
Sidlaghatta : ಕೈವಾರದ ತಾತಯ್ಯ ನಾರೇಯಣಪ್ಪ ಅವರ ಆಧ್ಯಾತ್ಮಿಕತೆ, ಚಿಂತನೆ ಹಾಗೂ ಕೀರ್ತನೆಗಳು ಇಂದಿಗೂ ಮುಂದೆಯೂ ಪ್ರಸ್ತುತವಾಗಿರುತ್ತವೆ. ಅವರ ದೂರದೃಷ್ಟಿಯಿಂದ ಕೂಡಿದ ಕೀರ್ತನೆಗಳು ಜಗತ್ತಿನಾದ್ಯಂತ ಜನಮನ್ನಣೆ ಪಡೆದುಕೊಂಡಿವೆ ಎಂದು ತಹಸೀಲ್ದಾರ್ ಗಗನಸಿಂಧು ತಿಳಿಸಿದರು.
ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದ ಈ ಭಾಗದಲ್ಲಿ ಕೈವಾರ ನಾರೇಯಣಪ್ಪ ಅವರ ಆಧ್ಯಾತ್ಮಿಕತೆಯ ಪ್ರಭಾವ ಹೆಚ್ಚು. ಅವರು ಕೀರ್ತನೆಗಳು ಜನ ಜೀವನದ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದ್ದು ಸರಳವಾಗಿ ಎಲ್ಲರಿಗೂ ಅರ್ಥವಾಗುವುದಿರಂದ ಹೆಚ್ಚು ಜನಪ್ರಿಯಗೊಂಡಿವೆ ಎಂದರು.
ಯೋಗಿ ಕೈವಾರ ನಾರೇಯಣಪ್ಪ ತಾತಯ್ಯನವರು ನಮ್ಮ ನಿಮ್ಮಂತೆ ಸಾಮಾನ್ಯರಾಗಿದ್ದು ಸಹಜವಾದ ಸಾಂಸಾರಿಕ ಬದುಕನ್ನು ನಡೆಸುತ್ತಿದ್ದರಾದರೂ ನಂತರ ಅವರ ಇಡೀ ಬದುಕನ್ನು ಸಮಾಜದ ಉದ್ದಾರಕ್ಕಾಗಿ ಮುಡುಪಾಗಿಟ್ಟ ಮಹನೀಯರಾಗಿ ಇತಿಹಾಸದ ಪುಟಗಳಲ್ಲಿ ಅವರು ಅಜರಾಮರರಾಗಿದ್ದಾರೆ ಎಂದು ಹೇಳಿದರು.
ಅವರು ದಶಕಗಳ ಹಿಂದೆಯೆ ಹೇಳಿದ ಎಲ್ಲ ಮಾತುಗಳು ಇದೀಗ ಸತ್ಯವಾಗುತ್ತಿವೆ. ಅವರ ಪ್ರತಿಯೊಂದ ಮಾತು ನುಡಿಯೂ ನೂರಕ್ಕೆ ನೂರರಷ್ಟು ಸತ್ಯವಾಗಿದ್ದು ಅವರ ಬದುಕು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಬೇಕಿದೆ ಎಂದು ಹೇಳಿದರು.
ತಾತಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಕೈವಾರ ತಾತಯ್ಯನವರ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಮಾಡಲಾಯಿತು.
ಕೈವಾರ ನಾರಾಯಣ ತಾತಯ್ಯನವರ ಜಯಂತಿ ಸಮಿತಿಯ ಬಿ. ಕೆ. ವೇಣುಗೋಪಾಲ್, ಕೆ. ದೇವರಾಜ್, ವೀರಾಂಜನೇಯ ಸ್ವಾಮಿ ಸಮಿತಿ ಅಧ್ಯಕ್ಷ ಕುಚ್ಚಣ್ಣನವರ ಅನಂತು, ಮಹಿಳಾ ಅಧ್ಯಕ್ಷೆ ರಾಗಿಣಿ ದೇವಿ, ಸೋಮಣ್ಣ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎ.ನಾಗರಾಜ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದ ಗೌಡ ಹಾಜರಿದ್ದರು.