
Mallur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಗೌರಮ್ಮ ಮಲ್ಲಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಬೆಂಗಳೂರಿನ ರಾಮಯ್ಯ ಆಸ್ಪತ್ರೆ ಸಹಯೋಗದಲ್ಲಿ ಗೌರಮ್ಮ ಅವರ 8ನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ಕಿಡ್ನಿ ಮತ್ತು ಮೂತ್ರಕೋಶದ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ರಾಮಯ್ಯ ಆಸ್ಪತ್ರೆಯ ಕಿಡ್ನಿ ಮತ್ತು ಮೂತ್ರಕೋಶ ವಿಭಾಗದ ತಜ್ಞ ವೈದ್ಯ ಡಾ.ಪುವ್ವಾಡ ಸಂದೀಪ್ ಮಾತನಾಡಿ, “ಈ ದಿನ ಹೆಣ್ಣುಮಕ್ಕಳಿಗೇ ಕಿಡ್ನಿ ಮತ್ತು ಮೂತ್ರಕೋಶದ ಚಿಕಿತ್ಸೆ ನೀಡುವ ರಾಜ್ಯದ ಏಕೈಕ ತಜ್ಞ ವೈದ್ಯೆ ಕೂಡ ಆಗಮಿಸಿದ್ದಾರೆ. ಕ್ಯಾನ್ಸರ್ ತಪಾಸಣೆಗಾಗಿ ಸೀರಮ್ ಪಿಇಸಿ ಎಂಬ ಪರೀಕ್ಷೆ, ಉರಿಮೂತ್ರ ರೋಗ, ಹೊಟ್ಟೆಯಲ್ಲಿ ಗೆಡ್ಡೆ ಇದ್ದರೆ ಅಥವಾ ಸಂಶಯವಿದ್ದರೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವ್ಯವಸ್ಥೆ ಕೂಡ ಉಚಿತವಾಗಿ ಮಾಡಿದ್ದೇವೆ. 300 ಮಂದಿ ಹೊರರೋಗಿಗಳು ಬಂದು ತಪಾಸಣೆ ಮಾಡಿಸಿಕೊಂಡಿದ್ದಾರೆ. ನಾವು ಮಾಡಿಸಿರುವ ರಕ್ತ ಪರೀಕ್ಷೆಯ ವರದಿ ಮುಂದಿನವಾರ ಬರಲಿದೆ. ಸ್ಕ್ಯಾನಿಂಗ್ ಮತ್ತು ಮೂತ್ರಕ್ಕೆ ಸಂಬಂಧಿಸಿದ ವರದಿ ಇಲ್ಲೇ ನೀಡಿ ಸೂಕ್ತ ಔಷಧಿ ನೀಡಲಾಗಿದೆ. ಸುಮಾರು 9 ಜನರಿಗೆ ಕ್ಯಾನ್ಸರ್ ಸೂಚನೆಗಳಿದ್ದು ಅವರ ರಕ್ತದ ಮಾದರಿಯನ್ನು ತೆಗೆದುಕೊಳ್ಳಲಾಗಿದೆ. ಕ್ಯಾನ್ಸರ್ ಇದ್ದರೆ ಸೂಕ್ತ ಚಿಕಿತ್ಸೆ, ರೇಷನ್ ಕಾರ್ಡ್ ಇದ್ದರೆ ಉಚಿತವಾಗಿ ಶಸ್ತ್ರಚಿಕಿತ್ಸೆ ಸಹ ಮಾಡುತ್ತೇವೆ” ಎಂದು ಹೇಳಿದರು.
“ಶಿಡ್ಲಘಟ್ಟ ತಾಲ್ಲೂಕಿನಲ್ಲಿನ ವಾತಾವರಣ, ತಿನ್ನುವ ಆಹಾರ ಮತ್ತು ಶುದ್ಧೀಕರಿಸದೆ ಕುಡಿಯುವ ನೀರಿನ ಪರಿಣಾಮದಿಂದ ಮೂತ್ರಕೋಶದಲ್ಲಿ ಕಲ್ಲು ತುಂಬಾ ಜನರಲ್ಲಿ ಕಂಡುಬರುತ್ತಿದೆ. ಗೌರಮ್ಮ ಮಲ್ಲಶೆಟ್ಟಿ ಆರೋಗ್ಯ ಕೇಂದ್ರದಲ್ಲಿ ಮೂತ್ರಕೋಶದಲ್ಲಿ ಕಲ್ಲು ಇದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡಿ, ಔಷಧಿಗಳನ್ನು ಸಹ ಉಚಿತವಾಗಿ ನೀಡಿ, ಮುಂದೆ ಈ ತೊಂದರೆ ಮರುಕಳಿಸದ ಹಾಗೆ ಆಹಾರ ಹಾಗೂ ಜೀವನಶೈಲಿಯ ಬಗ್ಗೆ ತಿಳಿವಳಿಕೆ ನೀಡುತ್ತಿದ್ದೇವೆ” ಎಂದರು.
“ನಮ್ಮ ಕೇಂದ್ರಕ್ಕೆ ಬರುವವರಲ್ಲಿ ಥೈರಾಯ್ಡ್, ಮಧುಮೇಹ ಮತ್ತು ರಕ್ತದ ಒತ್ತಡ ಹೆಚ್ಚಿನವರಿಗೆ ಇದೆ. ರೋಗಿಗಳನ್ನು ಕರೆತರುವವರನ್ನೂ ನಮ್ಮ ಕೇಂದ್ರದಲ್ಲಿ ಪರೀಕ್ಷೆ ಮಾಡಿದಾಗ ಬಹಳಷ್ಟು ಜನರಿಗೆ ರಕ್ತದ ಒತ್ತಡ ಇರುವುದು ಕಂಡು ಬಂದಿದೆ. ಕೆಲವರಂತೂ ರಕ್ತದ ಒತ್ತಡ ಇದ್ದರೂ ಉದಾಸೀನ ಮಾಡಿ ಅದರಿಂದ ಕಿಡ್ನಿಗೆ ತೊಂದರೆಯಾಗಿ ಡಯಾಲಿಸಿಸ್ ಗೆ ಒಳಪಟ್ಟಿದ್ದಾರೆ. ಮೂರು ತಿಂಗಳಿಗೊಮ್ಮೆ ರಕ್ತದ ಒತ್ತಡದ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಮತ್ತು ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಹಲವು ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ” ಎಂದು ಹೇಳಿದರು.
ವೈದ್ಯರಾದ ಡಾ.ಪುವ್ವಾಡ ಸಂದೀಪ್, ಡಾ.ಡಿ.ರಮೇಶ್, ಡಾ.ಪ್ರಸಾದ್ ಮೈಲಾರಪ್ಪ, ಡಾ.ತರುಣ್, ಡಾ.ಮಾನಸ, ಡಾ.ಅಭಿಷೇಕ ಹಾಜರಿದ್ದರು.