Home News ಕಸಾಯಿ ಖಾನೆಗೆ ಸಾಗಿಸಲಾಗುತ್ತಿದ್ದ ಎಮ್ಮೆಗಳ ರಕ್ಷಣೆ

ಕಸಾಯಿ ಖಾನೆಗೆ ಸಾಗಿಸಲಾಗುತ್ತಿದ್ದ ಎಮ್ಮೆಗಳ ರಕ್ಷಣೆ

0

ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗೇಟ್ ಬಳಿ ಟೆಂಪೋ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಟೆಂಪೋದಲ್ಲಿದ್ದ 14 ಎಮ್ಮೆಗಳನ್ನು ಹೊರ ರಾಜ್ಯದ ಕಸಾಯಿ ಖಾನೆಗೆ ಸಾಗಿಸಲಾಗುತ್ತಿದ್ದರು ಎನ್ನಲಾಗಿದ್ದು, ಅವನ್ನು ಗ್ರಾಮಾಂತರ ಪಿ.ಎಸ್.ಐ. ಲಿಯಾಕತ್ ವುಲ್ಲಾ ಅವರು ರಕ್ಷಿಸಿ ಗೋಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.

ಎಮ್ಮೆಗಳು ಸಾಗಿಸುತ್ತಿದ್ದ ಟೆಂಪೋ ಮತ್ತು ದ್ವಿ-ಚಕ್ರವಾಹನ ನಡುವೆ ಅಪಘಾತ ಸಂಭವಿಸಿದ ಪರಣಾಮ ದ್ವಿಚಕ್ರವಾಹನ ಸವಾರ ಮತ್ತು ಹಿಂಬದಿ ಸವಾರರಿಗೆ ಗಂಬೀರ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ, ಟೆಂಪೋ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದಾಗ ಟೆಂಪೋ ವಾಹನದಲ್ಲಿ ದೊಡ್ಡ ಗಾತ್ರದ 3, ಮದ್ಯಮ ಗಾತ್ರದ 3 ಎಮ್ಮೆಗಳು ಹಾಗೂ ಮೇಲ್ಭಾಗದ ಅರ್ಧಕ್ಕೆ ಹಲಗೆಗಳನ್ನು ಜೋಡಿಸಿ ಅದರ ಮೇಲೆ 8 ಮದ್ಯದ ಗಾತ್ರದ ಎಮ್ಮೆಗಳನ್ನು ತುಂಬಿರುವುದು ಕಂಡು ಬಂದಿದೆ. ಟೆಂಪೋ ವಾಹನ ಚಾಲಕ ಸೇರಿದಂತೆ ಮಾಲೀಕ ಪ್ರಾಣಿಗಳನ್ನು ಸಾಗಾಣಿಕೆ ಮಾಡಲು ಪಶು ಸಂಗೋಪನೆ ಇಲಾಖೆಯಿಂದ ಯಾವುದೇ ಲೈಸೆನ್ಸ್ ಪಡೆಯದೇ, ಪ್ರಾಣಿಗಳ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಎಮ್ಮೆಗಳನ್ನು ಅಕ್ರಮವಾಗಿ ಹೊರ ರಾಜ್ಯದ ಕಸಾಯಿ ಖಾನೆಗಳಿಗೆ ಸಾಗಿಸಲಾಗುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಟೆಂಪೋ ಹಾಗೂ ದ್ವಿಚಕ್ರವಾಹನ ಮತ್ತು ಎಮ್ಮೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಗ್ರಾಮಾಂತರ ಪಿ.ಎಸ್.ಐ. ಲಿಯಾಕತ್ ವುಲ್ಲಾ ರವರು ಮೂಕ ಪ್ರಾಣಿಗಳನ್ನು ವಿಜಯಪುರದ ಗೋಶಾಲೆಗೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ. ಮೂಕ ಪ್ರಾಣಿಗಳನ್ನು ರಕ್ಷಣೆ ಮಾಡಿ ತಮ್ಮ ಕರ್ತವ್ಯ ನಿರ್ವಹಿಸಿರುವ ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version