
Gudihalli, Sidlaghatta : ಅವಿಭಜಿತ ಕೋಲಾರ ಜಿಲ್ಲೆಯ ಪುರಾತನ ದೇವಾಲಯಗಳಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯ ಸೋಮೇಶ್ವರ ದೇವಾಲಯವೂ ಒಂದು. ಶಿವಲಿಂಗದ ಶೈಲಿಯನ್ನು ಗಮನಿಸಿದರೆ ಬಹುಶಃ ಈ ದೇವಾಲಯವು ಗಂಗರ ಕಾಲದಲ್ಲಿಯೇ ನಿರ್ಮಾಣ ಆದಂತಿದೆ. ಆದರೆ ಶಾಸನಗಳ ಆಧಾರದಲ್ಲಿ ಚೋಳರ ಕಾಲದಲ್ಲಿ ಈ ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವ ದಾಖಲೆಗಳಿವೆ ಎನ್ನುತ್ತಾರೆ ಶಾಸನತಜ್ಞರು.
ಈ ದೇವಾಲಯದ ಆವರಣದಲ್ಲಿ ಒಟ್ಟು ನಾಲ್ಕು ಶಾಸನಗಳು ಎಪಿಗ್ರಾಪಿಯಾ ಕರ್ನಾಟಕದ ಹತ್ತನೇ ಸಂಪುಟದಲ್ಲಿ ಪ್ರಕಟವಾಗಿವೆ. ಇವುಗಳ ಪೈಕಿ ಮೂರು ಕುಲೋತುಂಗ ಚೋಳನ ಕಾಲದಲ್ಲಿ ಮತ್ತು ಒಂದು ಕರ್ನಾಟಕ ಸಾಮ್ರಾಜ್ಯದ ಆರಂಭ ಕಾಲದಲ್ಲಿ ಹಾಕಿಸಿದ ಶಾಸನಗಳಾಗಿವೆ.
66ನೇ ನಂಬರಿನದು ರಾಜಮಾಣಿಕ್ಕವೇಲನ್ ಎಂಬ ವೀರನು ಸ್ತ್ರೀಯರ ಮಾನ ಕಾಪಾಡಿದ ಸಮಯದಲ್ಲಿ ಹುತಾತ್ಮನಾಗಿರುವುದನ್ನು ತಿಳಿಸುವ ಪೆಣ್ಬಯಿಲ್ ಶಾಸನವಾಗಿದೆ. ಈ ಸ್ಮಾರಕವನ್ನು ಆತನ ಮಗ ಇರುಗನ್ ರಾಜಮಾಣಿಕ್ಕವೇಲನ್ ಎಂಬುವವನು ಕ್ರಿ.ಶ.1080ರಲ್ಲಿ ಹಾಕಿಸಿದ್ದಾನೆ.
67ನೇ ನಂಬರಿನ ಶಾಸನವು ದೇವಾಲಯದ ಅಧಿಷ್ಠಾನದ ಮೇಲಿದೆ. ಇದು ಕ್ರಿ.ಶ.1346ನೇ ಇಸವಿಯ ಶಾಸನವಾಗಿದೆ, ಈ ಕಾಲದಲ್ಲಿ ಗುಡಿಹಳ್ಳಿಯು ಅಂಬಡಕ್ಕಿ ನಾಡಿನ ಅಂತರ್ಗತ ಭಾಗವಾಗಿದ್ದು ಇದರ ಆಡಳಿತವು ಮಂಜಯ್ಯ ನಾಯಕನ ಮಗ ಅಂಕಯ್ಯನಾಯಕನ ಕೈಯಲ್ಲಿ ಇರುತ್ತದೆ. ಅಂಬಡಕ್ಕಿ ನಾಡಿನ ಧರ್ಮ ಗುರು ಪಾಪಿಸಿಯರ್ ಈ ಸೋಮೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದ್ದ ವಿವರಗಳು ಈ ಶಾಸನದಲ್ಲಿ ಇವೆ. ಈ ಶಾಸನದ ವೈಶಿಷ್ಟ್ಯವೇನೆಂದರೆ ಇದರಲ್ಲಿ ದೇವಾಲಯ ನಿರ್ವಹಣೆ ಸಂಗ್ರಹಿಸುವ ಸುಂಕಗಳ ಪೈಕಿ “ಅಜೀವಿಕ”ರ ಮೇಲಿನ ತೆರಿಗೆಯೂ ಸೇರಿದೆ .
68ನೇ ನಂಬರಿನ ಶಾಸನದಲ್ಲಿ ಗುಡಿಹಳ್ಳಿಯ ಈ ಸೋಮೇಶ್ವರ ದೇವರನ್ನು ಚೋಳರ ಕಾಲದಲ್ಲಿ “ರಾಜೇಂದ್ರಚೋಳ ತೆಕ್ಕೀಶ್ವರಂ ಒಡೆಯ ನಾಯನಾರ್” ಎಂಬ ಹೆಸರಿನಿಂದ ಪೂಜಿಸುತ್ತಿದ್ದರು ಎಂಬ ವಿಷಯ ತಿಳಿದುಬರುತ್ತದೆ. ಇದರಲ್ಲಿ ಸಿಂಗಯ್ಯನ ಮಗ ವಾಸವಯ್ಯ ಮತ್ತು ಅವನ ಮಗ (ಹೆಸರು ತೃಟಿತವಾಗಿದೆ) ಈ ದೇವಾಲಯಕ್ಕೆ ಕೊಡುಗೆ ಕೊಟ್ಟ ವಿವರಗಳಿವೆ.
69ನೇ ನಂಬರಿನ ಶಾಸನದಲ್ಲಿ ಕ್ರಿ.ಶ. 1080 ಸಮಯದಲ್ಲಿ ಗುಡಿಹಳ್ಳಿಯು “ವಿಜಯರಾಜೇಂದ್ರಮಂಡಲದ ಕಳವಾರ ನಾಡಿಗೆ” ಸೇರಿತ್ತು ಎಂಬ ಮಾಹಿತಿ ಸಿಗುತ್ತದೆ.