದಿಂದ ಅನೇಕ ಸಂಸದರು, ಶಾಸಕರು, ಮತ್ತು ಸ್ಥಳೀಯ ಪ್ರತಿನಿಧಿಗಳು ಸೋಲನ್ನು ಅನುಭವಿಸಿದ್ದಾರೆ. ಇನ್ನೂ ಹೆಚ್ಚಾಗಿ ಸರ್ಕಾರಗಳು ಸಹ ಪತನಗೊಂಡಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ. ಹೀಗಾಗಿ ಮತದಾನ ಮಾಡಲು ಯಾರೂ ಸಹ ತಾತ್ಸಾರ ಮಾಡಬಾರದು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ಮನವಿ ಮಾಡಿದರು.
ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವೇಣುಗೋಪಾಲ್, ಸಿಡಿಪಿಓ ನೌತಾಜ್,ನಗರಸಭೆಯ ಪ್ರಭಾರ ಪೌರಾಯುಕ್ತ ರಘುನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳು ಹಾಜರಿದ್ದರು
Dibburahalli, Sidlaghatta : ರೈತರಿಂದ ಟ್ರ್ಯಾಕ್ಟರ್ ಇಂಜಿನ್ ಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಲೀಜ್ ಗೆ ಪಡೆದು ನಂತರ ಇಂಜಿನ್ ಗಳನ್ನು ಮಾರಾಟ ಮಾಡುತ್ತಿದ್ದ ಅಂತರರಾಜ್ಯ ವಂಚಕರ ತಂಡವನ್ನು ದಿಬ್ಬೂರಹಳ್ಳಿ ಪೊಲೀಸರು ಬಂಧಿಸಿ ಅವರಿಂದ ಸುಮಾರು ಒಂದು ಕೋಟಿ ರೂ.ಬೆಲೆ ಬಾಳುವ 9 ಟ್ರ್ಯಾಕ್ಟರ್ ಇಂಜಿನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಚೇಳೂರು ತಾಲ್ಲೂಕಿನ ಚಾಕವೇಲು ಗ್ರಾಮದ ವಾಸಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಜಯಚಂದ್ರರೆಡ್ಡಿ(43), ಆಂಧ್ರದ ನಂದ್ಯಾಲ ಮಂಡಲದ ಶ್ರೀನಿವಾಸಪುರದ ಡ್ರೈವರ್ ವೃತ್ತಿಯ ತಲಾರಿ ರಾಮಲಿಂಗೇಶ್ವರರಾವ್(39) ಇಬ್ಬರನ್ನು ಬಂಸಿದ್ದಾರೆ. ಇವರಿಂದ ವಿವಿಧ ಕಂಪನಿಗಳ ಸುಮಾರು 97 ಲಕ್ಷ ಮೌಲ್ಯದ 9 ಟ್ರ್ಯಾಕ್ಟರ್ ಇಂಜಿನ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಅಂತರರಾಜ್ಯ ವಂಚಕರ ತಂಡದ ಇನ್ನಿತರೆ ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರ ಪತ್ತೆಗೆ ದಿಬ್ಬೂರಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.
ಈ ವಂಚಕರ ತಂಡವು ಟ್ರ್ಯಾಕ್ಟರ್ ಇಟ್ಟುಕೊಂಡಿರುವ ರೈತರನ್ನು ಸಂಪರ್ಕಿಸಿ ಟ್ರ್ಯಾಕ್ಟರ್ ಇಂಜಿನ್ ಗಳನ್ನು ಮಾಸಿಕ ಬಾಡಿಗೆ ಆಧಾರದಲ್ಲಿ ಲೀಸ್ ಗೆ ಪಡೆಯುತ್ತಾರೆ. ಒಂದೊಮ್ಮೆ ಟ್ರ್ಯಾಕ್ಟರ್ ಮೇಲೆ ಬ್ಯಾಂಕ್ ಸಾಲ ಇದ್ದರೆ ಅದರ ಕಂತುಗಳನ್ನು ನಾವೇ ಕಟ್ಟಿಕೊಂಡು ಇನ್ನುಳಿದಂತೆ ಪ್ರತಿ ತಿಂಗಳು ಇಂತಿಷ್ಟು ಹಣ ಕೊಡುತ್ತೇವೆಂದು ನಂಬಿಸಿ ಇಂಜಿನ್ ನ್ನು ಮಾತ್ರ ತೆಗೆದುಕೊಂಡು ಹೋಗುತ್ತಾರೆ. ಒಂದೆರಡು ತಿಂಗಳು ಮಾಸಿಕ ಕಂತನ್ನು ಕೊಟ್ಟು ವಿಶ್ವಾಸಗಳಿಸಿ ಅಕ್ಕ ಪಕ್ಕದ ಇನ್ನಿತರೆ ರೈತರಿಂದಲೂ ಇದೇ ರೀತಿ ಇಂಜಿನ್ ಗಳನ್ನು ಪಡೆದುಕೊಂಡು ನಂತರ ಇಂಜಿನ್ ಗಳನ್ನು ಮಾರಾಟ ಮಾಡಿ ವಂಚಿಸುತ್ತಿದ್ದರು.
ತಾಲ್ಲೂಕಿನ ಮಲ್ಲಶೆಟ್ಟಹಳ್ಳಿ ಶ್ರೀನಿವಾಸ್(33) ತನ್ನ ಟ್ರ್ಯಾಕ್ಟರ್ ಇಂಜಿನ್ ನನ್ನು ಬಾಡಿಗೆ ಆಧಾರದಲ್ಲಿ ಲೀಸ್ ಗೆ ಪಡೆದು ಬಾಡಿಗೆ ಹಣ ಕೊಡದೆ ಇಂಜಿನನ್ನು ಮಾರಾಟ ಮಾಡಿ ವಂಚಿಸುತ್ತಿದ್ದಾರೆ ಎಂದು ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದಾಗಲೆ ವಂಚಕರ ಬಣ್ಣ ಬಯಲಾಗಿದೆ.
ಮಲ್ಲಶೆಟ್ಟಹಳ್ಳಿ ಶ್ರೀನಿವಾಸ್ ದೂರನ್ನು ದಾಖಲಿಸಿಕೊಂಡ ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪ್ರತ್ಯೇಕ ಮೂರು ತಂಡಗಳನ್ನು ರಚಿಸಿದ್ದು ಆರೋಪಿಗಳನ್ನು ಬಂಧಿಸಿ ಅವರಿಂದ ಟ್ರ್ಯಾಕ್ಟರ್ ಇಂಜಿನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಎಸ್.ಐ ಶ್ಯಾಮಲ, ಎಂ.ನಾಗರಾಜ್, ಸಿಬ್ಬಂದಿ ನರಸಿಂಹಯ್ಯ, ನಂದಕುಮಾರ್, ಮುರಳಿಕೃಷ್ಣ, ಕೃಷ್ಣಪ್ಪ, ಚಂದ್ರಶೇಖರ್ ಭಾಗವಹಿಸಿದ್ದು ಅವರನ್ನು ಎಸ್ಪಿ ಡಿ.ಎಲ್.ನಾಗೇಶ್ ಅಭಿನಂದಿಸಿದ್ದಾರೆ.
Sidlaghatta : ಕೋಲಾರ ಸಂಸತ್ ಚುನಾವಣೆಯನ್ನು ಪಾರದರ್ಶಕವಾಗಿ, ಮುಕ್ತವಾಗಿ ನಡೆಸಲು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇದು ಪ್ರಜಾಪ್ರಭುತ್ವದ ಹಬ್ಬದಂತೆ ಚುನಾವಣೆಯನ್ನು ನಾವೆಲ್ಲರೂ ಸೇರಿ ಆಚರಿಸಬೇಕೆಂದು ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.
ಶಿಡ್ಲಘಟ್ಟ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಅಕ್ರಂಪಾಷ ಅವರು, ಸಂಸತ್ ಚುನಾವಣೆಯನ್ನು ಪಾರದರ್ಶಕ, ಮುಕ್ತವಾಗಿ ನಡೆಸುವ ಹೊಣೆ ನಮ್ಮ ಮೇಲಿದೆ, ಅದಕ್ಕೆ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳೊಂದಿಗೆ ಶಿಡ್ಲಘಟ್ಟ ಮತ್ತು ಚಿಂತಾಮಣಿ ಸಹ ಸೇರಿದೆ. ಚುನಾವಣೆಯನ್ನು ಸುಸೂತ್ರವಾಗಿ, ಪಾರದರ್ಶಕವಾಗಿ, ದೇಶಸೇವೆಗೆ ಸಿಕ್ಕ ಅವಕಾಶ ಎಂದು ಭಾವಿಸಿ ಅಧಿಕಾರಿಗಳು ಕಾರ್ಯನಿರ್ವಹಿಸಿ ಉತ್ತಮ ಹೆಸರು ತರಬೇಕು ಎಂದು ಹೇಳಿದರು.
ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಮತದಾರರಿಗೆ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡಬೇಕಿದೆ. ಮತಗಟ್ಟೆಗೆ ಬಂದು ಧೈರ್ಯವಾಗಿ ತಮಗೆ ಇಷ್ಟ ಬಂದ ಅಭ್ಯರ್ಥಿ, ಪಕ್ಷಕ್ಕೆ ಮತ ಚಲಾಯಿಸುವಂತ ಮುಕ್ತ ನಿರ್ಭೀತ ವಾತಾವರಣ ಸೃಷ್ಟಿಸಬೇಕೆಂದರು.
ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಪಕ್ಷ ಜಾತಿ ತಾರತಮ್ಯವಿಲ್ಲದೆ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಸನ್ನದ್ಧರಾಗಬೇಕು ಹಾಗೂ ನಿಮ್ಮ ಈ ಮುಕ್ತ ಪಾರದರ್ಶಕ ಕಾರ್ಯಶೈಲಿಯು ಕೇವಲ ಕಾರ್ಯರೂಪದಲ್ಲಷ್ಟೆ ಅಲ್ಲ ಸಾರ್ವಜನಿಕವಾಗಿಯೂ ಪ್ರದರ್ಶಿತವಾಗಬೇಕೆಂದರು.
ಸಮಸ್ಯೆಗಳು ಸಹಜ ಏನೇ ಅನುಮಾನ ಸಮಸ್ಯೆ ಎದುರಾದರೂ ಮುಕ್ತವಾಗಿ ಕೇಳಿ ಬಗೆಹರಿಸಿಕೊಳ್ಳಿ. ನೀವು ಸಂಪೂರ್ಣವಾಗಿ ತಿಳಿದುಕೊಂಡರೆ ಮಾತ್ರವೇ ನೀವು ಇತರರಿಗೆ ಮನವರಿಕೆ ಮಾಡಿಕೊಡಲು ಸಾಧ್ಯ ಎಂದರು.
ಮತದಾನದಂದು ಪ್ರತಿ ಎರಡು ಗಂಟೆಗಳಿಗೊಮ್ಮೆ ಮತದಾನ ಪ್ರಮಾಣದ ಮಾಹಿತಿಯನ್ನು ಕೊಡಬೇಕು. ಇವಿಎಂ ಯಂತ್ರಗಳನ್ನು ರವಾನಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದರು.
ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳೂ ಆದ ಕೋಲಾರದ ಜಿಲ್ಲಾಧಿಕಾರಿ ಡಾ.ಅಕ್ರಂಪಾಷ ಅವರು ಶಿಡ್ಲಘಟ್ಟಕ್ಕೆ ಭೇಟಿ ನೀಡಿ ಮತಗಟ್ಟೆ ಕೇಂದ್ರ, ಭದ್ರತಾ ಕೊಠಡಿಗಳನ್ನು ವೀಕ್ಷಿಸಿ ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳ ಸಭೆ ನಡೆಸಿ ಚುನಾವಣೆಯ ಸಿದ್ದತೆಗಳ ಪರಿಶೀಲನೆ ನಡೆಸಿದರು.
ಸಹಾಯಕ ಚುನಾವಣಾಧಿಕಾರಿ ಜಾವಿದ ನಸೀಮ ಖಾನಂ, ಕೋಲಾರದ ಎಡಿಸಿ ಶಂಕರ್ ವಣಿಕ್ಯಾಳ್, ಡಿ.ವೈ.ಎಸ್.ಪಿ ಮುರಳೀಧರ್, ಶಿಡ್ಲಘಟ್ಟದ ತಹಶೀಲ್ದಾರ್ ಬಿ.ಎನ್.ಸ್ವಾಮಿ, ಇಒ ಮುನಿರಾಜ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ಸೇರಿದಂತೆ ಚುನಾವಣಾ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಹಾಜರಿದ್ದರು.