Home News ಶ್ರೀವೀರಣ್ಣಸ್ವಾಮಿ ಶ್ರೀಕೆಂಪಣ್ಣಸ್ವಾಮಿ ದೇವಾಲಯ ಟ್ರಸ್ಟ್ನಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಶ್ರೀವೀರಣ್ಣಸ್ವಾಮಿ ಶ್ರೀಕೆಂಪಣ್ಣಸ್ವಾಮಿ ದೇವಾಲಯ ಟ್ರಸ್ಟ್ನಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

0
Sri Veeranna swamy Sri Kempanna swamy Temple Trust Felicitation

Sidlaghatta : ವಿದ್ಯಾರ್ಥಿಗಳು ಮತ್ತು ಯುವ ಜನರ ಮೇಲೆ ಈ ಸಮಾಜ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಆ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸದೆ ಎಲ್ಲವನ್ನೂ ಸಾಕಾರಗೊಳಿಸುವ ನಿಟ್ಟಿನಲ್ಲಿ ನಿಮ್ಮ ಬದುಕು ಸಾಗಬೇಕು, ನೀವು ನಡೆಸುವ ಸಮಾಜಮುಖಿ ಬದುಕು ಸಮಾಜ ಸ್ಮರಿಸುವಂತೆ ಇರಬೇಕು ಎಂದು ವಿಜಯಪುರದ ಶ್ರೀಗುರಪ್ಪಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಮಹಾಸ್ವಾಮಿ ತಿಳಿಸಿದರು.

ತಾಲ್ಲೂಕಿನ ಹಂಡಿಗನಾಳದ ಶ್ರೀವೀರಣ್ಣಸ್ವಾಮಿ ಶ್ರೀಕೆಂಪಣ್ಣಸ್ವಾಮಿ ದೇವಾಲಯ ಟ್ರಸ್ಟ್ನಿಂದ ಹಂಡಿಗನಾಳದ ಕೆವಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ 12ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ಮಾನವರಾಗಿ ಜನಿಸಿ ತಾವು ಮಾಡುವ ಪುಣ್ಯ ಕೆಲಸ, ಸಾಮಾಜಿಕ ಕಾರ್ಯಗಳ ಮೂಲಕ ದೇವರಾಗುತ್ತಾರೆ ಎನ್ನುವುದಕ್ಕೆ ಶ್ರೀವೀರಣ್ಣಸ್ವಾಮಿ ಹಾಗೂ ಶ್ರೀಕೆಂಪಣ್ಣಸ್ವಾಮಿಗಳು ನಮ್ಮ ಮುಂದೆ ಜೀವಂತ ಉದಾಹರಣೆಯಾಗಿದ್ದಾರೆ. ಸಮಾಜದಲ್ಲಿ ಮನುಷ್ಯರಾಗಿ ಹುಟ್ಟಿ ನಂತರ ಅವರು ತಮ್ಮ ಬದುಕಿನ ಉದ್ದಕ್ಕೂ ಮಾಡುವ ಪುಣ್ಯದ ಕೆಲಸ ಕಾರ್ಯಗಳ ಮೂಲಕ ಜನ ಮಾನಸದಲ್ಲಿ ದೇವರಾಗಿ ಅಜರಾಮರರಾದ ಅನೇಕ ಮಂದಿ ಮಹನೀಯರು ಇದ್ದಾರೆ. ಅವರು ಇದ್ದ ಈ ನೆಲದಲ್ಲಿ ಹುಟ್ಟಿದ ನಾವು ಧನ್ಯರು ಎಂದರು.

ಶ್ರೀವೀರಣ್ಣ ಶ್ರೀಕೆಂಪಣ್ಣ ಅವರು ಈ ನೆಲದ ಸಾಂಸ್ಕೃತಿಕ ಪ್ರತಿನಿಧಿಗಳು, ರಾಯಭಾರಿಗಳು. ಧ್ವನಿ ಇಲ್ಲದವರ ಪರ, ಶೋಷಿತರ ಪರ ನಿಂತವರು ಮತ್ತು ಅವರ ತ್ಯಾಗ ಧಾನ ಧರ್ಮದ ಒಳ್ಳೆಯ ಚಿಂತನೆಗಳಿAದ ಮತ್ತು ಹಾಗೆಯೆ ಬದುಕಿ ದೇವರ ಸ್ವರೂಪ ಪಡೆದವರು ಎಂದು ಹೇಳಿದರು.

ಈ ಟ್ರಸ್ಟ್ನವರು ಮಾಡುತ್ತಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆದಾಯಕ ಹಾಗೂ ಸ್ಪೂರ್ತಿದಾಯಕವಾಗಿದೆ. ಇಲ್ಲಿ ಪ್ರೇರಣೆ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಮಾನ ಪಡೆದವರು ಮತ್ತೆ ಸಮಾಜಕ್ಕೆ ಏನಾದರೂ ಕೊಡುವ ಮನಸ್ಥಿತಿ ಬೆಳೆಸಿಕೊಳ್ಳಬೇಕೆಂದರು.

ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಮಾತನಾಡಿ, ಶಿಕ್ಷಣವು ನಮ್ಮೆಲ್ಲರ ಬದುಕನ್ನು ರೂಪಿಸುತ್ತದೆ. ಜತೆಗೆ ಈಗಿನ ಸ್ಪರ್ಧಾ ಯುಗದಲ್ಲಿ ಕೇವಲ ಶಿಕ್ಷಣ ಪಡೆದರಷ್ಟೆ ಸಾಲದು, ವೃತ್ತಿ ಕೌಶಲ್ಯವನ್ನು ಪಡೆದು ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕೆಂದರು.

ನಾವು ಇಂದು ಏನು ಪಡೆದಿದ್ದೇವೋ ಅದೆಲ್ಲವೂ ಈ ಸಮಾಜದಿಂದ ನಮಗೆ ದೊರೆತಿದ್ದು ಮತ್ತೆ ನಾವು ಈ ಸಮಾಜಕ್ಕೆ ಯಾವುದೇ ರೂಪದಲ್ಲಾದರೂ ಅದನ್ನು ಹಿಂದಕ್ಕೆ ತಿರುಗಿಸಿಕೊಡಬೇಕು, ಆಗಲೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ, ನಮ್ಮ ಬದುಕು ಕೂಡ ಸಾರ್ಥಕವಾಗಲಿದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ ಮಾತನಾಡಿ, ಅಖಂಡ ಕೋಲಾರ ಜಿಲ್ಲೆಯು ಈ ದೇಶಕ್ಕೆ ಇಬ್ಬರು ಭಾರತ ರತ್ನಗಳನ್ನು ಕೊಟ್ಟಂತಹ ಜಿಲ್ಲೆ. ಅತಿ ಹೆಚ್ಚು ಐಎಎಸ್, ಕೆಎಎಸ್, ವಕೀಲರನ್ನು ಕೊಟ್ಟಂತ ಚಿನ್ನದ ನಾಡು ಎಂದರು.

ಪ್ರತಿಭಾ ಪುರಸ್ಕಾರವು ನಿಮಗೆ ಮತ್ತು ನಿಮ್ಮ ಕಿರಿಯರಿಗೆ ಪ್ರೇರಣೆ ಆಗಬೇಕು, ನಿಮ್ಮ ಸಾಧನೆಗೆ ಇದು ಪೂರಕವಾಗಲಿ, ಸಮಾಜಕ್ಕೆ ನಿಮ್ಮ ಕೊಡುಗೆ ಅಪಾರವಾಗಿ ಸಿಗುವಂತೆ ನೀವು ಬೆಳೆದು ನಿಲ್ಲಬೇಕೆಂದು ಆಶಿಸಿದರು.

SSLC ಮತ್ತು ದ್ವಿತೀಯ PUC ಯಲ್ಲಿ ಅತಿ ಹೆಚ್ಚು ಅಂಕ ಪಡೆದ 120 ವಿದ್ಯಾರ್ಥಿಗಳನ್ನು ಅಭಿನಂದನಾ ಪತ್ರ, ನಗದು ನೀಡಿ ಪುರಸ್ಕರಿಸಲಾಯಿತು. ಪ್ರತಿಭಾಪುರಸ್ಕಾರ ಪಡೆದು ಉದ್ಯೋಗಕ್ಕೆ ಸೇರಿ ಮೊದಲ ವೇತನವನ್ನು ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ದೇಣಿಗೆ ನೀಡಿದ ಜ್ಯೋತಿಪುರ ಚಿರಾಗ್, ಸಾವುಕನಹಳ್ಳಿ ಲಾವಣ್ಯ, ಮೇಲೂರು ಡಾ.ವರಲಕ್ಷ್ಮೀನವೀನ್‌ಗೌಡ, ಮಲ್ಲೇನಹಳ್ಳಿ ಡಾ.ದಾಮಿನಿ, ಜಂಗಾಲಹಳ್ಳಿ ಜೆ.ಎನ್.ಮನೀಷ ಅವರನ್ನು ಸನ್ಮಾನಿಸಲಾಯಿತು.

ಶ್ರೀಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಶ್ರೀವೀರಣ್ಣಸ್ವಾಮಿ ಶ್ರೀಕೆಂಪಣ್ಣಸ್ವಾಮಿ ಅಭಿವೃದ್ದಿ ಟ್ರಸ್ಟ್ನ ಅಧ್ಯಕ್ಷ ಎನ್.ನಾಗರಾಜ್ ಅಧ್ಯಕ್ಷತೆವಹಿಸಿದ್ದರು. ಟ್ರಸ್ಟ್ನ ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಕಾರ್ಯದರ್ಶಿ ಅಶ್ವತ್ಥಯ್ಯ, ಖಜಾಂಚಿ ಮುನಿಸ್ವಾಮಿಗೌಡ, ರಾಮದಾಸ್, ಸ್ಕೂಲ್ ದೇವರಾಜ್, ಗೊರಮಡಗು ರಾಜಣ್ಣ, ಆನೂರು ವಿಜಯೇಂದ್ರ, ಡಾ.ನವೀನ್, ಸೌಭಾಗ್ಯ,  ರಾಜಗೋಪಾಲ್ ಇನ್ನಿತರರು ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version