
Sidlaghatta : ಬ್ರಹ್ಮರ್ಷಿ ಸುಭಾಷ್ ಪತ್ರೀಜಿ ಅವರ ಜೀವನಾಧಾರಿತ ಚಲನಚಿತ್ರ ಬಿಡುಗಡೆ ಅಂಗವಾಗಿ ಪಿರಮಿಡ್ ಸ್ಪಿರಿಚುವಲ್ ಸೊಸೈಟಿಸ್ ಮೂವ್ಮೆಂಟ್ ವತಿಯಿಂದ ಭಾನುವಾರ ನಗರದಲ್ಲಿ ಸಸ್ಯಾಹಾರ ಹಾಗೂ ಧ್ಯಾನ ಜಾಗೃತಿ ರ್ಯಾಲಿ ನಡೆಯಿತು. ಚಿಂತಾಮಣಿ, ಚಿಕ್ಕಬಳ್ಳಾಪುರ, ವಿಜಯಪುರ, ದೇವನಹಳ್ಳಿ, ದೊಡ್ಡಬಳ್ಳಾಪುರ ಹಾಗೂ ಶಿಡ್ಲಘಟ್ಟ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಧ್ಯಾನಿಗಳು ಇದರಲ್ಲಿ ಪಾಲ್ಗೊಂಡಿದ್ದರು.
ನಗರದ ಮಯೂರ ವೃತ್ತದಿಂದ ಆರಂಭವಾದ ರ್ಯಾಲಿ ಅಶೋಕ ರಸ್ತೆ, ಕೋಟೆ ವೃತ್ತ, ಟಿಬಿ ರಸ್ತೆ ಮೂಲಕ ಶ್ರೀ ವೆಂಕಟೇಶ್ವರ ಚಿತ್ರಮಂದಿರದವರೆಗೆ ಸಾಗಿತು. ಧ್ಯಾನಿಗಳು ಧ್ಯಾನ, ಅಹಿಂಸೆ ಹಾಗೂ ಸಸ್ಯಾಹಾರದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಸದಸ್ಯ ಅಜಯ್ ಕೀರ್ತಿ ಮಾತನಾಡಿ, ಬ್ರಹ್ಮರ್ಷಿ ಪತ್ರೀಜಿ ಅವರ ಧ್ಯಾನ ಮತ್ತು ಅಹಿಂಸೆಯ ಸಂದೇಶವನ್ನು ಸಮಾಜದ ಎಲ್ಲ ವರ್ಗದ ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸದಸ್ಯೆ ಆರತಿ ಮುತ್ತುರಾಜ್ ಮಾತನಾಡಿ, ಪಿರಮಿಡ್ ಸ್ಪಿರಿಚುವಲ್ ಸೊಸೈಟಿಸ್ ಮೂವ್ಮೆಂಟ್ ನ ಉದ್ದೇಶ ಧ್ಯಾನ, ಸಸ್ಯಾಹಾರ ಹಾಗೂ ಪಿರಮಿಡ್ ಶಕ್ತಿಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಸಸ್ಯಾಹಾರ ಆರೋಗ್ಯಕರ ಹಾಗೂ ಸಾತ್ವಿಕ ಜೀವನಕ್ಕೆ ಪೂರಕವಾಗಿದ್ದು, ಧ್ಯಾನದಿಂದ ಮಾನಸಿಕ ನೆಮ್ಮದಿ ಮತ್ತು ಆತ್ಮಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ರ್ಯಾಲಿ ಬಳಿಕ ಧ್ಯಾನಿಗಳು ನಗರದ ಶ್ರೀ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಬ್ರಹ್ಮರ್ಷಿ ಪತ್ರೀಜಿ ಅವರ ಜೀವನಾಧಾರಿತ ಚಲನಚಿತ್ರ ವೀಕ್ಷಿಸಿದರು. ಪದ್ಮಲತಾ, ಅಂಬಿಕಾ, ಕೃಷ್ಣಮೂರ್ತಿ, ಸುಜಾತ, ಸರಿತ ಸೇರಿದಂತೆ ಪಿರಮಿಡ್ ಸ್ಪಿರಿಚುವಲ್ ಸೊಸೈಟಿಸ್ ಮೂವ್ಮೆಂಟ್ ನ ಹಲವಾರು ಧ್ಯಾನಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
In English: The Pyramid Spiritual Societies Movement organised a vegetarianism and meditation awareness rally in Sidlaghatta on Sunday, marking the release of a film on Brahmarshi Subhash Patriji’s life. Hundreds of meditators from Chintamani, Chikkaballapur, Vijayapura, Devanahalli, Doddaballapur and Sidlaghatta took part, later viewing the film at Sri Venkateswara theatre.












