
Handiganala, Sidlaghatta : ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶ ಅವರು ದಾರಿ ತಪ್ಪದೇ ಸನ್ಮಾರ್ಗದಲ್ಲಿ ನಡೆದು ವಿದ್ಯಾವಂತರಾಗಿ ಕೀರ್ತಿವಂತರಾಗಲಿ ಎಂಬುದಾಗಿದೆ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆ.ವಿ.ಭವನದಲ್ಲಿ ಭಾನುವಾರ ಶ್ರೀ ಕೆಂಪಣ್ಣಸ್ವಾಮಿ, ಶ್ರೀ ವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ 11 ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಬರಿ ವಿದ್ಯೆ ಇದ್ದರೆ ಸಾಲದು ಮಾನವೀಯ ಮೌಲ್ಯ, ಸನ್ನಡತೆ, ಸಂಸ್ಕಾರ, ವಿವೇಕ ಸಹ ಇರಬೇಕು. ಆತ್ಮವಿದ್ಯೆಯಿಂದ ಜ್ಞಾನ ಬರುತ್ತೆ, ಹೊರಗಿನ ವಿದ್ಯೆಯಿಂದ ಸಂಸ್ಕಾರ ಬೆಳೆಯುತ್ತೆ. ವಿದ್ಯಾರ್ಥಿಗಳು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು, ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪಠ್ಯೇತರ ಓದುವಿಕೆಯು ಆಲೋಚನಾ ಪರಿಧಿಯನ್ನು ವಿಕಸನಗೊಳಿಸುತ್ತದೆ. ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇತರರಿಗೆ ಮಾದರಿಯಾಗುವಂತೆ ಸಾಧಕರಾಗಬೇಕು. ಸೇವಾ ಮನೋಭಾವ ಹಾಗೂ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಮನೋಬಾವ ಬೆಳೆಸಿಕೊಳ್ಳಿ ಎಂದರು.
ಪೊಲೀಸ್ ಎಸ್.ಪಿ.ಕುಶಾಲ್ ಚೌಕ್ಸೆ ಮಾತನಾಡಿ, ಮಕ್ಕಳು ಮೊಬೈಲ್ ಬಳಸಲಿ, ಆದರೇ ಕೆಟ್ಟದ್ದಕ್ಕೆ ಬಳಸಬಾರದು . ತಂತ್ರಜ್ಞಾನ ಅಪಾರ ಜ್ಞಾನ ನೀಡುತ್ತಿದೆ. ಅದನ್ನು ಒಳ್ಳೆಯ ರೀತಿ ಬಳಸಬೇಕು. ಹಿರಿಯರನ್ನು ಗೌರವಿಸುವ ಸಮಾಜ ಉನ್ನತಿಯಾಗುತ್ತದೆ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಂಕಗಳಷ್ಟೇ ಮುಖ್ಯವಲ್ಲ, ಬದುಕಿನ ಬಗ್ಗೆ ತಿಳಿವಳಿಕೆ ಬಹಳ ಮುಖ್ಯ. ಹೆಣ್ಣು ಮಕ್ಕಳ ಅಗಾಧವಾದ ಸಾಧನೆ ನಮ್ಮ ಕಣ್ಣಮುಂದಿದೆ. ಸಾಧಕರ ಪರಿಶ್ರಮ, ಚಿಂತನೆ, ಸಮಾಜಮುಖಿ ನಡವಳಿಕೆ ಮಾರ್ಗದರ್ಶನವಾಗಲಿ ಎಂದು ಹೇಳಿದರು.
ಶ್ರೀ ಕೆಂಪಣ್ಣಸ್ವಾಮಿ, ಶ್ರೀ ವೀರಣ್ಣಸ್ವಾಮಿ ದೇವಾಲಯದ ಒಕ್ಕಲಿನಕುಲಬಾಂಧವರ ಮಕ್ಕಳಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಪರೀಕ್ಷೆ ಮತ್ತು ಉನ್ನತ ಶಿಕ್ಷಣದಲ್ಲಿ 2024-2025ನೇ ಸಾಲಿನಲ್ಲಿ ಶೇ 85 ಕ್ಕಿಂತಲೂ ಹೆಚ್ಚು ಅಂಕಗಳಿಸಿರುವ ಒಟ್ಟು 82 ಮಕ್ಕಳನ್ನು ಪೋಷಕರೊಂದಿಗೆ ಪುರಸ್ಕರಿಸಲಾಯಿತು.
ಶ್ರೀಕೆಂಪಣ್ಣಸ್ವಾಮಿ ಶ್ರೀವೀರಣ್ಣಸ್ವಾಮಿ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಎನ್.ನಾಗರಾಜ್, ಉಪಾಧ್ಯಕ್ಷ ಬಿಳಿಶಿವಾಲೆ ರವಿ, ಕಾರ್ಯದರ್ಶಿ ಅಶ್ವತ್ಥಯ್ಯ, ಖಜಾಂಚಿ ಮುನಿಶಾಮಿಗೌಡ, ಟ್ರಸ್ಟಿಗಳಾದ ಚಿಕ್ಕದಾಸರಹಳ್ಳಿ ದೇವರಾಜ್, ಗೊರಮಡಗು ರಾಜಣ್ಣ, ಜೆ.ವೆಂಕಟಸ್ವಾಮಿ, ಪುರುಶೋತ್ತಮ್ ಹಾಜರಿದ್ದರು.