32.1 C
Sidlaghatta
Friday, March 29, 2024

KSMB ಮೂಲಕ ರೀಲರುಗಳಿಗೆ ನೆರವು : ಅಧ್ಯಕ್ಷರಿಂದ ಭರವಸೆ

- Advertisement -
- Advertisement -

ನಗರದ ಸರ್ಕಾರಿ ರೇಷ್ಮೆ ಬಿತ್ತನೆ ಕೋಠಿಗೆ ಸೋಮವಾರ ಭೇಟಿ ನೀಡಿದ್ದ ಅವರು ರೇಷ್ಮೆ ನೂಲು ಬಿಚ್ಚಾಣಿಕೆದಾರರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ.ವಿ.ಅಮರಶೆಟ್ಟಿ ಮಾತನಾಡಿದರು.

 ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಗೆ ರೈತರು, ನೂಲು ಬಿಚ್ಚಾಣಿಕೆದಾರರು(ರೀಲರುಗಳು), ನೂಲು ಹುರಿಕಾರರು (ಟ್ವಿಸ್ಟರುಗಳು) ಹಾಗೂ ನೇಯ್ಗೆಯವರು ನಾಲ್ಕು ಸ್ತಂಭಗಳಿದ್ದಂತೆ. ಎಲ್ಲರ ಸಹಕಾರವಿದ್ದಾಗ ಮಾತ್ರ ಸಂಸ್ಥೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು. ಶಿಡ್ಲಘಟ್ಟದ ರೇಷ್ಮೆ ಬಿಚ್ಚಾಣಿಕೆದಾರರು ರೇಷ್ಮೆ ದರ ನಿಗದಿ ಸೇರಿದಂತೆ ಕಚ್ಚಾ ರೇಷ್ಮೆ ಮಾರಾಟ ಮಾಡಲು ಅನುಭವಿಸುತ್ತಿರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

 ಕೆಎಸ್‌ಎಂಬಿ ಅಧ್ಯಕ್ಷರಾದ ನಂತರ ರಾಜ್ಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿರುವ ನೇಯ್ಗೆ ಕೇಂದ್ರಗಳಿಗೆ ಭೇಟಿ ನೀಡಿ ಅವರ ಬೇಡಿಕೆಗಳನ್ನು ಆಲಿಸಿದ್ದೇನೆ. ಅವರ ಬೇಡಿಕೆಗನುಸಾರವಾಗಿ ರೇಷ್ಮೆ ಪೂರೈಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಹಿಂದೆ ಅಧಿಕಾರಿಗಳಲ್ಲಿ ಇದೊಂದು ಲಾಭವಿಲ್ಲದ ಸಂಸ್ಥೆ ಎಂಬ ಮನೋಭಾವ ಇತ್ತು. ಲಾಭವಿಲ್ಲದ ಸಂಸ್ಥೆ ಸರ್ಕಾರದ ಅಧೀನದಲ್ಲಿ ಏಕಿರಬೇಕು. ಇಂತಹ ಮನೋಭಾವನೆಯನ್ನು ಅಧಿಕಾರಿಗಳು ಬಿಡಬೇಕು ಎಂದರು.

 ಶಿಡ್ಲಘಟ್ಟದ ರೇಷ್ಮೆಗೆ ದೇಶಾದ್ಯಂತ ಭಾರೀ ಬೇಡಿಕೆಯಿದೆ. ರಾಜ್ಯದ ವಿವಿದೆಡೆ ಇರುವ ನೇಯ್ಗೆಯವರಿಗೆ ಸುಲಭವಾಗಿ ಇಲ್ಲಿನ ರೇಷ್ಮೆಯನ್ನು ತಲುಪಿಸಲು ಕೆಎಸ್‌ಎಂಬಿ ಮುಂದಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಈಗಾಗಲೇ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆಯಿಟ್ಟಿದ್ದು ಅನುದಾನ ಸಿಗುವ ಭರವಸೆಯಿದೆ. ರೇಷ್ಮೆ ದರ ನಿಗದಿಪಡಿಸಲು ಸಮಿತಿಯೊಂದನ್ನು ರಚಿಸುವುದು ಹಾಗೂ ಕೆಎಸ್‌ಎಂಬಿ ಬ್ರಾಂಡಿಂಗ್ ಹಾಗೂ ಟ್ರೇಡಿಂಗ್ ಮಾಡಲು ಉದ್ದೇಶಿಸಲಾಗಿದೆ ಎಂದರು.

 ಕೇಂದ್ರ ರೇಷ್ಮೆ ಮಂಡಳಿಯ ಜಂಟಿ ನಿರ್ದೇಶಕ ಉದಯ್.ಸಿ.ಜವಳಿ ಮಾತನಾಡಿ, ಕೆಎಸ್‌ಎಂಬಿ ಅಧ್ಯಕ್ಷರೊಂದಿಗೆ ರಾಜ್ಯಾದ್ಯಂತ ಈಗಾಗಲೇ ಸಂಚರಿಸಿ ನೇಯ್ಗೆಯವರನ್ನು ಭೇಟಿ ಮಾಡಿ ಕೆಎಸ್‌ಎಂಬಿ ಮೂಲಕವೇ ರೇಷ್ಮೆ ಖರೀದಿಸಲು ಮನವರಿಕೆ ಮಾಡಲಾಗಿದೆ ಎಂದರು.

 ಈ ಸಂದರ್ಭದಲ್ಲಿ ಶಿಡ್ಲಘಟ್ಟ ತಾಲ್ಲೂಕು ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಕೊರೋನಾ ಅವಧಿಯಲ್ಲಿ ರೀಲರ್‌ಗಳ ಹಿತದೃಷ್ಠಿಯಿಂದ ರೇಷ್ಮೆ ಖರೀದಿಸಿದ ರೀತಿಯಲ್ಲಿಯೇ ಪ್ರತಿನಿತ್ಯ ರೇಷ್ಮೆ ಖರೀದಿಸಬೇಕು. ಗುಣಮಟ್ಟದ ಆಧಾರದಲ್ಲಿ ರೇಷ್ಮೆ ದರ ನಿಗದಿಪಡಿಸಿ ಖರೀದಿಸಬೇಕು. ಈ ಹಿಂದೆ ಇದ್ದ ರೇಷ್ಮೆ ಗಿರವಿ ಇಟ್ಟುಕೊಳ್ಳುವ ಪ್ರಕ್ರಿಯೆ ಮುಂದುವರೆಸಬೇಕು. ಒತ್ತೆಯ ಮೇಲಿನ ಬಡ್ಡಿ ಕಡಿಮೆ ಮಾಡುವುದು ಸೇರಿದಂತೆ ಸಮಯವನ್ನು ವಿಸ್ತರಿಸಬೇಕು ಎಂದು ಮನವಿಯನ್ನು ಸಲ್ಲಿಸಿದರು.

 ಈ ಸಂದರ್ಭದಲ್ಲಿ ರೇಷ್ಮೆ ಗೂಡು ಮಾರುಕಟ್ಟೆಯ ಉಪನಿರ್ದೇಶಕ ಸುಭಾಶ್ ಸಾತೇನಹಳ್ಳಿ, ಸಹಾಯಕ ನಿರ್ದೇಶಕ ರಾಮ್‌ಕುಮಾರ್, ಕಾಂತರಾಜು, ಮಹೇಶ್, ರೀಲರ್‌ಗಳಾದ ಅನ್ಸರ್‌ಖಾನ್, ಅಜೀಜ್ ಸಾಬ್,ಶ್ರೀನಿವಾಸ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಸಿ.ನಂದೀಶ್ ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!