
Sidlaghatta : ಎತ್ತಿನ ಹೊಳೆ ನೀರು ತರಲೆಂದು ಶಾಶ್ವತ ನೀರಾವರಿ ಹೋರಾಟ ಆರಂಭವಾಗಿ 15 ವರ್ಷಗಳೆ ಕಳೆದರೂ ಇನ್ನೂ ಕೂಡ ನಮ್ಮ ಭಾಗಕ್ಕೆ ಶಾಶ್ವತ ನೀರಾವರಿ ಹರಿಯಲಿಲ್ಲ. ಹರಿಯುತ್ತಿರುವ ನೀರು ಕೂಡ ವಿಷಕಾರಿ ಆಗಿರುವುದು ಆತಂಕಕಾರಿ ಹಾಗೂ ನಮ್ಮ ದುರಂತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅತಂಕ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಸೇವಾ ಸೌಧ ಕಚೇರಿ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ, ಟ್ರೈಲೈಫ್ ಆಸ್ಪತ್ರೆಯಿಂದ ಯುಗಾದಿ ಹಬ್ಬದ ಅಂಗವಾಗಿ ಮಹಿಳೆಯರಿಗೆ ಸೀರೆ ಅರಿಶಿಣ ಕುಂಕುಮ ಹಾಗೂ ದಿನಸಿ ಕಿಟ್ ವಿತರಿಸಿ ಮಾತನಾಡಿದರು.
ಇದೀಗ ನಮ್ಮ ಭಾಗದಲ್ಲಿ ಹರಿಯುತ್ತಿರುವ ಎಚ್.ಎನ್ ವ್ಯಾಲಿ ಮತ್ತು ಕೆಸಿ ವ್ಯಾಲಿ ನೀರು ಕಲುಷಿತಗೊಂಡಿದ್ದು ವಿಷಕಾರಿಯಾಗಿದೆ. ಇದು ಅಂತರ್ಜಲಕ್ಕೆ ಸೇರುತ್ತಿದೆ. ಇಂದಲ್ಲ ಮುಂದೊಂದು ದಿನ ನಮಗೆ ಇದರಿಂದ ತೊಂದರೆ ಕಟ್ಟಿಟ್ಟ ಬುತ್ತಿ ಎಂದರು.
ಈ ಬಗ್ಗೆ ವಿಧಾನಸೌಧ, ಸಂಸತ್ ನಲ್ಲಿ ನಮ್ಮ ಎನ್.ಡಿ.ಎ ಮೈತ್ರಿ ಮುಖಂಡರು ಧ್ವನಿ ಎತ್ತುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದು ಇಡೀ ಬಯಲು ಸೀಮೆ ಭಾಗದ ರೈತರ, ಕೃಷಿಕರ ಭವಿಷ್ಯ, ಬದುಕಿನ ಪ್ರಶ್ನೆಯಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರವು ಈ ಬಗ್ಗೆ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಬಯಲು ಸೀಮೆ ಭಾಗದ ರೈತರು ರಾಜ್ಯ ಸರ್ಕಾರದ ವಿರುದ್ದ ಬೀದಿಗೆ ಇಳಿಯುವುದರಲ್ಲಿ ಅನುಮಾನವಿಲ್ಲ ಎಂದರು.
ಟ್ರೈಲೈಫ್ ಆಸ್ಪತ್ರೆಯ ಡಾ.ಶಫೀಕ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ ಸೇರಿದಂತೆ ಬಿಜೆಪಿಯ ಎಲ್ಲ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.
ಮುಂಬರುವ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಯಾವ ಪಕ್ಷದ ಮೈತ್ರಿ ಇಲ್ಲದೆ ಸಮರ್ಥವಾಗಿ ಚುನಾವಣೆ ಎದುರಿಸಲು ಪಕ್ಷವು ಜಿಲ್ಲೆಯಲ್ಲಿ ಸಮರ್ಥವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಸಂಸತ್ ಚುನಾವಣೆಯಲ್ಲಿ ಬಿಜೆಪಿಯು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಹಲವು ದಿನಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಆದರೆ ನಮ್ಮ ಪಕ್ಷದ ವರಿಷ್ಠರಿಂದ ಮೈತ್ರಿ ಮುಂದುವರೆಸುವ ಅಥವಾ ಪ್ರತ್ಯೇಕವಾಗಿ ಚುನಾವಣೆ ಎದುರಿಸುವ ಬಗ್ಗೆ ಇನ್ನೂ ಕೂಡ ಯಾವುದೆ ತೀರ್ಮಾನ ಆಗಿಲ್ಲ. ಒಂದೊಮ್ಮೆ ಮೈತ್ರಿ ಮುಂದುವರೆದರೂ, ಮೈತ್ರಿ ಬಿಟ್ಟು ಪ್ರತ್ಯೇಕವಾಗಿ ಚುಣಾವಣೆ ಎದುರಿಸಿದರೂ ಸರಿ.
ನಮ್ಮ ಪಕ್ಷವು ಏಕಾಂಗಿಯಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಎದುರಿಸುವಷ್ಟು ಬಲಿಷ್ಠವಾಗಿ ಪಕ್ಷ ಬೆಳೆದಿದೆ. ಆದರೆ ನಮ್ಮ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ. ಅವರ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.