Home News “ಉಳುಮೆ ಉತ್ಸವ” ಆಚರಣೆ

“ಉಳುಮೆ ಉತ್ಸವ” ಆಚರಣೆ

0
Sidlaghatta Appegowdanahalli GKVK Agriculture celebration event

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಸೋಮವಾರ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳ ತೊಂಬತ್ತು ದಿನಗಳ ಗ್ರಾಮೀಣ ಕಾರ್ಯಾನುಭವದ ಕೊನೆಯ ದಿನದ ಕೃಷಿ ವಸ್ತು ಪ್ರದರ್ಶನ ಮತ್ತು ವಿಚಾರಗೋಷ್ಠಿಯ “ಉಳುಮೆ ಉತ್ಸವ” ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಸದಸ್ಯ, ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಅಮರನಾರಾಯಣ ಮಾತನಾಡಿದರು.

ರೈತರೊಂದಿಗೆ ವಿದ್ಯಾರ್ಥಿಗಳು ಬೆರೆಯಬೇಕು, ಅವರ ಸಮಸ್ಯೆ ಆಲಿಸಬೇಕು. ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ನಾಲ್ಕು ಗೋಡೆಯ ಮಧ್ಯೆ ಕಲಿಯುವ ಕಲಿಕೆಯ ಜೊತೆಗೆ ರೈತರೊಂದಿಗೆ ಒಡನಾಡಿ ಕಲಿಯುವ ಕಲಿಕೆ ವಿದ್ಯಾರ್ಥಿಗಳ ಬದುಕಿಗೆ ಸಾಕಷ್ಟು ಮೂಲ ದ್ರವ್ಯ ಒದಗಿಸುತ್ತದೆ. “ರೈತರಿಂದ ಕಲಿಯುವುದು ಮತ್ತು ರೈತರಿಗೆ ಕಲಿಸುವುದು” ಎಂಬ ಉದ್ದೇಶದಿಂದ ಗ್ರಾಮೀಣ ಜಾಗೃತಿಯ ಕಾರ್ಯಾನುಭವದಲ್ಲಿ ಮೂರು ತಿಂಗಳು ಹಳ್ಳಿಯಲ್ಲಿ ವಾಸಿಸಿದ ವಿದ್ಯಾರ್ಥಿಗಳು ಅಪ್ಪೇಗೌಡನಹಳ್ಳಿಯ ಮನೆಮಕ್ಕಳಾಗಿದ್ದಾರೆ. ಅಪರಿಚಿತರಾಗಿ ಬಂದಿದ್ದ ವಿದ್ಯಾರ್ಥಿಗಳು ಪರಿಚಿತರಾಗಿ ಹೋಗುವಂತಹ ಈ ಅನುಭವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತದೆ. ಗ್ರಾಮದ ಹಿರಿಯರು, ರೈತರು ವಿದ್ಯಾರ್ಥಿಗಳಿಗೆ ಸಾಕಷ್ಟು ನೆರವಾಗಿದ್ದಾರೆ ಎಂದು ಅವರು ತಿಳಿಸಿದರು.

 ವಿದ್ಯಾರ್ಥಿಗಳ ಮೂರು ತಿಂಗಳ ಕಾರ್ಯಚಟುವಟಿಕೆಗಳ ಚಿತ್ರ ಸಹಿತ ಮಾಹಿತಿಯುಳ್ಳ ಪುಸ್ತಕವನ್ನು ಬಿಡುಗಡೆ ಮಾಡಿದ ಮೇಜರ್ ಸುನಿಲ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ತೊಂಬತ್ತು ದಿನಗಳ ಗ್ರಾಮ ಜೀವನದಲ್ಲಿ ಹತ್ತು ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ವಿದ್ಯಾರ್ಥಿಗಳು ಕೇವಲ ಕೃಷಿಯ ಬಗ್ಗೆ ಕಲಿತರೆ ಸಾಲದು. ಗ್ರಾಮೀಣ ಜನರ ಅಂತಃಕರಣ, ಸಹಾಯ ಮಾಡುವ ಗುಣ, ಅಪರಿಚಿತರಾದವರನ್ನೂ ಮನೆಮಕ್ಕಳಂತೆ ಆದರಿಸುವ ವಾತ್ಸಲ್ಯ ಮನೋಭಾವ, ಹಂಚಿಕೊಂಡು ತಿನ್ನುವ ಮನೋಧರ್ಮ, ಶ್ರಮ ಜೀವನ, ಅತಿ ಆಸೆ ಪಡದಿರುವ ಬುದ್ಧಿ, ಇವುಗಳನ್ನೆಲ್ಲಾ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

 ವಿದ್ಯಾರ್ಥಿಗಳ ತೊಂಬತ್ತು ದಿನಗಳ ಗ್ರಾಮೀಣ ಕಾರ್ಯಾನುಭವದ ಕೊನೆಯ ದಿನದಂದು ಅವರ ಗ್ರಾಮ ವಾಸದ ಅನುಭವವನ್ನು ವೈವಿಧ್ಯಮಯ ಬೆಳೆ, ವಸ್ತು ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ಪ್ರದರ್ಶಿಸಲಾಗಿತ್ತು. ಬೀಜೋಪಚಾರ, ಎರೆಹುಳುಗೊಬ್ಬರ, ರಸಮೇವಿನ ತಯಾರಿಕೆ, ಕೃಷಿಹೊಂಡ, ನೀರನ್ನು ಸದ್ಭಳಕೆ ಮಾಡಿಕೊಳ್ಳುವ ವಿಧಾನ, ಮಣ್ಣಿನ ಫಲವತ್ತತೆ ಕಾಪಾಡುವುದು, ಸೋಲಾರ್ ಶಕ್ತಿಯ ಸದ್ಭಳಕೆ ಮುಂತಾದವುಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರದರ್ಶಿಸಲಾಗಿತ್ತು. ವಿದ್ಯಾರ್ಥಿಗಳ ವಿವಿಧ ಮಳಿಗೆಗಳ ಮೂಲಕವೂ ರೈತರಿಗೆ ಹಾಗೂ ಸುತ್ತಮುತ್ತಲಿನ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಪ್ರಯತ್ನ ನಡೆಸಿದ್ದರು.

 ಸಾಂಪ್ರದಾಯಿಕ ಕೃಷಿ ಉಪಕರಣಗಳ ಪ್ರದರ್ಶನ, ವಿವಿಧ ಬೆಳೆಗಳ ತಳಿಗಳು ಸಾವಯವ ಉತ್ಪನ್ನಗಳು, ಅಪ್ಪೇಗೌಡನಹಳ್ಳಿ ಗ್ರಾಮ ನಕ್ಷೆ, ಗ್ರೀನ್ ಹೌಸ್, ಕೃಷಿ ವಿಶ್ವವಿದ್ಯಾಲಯದ ಕುರಿತು ಮಾಹಿತಿ, ಮನೆಯಲ್ಲೇ ಕುಟುಂಬಕ್ಕೆ ಬೇಕಾದ ತರಕಾರಿ ಬೆಳೆಯುವ ಬಗ್ಗೆ ಪ್ರಾತ್ಯಕ್ಷಿಕೆ, ಬೆಳೆಗಳಿಗೆ ತಗುಲುವ ರೋಗಗಳ ಹತೋಟಿ, ಕೃಷಿ ಉತ್ಪನ್ನಗಳಿಂದ ತಯಾರಿಸಬಹುದಾದ ಮೌಲ್ಯವರ್ಧಿತ ಪದಾರ್ಥಗಳು ಮುಂತಾದವುಗಳನ್ನು ಪ್ರದರ್ಶಿಸಲಾಗಿತ್ತು.

 ಜಮುನಾಪುರಿ ಮೇಕೆಗಳು, ವಿವಿಧ ಕುರಿ ತಳಿಗಳಾದ ಡಾಲ್ಪರ್, ಚಳ್ಳಕೆರೆ, ಕೋಟಾವಾಡಿ, ಬನ್ನೂರು, ಮುರ್ರಾ ಎಮ್ಮೆ, ಹಳ್ಳಿಕಾರು ಎತ್ತುಗಳು, ಮಲನಾಡು ಗಿಡ್ಡ ಹಸು, ನಾಟಿ ಕೋಳಿಗಳನ್ನು ಸಹ ಪ್ರದರ್ಶಿಸಲಾಗಿತ್ತು.

 ರೇಷ್ಮೆ, ಕೃಶಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯ ವತಿಯಿಂದ ಮಳಿಗೆಗಳನ್ನು ಹಾಕಲಾಗಿದ್ದು, ತಮ್ಮ ತಮ್ಮ ಇಲಾಖೆಯ ಮಾಹಿತಿಯನ್ನು ರೈತರಿಗೆ ನೀಡಲಾಗುತ್ತಿತ್ತು. ಆರೋಗ್ಯ ಇಲಾಖೆಯಿಂದ ಸ್ವಾಬ್ ಪರೀಕ್ಷೆ, ಬಿಪಿ ಮತ್ತು ಮಧುಮೇಹ ಪರೀಕ್ಷೆ ನಡೆಸಿದ್ದಲ್ಲದೆ, ಕೊರೊನಾ ಲಸಿಕೆ ಕೂಡ ಹಾಕಲಾಯಿತು.  

 ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಬಿ.ಶಿವಕುಮಾರ್, ಕೃಷಿ ವಿಶ್ವವಿದ್ಯಾನಿಲಯದ ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಹಾಗೂ ಶಿಬಿರಾಧಿಕಾರಿ ಡಾ.ವೈ.ಎನ್.ಶಿವಲಿಂಗಯ್ಯ, ವಿದ್ಯಾರ್ಥಿ ಕಲ್ಯಾಣ ಮತ್ತು ಹಣಕಾಸು ನಿಯಂತ್ರಣಾಧಿಕಾರಿ ಡಾ.ಎಸ್.ವಿ.ಸುರೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿರೆಡ್ಡಿ, ಕ್ಷೇತ್ರಾಧಿಕಾರಿ ಚೇತನ್, ತೋಟಗಾರಿಕಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎ.ವಿದ್ಯಾ, ಸಸ್ಯರೋಗ ಶಾಸ್ತ್ರ ವಿಭಾಗದ ಡಾ.ಬಿ.ಎಸ್.ಚೇತನಾ, ನಂದಿ ಗಿರಿಧಾಮದ ತೋಟಗಾರಿಕಾ ಇಲಾಖೆಯ ವಿಶೇಷಾಧಿಕಾರಿ ಎನ್.ಗೋಪಾಲ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ಪಶುವೈದ್ಯಾಧಿಕಾರಿ ಡಾ.ಬಿ.ಕೆ.ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಿ.ವಿ.ಮಹೇಶ್, ನಿವೃತ್ತ ವಿಸ್ತರಣಾ ನಿರ್ದೇಶಕ ಡಾ.ಎಂ.ಬೈರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಲಕ್ಷ್ಮೀನಾರಾಯಣರೆಡ್ಡಿ, ಕೃಷಿ ಅಧಿಕಾರಿ ಪ್ರವೀಣ್ ಕುಮಾರ್, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗರತ್ನ ಮುನೀಂದ್ರ, ದ್ಯಾವಪ್ಪ, ಮಂಜುಳಮ್ಮ ಮುನಿವೆಂಕಟಸ್ವಾಮಿ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version