
Sidlaghatta : ಪ್ರವಾಸಕ್ಕೆಂದು ದುಬೈಗೆ ತೆರಳಿದ್ದ ವೈದ್ಯ ದಂಪತಿ ಹಾಗೂ ಪುತ್ರಿ ಸ್ವದೇಶಕ್ಕೆ ವಾಪಸ್ ಬರಲಾಗದೆ ಮೂರು ದಿನಗಳಿಂದ ದುಬೈನಲ್ಲೇ ಉಳಿದುಕೊಂಡಿದ್ದರೆ. ತಮ್ಮೊಂದಿಗೆ ಪ್ರವಾಸಕ್ಕೆ ಬಂದಿರುವ ನಾಲ್ಕು ಮಂದಿ ದಂಪತಿಗಳು, ನಾಲ್ಕು ಮಂದಿ ಮಕ್ಕಳು ಸೇರಿ ಒಟ್ಟು 12 ಮಂದಿ ದುಬೈನ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದು ಸುರಕ್ಷಿತವಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕು ಗಂಗನಹಳ್ಳಿಯ ಡಾ.ಮಧುಕರ್, ಪತ್ನಿ ಡಾ.ನಮಿತ ಹಾಗೂ ಐದು ವರ್ಷದ ಪುತ್ರಿ ರಿತಿಕ್ಷ ಅವರು ತಮ್ಮ ಸ್ನೇಹಿತರ ಜತೆ ಸೇರಿ 8 ದಿನಗಳ ದುಬೈ ಪ್ರವಾಸಕ್ಕೆಂದು ತೆರಳಿದ್ದು ದಿಢೀರ್ ವಿಮಾನಗಳ ಹಾರಾಟ ಬಂದ್ ಆಗಿದ್ದರಿಂದ ಭಾರತಕ್ಕೆ ಬರಲಾಗದೆ ಡಾ.ಮಧುಕರ್ ಅವರ ಕುಟುಂಬ ಪ್ರವಾಸಕ್ಕೆ ಬಂದಿದ್ದ ಸ್ನೇಹಿತರ ಆತಂಕ ಮುಂದುವರೆದಿದೆ.
ಗಂಗನಗಳ್ಳಿಯ ರೈತ ಕುಟುಂಬದ ಪ್ರಮೀಳಮ್ಮ, ವೆಂಕಟೇಶಪ್ಪ ದಂಪತಿಗಳ ಪುತ್ರ ಡಾ.ಮಧುಕರ್ ಅವರು ನೆಲಮಂಗಲ ಹಾಗೂ ಬೆಂಗಳೂರಲ್ಲಿ ಎಂ.ಕೆ.ಡಯಾಗ್ನೋಸ್ಟಿಕ್ ಸ್ವಂತ ಆಸ್ಪತ್ರೆ ಹೊಂದಿದ್ದು ಸ್ನೇಹಿತರೊಂದಿಗೆ ಮಧುಕರ್ ಕುಟುಂಬವು 8 ದಿನಗಳ ಪ್ರವಾಸಕ್ಕೆಂದು ದುಬೈಗೆ ತೆರಳಿದ್ದರು.
8 ದಿನಗಳ ದುಬೈ ಪ್ರವಾಸ ಮುಗಿಸಿ ಭಾನುವಾರ ಹುಟ್ಟೂರು ಗಂಗನಹಳ್ಳಿಗೆ ವಾಪಸ್ ಬರಬೇಕಿತ್ತು. ಆದರೆ ಯುದ್ಧದಿಂದಾಗಿ ದುಬೈನಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದರಿಂದ ಪ್ರವಾಸವನ್ನು ಸ್ಥಗಿತಗೊಳಿಸಿ ಹೋಟೆಲ್ವೊಂದರಲ್ಲಿ ಉಳಿದುಕೊಂಡಿದ್ದಾರೆ.
ವಿಷಯ ತಿಳಿದು ಗಂಗನಹಳ್ಳಿಯಲ್ಲಿನ ತಮ್ಮ ಹೆತ್ತವರು ಹಾಗೂ ಬಂಧು ಬಳಗ, ಸ್ನೇಹಿತರಲ್ಲಿ ಆತಂಕ ಮನೆ ಮಾಡಿದೆ. ಆದರೆ ಡಾ.ಮಧುಕರ್ ಅವರು ತಮ್ಮ ತಂದೆ ತಾಯಿ ಅವರೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದು ದಿನ ನಿತ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾರೆ.
ಇವರಿಗೆ ಅವರು ಅವರಿಗೆ ಇವರು ಪರಸ್ಪರ ಧೈರ್ಯ ತುಂಬುವ ಕೆಲಸ ನಡೆದಿದೆ. ಇದರ ಮಧ್ಯೆ ವಿಮಾನ ಹಾರಾಟ ಪುನರಾರಂಭವಾಗಿದ್ದು ಬುಧವಾರ ಮಧ್ಯಾಹ್ನ ಗಂಟೆಗೆ ದುಬೈನಿಂದ ಹೊರಡುವ ವಿಮಾನವನ್ನು ಡಾ.ಮಧುಕರ್ ದಂಪತಿಗಳು ಹಾಗೂ ಸ್ನೇಹಿತರು ಹತ್ತಲಿದ್ದಾರೆ.