
Sidlaghatta : ತಾಲ್ಲೂಕಿನ ತುಮ್ಮನಹಳ್ಳಿಯ ಹಾಳು ಬಾವಿಗೆ ಬಿದ್ದಿದ್ದ ಕೃಷ್ಣಮೃಗದ ಮರಿಯನ್ನು ಶುಕ್ರವಾರ ಅಗ್ನಿಶಾಮಕ ದಳದವರು ರಕ್ಷಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ನೀಡಿದರು.
ತುಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು 40 ಅಡಿ ಆಳದ ಹಾಳು ಬಾವಿಗೆ ಕೃಷ್ಣಮೃಗದ ಮರಿ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು, ಹಗ್ಗಗಳು ಕಟ್ಟಿಕೊಂಡು ಬಾವಿಗೆ ಇಳಿದು, ಕೃಷ್ಣಮೃಗದ ಮರಿ ಗಾಬರಿ ಆಗದಂತೆ ಅದರ ಮುಖವನ್ನು ಬಟ್ಟೆಯಲ್ಲಿ ಮುಚ್ಚಿ, ಹಗ್ಗದ ಸಹಾಯದಿಂದ ಮೇಲೆತ್ತಿದರು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಿದರು.
ಅಗ್ನಿಶಾಮಕ ಠಾಣಾಧಿಕಾರಿ ಕೆ .ಲೋಕೇಶ್, ಸಿಬ್ಬಂದಿ ಜಿ.ಅಶೋಕ, ರತ್ನ ಭೂಷಣ ಮುಖರೆ, ಕೆ.ಶ್ರೀನಿವಾಸ, ರಕ್ಷಿತ್ ಹಾಜರಿದ್ದರು.