
Sidlaghatta : ನೊಂದವರ, ಶೋಷಣೆಗೊಳಗಾದವರ ದನಿಯಾಗುವ, ಸಮಾಜಕ್ಕೆ ಬೆಳಕಾಗುವ ರೀತಿಯಲ್ಲಿ ಹೆಣ್ಣುಮಕ್ಕಳು ಶಕ್ತಿವಂತರಾದಾಗ ಮಾತ್ರವೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡುವುದಕ್ಕೆ ಅರ್ಹತೆ ಪಡೆಯುತ್ತೇವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ತಿಳಿಸಿದರು.
ನಗರದ ಪ್ಯಾರೇಗಾನ್ ಶಾಲೆಯ ಮುಂಭಾಗದಲ್ಲಿ ಸೋಮವಾರ ಮಾನವ ಬಂಧುತ್ವ ವೇದಿಕೆ ಹಾಗೂ ತಾಲ್ಲೂಕು ಪದವಿ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿಚಾರವಂತಳು, ಜ್ಞಾನವಂತಳು, ಅರಿವನ್ನು ಹೊಂದಿರುವ ಮಹಿಳೆಯೇ ಶಕ್ತಿ ಶಾಲಿ ಹೆಣ್ಣುಮಗಳು. ಸಮಾಜದ ಆರೋಗ್ಯವನ್ನ ಹಳ್ಳಿಯಿಂದ ದಿಲ್ಲಿಯವರೆಗೂ ಕಾಪಾಡುತ್ತಿರುವವರೇ ಆಶಾ ತಾಯಂದಿರು. ಗ್ರಾಮೀಣ ಭಾಗದ ಮಹಿಳೆಯೊಬ್ಬಳು ಬಸುರಿಯಾದಾಗಿನಿಂದ ಮಗುವಿಗೆ 42 ದಿನಗಳು ಆಗುವವರೆಗೂ ಆ ತಾಯಿಯನ್ನು ಅಗತ್ಯ ಪೌಷ್ಟಿಕ ಆಹಾರ, ಔಷಧಿ ನೀಡಿ ಉಪಚರಿಸುವವಳೇ ಆಶಾ ತಾಯಿ ಎಂದರು.
ಅನಗತ್ಯ ಆಕರ್ಷಣೆಗೆ ಒಳಗಾಗದೇ ಹೆಣ್ಣುಮಕ್ಕಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ನಿಮ್ಮ ಆಲೋಚನೆಯು ನಿಮ್ಮ ದಿಕ್ಕನ್ನು ನಿರ್ಧರಿಸುತ್ತದೆ. ಕಷ್ಟಪಟ್ಟು ಓದಬೇಕು. ಹೆಣ್ಣುಮಕ್ಕಳ ರಕ್ಷಣೆಗಾಗಿ, ಸುರಕ್ಷತೆಗಾಗಿ ಮಾಡಿರುವ ಕಾನೂನುಗಳ ಅರಿವಿರಬೇಕು. ಅವನ್ನು ತಿಳಿದಾಗ ಮಾತ್ರ ಕಾನೂನಿನ ನೆರವನ್ನು ಪಡೆದುಕೊಳ್ಳಲು ಸಾಧ್ಯ. ಮಹಿಳಾ ಸಹಾಯವಾಣಿ, ಸಖಿ ಕೇಂದ್ರ, ಮಹಿಳಾ ಸಾಂತ್ವನ ಕೇಂದ್ರದ ಬಗ್ಗೆ ಅವರು ವಿವರಿಸಿದರು.
ತಹಶೀಲ್ದಾರ್ ಎನ್.ಗಗನಸಿಂಧು ಮಾತನಾಡಿ, ಹೆಣ್ಣುಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಿ, ಭವಿಷ್ಯದ ಸಾಧನೆಯೆಡೆಗೆ ಗುರಿ ಹೊಂದಿರಬೇಕು. ವೇದಿಕೆಯ ಮೇಲಿರುವ ಮಹಿಳಾ ಅಧಿಕಾರಿಗಳನ್ನು ಕಂಡು ಸ್ಫೂರ್ತಿಯನ್ನು ಹೊಂದಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದ ನಂತರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ಅವರು ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಮಿಕ ಮಹಿಳೆಯರ ಸಮಸ್ಯೆಗಳನ್ನು ವಿಚಾರಿಸಿದರು. ಸರ್ಕಾರಿ ಉರ್ದು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ತಹಶೀಲ್ದಾರ್ ಎನ್.ಗಗನಸಿಂಧು, ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ನಗರಸಭೆ ಪೌರಾಯುಕ್ತ್ರ್ ಜಿ.ಅಮೃತಾ, ಸಿಡಿಪಿಒ ವಿದ್ಯಾ ಎ.ವಸ್ತ್ರದ್, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ವಲಯ ಅರಣ್ಯಾಧಿಕಾರಿ ಪೂರ್ವಿಕಾರಾಣಿ, ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ, ಚಲನಚಿತ್ರ ನಟಿ ರಾಜೇಶ್ವರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವೆಂಕಟೇಶರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.