
Sidlaghatta : ನಂದಿನಿ ಪಾರ್ಲರ್ ಗಳಲ್ಲಿ ನಂದಿನಿ ಹಾಲು, ಮೊಸರು ತುಪ್ಪ ಸೇರಿದಂತೆ ನಂದಿನಿಯ ಉತ್ಪನ್ನಗಳ ಬದಲಿಗೆ ಇತರೆ ಬ್ರಾಂಡ್ ನ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಂಡು ಬರುತ್ತಿದ್ದು ಅಂತಹ ಪಾರ್ಲರ್(ನಂದಿನಿ ಔಟ್ ಲೆಟ್ಸ್)ಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಚಿಮುಲ್ ನಿರ್ದೇಶಕ ಹುಜಗೂರು ರಾಮಯ್ಯ ಎಚ್ಚರಿಸಿದರು.
ಶಾಸಕ ಬಿ.ಎನ್.ರವಿಕುಮಾರ್ ಅವರ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂದಿನಿ ಪಾರ್ಲರ್ಗಳಲ್ಲಿ ನಂದಿನಿಯ ಉತ್ಪನ್ನಗಳಷ್ಟೆ ಮಾರಾಟ ಮಾಡಬೇಕು. ಆದರೆ ಐದತ್ತು ಪೈಸೆಯ ಹೆಚ್ಚಿನ ಕಮೀಷನ್ ಆಸೆಗೆ ಬಿದ್ದು ಪಾರ್ಲರ್ ಗಳ ಮಾಲೀಕರೆ ನಂದಿನಿ ಉತ್ಪನ್ನಗಳ ಬದಲಿಗೆ ಇತರೆ ಬ್ರಾಂಡ್ ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಂದಿನಿ ಪಾರ್ಲರ್ ಗಳಿಗೆ ಗ್ರಾಹಕರು ಬಂದಾಗ ನಂದಿನಿ ಉತ್ಪನ್ನಗಳ ಬದಲಿಗೆ ಇತರೆ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡುವುದು ಗಮನಕ್ಕೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳು ಕಾಲ ಕಾಲಕ್ಕೆ ಪಾರ್ಲರ್ ಗಳನ್ನು ಪರಿಶೀಲನೆ ಮಾಡಬೇಕು. ನಂದಿನಿ ಉತ್ಪನ್ನಗಳನ್ನು ಹೊರತುಪಡಿಸಿ ಇತರೆ ಉತ್ಪನ್ನಗಳು, ಸರಕುಗಳನ್ನು ಮಾರಾಟ ಮಾಡುವಂತಿಲ್ಲ. ಆದರೂ ಮಾಡುವುದು ಕಂಡು ಬಂದಿದ್ದರೂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂದು ದೂರಿದರು.
ನಂದಿನಿ ಉತ್ಪನ್ನಗಳನ್ನು ಲಾಭದ ದೃಷ್ಟಿಯಿಂದ ಮಾರಾಟ ಮಾಡುತ್ತಿಲ್ಲ. ಗ್ರಾಹಕರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಕಾರಣ ಜಾಗತಿಕವಾಗಿ ನಂದಿನಿ ಬ್ರಾಂಡ್ ನ ಉತ್ಪನ್ನಗಳು ಪ್ರಸಿದ್ದಿಯಾಗಿದ್ದು, ಅದನ್ನು ಉಳಿಸುವ ಕೆಲಸಕ್ಕೆ ನಾವೆಲ್ಲರೂ ಮುಂದಾಗಬೇಕಿದೆ ಎಂದರು.
ನಂದಿನಿ ಉತ್ಪನ್ನಗಳನ್ನು ಬಿಟ್ಟು ಬೇರೆ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಕೊಡಿ, ಕಾನೂನು ಕ್ರಮ ತೆಗೆದುಕೊಳ್ಳುವ ಕೆಲಸ ಮುಂದಿನ ದಿನಗಳಲ್ಲಿ ಆಗಲಿದೆ ಎಂದು ತಿಳಿಸಿದರು.
ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಾ.ಧನಂಜಯರೆಡ್ಡಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್, ಮುಖಂಡ ತಾದೂರು ರಘು ಹಾಜರಿದ್ದರು.