
Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಲ್ಲಿರುವ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ 5ನೇ ವಾರ್ಷಿಕೋತ್ಸವ ಅಂಗವಾಗಿ ಕರ್ನಾಟಕ ಅಂಧ ಮಕ್ಕಳ ಕ್ಷೇಮಾಭಿವೃದ್ದಿ ಸಂಸ್ಥೆಯ 35 ಅಂಧ ಮಕ್ಕಳಿಗೆ ಪ್ರವಾಸಕ್ಕೆ ವ್ಯವಸ್ಥೆ ಮಾಡಿ ಅವರಿಗೆ ಪ್ರವಾಸದ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರದ ಮುಖ್ಯಸ್ಥೆ ಎಂ.ಜಿ.ಕಲಾವತಿ, ನಾವು ನಮ್ಮ ನಾಡು, ದೇಶದ ಪ್ರೇಕ್ಷಣಿಯ, ಧಾರ್ಮಿಕ, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ, ಆಯಾ ಸ್ಥಳದ ಮಹತ್ವವನ್ನು ತಿಳಿದುಕೊಳ್ಳುವುದರಿಂದ ನಮ್ಮ ನಾಡು ನುಡಿ ಇತಿಹಾಸದ ಬಗ್ಗೆ ಹೆಚ್ಚಿನ ಜ್ಞಾನ ಸಿಗಲಿದೆ ಎಂದು ತಿಳಿಸಿದರು.
ನಮ್ಮ ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದು ಎಲ್ಲರ ಸಹಕಾರದಿಂದ ಐದು ವರ್ಷ ಪೂರೈಸಿದೆ. ಇದರ ಜ್ಞಾಪಕಾರ್ಥ 35 ಮಂದಿ ಅಂಧ ಮಕ್ಕಳಿಗೆ ಪ್ರವಾಸದ ಪೂರ್ಣ ವೆಚ್ಚವನ್ನ ಭರಿಸಿ ಪ್ರವಾಸಕ್ಕೆ ಕಳುಹಿಸುತ್ತಿದ್ದೇವೆ ಎಂದರು.
ಭದ್ರಾ ವೈಲ್ಡ್ ಲೈಫ್ ಸಫಾರಿ, ಮಲ್ಪೆ ಬೀಚ್, ಕೊಲ್ಲೂರು ಮೂಕಾಂಬಿಕೆ ದೇವಾಲಯ ಸೇರಿದಂತೆ ಹಲವು ಪ್ರೇಕ್ಷಣೀಯ, ಧಾರ್ಮಿಕ ಕ್ಷೇತ್ರಗಳಿಗೆ 4 ದಿನಗಳ ಕಾಲ ತಗಲುವ ಸಂಪೂರ್ಣ ವೆಚ್ಚವನ್ನು ಭರಿಸಿ ಕಳುಹಿಸುತ್ತಿದ್ದು ನಿಮ್ಮ ಪ್ರವಾಸ ಸುಖಕರವಾಗಿರಲಿ ಎಂದು ಹಾರೈಸಿದರು.
ಪ್ರವಾಸಕ್ಕೆ ತೆರಳಿದ ಎಲ್ಲರಿಗೂ ಪ್ರವಾಸಿ ಕಿಟ್ ವಿತರಿಸಿದರು. ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರದ ಜಯಾಕ್, ವಿಶ್ವನಾಥ್, ಮನೋಜ್, ಅಂಧ ಮಕ್ಕಳ ಶಾಲೆಯ ಮಂಜುನಾಥ್ ಹಾಗೂ ಸಿಬ್ಬಂದಿ ಹಾಜರಿದ್ದರು.