
Ganganahalli, Sidlaghatta : ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಮೂಲಕ, ಹಾಲು ಉತ್ಪಾದಕರು, ಉತ್ತಮ ಆರ್ಥಿಕ ಆದಾಯದ ಕಡೆಗೆ ಗಮನಹರಿಸಬೇಕು ಎಂದು ಗಂಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ವಿ.ಸುರೇಶ್ ಹೇಳಿದರು.
ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ, ಹಾಲಿನ ಕ್ಯಾನುಗಳು ವಿತರಣೆ ಮಾಡಿ ಅವರು ಮಾತನಾಡಿದರು.
ಬೇಸಿಗೆಯಲ್ಲಿ ಹಸಿರು ಮೇವಿನ ಕೊರತೆಯಿಂದಾಗಿ, ಹಾಲಿನ ಉತ್ಪಾದನೆ ಕುಂಠಿತವಾಗಬಹುದು. ಉತ್ಪಾದಕರು, ಕೇವಲ ಹಸಿರು ಮೇವು ಕೊಟ್ಟರೆ ಸಾಲದು ಅದರ ಜೊತೆಗೆ ಮಿನರಲ್ ಮಿಕ್ಸರ್, ಅಜೋಲಾದಂತಹ ಪೌಷ್ಟಿಕಾಂಶ ಭರಿತವಾದ ಆಹಾರವನ್ನೂ ರಾಸುಗಳಿಗೆ ನೀಡಬೇಕು. ಸಾಧ್ಯವಾದಷ್ಟು ಬೂಸ ಕೊಡುವುದನ್ನು ಕಡಿಮೆ ಮಾಡಿದರೆ, ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ಎಸ್.ಎನ್.ಎಫ್ ಉತ್ತಮವಾದಷ್ಟು ಉತ್ಪಾದಕರಿಗೆ ಲಾಭವಾಗುತ್ತದೆ. ರಾಸುಗಳನ್ನು ಸಾಧ್ಯವಾದಷ್ಟು ವಾತಾವರಣ ತಣ್ಣಗಿರುವ ಜಾಗದಲ್ಲಿ ಕಟ್ಟುವ ಮೂಲಕ ಅವುಗಳ ಆರೋಗ್ಯವನ್ನು ಕಾಪಾಡಿ, ಹಸುಗಳನ್ನು ಬಿಸಿಲಿನಲ್ಲಿ ಹೆಚ್ಚಿನ ಸಮಯ ಕಟ್ಟುವುದರಿಂದ ಹಾಲು ಡಿಗ್ರಿ ಬರುವುದಿಲ್ಲವೆಂದರು.
ಡೈರಿ ಮಾಜಿ ಅಧ್ಯಕ್ಷ ಹಾಗೂ ನಿರ್ದೇಶಕ ಅಶ್ವಥಪ್ಪ ಮಾತನಾಡಿ, ಬೇಸಿಗೆಯಲ್ಲಿ, ಕೃಷಿ, ತೋಟಗಾರಿಕೆ ಬೆಳೆಗಳು ಬೆಳೆಯುವುದಕ್ಕೆ ಕಷ್ಟಕರವಾದ ಪರಿಸ್ಥಿತಿ ಉಂಟಾದಾಗ, ರೈತರ ಜೀವನ ಸುಧಾರಣೆ ಮಾಡುವುದು ಹೈನುಗಾರಿಕೆ. ಇಂತಹ ಉಧ್ಯಮದಿಂದಲೇ ಇಂದು ರೈತರು, ನೆಮ್ಮದಿಯ ಜೀವನ ನಡೆಸುವಂತಾಗಿದೆ. ಇಂತಹ ಉದ್ಯಮದ ಕಡೆಗೆ ಅಸಡ್ಡೆ ಮನೋಭಾವನೆಯನ್ನು ಬಿಟ್ಟು, ರಾಸುಗಳ ಪಾಲನೆಯಲ್ಲಿ ತೊಡಗಿಸಿಕೊಳ್ಳಬೇಕು. ಒಕ್ಕೂಟದಿಂದ ಸಿಗುವಂತಹ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸಿ.ಪ್ರಮೀಳಾವೆಂಕಟೇಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಿ.ಸಿ.ವೆಂಕಟೇಶಪ್ಪ, ಸಂಘದ ಉಪಾಧ್ಯಕ್ಷ ಜಿ.ಎಂ.ಮುತ್ತೇಗೌಡ, ನಿರ್ದೇಶಕರಾದ ಜಿ.ಕೆ.ಶಿವಾನಂದ, ಜಿ.ಎಂ.ನಾಗರಾಜ್, ಕರಗಪ್ಪ, ಜಿ.ಎಂ.ಶಿವಾನಂದ, ಯಶೋಧಮ್ಮ, ಪಿಳ್ಳೇಗೌಡ, ನಂಜಮ್ಮ, ಮುಖ್ಯಕಾರ್ಯನಿರ್ವಾಹಕ ಬೈರೇಗೌಡ, ಅಂಬರೀಶ್ ಹಾಜರಿದ್ದರು.