Home News ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ : ನಗರಸಭಾ ಸದಸ್ಯ ಅಫ್ಸರ್ ಪಾಷ ಆರೋಪ

ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ : ನಗರಸಭಾ ಸದಸ್ಯ ಅಫ್ಸರ್ ಪಾಷ ಆರೋಪ

0

ಜಮೀನು ಒತ್ತುವರಿಯಿಂದಾಗಿ ನಗರದ 12, 17, 15 ಮತ್ತು 24 ನೇ ವಾರ್ಡ್ ಗಳ ಜನರು ಓಡಾಡಲು ತೊಂದರೆಯಾಗುತ್ತಿದೆ. ಈ ಬಗ್ಗೆ ಬೋದಗೂರಿನಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿಯನ್ನು ಸಲ್ಲಿಸಿದ್ದೆವು. ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದರು. ಆದರೆ ಇದುವರೆಗೂ ಈ ಬಗ್ಗೆ ಸ್ಥಳ ಪರಿಶೀಲನೆಯಾಗಲೀ, ಕ್ರಮ ವಹಿಸುವುದಾಗಲೀ ಆಗಿಲ್ಲ ಎಂದು ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಅಫ್ಸರ್ ಪಾಷ ತಿಳಿಸಿದರು.

 ನಗರದಲ್ಲಿ ಅವರು ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ತಾಲ್ಲೂಕಿನ ಕಸಬಾ ಹೋಬಳಿ ಸರ್ವೆ ನಂ 29 ರಿಂದ 37 ಮತ್ತು 77 ರಿಂದ 85 ರವರೆಗೆ ಹಾಗೂ ಇದ್ಲೂಡು ಗ್ರಾಮಸರ್ವೆ ನಂ 26 ರಿಂದ 28 ಮತ್ತು 36 ರಿಂದ 38 ರವರೆಗೆ, 41 ರಿಂದ 45 ರವರೆಗೆ ಮತ್ತು ಪಟ್ರೇನಹಳ್ಳಿ ಗ್ರಾಮದ ಸರ್ವೆ ನಂ 5 ರಲ್ಲಿ ಸಾರ್ವಜನಿಕರು ಓಡಾಡುವ ರಸ್ತೆ ಇದೆ. ಈ ಭಾಗದಲ್ಲಿ ಜಮೀನುದಾರರು ರಸ್ತೆಯನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳಾಗಿ ಮಾಡಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನಗರದ 12, 17, 15 ಮತ್ತು 24 ನೇ ವಾರ್ಡ್ ಗಳ ಜನರು ಓಡಾಡಲು ಆಗದೇ, ಸರಕು ಸಾಗಣೆ ಮಾಡಲು ಸಹ ಆಗದಂತಾಗಿದೆ. ಅಧಿಕಾರಿಗಳು ನಿಷ್ಪಕ್ಷಪಾತಿಗಳಾಗಿ ಒತ್ತುವರಿ ತೆರವುಗೊಳಿಸಬೇಕು ಎಂದರು.

 ತಾಲ್ಲೂಕು ಕಚೇರಿಯಲ್ಲಿ ಜನಸಾಮಾನ್ಯರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ. ತಹಶೀಲ್ದಾರ್ ಅವರು ಕಚೇರಿಯಲ್ಲಿ ಇರುವುದಿಲ್ಲ. ಸಎವೆ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕರು ಹಣ ನೀಡಿದರೆ ಮಾತ್ರ ಕೆಲಸ, ಇಲ್ಲವಾದರೆ ಇಲ್ಲ ಎಂಬಂತಾಗಿದೆ.  ಕೂಡಲೆ ಜಿಲ್ಲಾಧಿಕಾರಿಗಳು ಕ್ರಮ ಜರುಗಿಸಿ ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕಾಗಿ ಅವರು ಒತ್ತಾಯಿಸಿದರು.

 ನಗರಸಭಾ ಸದಸ್ಯ ಮೌಲಾ ಮಾತನಾಡಿ, ನಗರದ ವಾರ್ಡ್ 12 ರಲ್ಲಿನ 3 ನೇ ಕಾರ್ಮಿಕನಗರ, ಗಾಂಧಿನಗರ ಮತ್ತು ರಹಮತ್ ನಗರ ತೀರಾ ಹಿಂದುಳಿದಿವೆ. ಇಲ್ಲಿ ಸರ್ಕಾರಿ ಶಾಲೆ, ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಇಲ್ಲಿ ಸರ್ಕಾರಿ ಖರಾಬಿ 20 ಗುಂಟೆ ಜಮೀನನ್ನು ಉದ್ಯಮಿ ಬಿ.ನಾರಾಯಣಸ್ವಾಮಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವರು ಸರ್ಕಾರಿ ಜಮೀನನ್ನು ಲಪಟಾಯಿಸಿ ನಿವೇಶನಗಳನ್ನಾಗಿ ಮಾಡಿ ಮಾರಾಟ ಮಾಡಲು ಮುಂದಾಗಿದ್ದಾರೆ. ನಗರಸಭೆಯ ಚರಂಡಿಯನ್ನು ಒಡೆದು ನೀರನ್ನು ಶೇಖರಿಸಿ ಜಮೀನುಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಈ ದುರ್ವಾಸನೆಯಿಂದ ಈ ಭಾಗದ ಜನರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಬಗ್ಗೆ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಕ್ಷಣ ಸರ್ಕಾರಿ ಜಮೀನನ್ನು ವಶಪಡಿಸಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ಶಾಲೆ ಅಥವಾ ಅಂಗನವಾಡಿಯನ್ನು ನಿರ್ಮಾಣ ಮಾಡಬೇಕೆಂದು ಅವರು ಆಗ್ರಹಿಸಿದರು.

 ಮುಖಂಡರಾದ ರಮೇಶ್, ಮಂಜುನಾಥ್, ಅನ್ಸರ್ ಪಾಷ ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version