Home News ರೈಲ್ವೆ ಕೆಳಸೇತುವೆಯಲ್ಲಿ ಕಿತ್ತು ಹೋದ ಕಬ್ಬಿಣದ ಸರಳುಗಳಿಂದ ಅಪಘಾತ

ರೈಲ್ವೆ ಕೆಳಸೇತುವೆಯಲ್ಲಿ ಕಿತ್ತು ಹೋದ ಕಬ್ಬಿಣದ ಸರಳುಗಳಿಂದ ಅಪಘಾತ

0
Railway underground iron drain closure Accidents

Sidlaghatta : ಶಿಡ್ಲಘಟ್ಟ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ-234ರ ವೀರಾಪುರ ಬಳಿಯ ರೈಲ್ವೆ ಕೆಳಸೇತುವೆ ಬಳಿ ಕಿತ್ತು ಹೋದ ಕಬ್ಬಿಣದ ಸರಳುಗಳಿಂದಾಗಿ ಗುರುವಾರ ರಾತ್ರಿ ಅಪಘಾತ ನಡೆದಿದ್ದು ಚಿಂತಾಮಣಿಯ ಮೈಲಾಪುರದ ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಳೆದ ಒಂದು ವರ್ಷದಲ್ಲಿ ಈ ಜಾಗದಲ್ಲಿ ಸುಮಾರು 10ಕ್ಕೂ ಹೆಚ್ಚು ಅಪಘಾತಗಳು ನಡೆದಿವೆ.

ರೈಲ್ವೇ ಕೆಳಸೇತುವೆಯಲ್ಲಿ ರಸ್ತೆ ಮೇಲೆ ಬಿದ್ದ ಮಳೆ ನೀರು ಹರಿದು ಹೋಗಲು ನಿರ್ಮಿಸಿರುವ ಚರಂಡಿಯ ಕಬ್ಬಿಣದ ಸರಳುಗಳು ಕಿತ್ತು ಬಂದಿದ್ದು ಕಿತ್ತು ಬಂದ ಸರಳುಗಳಿಗೆ ಸಿಲುಕಿಕೊಂಡು ಅನೇಕ ಅಪಘಾತಗಳು ನಡೆದಿವೆ. ಕಳೆದೊಂದು ವರ್ಷದಿಂದ ಸುಮಾರು 10ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ.

ಕಬ್ಬಿಣದ ಸರಳುಗಳು ಕಿತ್ತು ಬಂದಿದ್ದು ಈ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮೃತ್ಯುವಿಗೆ ಆಹ್ವಾನ ನೀಡಿದಂತೆ ಇದೆಯಾದರೂ ಹೆದ್ದಾರಿ ಪ್ರಾಧಿಕಾರದವರು ನಮಗೂ ಇದಕ್ಕೆ ಸಂಬಂಧ ಇಲ್ಲವೆಂಬತೆ ದಿವ್ಯ ನಿರ್ಲಕ್ಷ್ಯವಹಿಸಿದ್ದರಿಂದ ವರ್ಷವೊಂದರಲ್ಲೇ ಇಲ್ಲಿ ಅಪಘಾತವಾಗಿ ಅನೇಕರು ಕೈ ಕಾಲು ಕಳೆದುಕೊಂಡಿದ್ದಾರೆ.

ಎರಡು ವರ್ಷದ ಹಿಂದೆ ಚರಂಡಿಯ ಸರಳುಗಳು ಕಿತ್ತು ಬಂದಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಬ್ಬಿಣದ ಸರಳುಗಳನ್ನು ವೆಲ್ಡಿಂಗ್ ಮಾಡಿ ದುರಿಸ್ತಿ ಮಾಡಿದರಾದರೂ ಕಳಪೆ ಕಾಮಗಾರಿಯಿಂದ ಮತ್ತೆ ಮತ್ತೆ ಅದು ಕಿತ್ತು ಬರುತ್ತಿದ್ದು ಮತ್ತೆ ಮತ್ತೆ ಅಪಘಾತಗಳು ನಡೆಯಲು ಕಾರಣವಾಗುತ್ತಿದೆ.

ಚರಂಡಿಯ ಕಬ್ಬಿಣದ ಸರಳುಗಳು ಕಿತ್ತು ಬಂದಾಗ ಹೆದ್ದಾರಿ ಪ್ರಾಧಿಕಾರದವರು ಕಾಟಾಚಾರಕ್ಕೆಂದು ವೆಲ್ಡಿಂಗ್ ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಭಾರಿ ಗಾತ್ರದ ವಾಹನಗಳು ಸಂಚರಿಸುತ್ತಿದ್ದಂತೆ ವೆಲ್ಡಿಂಗ್ ಮಾಡಿರುವ ಕಬ್ಬಿಣದ ಸರಳುಗಳ ವೆಲ್ಡಿಂಗ್ ಬಿಟ್ಟುಕೊಂಡು ಮತ್ತೆ ಮೃತ್ಯುವಿಗೆ ಆಹ್ವಾನ ನೀಡಲು ಬಾಯ್ತೆರೆದುಕೊಳ್ಳುತ್ತಿವೆ.

ಪೊಲೀಸರ ಭೇಟಿ…

ರೈಲ್ವೇ ಕೆಳಸೇತುವೆಯಲ್ಲಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಸಿಪಿಐ ಆನಂದ್ ಕುಮಾರ್, ಗ್ರಾಮಾಂತರ ಠಾಣೆಯ ಪಿ.ಎಸ್‌.ಐ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯರು ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ಕಬ್ಬಿಣದ ಸರಳುಗಳನ್ನು ಬಂದೋಬಸ್ತ್ ಮಾಡದೆ ಕಾಟಾಚಾರದ ರಿಪೇರಿ ಮಾಡಿ ಕೈ ತೊಳೆದುಕೊಳ್ಳುತ್ತಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಮೊಬೈಲ್‌ನಲ್ಲಿ ಸಂಪರ್ಕಿಸಿ ಸಮಸ್ಯೆ ವಿವರಿಸಿ ದುರಸ್ಥಿ ಪಡಿಸಲು ಒತ್ತಾಯಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

ಹೆದ್ದಾರಿಯ ಈ ಭಾಗದ ಎಂಜಿನಿಯರ್ ನವೀನ್ ಕುಮಾರ್ ಅವರನ್ನು ಮೊಬೈಲ್ ಕರೆ ಮಾಡಿ ಸಂಪರ್ಕಿಸಿ ಮಾಹಿತಿ ಪಡೆಯಲು ಪ್ರಯತ್ನಿಸಿದರೆ ಅವರು ಕರೆ ಸ್ವೀಕರಿಸಲಿಲ್ಲ. ಆದರೆ ಪೊಲೀಸರಿಗೆ ನಾಲೈದು ದಿನಗಳಲ್ಲಿ ತಾತ್ಕಾಲಿಕವಾಗಿ ದುರಸ್ತಿ ಮಾಡಿ ನಂತರ 20 ದಿನಗಳಲ್ಲಿ ಶಾಶ್ವತವಾಗಿ ದುರಿಸ್ತಿ ಮಾಡುವುದಾಗಿ ಭರವಸೆ ನೀಡಿರುವುದಾಗಿ ಪೊಲೀಸರು ಸ್ಥಳೀಯರಿಗೆ ತಿಳಿಸಿದರು.


ಮೂಡುಬಿದರೆಯಿಂದ ಮುಳಬಾಗಿಲಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-234 ರಸ್ತೆಯು ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ ಮೂಲಕ ಮುಳಬಾಗಿಲನ್ನು ಸಂಪರ್ಕಿಸುತ್ತದೆ. ಅಲ್ಲಿಂದ ತಿರುಪತಿಗೂ ಸಂಪರ್ಕ ನೀಡುತ್ತದೆ.

ಹಾಗಾಗಿ ಈ ರಸ್ತೆಯಲ್ಲಿ ನಿತ್ಯ ದಿನದ 24 ಗಂಟೆಗಳ ಕಾಲವೂ ರಾಜ್ಯ, ಅಂತರಾಜ್ಯ ಸರಕು ಸಾಹಣೆ ವಾಹನಗಳಲ್ಲದೆ ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣಗಳಿಗೆ ತೆರಳುವ ಮತ್ತು ಸ್ಥಳೀಯ ಸಂಚಾರ ವಾಹನಗಳ ದಟ್ಟಣೆ ಇರಲಿದೆ. ಭಾರಿ ವಾಹನಗಳ ಸಂಚಾರವೂ ಹೆಚ್ಚಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version