
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಎಸ್ಎಫ್ಸಿಎಸ್ ಬ್ಯಾಂಕ್ ವ್ಯಾಪ್ತಿಯಲ್ಲಿನ ಮಹಿಳಾ ಸ್ವ ಸಹಾಯ ಸಂಘಗಳಿಗೆ ಶನಿವಾರ ಡಿಸಿಸಿ ಬ್ಯಾಂಕ್ನಿಂದ ಸಾಲ ವಿತರಣೆ ಹಾಗೂ ಎಟಿಎಂ ಕಾರ್ಡು ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಬ್ಯಾಂಕಿನಿಂದ ನೀಡಿದ ಸಾಲದ ಹಣವನ್ನು ಸರಿಯಾದ ಕೆಲಸಕ್ಕಷ್ಟೆ ಬಳಸಿಕೊಳ್ಳಿ, ದುರುಪಯೋಗ ಬೇಡ, ಉಳಿತಾಯ ಮನೋಭಾವ ಬೆಳೆಸಿಕೊಳ್ಳಿ ಎಂದು ಅವರು ತಿಳಿಸಿದರು.
ಇದೀಗ ರಾಜ್ಯ ಮತ್ತು ರಾಷ್ಟ್ರದಲ್ಲಿ ಆತಂಕದ ವಾತಾವರಣ ಇದೆ. ಕೊರೊನಾದಿಂದ ಎಲ್ಲರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ ಕ್ಷುಲ್ಲಕ ಮನಸಿನಿಂದ ಆಲೋಚನೆ ಮಾಡುವುದನ್ನು ಬಿಟ್ಟು ದೂರದೃಷ್ಟಿಯಿಂದ ಆಲೋಚನೆ ಮಾಡಬೇಕಿದೆ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ, ನಾನು ಯಾವುದೆ ರೀತಿಯ ಟೀಕೆಯಾಗಲಿ ಯಾರದ್ದೇ ಟೀಕಿಗಾಗಲಿ ಹೆಚ್ಚು ತಲೆ ಕೆಡಸಿಕೊಳ್ಳುವುದಿಲ್ಲ. ನನ್ನ ವಿರುದ್ದ ಯಾರು ಏನೆಲ್ಲಾ ಪಿತೂರಿ, ಟೀಕೆಗಳನ್ನು ಮಾಡಲಿ ನಾನು ಮಾತ್ರ ಬ್ಯಾಂಕ್ನ ಅಭಿವೃದ್ಧಿ ಹಾಗೂ ಬ್ಯಾಂಕಿನಿಂದ ಮಹಿಳೆಯರು, ರೈತರಿಗೆ ಸಾಲ ನೀಡುವಂತ ಕೆಲಸಕ್ಕಷ್ಟೆ ಆಧ್ಯತೆ ನೀಡುತ್ತೇನೆಂದರು.
ಒಂದೆ ಒಂದು ರೂಪಾಯಿ ಸಾಲ ನೀಡಲು ಸಾಧ್ಯವಾಗದ, ಗ್ರಾಹಕರು ಇಟ್ಟಿದ್ದ ಠೇವಣಿ ಹಣವನ್ನು ವಾಪಸ್ ನೀಡಲಾಗದಂತ ಸ್ಥಿತಿಗೆ ತಲುಪಿದ್ದ ಬ್ಯಾಂಕನ್ನು ಎಲ್ಲರ ಸಹಕಾರದಿಂದ ಇಂದು ಸಾವಿರಾರು ಕೋಟಿ ರೂ.ಗಳು ಸಾಲ ನೀಡುವ ಮಟ್ಟಕ್ಕೆ ಬೆಳೆಸಿದ್ದೇನೆ ಎಂದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಎಲ್ಲ ರೈತರು, ಮಹಿಳೆಯರಿಗೂ ಬಡ್ಡಿ ರಹಿತ ಸಾಲವನ್ನು ನೀಡುವುದು ಬ್ಯಾಂಕ್ ಉದ್ದೇಶ, ಆ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದು ಇದನ್ನು ಸಹಿಸದ ಹಲವರು ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ.
ನನ್ನನ್ನು ಲೂಟಿಕೋರ, ಲಂಚಬಾಕ, ಭ್ರಷ್ಟಾಚಾರಿ ಹೀಗೆ ಏನು ಬೇಕಾದರೂ ಕರೆಯಲಿ ಅದೆಲ್ಲವನ್ನೂ ಬ್ಯಾಂಕಿನೊಂದಿಗೆ ಸಂಪರ್ಕ ಇಟ್ಟುಕೊಂಡಿರುವ ಮಹಿಳಾ ಸ್ವಸಹಾಯ ಸಂಘಗಳು, ರೈತರು, ಬ್ಯಾಂಕ್ನ ನಿರ್ದೆಶಕರು, ಸಿಬ್ಬಂದಿ ನಿರ್ಧರಿಸುತ್ತಾರೆ.
ನನಗೆ ಉಭಯ ಜಿಲ್ಲೆಗಳ ಎಲ್ಲ ಮಹಿಳೆಯರಿಗೂ ಸಾಲ ನೀಡಿ ಅವರು ಸ್ವಾವಲಂಬಿಗಳಾಗಬೇಕು, ರೈತರಿಗೆ ಸಕಾಲಕ್ಕೆ ಸಾಲ ನೀಡಿ ರೈತರ ಸ್ಥಿತಿ ಸುಧಾರಿಸಬೇಕು ಅದು ನನ್ನ ಕನಸು. ನನ್ನ ಕನಸು ಈಡೇರುವ ತನಕ ನನ್ನ ಕೆಲಸ ನಿಲ್ಲದು, ಯಾರ ಟೀಕೆಗಳು ಆರೋಪಗಳು ಅದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು.
26 ಮಹಿಳಾ ಸ್ವ ಸಹಾಯ ಸಂಘಗಳಿಗೆ 1.20 ಕೋಟಿ ರೂ.ಗಳ ಸಾಲ ಹಾಗೂ ಎಟಿಎಂ ಕಾರ್ಡುಗಳನ್ನು ವಿತರಣೆ ಮಾಡಲಾಯಿತು.
ಎಸ್ಎಫ್ಸಿಎಸ್ ಬ್ಯಾಂಕ್ ಅಧ್ಯಕ್ಷ ಜಿ.ಎಂ.ರಾಮರೆಡ್ಡಿ, ನಾಣಿ, ವೆಂಕಟರೆಡ್ಡಿ, ಮುನಿರಾಜು, ಬಿ.ವಿ.ಮುನೇಗೌಡ, ಎಂ.ಆರ್.ಮುನಿಕೃಷ್ಣಪ್ಪ, ಚಿದಾನಂದಮೂರ್ತಿ, ರತ್ನಮ್ಮ, ಶ್ರೀನಿವಾಸ್, ಸಿಇಒ ಮಂಜುನಾಥ್ ಹಾಜರಿದ್ದರು.