Home News ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಹಾಗೂ ಸಂಘದ 6 ನೇ ವರ್ಷದ ಸಂಭ್ರಮಾಚರಣೆ

ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಹಾಗೂ ಸಂಘದ 6 ನೇ ವರ್ಷದ ಸಂಭ್ರಮಾಚರಣೆ

0
Sidlaghatta Street Vendors Day Celebration

Sidlaghatta : ಬೀದಿ ಬದಿಯ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸವಲತ್ತುಗಳು ಸಕಾಲದಲ್ಲಿ ಸಿಗಬೇಕಾದರೆ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಬೇಕಿದೆ. ಬೀದಿ ಬದಿ ವ್ಯಾಪಾರಿಗಳು ಜಾಗೃತರಾದಾಗ ಮಾತ್ರ ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ದಿಯತ್ತ ಸಾಗಲು ಸಾಧ್ಯ ಎಂದು ಬೀದಿ ಬದಿಯ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಸಿ.ರಂಗಸ್ವಾಮಿ ತಿಳಿಸಿದರು.

ನಗರದ ಕೋಟೆ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೀದಿ ಬದಿ ವ್ಯಾಪಾರಿಗಳ ದಿನಾಚರಣೆ ಹಾಗೂ ಸಂಘದ 6 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಹುತೇಕ ಬೀದಿ ಬದಿಯ ವ್ಯಾಪಾರಸ್ಥರು ಅನಕ್ಷರಸ್ಥರಾಗಿದ್ದು ಜಾಗೃತಿಯ ಕೊರತೆಯಿಂದ ಹಲವಾರು ಸವಲತ್ತುಗಳು ಸಕಾಲಕ್ಕೆ ಸಿಗುತ್ತಿಲ್ಲ ಎನ್ನುವ ಬೇಸರದ ನಡುವೆಯೂ ಬೀದಿ ಬದಿಯ ವ್ಯಾಪಾರಿಗಳ ತಾಲ್ಲೂಕು ಸಂಘ ರಚನೆಯಾದ ಮೇಲೆ ಸಮಸ್ಯೆಗಳು ಒಂದೊಂದಾಗಿ ನಿವಾರಣೆಯಾಗುತ್ತಿವೆ ಎಂದರು.

ಬೀದಿ ಬದಿ ವ್ಯಾಪಾರಿಗಳು ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ, ಎಲ್ಲ ವರ್ಗದವರೂ ಸೇರಿ ಬೀದಿ ಬದಿ ವ್ಯಾಪಾರಿ ಎಂಬ ಒಂದೇ ಗುರುತನ್ನು ಹೊಂದಿದ್ದೇವೆ. ಬೀದಿ ಬದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವುಗೊಳಿಸುವಂತಿಲ್ಲ ಎಂದು ಭಾರತದ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈಕೋರ್ಟ್ ಸ್ಪಷ್ಟ ಆದೇಶ ನೀಡಿವೆ. ಮಹಾರಾಷ್ಟ್ರದ ಪ್ರಕರಣವೊಂದರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 92ನೇ ಕಾಯ್ದೆಯಡಿ ಸುಪ್ರೀಂ ಕೋರ್ಟ್ ವ್ಯಾಪಾರಿಗಳ ಪರವಾಗಿ ತೀರ್ಪು ನೀಡಿದೆ. ಈ ಕಾಯ್ದೆಯ ಅಡಿಯಲ್ಲಿ ಪ್ರತಿಯೊಬ್ಬ ವ್ಯಾಪಾರಿಯೂ ಕಾನೂನುಬದ್ಧವಾಗಿ, ಭಯವಿಲ್ಲದೆ ವ್ಯಾಪಾರ ನಡೆಸಬಹುದು ಎಂದರು.

ದೇಶಾದ್ಯಂತ ಸುಮಾರು 1 ಕೋಟಿ ಬೀದಿ ಬದಿ ವ್ಯಾಪಾರಿಗಳು ನೋಂದಾಯಿತರಾಗಿದ್ದು, ರಾಜ್ಯದಲ್ಲಿ 4.80 ಲಕ್ಷ ಮಂದಿ ಇದ್ದಾರೆ. ಶಿಡ್ಲಘಟ್ಟದಲ್ಲಿ ಒಟ್ಟು 1,180 ಮಂದಿ ವ್ಯಾಪಾರಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೀದಿ ಬದಿ ವ್ಯಾಪಾರಿಗಳಿಗಾಗಿ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ. ವಿಶೇಷವಾಗಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ ಎಂಟು ವಿಭಿನ್ನ ಯೋಜನೆಗಳಿದ್ದು, ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆಯಬಹುದು. ಕೇವಲ 12 ರೂ. ಮತ್ತು 440 ರೂ. ಪ್ರೀಮಿಯಂನಲ್ಲಿ ಸರ್ಕಾರವೇ ವಿಮಾ ಸೌಲಭ್ಯ ಒದಗಿಸುತ್ತಿದೆ. ವ್ಯಾಪಾರಿಗಳು ಈ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದರು.

ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕಾವ್ಯಶ್ರೀ, ಬೀದಿ ಬದಿ ವ್ಯಾಪಾರಿಗಳ ಸಂಘದ ತಾಲೂಕು ಅಧ್ಯಕ್ಷ ಶ್ರೀರಾಮ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದಗೌಡ, ಮಾನವ ಹಕ್ಕುಗಳ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಸಿ.ಎಂ.ಬೈರೇಗೌಡ, ನಗರಸಭೆ ಅಧಿಕಾರಿ ಸುಧಾ, ಮುಖಂಡರಾದ ಡಾ.ಸತ್ಯನಾರಾಯಣರಾವ್, ವಿಸ್ಡಂ ನಾಗರಾಜ್, ಮಧುಲತಾ, ರೈತ ಮುಖಂಡ ರವಿಪ್ರಕಾಶ್, ಪ್ರದೀಪ್, ಸೇರಿದಂತೆ ತಾಲ್ಲೂಕು ಸಮಿತಿಯ ಸದಸ್ಯರಾದ ಗೋಪಾಲ್, ಸುರೇಶ್, ತಿಮ್ಮರಾಯಪ್ಪ, ವೆಂಕಟರವಣಪ್ಪ, ಗೋವಿಂದಪ್ಪ, ಮಹೇಶ್, ಲಕ್ಷ್ಮಿದೇವಿ, ಮುನಿರತ್ನಮ್ಮ, ಪಾರ್ವತಮ್ಮ, ಪದ್ಮಮ್ಮ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version