
Varadanayakanahalli, Sidlaghatta : ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಿಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ಬೆಳೆಸುವ ಜೊತೆಗೆ ಗ್ರಾಮೀಣ ಜೀವನ ವ್ಯವಸ್ಥೆಯ ಪರಿಚಯ ಮಾಡಿಕೊಡುವ ಉತ್ತಮ ವೇದಿಕೆಯಾಗಿದೆ ಎಂದು ರೊಟೇರಿಯನ್ ಕ್ಲಬ್ ತರಬೇತುದಾರ ಅರುಣ್ ಕುಮಾರ್ ಜಯದೇವಯ್ಯ ತಿಳಿಸಿದರು.
ತಾಲ್ಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ಉತ್ತರ ವಲಯದ ವಿದ್ಯಾರ್ಥಿಗಳಿಂದ ನಡೆಯುತ್ತಿರುವ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಣ ಪಡೆದು ಉದ್ಯೋಗ ಹಿಡಿಯುವುದೇ ಜೀವನದ ಗುರಿ ಅಲ್ಲ, ಸಮಾಜಮುಖಿ ವ್ಯಕ್ತಿತ್ವ ರೂಡಿಸಿಕೊಂಡು ಸಮಾಜಮುಖಿಯಾಗಿ ಜೀವಿಸುವುದು ಪ್ರತಿ ಪ್ರಜೆಯ ಜವಾಬ್ದಾರಿ ಅವುಗಳನ್ನು ಎನ್.ಎಸ್.ಎಸ್ ಶಿಬಿರ ಕಲಿಸಿಕೊಡುತ್ತದೆ ಎಂದರು.
ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯ ಉತ್ತರ ವಲಯ ಎನ್.ಎಸ್.ಎಸ್ ಅಧಿಕಾರಿ ಪ್ರೊ.ಎಂ.ಜೆ ಶಂಕರ್ ಮಾತನಾಡಿ ಏಳು ದಿನಗಳ ಕಾಲ ಶಿಬಿರದಲ್ಲಿ ನಡೆಯುವಂತ ಕಾರ್ಯಗಳ ಬಗ್ಗೆ ವಿವರಿಸಿ, ಪ್ರಮುಖವಾಗಿ ಗ್ರಾಮದಲ್ಲಿ ನಶಾ ಮುಕ್ತ ಭಾರತ್ ಅಭಿಯಾನ, ಉನ್ನತ ಭಾರತ ಅಭಿಯಾನದಲ್ಲಿ ಬಿದಿರು ಬೊಂಬುಗಳಿಂದ ಗ್ರಂಥಾಲಯ (ಪುಸ್ತಾಕಾಲಯ) ನಿರ್ಮಿಸಿ ಓದುವ ಹವ್ಯಾಸ ರೂಢಿಸುವುದು. ವಿದ್ಯಾರ್ಥಿಗಳಿಗೆ ರೇಷ್ಮೆ ಹಾಗೂ ಕೃಷಿ ಚಟುವಟಿಕೆಯ ಅರಿವು ಮೂಡಿಸುವುದು. ಬೆಂಗಳೂರು ವೈದೇಹಿ ಆಸ್ಪತ್ರೆ ಮತ್ತು ಶಿಡ್ಲಘಟ್ಟ ಎಕ್ಸ್ ಪರ್ಟ್ ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣ ಶಿಬಿರ, ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕೆಲಸದ ಜೊತೆಗೆ ಪ್ರತಿದಿನ ಸಂಜೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಚಿಂತಾಮಣಿ ತಾಲ್ಲೂಕು ಉಸ್ತುವಾರಿ ರಾಜಯೋಗಿನಿ ಬಿ.ಕೆ.ಶಾಮಲ, ಉಪನ್ಯಾಸಕರಾದ ಪ್ರೊ.ಕೇಶವ, ಅಶ್ವಿನಿ, ಲೇಖನ, ವಿ.ಎಸ್.ಗೋಪಾಲಕೃಷ್ಣ, ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶಾಮಲ.ಜಿ, ಎಸ್ಡಿಎಂಸಿ ಅಧ್ಯಕ್ಷ ಗಂಗಾಧರ್, ಗ್ರಾ.ಪಂ ಮಾಜಿ ಅಧ್ಯಕ್ಷ ಮುನಿರೆಡ್ಡಿ, ಜನಪದ ಕಲಾವಿದ ಈಧರೆ ಪ್ರಕಾಶ್, ಗ್ರಾಮದ ಯುವ ಮುಖಂಡ ಗೋಪಾಲಕೃಷ್ಣ, ಶಿವು ಹಾಜರಿದ್ದರು.