
Bhaktarahalli, sidlaghatta : ಬಿಎಂವಿ ಶಾಲೆಯ 2006-07ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಸುಮಾರು ಎರಡು ದಶಕಗಳ ನಂತರ ಒಂದಾಗಿ, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಅಕ್ಷರ ಕಲಿಸಿದ ಗುರುಗಳಿಗೆ ಭಕ್ತಿಪೂರ್ವಕ ‘ಗುರುವಂದನಾ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ತಾಲ್ಲೂಕಿನ ಭಕ್ತರಹಳ್ಳಿ ಬಿಎಂವಿ ಶಾಲೆಯ ಶ್ರೀ ನಾಲ್ವಡಿ ಕೃಷ್ಣದೇವರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ತಮ್ಮ ಯಶಸ್ಸಿಗೆ ಕಾರಣರಾದ ಶಿಕ್ಷಕರನ್ನು ಸನ್ಮಾನಿಸಿ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು. “ನಾವು ಇಂದು ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿದ್ದೇವೆ ಎಂದರೆ ಅದಕ್ಕೆ ಅಂದು ನಮ್ಮ ಗುರುಗಳು ನೀಡಿದ ಶಿಸ್ತು ಮತ್ತು ಸಂಸ್ಕಾರವೇ ಕಾರಣ” ಎಂದು ವಿದ್ಯಾರ್ಥಿಗಳು ಭಾವುಕರಾಗಿ ನುಡಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಶಿಕ್ಷಕರನ್ನು ವಿದ್ಯಾರ್ಥಿಗಳು ಹೂಮಳೆ ಸುರಿಸಿ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಸಮಾಜ ವಿಜ್ಞಾನ ಶಿಕ್ಷಕ ಪಿ.ಜಿ. ವೆಂಕಟೇಶ್, “ಎತ್ತರದಲ್ಲಿ ಹಾರುವ ಗಾಳಿಪಟ ಎಲ್ಲರಿಗೂ ಕಾಣುತ್ತದೆ, ಆದರೆ ಅದನ್ನು ಹಾರಿಸುತ್ತಿರುವವರು ಕಾಣುವುದಿಲ್ಲ. ಅದೇ ರೀತಿ ಬಾನೆತ್ತರಕ್ಕೆ ಬೆಳೆಯುತ್ತಿರುವ ವಿದ್ಯಾರ್ಥಿಗಳನ್ನು ಕಂಡು ಶಿಕ್ಷಕರು ಸಂತೋಷಪಡುತ್ತಾರೆ,” ಎಂದು ಬಣ್ಣಿಸಿ, ಈ ಗುರು-ಶಿಷ್ಯರ ಸಂಬಂಧ ನಿರಂತರವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ನರ್ಸರಿ ಶಿಕ್ಷಕಿ ಸರೋಜಮ್ಮ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಾದ ವೈ. ನಾರಾಯಣಸ್ವಾಮಿ, ಪಂಚಮೂರ್ತಿ, ಲಿಂಗರಾಜು, ವೆಂಕಟರೆಡ್ಡಿ, ಮಂಜುನಾಥ್, ಪ್ರತಿಮಾ ದೇವಿ, ಸರೋಜ, ಎಂ.ಪಿ. ಆಶಾ, ಎನ್. ವೆಂಕಟಮೂರ್ತಿ, ಕಲ್ಪನಾ ಎಂ., ಎಂ.ಹೆಚ್. ರಾಮಾಂಜಿನಪ್ಪ, ಎಂ.ಎನ್. ಮಂಜುನಾಥ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಶಾಲಾ ವಾಹನದ ಚಾಲಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೆ ವಿದ್ಯಾರ್ಥಿ ನಾಗವೇಂದ್ರ ಹಾಗೂ ನಾಗೇಶ್ ಮಾತನಾಡಿ, ತಮ್ಮ ಸಹಪಾಠಿಗಳ ಒಗ್ಗಟ್ಟಿನಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಎಂವಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ವಿ. ಮುನೇಗೌಡ, ಕಾರ್ಯದರ್ಶಿ ಎಲ್. ಕಾಳಪ್ಪ ಹಾಗೂ ಮುಖ್ಯ ಅತಿಥಿ ನಾರಾಯಣಸ್ವಾಮಿ ಪಾಲ್ಗೊಂಡಿದ್ದರು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಾಗವೇಂದ್ರ, ನಾಗೇಶ್, ವಿವೇಕ್, ಮನೋಹರ್, ಚಂದ್ರು, ಪ್ರತಿಭಾ ಮತ್ತು ಸೌಮ್ಯ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿತು.