
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಸವನಪರ್ತಿ ಗ್ರಾಮದಲ್ಲಿ ಎರಡು ವರ್ಷದ ಹಿಂದೆ ನಾಟಿ ಮಾಡಿದ್ದ ಸುಮಾರು 180 ಕ್ಕೂ ಹೆಚ್ಚು ಮಾವಿನ ಸಸಿಗಳನ್ನು ಕೊಡಲಿಯಿಂದ ಕತ್ತರಿಸಿ ಹಾಕಲಾಗಿದೆ. ಶಂಕರ್ ಅವರಿಗೆ ಸೇರಿದ ಮಾವಿನ ತೋಟದಲ್ಲಿ ಈ ಘಟನೆ ನಡೆದಿದೆ.
ರೈತ ಶಂಕರ್ ಅವರು ಮೂರು ಎಕರೆ ಜಮೀನಿನಲ್ಲಿ 350 ಕ್ಕೂ ಹೆಚ್ಚು ಮಾವಿನ ಸಸಿಗಳನ್ನು ಎರಡು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ್ದಾರೆ. ಒಂದೊಂದು ಸಸಿಯಲ್ಲಿ ಈ ವರ್ಷ ಮಾವಿನ ಕಾಯಿ ಕೂಡ ಕಾಣಿಸಿಕೊಂಡಿದೆ.
ಈ ಜಮೀನಿನಲ್ಲಿ ನನಗೂ ಭಾಗ ಬೇಕೆಂದು ನರಸಿಂಹಪ್ಪ ತಗಾದೆ ತೆಗೆದಿದ್ದು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಶಂಕರ್ ಮತ್ತು ನರಸಿಂಹಪ್ಪ ಅವರು ದಾಯಾದಿಗಳಾಗಿದ್ದು ಜಮೀನಿನ ಭಾಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವೈಷಮ್ಯವಿದೆ. ಈ ಹಿನ್ನಲೆಯಲ್ಲಿ ನರಸಿಂಹಪ್ಪನೇ ಮಾವಿನ ಸಸಿಗಳನ್ನು ರಾತ್ರೋ ರಾತ್ರಿ ಕತ್ತರಿಸಿ ಹಾಕಿದ್ದಾನೆ ಎಂದು ಶಂಕರ್ ಅವರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಆದರೆ ಪೊಲೀಸರು ಈ ಜಮೀನಿನ ವಾರಸುದಾರರು ಮೃತಪಟ್ಟಿದ್ದು ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ದೂರು ತೆಗೆದುಕೊಳ್ಳದೆ ನನ್ನನ್ನು ವಾಪಸ್ ಕಳುಹಿಸಿದರು ಎಂದು ಶಂಕರ್ ಅಸಮಾಧಾನ ವ್ಯಕ್ತಪಡಿಸಿ ನ್ಯಾಯ ದೊರಕಿಸಿಕೊಡಲು ಆಗ್ರಹಿಸಿದ್ದಾರೆ.