![25NovSd2a Sidlaghatta Jangamakote SKDRDP Water Purification Unit](https://www.sidlaghatta.com/wp-content/uploads/2022/12/25NovSd2a.jpg)
Jangamakote, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಂಗಮಕೋಟೆ ಗ್ರಾಮ ಪಂಚಾಯಿತಿ ಸಹಭಾಗಿತ್ವದಲ್ಲಿ ನೂತನವಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಲ್ ಎಚ್ ಮಂಜುನಾಥ್ ರವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜಗತ್ತಿನಲ್ಲಿ ಜೀವಿಗಳಿಗೆ ಗಾಳಿಯಂತೆ ನೀರೂ ಅತ್ಯಾವಶ್ಯಕ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಶುದ್ಧ ನೀರನ್ನು ಕುಡಿಯಿರಿ. ಫ್ಲೋರೈಡ್ ಯುಕ್ತ ನೀರಿನಿಂದ ಮೂಳೆ ಸವೆತ ಹಲ್ಲು ಕಳೆ ಕಟ್ಟುವುದು ಗರ್ಭಿಣಿಯರಿಗೆ ಸಮಸ್ಯೆಗಳು ಕಂಡುಬರುತ್ತದೆ. ಜನರಿಗೆ ಕುಡಿಯಲು ಉತ್ತಮ ಶುದ್ಧ ನೀರು ಅವಶ್ಯಕತೆ ಇದ್ದು ಗ್ರಾಮ ಪಂಚಾಯತ್ ಸಹಕಾರ ಪಡೆದು ಶುದ್ಧ ಕುಡಿಯುವ ನೀರಿನ ಘಟಕ ರಚನೆ ಮಾಡಿದ್ದು ಗ್ರಾಮಸ್ಥರು ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ್ ರವರು ಮಾತನಾಡಿ ರಾಷ್ಟ್ರಕ್ಕೆ ಒಬ್ಬರೇ ಪ್ರಧಾನಿ, ರಾಜ್ಯಕ್ಕೆ ಒಬ್ಬರೇ ಮುಖ್ಯಮಂತ್ರಿಯಂತೆ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಯವರು ಕೂಡ ಒಬ್ಬರೇ. ತಾನು ಬೆಳೆಯುವುದಲ್ಲದೆ ಇಡೀ ಸಮಾಜವನ್ನೇ ಮೇಲೆತ್ತುವ ಸಂಕಲ್ಪವನ್ನು ತೆಗೆದುಕೊಂಡಿರುವ ಪೂಜ್ಯರಿಗೆ ಧನ್ಯವಾದವನ್ನು ಅರ್ಪಿಸುತ್ತೇವೆ ಎಂದು ತಿಳಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಉತ್ತಮ ಯೋಜನೆಗಳನ್ನು ಹಾಕಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಎಲ್ ಎಚ್ ಮಂಜುನಾಥ್ ರವರ ಕಾರ್ಯವೈಕರಿ ಯನ್ನು ಗುರುತಿಸಿ ರಾಜ್ಯ ಸರ್ಕಾರವು ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಿದ್ದು ನಮ್ಮ ನಾಡಿಗೆ ಒಂದು ಹಿರಿಮೆ ಆಗಿದೆ ಎಂದು ತಿಳಿಸಿದರು.
ಈ ಸಂದರ್ಭ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಎಂ, ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಸಿ ಎಸ್, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್, ಗ್ರಾಮ ಪಂಚಾಯತ್ ನ ಎಲ್ಲಾ ಸದಸ್ಯರು, ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.