
Doddatekahalli, Sidlaghatta : ಹಿರಿಯರು ನಮಗೆ ವರದಾನವಾಗಿ ನೀಡಿರುವ ಕೆರೆ, ಕುಂಟೆ, ಕಲ್ಯಾಣಿಗಳನ್ನು ಉಳಿಸಿಕೊಳ್ಳುವ ಅಗತ್ಯ ಬಹಳಷ್ಟಿದೆ. ಗ್ರಾಮದ ಕಲ್ಯಾಣಿಗಳನ್ನು ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಚಗೊಳಿಸಿ ಉತ್ತಮವಾಗಿ ನಿರ್ವಹಣೆ ಮಾಡಿದಲ್ಲಿ ಮುಂದಿನ ಪೀಳಿಗೆ ನೀರಿಗಾಗಿ ಪರಿತಪಿಸುವ ಸ್ಥಿತಿ ಉದ್ಭವಿಸುವುದಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ತಿಳಿಸಿದರು.
ತಾಲ್ಲೂಕಿನ ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸಪ್ಪನ ಬಾವಿ ಕಲ್ಯಾಣಿಯನ್ನು ಸೋಮವಾರ ಗ್ರಾ.ಪಂ ಅಧಿಕಾರಿಗಳು, ಸಿಬ್ಬಂದಿ ಸೆರಿದಂತೆ ಗ್ರಾಮಸ್ಥರ ಸಹಕಾರದೊಂದಿಗೆ ಸ್ವಚ್ಚಗೊಳಿಸುವ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರಿ ಸುಮಾರು 400 ವರ್ಷಗಳ ಇತಿಹಾಸವಿರುವ ಗ್ರಾಮದ ದಾಸಪ್ಪನ ಬಾವಿಯನ್ನು ಇಂದು ಜಿ.ಪಂ ಸಿಇಓ ಅವರ ಸೂಚನೆ ಮೇರೆಗೆ ಗ್ರಾಮದ ಜನಪ್ರತಿನಿಧಿಗಳು, ಗ್ರಾಮಸ್ಥರು, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ರೀತಿ ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿರುವ ಎಲ್ಲಾ ಕಲ್ಯಾಣಿಗಳ ನೈರ್ಮಲ್ಯಿಕರಣ ಮಾಡಲು ಯೋಜನೆ ಮಾಡಲಾಗಿದೆ, ಅದೇ ರೀತಿಯಾಗಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ನಿಷೇಧ ಮಾಡುವುದರಿಂದ ಪ್ಲಾಸ್ಟಿಕ್ ಮುಕ್ತ ಗ್ರಾಮ, ತಾಲ್ಲೂಕು ಹಾಗೂ ಜಿಲ್ಲೆಯಾಗಲು ಪ್ರತಿಯೊಬ್ಬರ ಸಹಕಾರ ನೀಡಬೇಕು ಎಂದರು.
ಗ್ರಾಮ ಪಂಚಾಯಿತಿ ವತಿಯಿಂದ ಈಗಾಗಲೇ ಕಸ ವಿಲೇವಾರಿ ಬಗ್ಗೆ ಅರಿವು ಮೂಡಿಸಿದ್ದು, ಆದ್ದರಿಂದ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಎಸೆಯದೇ, ಕಸ ಸಂಗ್ರಹಣೆ ಮಾಡಲು ಗ್ರಾಮ ಪಂಚಾಯಿತಿ ವತಿಯಿಂದ ಬರುವ ಕಸ ಸಂಗ್ರಹಣೆ ವಾಹನಗಳಿಗೆ ಹಾಕುವ ಮೂಲಕ ನಮ್ಮ ಸುತ್ತಮುತ್ತಲಿನ ಪರಿಸರ ಕಾಪಡಬೇಕು ಎಂದರು.
ಸ್ವಾಭಾವಿಕವಾಗಿ ಮಳೆಗಾಲವು ಜೂನ್ ತಿಂಗಳಿನಿಂದ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನವೇ ಜಿಲ್ಲೆ ಮತ್ತು ತಾಲ್ಲೂಕಿನ ಎಲ್ಲಾ ಜಲಮೂಲಗಳನ್ನು ಸಿದ್ಧತೆ ಮಾಡಿ, ನೀರು ಶೇಖರಣೆ ಮಾಡುವ ಮೂಲಕ ನೀರು ಇಂಗುವಂತೆ ಮಾಡಬೇಕಿದೆ ಎಂದರು.
ತಾ.ಪಂ ಇಓ ಹೇಮಾವತಿ.ಆರ್, ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಯೋಜನಾಧಿಕಾರಿ ಅನಿಲ್ಕುಮಾರ್, ಇಇ ರಘುನಾಥಮೂರ್ತಿ, ಪಿಡಿಓ ವಜ್ರೇಶ್ಕುಮಾರ್, ನೋಡಲ್ ಅಧಿಕಾರಿಗಳು, ವಿವಿಧ ಗ್ರಾ.ಪಂ ಪಿಡಿಓಗಳು ಸೇರಿದಂತೆ ನರೇಗಾ ಸಿಬ್ಬಂದಿ, ತಾ.ಪಂ ಸಿಬ್ಬಂದಿ ಜಲಗಾರರು, ಸ್ವಚ್ಛತಾಗಾರರು, ಗ್ರಾ.ಪಂ ಸಿಬ್ಬಂದಿ ಮತ್ತು ಗ್ರಾಮಸ್ಥರು ಹಾಜರಿದ್ದರು.