ಕಾಂಗ್ರೆಸ್ ಪಕ್ಷದಿಂದ ಬಂಡಾಯವೆದ್ದ ಆಂಜಿನಪ್ಪ(ಪುಟ್ಟು) ಮೇ ೧೨ ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಶುಕ್ರವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದಲ್ಲಿ ಮೆರವಣಿಗೆಯ ಮೂಲಕ ತೆರಳಿ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಎರಡನೇ ಬಾರಿ ನಾಮಪತ್ರ ಸಲ್ಲಿಸಿದರು.
ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿಯಿರುವ ಎಸ್.ಎನ್.ಕ್ರಿಯಾ ಟ್ರಸ್ಟ್ ಕಚೇರಿಯಿಂದ ಬೆಂಬಲಿಗರೊಂದಿಗೆ ತನ್ನ ಪತ್ನಿಯೊಂದಿಗೆ ಹೊರಟ ಆಂಜಿನಪ್ಪ ಸಲ್ಲಾಪುರಮ್ಮ ದೇವಾಲಯ, ದರ್ಗಾ, ಕೃಷ್ಣಸ್ವಾಮಿ ದೇವಾಲಯ, ಎಲ್ಲಮ್ಮ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ಚುನಾವಣಾಧಿಕಾರಿ ಮಲ್ಲಿಕಾರ್ಜುನ್ರಿಗೆ ನಾಮಪತ್ರ ಸಲ್ಲಿಸಿದರು.
‘ನೀತಿ ಸಂಹಿತೆಯನ್ನು ಗೌರವಿಸಲು ಮಂಗಳವಾರ ಕೆಲವೇ ಮಂದಿಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದೆವು. ಬೆಂಬಲಿಗರ ಒತ್ತಾಯದ ಮೇರೆಗೆ ಈ ದಿನ ಪುನಃ ನಾಮಪತ್ರವನ್ನು ಸಲ್ಲಿಸಿದೆವು. ಜನಪರ ಆಲೋಚನೆ, ಸೇವಾ ಕಾರ್ಯದಿಂದಾಗಿ ಸ್ವಇಚ್ಛೆಯಿಂದ ಅಪಾರ ಮಂದಿ ಆಗಮಿಸಿ ಬೆಂಬಲಿಸಿದ್ದಾರೆ. ಕ್ಷೇತ್ರದ ಜನರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಜನರ ಬಳಿ ಹೋಗಿ ಪ್ರಾಮಾಣಿಕವಾಗಿ ಮತಯಾಚಿಸುತ್ತೇನೆ’ ಎಂದು ಈ ಸಂದರ್ಭದಲ್ಲಿ ಆಂಜಿನಪ್ಪ ತಿಳಿಸಿದರು.
‘ನಾನು ಈಗಾಗಲೇ ಕ್ಷೇತ್ರದಾದ್ಯಂತ ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಜನತೆಯ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ಕೂಡಾ ಉತ್ತಮಸೇವೆಯನ್ನು ಮಾಡುವುದರ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಡೆಗೆ ಗಮನವನ್ನು ನೀಡುತ್ತೇನೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡುವಂತಹವರನ್ನು ಈ ಬಾರಿ ಕ್ಷೇತ್ರದ ಜನತೆ ಆಯ್ಕೆ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇನೆ’ ಎಂದರು.
ಈ ಸಂದರ್ಭದಲ್ಲಿ ಅರುಣಾ ಆಂಜಿನಪ್ಪ, ಅಫ್ಸರ್ಪಾಷ, ಎ.ದೇವರಾಜು, ಅಶ್ವತ್ಥನಾರಾಯಣರೆಡ್ಡಿ, ನವೀನ್ಕುಮಾರ್, ನಟರಾಜ್, ಬೈರೇಗೌಡ, ಕೃಷ್ಣಪ್ಪ, ವಿಶ್ವನಾಥ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -