ತಾಲ್ಲೂಕಿನ ಮಳ್ಳೂರು ಸಮೀಪದ ಭಟ್ರೇನಹಳ್ಳಿಯ ಶ್ರೀ ಸಾಯಿನಾಥ ಜ್ಞಾನಮಂದಿರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಹಾಗೂ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ೧೩೦೭ ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ ನೆರವೇರಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ವಿ.ನಾರಾಯಣಸ್ವಾಮಿ ಅವರು ಮಾತನಾಡಿದರು.
ಕುಡಿತದ ಚಟದಿಂದ ಮಾನಸಿಕ ನೆಮ್ಮದಿ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿ ಹಾಳಾಗುತ್ತದೆ. ಹಾಗಾಗಿ ಕುಡಿತ ಸೇರಿದಂತೆ ಯಾವುದೇ ಚಟಕ್ಕೆ ಬಲಿಯಾಗದೇ ಎಲ್ಲರೂ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಮದ್ಯಸೇವನೆ ಸಮಾಜದ ದುಷ್ಚಟಗಳಲ್ಲಿ ಒಂದಾಗಿದೆ. ಇದು ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದೆ. ಇಂತಹ ಪಿಡುಗನ್ನು ಸಮಾಜದಿಂದ ಹೊರ ಓಡಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ನಿರಂತರ ಶ್ರಮಸಿಸುತ್ತಿರುವುದು ಶ್ಲಾಘನೀಯ. ಈಗಾಗಲೇ ೧೩೦೬ ಶಿಬಿರಗಳನ್ನು ಪೂರೈಸಿ ಸಾವಿರಾರು ಕುಟುಂಬಗಳ ಉಳಿವಿಗೆ ಕಾರಣವಾಗಿದೆ ಎಂದರು.
ಶ್ರೀ ಸಾಯಿನಾಥ ಜ್ಞಾನಮಂದಿರದ ಸಮಿತಿಯ ಮುಖ್ಯಸ್ಥ ಎಂ.ನಾರಾಯಣಸ್ವಾಮಿ ಮಾತನಾಡಿ, ಯುವಜನತೆ ಮದ್ಯಸೇವನೆಯಿಂದ ಹಾಳಾಗುತ್ತಿರುವುದು ಕಳವಳದ ಸಂಗತಿಯಾಗಿದೆ. ದೇಶಾದ್ಯಂತ ಯುವಕರ ಸಂಖ್ಯೆ ಹೆಚ್ಚಿದ್ದು, ಯುವಶಕ್ತಿ ವಿದ್ಯಾವಂತರಾಗಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊರಬೇಕಾಗಿದೆ ಎಂದರು.
ಕುಡಿತದ ಅಮಲಿನಲ್ಲಿ ಮನೆಯಲ್ಲಿ ಅಸಭ್ಯವಾಗಿ ವರ್ತಿಸುವುದು, ಹೊಡೆಯುವುದು, ಜಗಳವಾಡುವುದು, ಮುಂತಾದ ಕಾರಣಗಳಿಂದ ಮನೆ ಜಗಳ ಬೀದಿಗೆ ಬರುವುದಲ್ಲದೆ, ಕುಟುಂಬದ ಮಾನ ಮರ್ಯಾದೆ ಸಹ ಹೋಗುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಘಟನೆಗಳು ಸಹ ವರದಿಯಾಗಿದೆ. ಆದ್ದರಿಂದ ಯುವಕರು ಕುಡಿತವನ್ನು ಬಿಟ್ಟು ವಿದ್ಯಾವಂತರಾಗಿ ದೇಶದ ಸತ್ಪ್ರಜೆಗಳಾಗಿ ರೂಪಗೊಳ್ಳಬೇಕು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಮೋಹನ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೧೩೦೭ನೇ ಮದ್ಯವರ್ಜನ ಶಿಬಿರವನ್ನು ತಾಲ್ಲೂಕಿನಲ್ಲಿ ಆಯೋಜಿಸಲಾಗಿದ್ದು ಮದ್ಯವ್ಯಸನಿಗಳಿಗಾಗಿ ೭ ದಿನಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮದ್ಯ ವ್ಯಸನಕ್ಕೆ ಒಳಗಾಗಿರುವವರು ಶಿಬಿರದ ೭ ದಿನಗಳು ಇಲ್ಲೇ ಇರಬೇಕಾಗಿದೆ. ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆ ಸೇರಿದಂತೆ ಆರೋಗ್ಯ ತಪಾಸಣೆ, ಗಣ್ಯರಿಂದ ಮಾರ್ಗದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ಮದ್ಯಪಾನದಿಂದಾಗುವ ದುಷ್ಟಪರಿಣಾಮಗಳು ಹಾಗೂ ಮದ್ಯಪಾನ ಬಿಡಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ವಿವರವಾಗಿ ತಿಳಿಸಿ ಮದ್ಯಪಾನ ಬಿಡುವಂತೆ ಮಾಡಲಾಗುವುದು. ಶಿಬಿರದಲ್ಲಿ ಭಾಗವಹಿಸಿರುವ ಮದ್ಯವ್ಯಸನಿಗಳು ಸಂಯಮದಿಂದ ಇದ್ದು ಶಿಬಿರ ಮುಗಿದ ನಂತರ ಮದ್ಯಪಾನ ಬಿಟ್ಟು ಸಂತೋಷವಾಗಿ ಕುಟುಂಬದೊಂದಿಗೆ ಬಾಳಬೇಕು ಎನ್ನುವುದು ಶ್ರೀ ಕ್ಷೇತ್ರದ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದೇಶಕ ವಸಂತ್ಕುಮಾರ್, ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಶಿವಕುಮಾರ್, ಗ್ರಾಮಾಂತರ ಠಾಣೆ ಪಿಎಸ್ಸೈ ವಿಜಯ್ರೆಡ್ಡಿ, ಪ್ರಗತಿ ಪರ ರೈತ ಬೋದಗೂರು ವೆಂಕಟಸ್ವಾಮಿರೆಡ್ಡಿ, ಕಸಾಪ ಅಧ್ಯಕ್ಷ ಎ.ಎಂ.ತ್ಯಾಗರಾಜ್ ಹಾಜರಿದ್ದರು.
- Advertisement -
- Advertisement -
- Advertisement -