ತಾಲ್ಲೂಕಿನ ವರದನಾಯಕನಹಳ್ಳಿ ಗೇಟ್ ಬಳಿ ಡಾ. ಬಿ.ಆರ್ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಸಮತಾ ಸೈನಿಕ ದಳ ವತಿಯಿಂದ ಫ್ಲೆಕ್ಸ್ ಹಾಕುವ ಮೂಲಕ ಕೋರೆಗಾಂವ್ ವಿಜಯೋತ್ಸವ ಮತ್ತು ಮಹಾನಾಯಕ ಡಾ. ಬಿ.ಆರ್ ಅಂಬೇಡ್ಕರ್ ಧಾರಾವಾಹಿಯನ್ನು ಬೆಂಬಲಿಸಿ, ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಮತಾ ಸೈನಿಕ ದಳ ತಾಲ್ಲೂಕು ಅಧ್ಯಕ್ಷ ಈ ಧರೆ ಪ್ರಕಾಶ್ ಮಾತನಾಡಿದರು.
ಯುವ ಪೀಳಿಗೆ “ಮಹಾನಾಯಕ ಡಾ.ಬಿ.ಆರ್ ಅಂಬೇಡ್ಕರ್” ಧಾರಾವಾಹಿಯನ್ನು ಪ್ರತಿ ಶನಿವಾರ ಮತ್ತು ಭಾನುವಾರ ವೀಕ್ಷಣೆ ಮಾಡುವ ಮೂಲಕ ಸಿನಿಮಾ ಹಾವಳಿಯಿಂದ ಹೊರಬಂದು ಅಭಿಮಾನದಿಂದ ಫ್ಲೆಕ್ಸ್ ಹಾಕಿ ಜನ ಸಾಮಾನ್ಯರಿಗೆ ಜಾಗೃತಿ ಮೂಡಿಸಲು ಮುಂದಾಗಿರುವುದು ಹೆಮ್ಮೆ ಪಡುವಂತ ಸಂಗತಿಯಾಗಿದೆ ಎಂದು ಅವರು ತಿಳಿಸಿದರು.
1818 ರಲ್ಲಿ ನಡೆದ ಭೀಮಾ ಕೋರೆಗಾಂವ್ ಯುದ್ಧವು ಅಸಮಾನತೆಯ ವಿರುದ್ಧ ನಡೆದ ಕ್ರಾಂತಿಕಾರಿ ಯುದ್ಧವಾಗಿದೆ. ಈ ಸತ್ಯವನ್ನು ಯಾವುದೇ ಪಠ್ಯ ಪುಸ್ತಕಗಳಲ್ಲಿ ಬರದಂತೆ ದೂರ ಇಟ್ಟಿರುವುದು ದುರಂತದ ಕೆಲಸವಾಗಿದೆ. ಪ್ರತಿಯೊಬ್ಬರೂ ಕೋರೆಗಾಂವ್ ಇತಿಹಾಸದ ಸತ್ಯವನ್ನು ಅರಿಯಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಸಿ ವಿಭಾಗ ಕೆಪಿಸಿಸಿ ರಾಜ್ಯ ಸಂಚಾಲಕ ಗುಡಿಹಳ್ಳಿ ನಾರಾಯಣಸ್ವಾಮಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ದ್ಯಾವಣ್ಣ, ಗ್ರಾಮ ಪಂಚಾಯಿತಿ ಸದಸ್ಯ ಮುನಿರೆಡ್ಡಿ, ತಾತಹಳ್ಳಿ ನಾರಾಯಣಸ್ವಾಮಿ, ಸೊಣ್ಣೇನಹಳ್ಳಿ ವೆಂಕಟೇಶ್, ಪಿಂಡಿಪಾಪನಹಳ್ಳಿ ಮುನಿಆಂಜಿನಪ್ಪ, ಅಬ್ಲೂಡು ಮಂಜುನಾಥ್, ರಾಮಾಂಜಿನಪ್ಪ, ತಾತಹಳ್ಳಿ ಗಂಗಾಧರ್, ವರದನಾಯಕನಹಳ್ಳಿ ವಿ.ಜಿ ಕೃಷ್ಣಮೂರ್ತಿ, ನರಸಿಂಹ, ಮುನಿರಾಜು, ಚಲಪತಿ, ಮಧು, ಮುನಿರೆಡ್ಡಿ, ಮಂಜುನಾಥ್, ಮೂರ್ತಿ ಹಾಜರಿದ್ದರು.