
Sidlaghatta : ಟೊಮೆಟೊ ತುಂಬಿಕೊಂಡು ಚಿಂತಾಮಣಿಯಿಂದ ಶಿಡ್ಲಘಟ್ಟದತ್ತ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ತಾಲ್ಲೂಕಿನ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ವೈ. ಹುಣಿಸೇನಹಳ್ಳಿ ಹಾಗೂ ಕದಿರಿನಾಯಕನಹಳ್ಳಿ ಗ್ರಾಮಗಳ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ–234ರಲ್ಲಿ ಅಪಘಾತ ಸಂಭವಿಸಿದೆ. ಚಿಂತಾಮಣಿಯಿಂದ ಟೊಮೆಟೊ ತುಂಬಿದ ಕ್ರೇಟ್ಗಳನ್ನು ಸಾಗಿಸಿಕೊಂಡು ಶಿಡ್ಲಘಟ್ಟದತ್ತ ಬರುತ್ತಿದ್ದ ವೇಳೆ ಲಾರಿ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿಬಿದ್ದಿದೆ. ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ನೂರಾರು ಟೊಮೆಟೊ ಕ್ರೇಟ್ಗಳು ರಸ್ತೆ ಹಾಗೂ ಸುತ್ತಮುತ್ತ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಸಾಕಷ್ಟು ಪ್ರಮಾಣದ ಟೊಮೆಟೊ ಹಾನಿಯಾಗಿದೆ.
ಅಪಘಾತದ ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಲಾರಿಯಲ್ಲಿ ಸಿಲುಕಿದ್ದ ಚಾಲಕ ಮತ್ತು ಕ್ಲೀನರ್ ಅವರನ್ನು ಹೊರತೆಗೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಲಾರಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಳಿಕ ಸ್ಥಳೀಯರು ಹಾಗೂ ಪೊಲೀಸರು ರಸ್ತೆ ತೆರವುಗೊಳಿಸಿ ಸಂಚಾರ ಸುಗಮಗೊಳಿಸಿದರು. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
In English: A tomato-laden lorry travelling from Chintamani to Sidlaghatta overturned into a roadside ditch on National Highway-234, between Y. Hunisenahalli and Kadirinayakanahalli villages, late Monday night after the driver lost control. The driver and cleaner sustained serious injuries and were hospitalised; treatment is ongoing. Locals and police cleared the road, and a case has been registered at Sidlaghatta Rural Police Station, with the exact cause under investigation.












