
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸದ್ದಹಳ್ಳಿ ಗ್ರಾಮದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ 15ನೇ ವರ್ಷದ ವಾರ್ಷಿಕೋತ್ಸವ ಮಹೋತ್ಸವವನ್ನು ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಳಗಿನಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಗುರು ಹಾಗೂ ಗಣಪತಿ ಸಭಾ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗಂಗಾ ಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹವಾಚನ, ದೇವನಾಂದಿ, ಪಂಚಗವ್ಯ, ಶುತ್ಕೆ ವರ್ಣ, ಕಲಶ ಸ್ಥಾಪನೆ ಹಾಗೂ ಕಲಶಾರಾಧನೆ, ಫಲ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಪುಷ್ಪಾಲಂಕಾರ ಸೇವೆಗಳು ಸಾಂಗವಾಗಿ ನೆರವೇರಿದವು.
ಇದರ ಜೊತೆಗೆ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಶ್ರೀ ರುದ್ರ ಹೋಮ, ತತ್ವನ್ಯಾಸ-ಕಲಾನ್ಯಾಸ ಹೋಮ ಹಾಗೂ ಪೂರ್ಣಾಹುತಿ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು. ಕುಂಭಾಭಿಷೇಕ, ಮಂಗಳ ನೀರಾಜನ, ಅಷ್ಟಾವಧಾನ ಸೇವೆ ಹಾಗೂ ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳೂ ಜರುಗಿದವು. ವಿಶೇಷ ನಾದಸ್ವರ ಸೇವೆ ಇಡೀ ದೇವಾಲಯ ಆವರಣಕ್ಕೆ ಪೂಜಾ ವಾತಾವರಣ ಮೂಡಿಸಿತು.
ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಕುಟುಂಬ ಸಮೇತರಾಗಿ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಸ್ವಾಮಿಯ ಸೇವೆ ಸಲ್ಲಿಸಿದರು.
ಶ್ರೀ ವೀರಾಂಜನೇಯ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ, ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದು, ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.
In English: The Sri Veeranjaneya Swamy temple in Saddahalli village celebrated its trust’s 15th annual festival on Sunday with a full slate of religious rituals including Ganga puja, homas, and kumbhabhishekam. Devotees from surrounding villages attended with their families to take part in the celebrations.












