
Sidlaghatta : ಹದಿಹರೆಯದ ಯುವಕರು ಸಂಚಾರಿ ನಿಯಮಗಳ ಉಲ್ಲಂಘನೆ ಮಾಡುವುದು ಕಂಡುಬರುತ್ತಿದೆ. ಆದ್ದರಿಂದ ಕಾನೂನುಗಳ ಬಗ್ಗೆ ತಿಳಿದುಕೊಂಡು ಶಿಸ್ತುಬದ್ಧ ಜೀವನ ನಡೆಸಬೇಕು. ವಿದ್ಯಾರ್ಥಿನಿಯರು ತಮ್ಮ ರಕ್ಷಣೆಗಾಗಿ ಇರುವ ಪೋಕ್ಸೋ ಕಾಯ್ದೆ ಮತ್ತು ಮಹಿಳಾ ಸಂರಕ್ಷಣಾ ಕಾನೂನುಗಳ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ, ಪೊಲೀಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶದ ಸಂವಿಧಾನ ಮತ್ತು ಅದರ ಆಶಯಗಳನ್ನು ಗೌರವಿಸಬೇಕು. ಕಾನೂನು ಕೇವಲ ಶಿಕ್ಷೆ ನೀಡಲಿಕ್ಕಲ್ಲ, ಅದು ಸಮಾಜದಲ್ಲಿ ಶಿಸ್ತು ಮತ್ತು ಶಾಂತಿ ಕಾಪಾಡಲು ಇರುವ ರಕ್ಷಾಕವಚ. ಹದಿಹರೆಯದಲ್ಲಿ ವೇಗದ ಚಾಲನೆ ಮತ್ತು ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವುದು ಅಪರಾಧ. ಸಂಚಾರಿ ನಿಯಮಗಳನ್ನು ಪಾಲಿಸುವುದು ನಿಮ್ಮ ಮತ್ತು ಇತರರ ಜೀವಕ್ಕೆ ಸುರಕ್ಷಿತ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎಚ್ಚರಿಕೆ ಅಗತ್ಯ. ಅಪರಿಚಿತರ ಲಿಂಕ್ಗಳನ್ನು ಕ್ಲಿಕ್ ಮಾಡುವುದು ಅಥವಾ ಸುಳ್ಳು ಸುದ್ದಿಗಳನ್ನು ಹರಡುವುದು ಕಾನೂನು ಬಾಹಿರ ಚಟುವಟಿಕೆಯಾಗಬಹುದು. ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟವು ಗಂಭೀರ ಅಪರಾಧವಾಗಿದ್ದು, ಇದು ಜೀವನವನ್ನೇ ಹಾಳು ಮಾಡುತ್ತದೆ. ಇಂತಹ ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಸ್.ಸುಕನ್ಯ, ಅಪರ ಸಿವೀಲ್ ನ್ಯಾಯಾಧೀಶೆ ಎಸ್. ರಂಜಿತ, ಪ್ರಾಂಶುಪಾಲ ವೆಂಕಟಶಿವರೆಡ್ಡಿ, ಸರ್ಕಾರಿ ಅಭಿಯೋಜಕ ಮೊಹಮ್ಮದ್ ಖಾಜಾ, ವಕೀಲ ಸಂಘದ ತಾಲ್ಲೂಕು ಅಧ್ಯಕ್ಷ ಎ. ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿಶಾಮಿರೆಡ್ಡಿ, ಕಾರ್ಯದರ್ಶಿ ಸಿ.ಜಿ ಭಾಸ್ಕರ್, ಕಾರ್ಮಿಕ ಇಲಾಖೆ ನಿರೀಕ್ಷಕಿ ವಿಜಯಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ವಿದ್ಯಾ ವಸ್ತ್ರದ್, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಎಚ್.ಸಿ.ಮುನಿರಾಜು, ಉಪನ್ಯಾಸಕರಾದ ಡಿ.ಲಕ್ಷ್ಮಯ್ಯ, ಶ್ರೀಕೃಷ್ಣ ಪರಮಾತ್ಮ, ವೈಷ್ಣವಿ, ಶ್ರೀಧರ್, ನಾಗಾರ್ಜುನ, ನಹೀದಾ ಬೇಗಂ ಧನುಷ್ ರೆಡ್ಡಿ ಹಾಜರಿದ್ದರು.