Home News ಕೆರೆ ಮಾಲಿನ್ಯ, ವೈದ್ಯರ ಕೊರತೆ, ಸಾಲಗಾರರ ಕಿರುಕುಳ: ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಕೆರೆ ಮಾಲಿನ್ಯ, ವೈದ್ಯರ ಕೊರತೆ, ಸಾಲಗಾರರ ಕಿರುಕುಳ: ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

0
Sidlaghatta Farmers Plea to Dr M C Sudhakar

Sidlaghatta : ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪದಾಧಿಕಾರಿಗಳು ಜಿಲ್ಲೆಯಲ್ಲಿ ಕೆರೆಗಳ ಮಾಲಿನ್ಯ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಖಾಸಗಿ ಫೈನಾನ್ಸ್ ಸಂಸ್ಥೆಗಳ ಕಿರುಕುಳ, ಬಗರ್ ಹುಕ್ಕುಂ ಭೂಮಿ ಹಂಚಿಕೆ ವಿಳಂಬ ಹಾಗೂ ಎಚ್.ಎನ್. ವ್ಯಾಲಿ ಯೋಜನೆಯ ಅಸಮರ್ಪಕ ಜಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ.

“ಜಿಲ್ಲೆಯ ಕೆಲವು ಕೆರೆಗಳಲ್ಲಿ ಕಾನೂನು ಬಾಹಿರವಾಗಿ ತ್ಯಾಜ್ಯ ವಸ್ತುಗಳನ್ನು ಸುರಿದು ಕೆರೆಗಳನ್ನು ಮಾಲಿನ್ಯಗೊಳಿಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಸುಮ್ಮನಿದ್ದಾರೆ. ಪರಿಸರ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಬೇಕು.” ಎಂದು ಅವರು ತಿಳಿಸಿದ್ದಾರೆ.

ತದ್ವಿರುದ್ಧವಾಗಿ, ಖಾಸಗಿ ಫೈನಾನ್ಸ್ ಸಂಸ್ಥೆಗಳು ಬಲವಂತದ ಸಾಲ ವಸೂಲಾತಿ ನಡೆಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದಾಗಿ ಮನವಿ ಪತ್ರದಲ್ಲಿ ಆರೋಪಿಸಲಾಗಿದೆ. “ಆರ್‌ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಡವರ ರಕ್ತ ಹೀರುತ್ತಿರುವ ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಪೋಲೀಸರು ಕೆಲವು ಸಂದರ್ಭಗಳಲ್ಲಿ ಈ ಸಂಸ್ಥೆಗಳ ಪರವಾಗಿ ನಿಂತುಕೊಳ್ಳುತ್ತಿರುವುದನ್ನು ಉಲ್ಲೇಖಿಸಿ, “ದೂರು ನೀಡಿದ ಸಾಲಗಾರರಿಗೆ ರಕ್ಷಣೆಯ ಭರವಸೆ ನೀಡಬೇಕು” ಎಂದು ಮನವಿ ಮಾಡಲಾಗಿದೆ.

ಆರೋಗ್ಯ ಕ್ಷೇತ್ರದ ಕುರಿತು ಮಾತನಾಡಿದ ಸಂಘದ ಸದಸ್ಯರು, ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ 13 ತಿಂಗಳಿನಿಂದ ಮೂಳೆ ವೈದ್ಯರಿಲ್ಲ ಎಂದು ತಿಳಿಸಿದರು. ಸ್ಕ್ಯಾನಿಂಗ್ ಯಂತ್ರ ತುಕ್ಕು ಹಿಡಿಯುತ್ತಿರುವ ಸ್ಥಿತಿಯಲ್ಲಿ ತುರ್ತು ವೈದ್ಯಕೀಯ ಸೌಲಭ್ಯಕ್ಕಾಗಿ ಜನ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಅದೇ ರೀತಿ, ಪಲಿಚೆರ್ಲು ಗ್ರಾಮದ ಸರ್ಕಾರಿ ಆಸ್ಪತ್ರೆ ನಾಲ್ಕು ತಿಂಗಳಿನಿಂದ ಬೀಗ ಹಾಕಿರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ, ತಕ್ಷಣ ವೈದ್ಯರನ್ನು ನಿಯೋಜಿಸಬೇಕೆಂದು ಹೇಳಿದರು.

ಕೃಷಿ ಸಂಬಂಧಿತ ವಿಷಯವಾಗಿ, ಬಗರ್ ಹುಕ್ಕುಂ ಭೂಮಿ ಮಂಜೂರಾತಿ ಪ್ರಕ್ರಿಯೆ ವರ್ಷಗಳಿಂದ ಬಾಕಿ ಉಳಿದಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾಗುವಳಿ ಸಮಿತಿ ರಚನೆಯಾಗದ ಕಾರಣ ತಹಶೀಲ್ದಾರ್ ರವರಿಗೆ ಮಂಜೂರಾತಿ ಅಧಿಕಾರ ನೀಡಬೇಕೆಂದು ಹೇಳಿದರು.

ಇದೇ ವೇಳೆ, ಎಚ್.ಎನ್. ವ್ಯಾಲಿ ಯೋಜನೆಯ ನೀರು ಶಿಡ್ಲಘಟ್ಟದ ಕೆರೆಗಳಿಗೆ ತಲುಪದಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿ, ಬೆಳ್ಳೂಟಿ, ರಾಳ್ಳುಕುಂಟೆ ಕೆರೆಗಳಿಗೆ ನೀರು ಬಿಡುವಂತೆ ಹಾಗೂ ಕೆರೆಗಳಲ್ಲಿ ಜಾಲಿ ಗಿಡಗಳನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ವಿನಂತಿಸಿದರು.

ಮನವಿ ಸಲ್ಲಿಸಿದವರಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎನ್. ಕದೀರೇಗೌಡ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್ ಕುಮಾರ್, ಚಿಂತಾಮಣಿ ಕಾರ್ಯದರ್ಶಿ ಆಂಜಿನಪ್ಪ, ಹಾಗೂ ಪದಾಧಿಕಾರಿಗಳಾದ ಡಿ.ವಿ. ನಾರಾಯಣಸ್ವಾಮಿ, ಕನ್ನಪನಹಳ್ಳಿ ಮಂಜುನಾಥ್, ಚೌಡಪ್ಪ, ಪ್ರದೀಪ್, ಚೆನ್ನಪ್ಪ ಸೇರಿದಂತೆ ಅನೇಕರು ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version