ತಾಲ್ಲೂಕಿನ ಆನೂರು ಗ್ರಾಮ ಪಂಚಾಯಿತಿಯ ಬೆಳ್ಳೂಟಿ ಗೇಟ್ ಬಳಿಯ ಶ್ರೀ ಗುಟ್ಟಾಂಜನೇಯ ಸ್ವಾಮಿ ದೇವಾಲಯದ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಕೆ.ಎಂ.ಎಫ್ ಹಾಗೂ ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಮಾತನಾಡಿದರು.
ಕ್ಷೇತ್ರದ ಪ್ರತಿಯೊಂದು ಗ್ರಾಮದಲ್ಲಿ ನೆಮ್ಮದಿಯ ತಾಣಗಳಾಗಿರುವ ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿಯನ್ನು ಎಲ್ಲರೂ ಒಗ್ಗೂಡಿ ಮಾಡಬೇಕು. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯನ್ನು ಕಾಲಕಾಲಕ್ಕೆ ಮಾಡುತ್ತಿರಬೇಕು. ನಮ್ಮ ಸಮಾಜದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರಗಳಾದ ದೇವಾಲಯಗಳ ನವೀಕರಣ ಅತ್ಯಗತ್ಯ ಎಂದು ಅವರು ತಿಳಿಸಿದರು.
ಯುವ ಕಾಂಗ್ರೆಸ್ ಮುಖಂಡ ಸಂತೋಷ್ ಬೆಳ್ಳೂಟಿ ಮಾತನಾಡಿ, ಶಾಸಕ ವಿ.ಮುನಿಯಪ್ಪನವರ ಸಹಕಾರದಿಂದ ಆರಾಧನೆ ಇಲಾಖೆಯಿಂದ ಮಂಜೂರಾಗಿರುವ ಅನುದಾನದಲ್ಲಿ ದೇವಾಲಯದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ. ಧಾರ್ಮಿಕ ಕೇಂದ್ರಗಳ ಅಭಿವೃದ್ದಿಗಾಗಿ ಸರ್ಕಾರದ ಜೊತೆಗೆ ಸಮುದಾಯದ ಸಹಕಾರ ಅಗತ್ಯವಾಗಿದ್ದು ಬೆಳ್ಳೂಟಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಭಕ್ತಾದಿಗಳು ನೆರವು ನೀಡಲು ಮುಂದಾಗಿದ್ದಾರೆ. ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ದಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಉಪಾಧ್ಯಕ್ಷ ಬೆಳ್ಳೂಟಿ ವೆಂಕಟೇಶ್, ನಾಗೇಶ್, ಸವಿತಾ ಸಮಾಜದ ರಮೇಶ್, ಮಳಮಾಚನಹಳ್ಳಿ ಎಸ್ಎಫ್ಸಿಎಸ್ ಬ್ಯಾಂಕಿನ ಮಾಜಿ ಅಧ್ಯಕ್ಷ ರಾಮಕೃಷ್ಣ, ರೇಷ್ಮೆ ಉತ್ಪಾದಕರ ಕಂಪನಿಯ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಬಿ.ಎನ್.ಮುನಿರಾಜು, ಹಿತ್ತಲಹಳ್ಳಿ ಎಚ್.ಕೆ.ಸುರೇಶ್. ರಾಮಾಂಜಿನಪ್ಪ, ಮುನಿರಾಜು, ಶಿರಸ್ತೆದಾರ್ ಮಂಜುನಾಥ್ ಹಾಜರಿದ್ದರು.