
Sidlaghatta : ನಗರದಲ್ಲಿರುವ “ನಗರ ಪ್ರಾಥಮಿಕ ಆರೋಗ್ಯ ಕೇಂದ್ರ”ವನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ಟಿಬಿ ರಸ್ತೆಯಲ್ಲಿನ ಶ್ರೀರೇಣುಕಾ ಯಲ್ಲಮ್ಮ ದೇವಿ ದೇವಾಲಯದ ಹಿಂಭಾಗದಲ್ಲಿದ್ದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ವಾಸವಿ ದೇವಾಲಯ ಸಮೀಪದ ಅಡ್ಡ ರಸ್ತೆಯಲ್ಲಿರುವ ಆರ್ಯ ವೈಶ್ಯ ಮಂಡಳಿಯ ಕಾಂಪ್ಲೆಕ್ಸ್ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಕಳೆದ ಹಲವು ವರ್ಷಗಳಿಂದಲೂ ನಗರ ಆರೋಗ್ಯ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ ಕಿರಿದಾಗಿತ್ತು ಮತ್ತು ಕಟ್ಟಡದ ಮಾಲೀಕರು ಕಟ್ಟಡವನ್ನು ಬಿಡುವಂತೆ ತಾಕೀತು ಮಾಡುತ್ತಿದ್ದರು ಎನ್ನುವ ಕಾರಣಕ್ಕೆ ಅಲ್ಲಿಂದ ಆರೋಗ್ಯ ಕೇಂದ್ರವನ್ನು ವಾಸವಿ ಕಾಂಪ್ಲೆಕ್ಸ್ ಕಟ್ಟಡ(ವಾಸವಿ ಶಾಲೆಯ ಹಳೆಯ ಕಟ್ಟಡ)ಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸುತ್ತಿರುವ ಕಟ್ಟಡ ಚಿಕ್ಕದು, ಮೂಲ ಸೌಕರ್ಯಗಳಿಲ್ಲ. ಅಲ್ಲಿಗೆ ತೆರಳಲು ಸೂಕ್ತ ದಾರಿಯೂ ಇಲ್ಲ, ಆಂಬ್ಯುಲೆನ್ಸ್ ಅಥವಾ ಆರೋಗ್ಯ ಕೇಂದ್ರಕ್ಕೆ ಔಷಧಿ ಇನ್ನಿತರೆ ಸರಕು ಸರಂಜಾಮು ಸಾಗಿಸಲು ಬರುವ ವಾಹನಗಳ ಸಂಚಾರಕ್ಕೆ ಕಷ್ಟ ಎಂದಿದ್ದ ಅಲ್ಲಿನ ಸಿಬ್ಬಂದಿ ಆರೋಗ್ಯ ಕೇಂದ್ರ ಸ್ಥಳಾಂತರಕ್ಕೆ ವಿರೋಧಿಸಿದ್ದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶಾಸಕ ಬಿ.ಎನ್.ರವಿಕುಮಾರ್ ಅವರನ್ನು ಭೇಟಿ ಮಾಡಿ ನಗರ ಆರೋಗ್ಯ ಕೇಂದ್ರವನ್ನು ವಿಶಾಲವಾದ ಮತ್ತು ಮೂಲ ಸೌಕರ್ಯಗಳುಳ್ಳ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಅದು ಬಿಟ್ಟು ವಿಳಾಸ ಪತ್ತೆ ಹಚ್ಚಲು ಕೂಡ ಕಷ್ಟವಾಗುವ, ಆಂಬ್ಯುಲೆನ್ಸ್ ಸೇರಿದಂತೆ ಇತರೆ ವಾಹನಗಳ ಸಂಚಾರ ಕಷ್ಟ ಸಾಧ್ಯವಾಗುವ ಜಾಗದಲ್ಲಿನ ಕಟ್ಟಡಕ್ಕೆ ಸ್ಥಳಾಂತರಿಸುವುದು ಬೇಡ. ಆದರೆ ಹಿರಿಯ ಅಧಿಕಾರಿಗಳು ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಿ ಎಂದು ನಮ್ಮ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಗ್ಯ ಕೇಂದ್ರದ ಸಿಬ್ಬಂದಿ ಶಾಸಕರ ಬಳಿ ಅಳಲು ತೋಡಿಕೊಂಡಿದ್ದರು.
“ನಾನು ಬಂದು ಈಗಿನ ಆರೋಗ್ಯ ಕೇಂದ್ರದ ಕಟ್ಟಡ ಮತ್ತು ಹೊಸದಾಗಿ ಗುರ್ತಿಸಿರುವ ಕಟ್ಟಡವನ್ನು ಕೂಡ ವೀಕ್ಷಿಸುತ್ತೇನೆ. ಅದುವರೆಗೂ ಸ್ಥಳಾಂತರ ಮಾಡಬೇಡಿ ಎಂದು ಸಿಬ್ಬಂದಿಗೆ ಶಾಸಕರು ಹೇಳಿಕಳುಹಿಸಿದ್ದರು. ಸದನದಲ್ಲಿ ಭಾಗವಹಿಸುತ್ತಿರುವ ಕಾರಣ ಶಾಸಕರು ಭೇಟಿ ನೀಡಲಿಲ್ಲ. ಇದರ ನಡುವೆ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸಲಾಗುತ್ತಿದೆ.
ಈ ಹಿಂದೆ ಇದ್ದ ಕಟ್ಟಡದ ಮಾಲೀಕರು ಕಟ್ಟಡವನ್ನು ಬಿಡುವಂತೆ ಎರಡು ವರ್ಷದಿಂದಲೂ ಒತ್ತಾಯಿಸುತ್ತಿದ್ದರು. ನಗರದಲ್ಲಿ ಸಾಕಷ್ಟು ಕಡೆ ಹುಡುಕಾಡಿದೆವು, ಸಿಗಲಿಲ್ಲ. ವಾಸವಿ ಸಮುದಾಯದ ಟ್ರಸ್ಟ್ ಗೆ ಸೇರಿದ ಈ ಜಾಗ ಇದ್ದುದರಲ್ಲಿ ಸೂಕ್ತ ಎನಿಸಿತು. ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನಿಯಮದಂತೆ ಅನುಮತಿ ಪಡೆದು ಲೊಕೋಪಯೋಗಿ ಇಲಾಖೆ ನಿಗದಿಪಡಿಸಿದ ಬಾಡಿಗೆ ದರ ಅಂತಿಮಗೊಳಿಸಿದೆ. ಹಂತ ಹಂತವಾಗಿ ಇನ್ನಷ್ಟು ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು.
-ಡಾ.ವೆಂಕಟೇಶ್ ಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ