E Timmasandra, sidlagahatta : ತಾಲ್ಲೂಕಿನ ಈ. ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ (PDO) ಸೇವೆ ಸಲ್ಲಿಸಿದ ತನ್ವೀರ್ ಅಹಮದ್ ಅವರಿಗೆ ಪಂಚಾಯತ್ ಮಂಡಳಿ ಹಾಗೂ ಗ್ರಾಮಸ್ಥರು ಸೇರಿ ಆತ್ಮೀಯವಾಗಿ ಬೀಳ್ಕೊಟ್ಟರು.
ತಮ್ಮ ಅವಧಿಯಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿದ ತನ್ವೀರ್ ಅಹಮದ್ ಅವರನ್ನು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ತನ್ವೀರ್ ಅಹಮದ್ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಉತ್ತಮ ಅಧಿಕಾರಿಯಾಗಿದ್ದರು” ಎಂದು ಅವರ ಸೇವೆಯನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಶಿವಾರೆಡ್ಡಿ, ಮೊಲಸಾಬ್, ಸಮಿಉಲ್ಲಾ, ಬೈಲಾರೆಡ್ಡಿ, ರಾಜೇಶ್, ಚಲಪತಿ, ನಾರಾಯಣ ರೆಡ್ಡಿ, ಕೃಷ್ಣಪ್ಪ ಮತ್ತು ನರಸಿಂಹ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿ ಪಿಡಿಒ ಅವರಿಗೆ ಶುಭ ಹಾರೈಸಿದರು.
Sidlaghatta : ನಗರದಲ್ಲಿರುವ “ನಗರ ಪ್ರಾಥಮಿಕ ಆರೋಗ್ಯ ಕೇಂದ್ರ”ವನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಟಿಬಿ ರಸ್ತೆಯಲ್ಲಿನ ಶ್ರೀರೇಣುಕಾ ಯಲ್ಲಮ್ಮ ದೇವಿ ದೇವಾಲಯದ ಹಿಂಭಾಗದಲ್ಲಿದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವಾಸವಿ ದೇವಾಲಯ ಸಮೀಪದ ಅಡ್ಡ ರಸ್ತೆಯಲ್ಲಿರುವ ಆರ್ಯ ವೈಶ್ಯ ಮಂಡಳಿಯ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಕಳೆದ ಹಲವು ವರ್ಷಗಳಿಂದಲೂ ನಗರ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ ಕಿರಿದಾಗಿತ್ತು ಮತ್ತು ಕಟ್ಟಡದ ಮಾಲೀಕರು ಕಟ್ಟಡವನ್ನು ಬಿಡುವಂತೆ ತಾಕೀತು ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅಲ್ಲಿಂದ ಆರೋಗ್ಯ ಕೇಂದ್ರವನ್ನು ವಾಸವಿ ಕಾಂಪ್ಲೆಕ್ಸ್ ಕಟ್ಟಡ(ವಾಸವಿ ಶಾಲೆಯ ಹಳೆಯ ಕಟ್ಟಡ)ಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸುತ್ತಿರುವ ಕಟ್ಟಡ ಚಿಕ್ಕದು, ಮೂಲ ಸೌಕರ್ಯಗಳಿಲ್ಲ. ಅಲ್ಲಿಗೆ ತೆರಳಲು ಸೂಕ್ತ ದಾರಿಯೂ ಇಲ್ಲ, ಆಂಬ್ಯುಲೆನ್ಸ್ ಅಥವಾ ಆರೋಗ್ಯ ಕೇಂದ್ರಕ್ಕೆ ಔಷಧಿ ಇನ್ನಿತರೆ ಸರಕು ಸರಂಜಾಮು ಸಾಗಿಸಲು ಬರುವ ವಾಹನಗಳ ಸಂಚಾರಕ್ಕೆ ಕಷ್ಟ ಎಂದಿದ್ದ ಅಲ್ಲಿನ ಸಿಬ್ಬಂದಿ ಆರೋಗ್ಯ ಕೇಂದ್ರ ಸ್ಥಳಾಂತರಕ್ಕೆ ವಿರೋಧಿಸಿದ್ದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶಾಸಕ ಬಿ.ಎನ್.ರವಿಕುಮಾರ್ ಅವರನ್ನು ಭೇಟಿ ಮಾಡಿ ನಗರ ಆರೋಗ್ಯ ಕೇಂದ್ರವನ್ನು ವಿಶಾಲವಾದ ಮತ್ತು ಮೂಲ ಸೌಕರ್ಯಗಳುಳ್ಳ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಅದು ಬಿಟ್ಟು ವಿಳಾಸ ಪತ್ತೆ ಹಚ್ಚಲು ಕೂಡ ಕಷ್ಟವಾಗುವ, ಆಂಬ್ಯುಲೆನ್ಸ್ ಸೇರಿದಂತೆ ಇತರೆ ವಾಹನಗಳ ಸಂಚಾರ ಕಷ್ಟ ಸಾಧ್ಯವಾಗುವ ಜಾಗದಲ್ಲಿನ ಕಟ್ಟಡಕ್ಕೆ ಸ್ಥಳಾಂತರಿಸುವುದು ಬೇಡ. ಆದರೆ ಹಿರಿಯ ಅಧಿಕಾರಿಗಳು ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಿ ಎಂದು ನಮ್ಮ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಗ್ಯ ಕೇಂದ್ರದ ಸಿಬ್ಬಂದಿ ಶಾಸಕರ ಬಳಿ ಅಳಲು ತೋಡಿಕೊಂಡಿದ್ದರು.
“ನಾನು ಬಂದು ಈಗಿನ ಆರೋಗ್ಯ ಕೇಂದ್ರದ ಕಟ್ಟಡ ಮತ್ತು ಹೊಸದಾಗಿ ಗುರ್ತಿಸಿರುವ ಕಟ್ಟಡವನ್ನು ಕೂಡ ವೀಕ್ಷಿಸುತ್ತೇನೆ. ಅದುವರೆಗೂ ಸ್ಥಳಾಂತರ ಮಾಡಬೇಡಿ ಎಂದು ಸಿಬ್ಬಂದಿಗೆ ಶಾಸಕರು ಹೇಳಿಕಳುಹಿಸಿದ್ದರು. ಸದನದಲ್ಲಿ ಭಾಗವಹಿಸುತ್ತಿರುವ ಕಾರಣ ಶಾಸಕರು ಭೇಟಿ ನೀಡಲಿಲ್ಲ. ಇದರ ನಡುವೆ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಲಾಗುತ್ತಿದೆ.
ಈ ಹಿಂದೆ ಇದ್ದ ಕಟ್ಟಡದ ಮಾಲೀಕರು ಕಟ್ಟಡವನ್ನು ಬಿಡುವಂತೆ ಎರಡು ವರ್ಷದಿಂದಲೂ ಒತ್ತಾಯಿಸುತ್ತಿದ್ದರು. ನಗರದಲ್ಲಿ ಸಾಕಷ್ಟು ಕಡೆ ಹುಡುಕಾಡಿದೆವು, ಸಿಗಲಿಲ್ಲ. ವಾಸವಿ ಸಮುದಾಯದ ಟ್ರಸ್ಟ್ ಗೆ ಸೇರಿದ ಈ ಜಾಗ ಇದ್ದುದರಲ್ಲಿ ಸೂಕ್ತ ಎನಿಸಿತು. ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನಿಯಮದಂತೆ ಅನುಮತಿ ಪಡೆದು ಲೊಕೋಪಯೋಗಿ ಇಲಾಖೆ ನಿಗದಿಪಡಿಸಿದ ಬಾಡಿಗೆ ದರ ಅಂತಿಮಗೊಳಿಸಿದೆ. ಹಂತ ಹಂತವಾಗಿ ಇನ್ನಷ್ಟು ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು.
Sidlaghatta : ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗ್ರಾಮದ ಸರ್ಕಾರಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಕ್ಷಯ, ರಾಜ್ಯ ಮಟ್ಟದ ‘ರಾಷ್ಟ್ರೀಯ ಆವಿಷ್ಕಾರ ಅಭಿಯಾನ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.
ಅಕ್ಷಯ ಮೂಲತಃ ಉತ್ತರ ಪ್ರದೇಶದವಳು. ಆಕೆಯ ತಂದೆ ಅಮರನಾಥ್ ಮತ್ತು ತಾಯಿ ಪೂನಮ್ಮ 12 ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಯಣ್ಣಂಗೂರಿಗೆ ಬಂದು ನೆಲೆಸಿದ್ದಾರೆ. ಅಚ್ಚರಿಯ ವಿಷಯವೆಂದರೆ, ಅಕ್ಷಯ ಮನೆಯಲ್ಲಿ ಹಿಂದಿ ಮಾತನಾಡಿದರೂ, ಶಾಲೆಯಲ್ಲಿ ಅದ್ಭುತವಾಗಿ ಕನ್ನಡ ಕಲಿತಿದ್ದಾಳೆ. ಈಗ ಅದೇ ಕನ್ನಡ ಭಾಷೆಯಲ್ಲಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಬೀಗಿದ್ದಾಳೆ.
ಅಧಿಕಾರಿಗಳಿಂದ ಮೆಚ್ಚುಗೆ: ಅಕ್ಷಯಳ ಈ ಸಾಧನೆಯನ್ನು ಕೇಳಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ (DDPI) ವಿ. ರಮೇಶ್ ಅವರು ಸ್ವತಃ ಶಾಲೆಗೆ ಭೇಟಿ ನೀಡಿ ಸಿಹಿ ಹಂಚಿ ಅಭಿನಂದಿಸಿದರು. “ಸರ್ಕಾರಿ ಶಾಲೆಯ ಮಕ್ಕಳು ಮನಸ್ಸು ಮಾಡಿದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಅಕ್ಷಯ ಸಾಕ್ಷಿ” ಎಂದು ಅವರು ಶ್ಲಾಘಿಸಿದರು.
ಈ ಸಾಧನೆಯ ಹಿಂದೆ ಶಾಲೆಯ ಮುಖ್ಯ ಶಿಕ್ಷಕ ವಿ. ಶ್ರೀನಿವಾಸ್ ಮತ್ತು ಶಿಕ್ಷಕರಾದ ಕಿರಣ್ ಹಾಗೂ ಶ್ರೀಲಕ್ಷ್ಮಿ ಅವರ ಶ್ರಮವಿದೆ. ಅವರು ಅಕ್ಷಯಗೆ ವಿಶೇಷ ತರಬೇತಿ ನೀಡಿ ಈ ಮಟ್ಟಕ್ಕೆ ಬೆಳೆಸಿದ್ದಾರೆ.
Sidlaghatta : “ತಂದೆ-ತಾಯಿ ಸಂತುಷ್ಟರಾದರೆ ಪರಮೇಶ್ವರನೂ ಪ್ರಸನ್ನನಾಗುತ್ತಾನೆ. ಹೆತ್ತವರ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಕೃತಜ್ಞತೆ,” ಎಂದು ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖೆಯ ಶ್ರೀ ಮಂಗಳನಾಥಸ್ವಾಮೀಜಿ ತಿಳಿಸಿದರು.
ನಗರದ ಹನುಮಂತಪುರ ಗೇಟ್ನಲ್ಲಿರುವ ಬಿ.ಜಿ.ಎಸ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಾತಾ ಪಿತೃ ವಂದನಾ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ತಾಯಿಯ ಪಾತ್ರ ದೊಡ್ಡದು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವುದೇ ನಮ್ಮ ಸಂಸ್ಥೆಯ ಮೂಲ ಉದ್ದೇಶ ಎಂದರು.
ನಗರಸಭೆ ಪೌರಾಯುಕ್ತೆ ಜಿ. ಅಮೃತ ಮಾತನಾಡಿ, “ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಅಥವಾ ಇತರೆ ಆಕರ್ಷಣೆಗಳಿಗೆ ಒಳಗಾಗದೆ ಓದಿನ ಮೇಲೆ ಮಾತ್ರ ಗಮನ ಹರಿಸಬೇಕು. ಶಿಕ್ಷಣವೊಂದೇ ಉನ್ನತ ಸ್ಥಾನ ತಂದುಕೊಡಬಲ್ಲದು,” ಎಂದು ಸಲಹೆ ನೀಡಿದರು.
ಆಡಳಿತಾಧಿಕಾರಿ ಡಾ. ಎನ್. ಶಿವರಾಮರೆಡ್ಡಿ ಮಾತನಾಡಿ, ಹದಿಹರೆಯದ ಚಂಚಲ ಮನಸ್ಸನ್ನು ನಿಯಂತ್ರಿಸಲು ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನ ಅತ್ಯಗತ್ಯ. ಎಸೆಸೆಲ್ಸಿ ಪರೀಕ್ಷೆಯನ್ನು ಧೈರ್ಯದಿಂದ ಎದುರಿಸುವಂತೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಅನೇಕ ಪೋಷಕರು ಮತ್ತು ವಿದ್ಯಾರ್ಥಿಗಳು ಭಾವುಕರಾದರು. ಪ್ರಿನ್ಸಿಪಾಲ್ ಕೆ. ಮಹದೇವ್ ಮತ್ತಿತರರು ಹಾಜರಿದ್ದರು.
Sidlaghatta : “ಕಂದಾಯ ಇಲಾಖೆಯು ಪವಿತ್ರವಾದ ಮಾತೃ ಇಲಾಖೆ. ಇಲ್ಲಿಗೆ ಬರುವ ಜನಸಾಮಾನ್ಯರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬಾರದು. ನೈಜವಾಗಿ ಜನರ ಪರವಾಗಿ ಕೆಲಸ ಮಾಡಿ, ಜನಸ್ನೇಹಿ ಆಡಳಿತ ನೀಡುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯ,” ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸೋಮವಾರ ಶಿಡ್ಲಘಟ್ಟ ತಾಲ್ಲೂಕು ಕಚೇರಿಗೆ ಭೇಟಿ ನೀಡಿದ ಅವರು, ಕಡತಗಳ ನಿರ್ವಹಣೆ, ಹಾಜರಾತಿ ಹಾಗೂ ಭೂ ದಾಖಲೆಗಳ ಗಣಕೀಕರಣ ಕಾರ್ಯವನ್ನು ಕೂಲಂಕಷವಾಗಿ ಪರಿಶೀಲಿಸಿದರು. ನಂತರ ಸಾರ್ವಜನಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
2 ತಿಂಗಳಲ್ಲಿ ಕಂದಾಯ ದಾಖಲೆಗಳು ನಿಮ್ಮ ಬೆರಳ ತುದಿಗೆ:
ತಾಲ್ಲೂಕಿನಲ್ಲಿ ಭೂ ದಾಖಲೆಗಳ ಸ್ಕ್ಯಾನಿಂಗ್ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಮುಂದಿನ ಎರಡು ತಿಂಗಳೊಳಗೆ ಶಿಡ್ಲಘಟ್ಟದ ಎಲ್ಲಾ ಮೂಲ ದಾಖಲೆಗಳ ಡಿಜಿಟಲೀಕರಣ ಪೂರ್ಣಗೊಳ್ಳಲಿದೆ. ಇದರಿಂದ ರೈತರು ಕಚೇರಿಗೆ ಬರುವ ಅವಶ್ಯಕತೆಯಿಲ್ಲದೆ, ಮನೆಯಲ್ಲೇ ಕುಳಿತು ದಾಖಲೆಗಳನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಆಶಾವಾದ ವ್ಯಕ್ತಪಡಿಸಿದರು.
ತೆರಿಗೆ ಕಳ್ಳರ ಮೇಲೆ ಡಿಸಿ ಕಣ್ಣು:
ನಗರಸಭೆಯ ಸಂಪನ್ಮೂಲ ಕ್ರೋಢೀಕರಣದ ಬಗ್ಗೆ ಮಾತನಾಡಿದ ಅವರು, “ವಾಣಿಜ್ಯ ಕಟ್ಟಡಗಳಿಗೆ ವಸತಿ ತೆರಿಗೆ ಕಟ್ಟುವುದು ಮತ್ತು ಜಾಗದ ವಿಸ್ತೀರ್ಣವನ್ನು ಕಡಿಮೆ ತೋರಿಸಿ ತೆರಿಗೆ ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಎಲ್ಲಾ ಕಟ್ಟಡಗಳ ಮರು ಪರಿಶೀಲನೆ ನಡೆಸಿ ಬಾಕಿ ಇರುವ ತೆರಿಗೆಯನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಲಾಗುವುದು,” ಎಂದು ಎಚ್ಚರಿಸಿದರು.
ತಹಶೀಲ್ದಾರ್ ಎನ್. ಗಗನಸಿಂಧು, ಗ್ರೇಡ್-2 ತಹಶೀಲ್ದಾರ್ ಮಂಜುನಾಥ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
Sidlaghatta : ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ (ಚಿಮುಲ್) ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ. ಶಿಡ್ಲಘಟ್ಟ ಕ್ಷೇತ್ರದಿಂದ ಬಂಕ್ ಮುನಿಯಪ್ಪ ಹಾಗೂ ಜಂಗಮಕೋಟೆ ಕ್ಷೇತ್ರದಿಂದ ಹುಜಗೂರು ರಾಮಯ್ಯ ಗೆದ್ದು ಬೀಗಿದ್ದಾರೆ.
ಕಾಂಗ್ರೆಸ್ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಆರ್. ಶ್ರೀನಿವಾಸ್ ಮತ್ತು ಚೊಕ್ಕೇಗೌಡ ಅವರು ಸೋಲು ಅನುಭವಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಬಣಕ್ಕೆ ತೀವ್ರ ಹಿನ್ನಡೆಯಾದಂತಾಗಿದೆ.
ಮತಗಳ ವಿವರ:
ಶಿಡ್ಲಘಟ್ಟ ಕ್ಷೇತ್ರ: ಇಲ್ಲಿ ಒಟ್ಟು 80 ಮತಗಳು ಚಲಾವಣೆಯಾಗಿದ್ದು, 1 ಮತ ಕುಲಗೆಟ್ಟಿತ್ತು. ಜೆಡಿಎಸ್ ಬೆಂಬಲಿತ ಬಂಕ್ ಮುನಿಯಪ್ಪ 56 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಚೊಕ್ಕೇಗೌಡ ಕೇವಲ 23 ಮತಗಳನ್ನು ಪಡೆದರು.
ಜಂಗಮಕೋಟೆ ಕ್ಷೇತ್ರ: ಇಲ್ಲಿ ಚಲಾವಣೆಯಾದ 81 ಮತಗಳಲ್ಲಿ 1 ಮತ ಕುಲಗೆಟ್ಟಿತ್ತು. ಹುಜಗೂರು ರಾಮಯ್ಯ 49 ಮತಗಳನ್ನು ಪಡೆದು ವಿಜಯಿಯಾದರೆ, ಕಾಂಗ್ರೆಸ್ ಬೆಂಬಲಿತ ಆರ್. ಶ್ರೀನಿವಾಸ್ 31 ಮತಗಳನ್ನು ಪಡೆದು ಪರಾಭವಗೊಂಡರು.
ಅನುಭವ vs ಹೊಸ ಮುಖ:
ಬಂಕ್ ಮುನಿಯಪ್ಪ ಅವರು ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದು ಯಶಸ್ವಿಯಾದರೆ, ಮೊದಲ ಪ್ರಯತ್ನದಲ್ಲೇ ಹುಜಗೂರು ರಾಮಯ್ಯ ಅವರು ಜಯಭೇರಿ ಬಾರಿಸಿದ್ದಾರೆ. ಇನ್ನು ಮಾಜಿ ನಿರ್ದೇಶಕ ಆರ್. ಶ್ರೀನಿವಾಸ್ ಅವರಿಗೆ ಈ ಬಾರಿ ಮತದಾರರು ಕೈಹಿಡಿಯಲಿಲ್ಲ. ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.