Home News ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ: ಕೃಷಿ ವಿದ್ಯಾರ್ಥಿಗಳಿಂದ ಸಾಮಾಜಿಕ, ಋತುಮಾನ ನಕ್ಷೆ ಪ್ರದರ್ಶನ

ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ: ಕೃಷಿ ವಿದ್ಯಾರ್ಥಿಗಳಿಂದ ಸಾಮಾಜಿಕ, ಋತುಮಾನ ನಕ್ಷೆ ಪ್ರದರ್ಶನ

0

Sidlaghatta : ಗ್ರಾಮೀಣ ಭಾಗದ ಕೃಷಿ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಅರಿಯುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (GKVK) ಅಂತಿಮ ವರ್ಷದ ವಿದ್ಯಾರ್ಥಿಗಳು ಕೈಗೊಂಡಿರುವ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮವು ಶಿಡ್ಲಘಟ್ಟ ತಾಲ್ಲೂಕಿನ ಕೆ.ಮುತ್ತಕದಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆಯಿತು. ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಾಮಾಜಿಕ ಹಾಗೂ ಋತುಮಾನ ನಕ್ಷೆಗಳನ್ನು ಗ್ರಾಮಸ್ಥರ ಮುಂದೆ ಪ್ರದರ್ಶಿಸಿ, ರೈತರೊಂದಿಗೆ ಸಂವಾದ ನಡೆಸಿದರು ಎಂದು ಕೆಎಂಎಫ್ ಮಾಜಿ ನಿರ್ದೇಶಕ ಶ್ರೀನಿವಾಸ ರಾಮಯ್ಯ ತಿಳಿಸಿದರು.

ಗ್ರಾಮದ ಭಜನಾ ಮಂದಿರದ ಬಳಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಗ್ರಾಮಸ್ಥರೊಂದಿಗೆ ಬೆರೆತು ಗ್ರಾಮದ ಸಾಮಾಜಿಕ ವ್ಯವಸ್ಥೆ, ಕೃಷಿ ಚಟುವಟಿಕೆಗಳು, ಸಂಪನ್ಮೂಲಗಳು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನೇರವಾಗಿ ಅರಿಯುತ್ತಿರುವುದು ಶ್ಲಾಘನೀಯ ಎಂದರು.

ಸಾಮಾಜಿಕ ಮತ್ತು ಋತುಮಾನ ನಕ್ಷೆಯಲ್ಲಿ ಏನಿದೆ?

ವಿದ್ಯಾರ್ಥಿಗಳು ಸಿದ್ಧಪಡಿಸಿದ ಸಾಮಾಜಿಕ ನಕ್ಷೆಯಲ್ಲಿ ಗ್ರಾಮದ ಮನೆಗಳು, ಕುಟುಂಬಗಳ ಹಂಚಿಕೆ, ಶಾಲೆ, ದೇವಾಲಯ, ಅಂಗನವಾಡಿ, ಕುಡಿಯುವ ನೀರಿನ ಮೂಲ ಸೇರಿದಂತೆ ವಿವಿಧ ಸಾಮಾಜಿಕ ಸಂಪನ್ಮೂಲಗಳನ್ನು ಗುರುತಿಸಲಾಗಿದೆ. ಋತುಮಾನ ನಕ್ಷೆ ಮೂಲಕ ವಿವಿಧ ಋತುಗಳಲ್ಲಿ ಹವಾಮಾನ ಪರಿಸ್ಥಿತಿ, ಮಳೆಯ ಪ್ರಮಾಣ, ಬಿತ್ತನೆ ಮತ್ತು ಕೊಯ್ಲಿನ ಅವಧಿ, ನೀರಿನ ಲಭ್ಯತೆ ಹಾಗೂ ಕೃಷಿ ಚಟುವಟಿಕೆಗಳಲ್ಲಾಗುವ ಬದಲಾವಣೆಗಳನ್ನು ಗುರುತಿಸಲಾಗಿದೆ. ಈ ಮಾಹಿತಿ ಆಧರಿಸಿ ರೈತರು ಕಾಲಮಾನಕ್ಕೆ ಅನುಗುಣವಾಗಿ ಬೆಳೆ ಆಯ್ಕೆ ಮಾಡಿಕೊಂಡು ಕೃಷಿಯಲ್ಲಿನ ಅಪಾಯ ಕಡಿಮೆ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಸಲಹೆ ನೀಡಿದರು.

ಗ್ರಾಮದ ಪ್ರಮುಖ ರಸ್ತೆಗಳು, ಸಮೀಪದ ಆಸ್ಪತ್ರೆ, ಗ್ರಾಮ ಪಂಚಾಯಿತಿ, ಗೂಡು ಮಾರುಕಟ್ಟೆ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳನ್ನು ನಕ್ಷೆಯಲ್ಲಿ ಗುರುತಿಸಿ, ಅವುಗಳ ಅಂತರದ ಮಾಹಿತಿಯನ್ನೂ ಗ್ರಾಮಸ್ಥರಿಗೆ ನೀಡಲಾಯಿತು. ಗ್ರಾಮದ ಪರಿಸರಕ್ಕೆ ಅನುಗುಣವಾಗಿ ಹೂವು, ಹಣ್ಣು, ತರಕಾರಿ ಸೇರಿದಂತೆ ವಿವಿಧ ನೈಸರ್ಗಿಕ ವಸ್ತುಗಳನ್ನು ಬಳಸಿ ವಿದ್ಯಾರ್ಥಿಗಳು ಆಕರ್ಷಕ ಮಾದರಿಗಳನ್ನೂ ನಿರ್ಮಿಸಿದ್ದರು.

ಕಾಲಮಾನ, ಹವಾಮಾನ ಪರಿಸ್ಥಿತಿ ಹಾಗೂ ಮಾರುಕಟ್ಟೆಯ ಏರಿಳಿತಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಬೆಳೆ ಪದ್ಧತಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳು ರೈತರಿಗೆ ಸಲಹೆ ನೀಡಿದರು. ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯದೆ ಬೆಳೆ ಪರಿವರ್ತನೆ ಪದ್ಧತಿ ಅನುಸರಿಸುವುದರಿಂದ ಮಣ್ಣಿನ ಫಲವತ್ತತೆ ಕಾಪಾಡುವುದರ ಜತೆಗೆ ರೋಗ ಮತ್ತು ಕೀಟಬಾಧೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳಾದ ಪೂಜಾ, ಲಕ್ಷ್ಮೀ, ಮಾದೇಶ, ಮಾಳವಿಕ, ರಾಹುಲ್, ಸಂದೀಪ್, ಪ್ರಜ್ವಲ್, ಪವನ್ ಹಾಗೂ ಗ್ರಾಮಸ್ಥರಾದ ಕೃಷ್ಣಪ್ಪ, ಮಂಜುನಾಥ್, ಪ್ರಕಾಶ್, ರಾಜಣ್ಣ, ಕೇಶವ, ಮುನಿಕೃಷ್ಣ ಉಪಸ್ಥಿತರಿದ್ದರು.

In English: Final-year students from the University of Agricultural Sciences, Bengaluru (GKVK) held a rural immersion program at K. Muttakadahalli village as part of their annual field program, presenting social and seasonal resource maps to residents and advising farmers on crop rotation and season-appropriate crop choices to reduce risk from weather and market fluctuations.

ಈ ಕಾರ್ಯಕ್ರಮದ ಈ ವರ್ಷದ ಆರಂಭದ ಕುರಿತ ವರದಿಯನ್ನೂ ನೋಡಿ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version