
Sidlaghatta : ಯಾವುದೇ ವ್ಯಕ್ತಿಗೆ ಆಕಸ್ಮಿಕವಾಗಿ ಅನಾಹುತ ಆದಾಗ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದರೆ ಹೆಚ್ಚಿನ ಪ್ರಮಾಣದಲ್ಲಾಗುವ ತೊಂದರೆಯನ್ನು ತಪ್ಪಿಸಬಹುದು ಎಂದು ಪರಿಸರವಾದಿ ಹಾಗೂ ಗೌರವ ವನ್ಯಪ್ರಾಣಿ ಪರಿಪಾಲಕರ ಸಂಘದ ಅಧ್ಯಕ್ಷ ನಂದಿದುರ್ಗ ಬಾಬುಗೌಡ ತಿಳಿಸಿದರು.
ನಗರದ ಬೈಪಾಸ್ ರಸ್ತೆಯಲ್ಲಿರುವ ಜ್ಞಾನಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಥಮ ಚಿಕಿತ್ಸೆ ಕುರಿತು ಅರಿವು ಮೂಡಿಸುವ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಥಮ ಚಿಕಿತ್ಸೆ ಮುಖ್ಯ ಉದ್ದೇಶ ಹೆಚ್ಚಿನ ತೊಂದರೆಯಿಂದ ಪಾರಾಗಿ, ಸುರಕ್ಷತೆಯತ್ತ ಪ್ರಥಮ ಚಿಕಿತ್ಸೆ ನೀಡುವುದು. ಚಿಕಿತ್ಸೆ ತರಬೇತಿ ಪಡೆದವರು ಮಾತ್ರ ಪ್ರಥಮ ಚಿಕಿತ್ಸೆ ನೀಡಬೇಕು. ಎಲ್ಲರೂ ಪ್ರಥಮ ಚಿಕಿತ್ಸೆಯ ಬಗ್ಗೆ ತಿಳಿದುಕೊಂಡಿರಬೇಕು. ಅದರಲ್ಲೂ ಪ್ರಥಮ ಚಿಕಿತ್ಸೆ ಬಗ್ಗೆ ಅರಿವು ವಿದ್ಯಾರ್ಥಿಗಳಲ್ಲಿ ಇರುವುದು ಬಹಳ ಅವಶ್ಯವಾಗಿದೆ ಎಂದರು.
ರಸ್ತೆ ಅಪಘಾತ, ಬೆಂಕಿ ಅನಾಹುತ ,ಅರಣ್ಯ ಬೆಂಕಿ, ಸಿವಿಲ್ ಡಿಫೆನ್ಸ್, ಹಾವು ಕಡಿತ, ವಿಷ ಸೇವೆನೆಗೆ ಪ್ರಥಮ ಚಿಕಿತ್ಸೆ, ವನ್ಯಜೀವಿಗಳ ಅಧ್ಯಯನ, ರಾಷ್ಟ್ರೀಯ ಉದ್ಯಾನ ವನಗಳ, ಆಂಬುಲೆನ್ಸ್ ಗಾಯಾಳುಗಳ ಸಾಗಾಣಿಕೆಯ ಬಗ್ಗೆ, ಮೂಳೆಮುರಿತ ಕ್ಕೆ ವಿವಿಧ ಬ್ಯಾಂಡೇಜ್ ಗಳು ಇತರೆ ಮಾಹಿತಿಗಳನ್ನು ಪ್ರಥಮ ಚಿಕಿತ್ಸೆಯ ವಿಧಾನಗಳನ್ನು ತಿಳಿಸಿಕೊಟ್ಟರು.
ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ ಕುರಿತು ಅರಿವು ಹಾಗೂ ತರಬೇತಿ ಪಡೆದು ಸಕಾಲದಲ್ಲಿ ತೊಂದರೆಗೊಳಗಾದವರಿಗೆ ನೆರವು ನೀಡಿದಾಗ ಅಮೂಲ್ಯವಾದ ಜೀವವನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಗೌರವ ವನ್ಯಪ್ರಾಣಿ ಪರಿಪಾಲಕರ ಸಂಘದ ನಿರ್ದೇಶಕರು ನಿಸರ್ಗ, ಪ್ರಾಂಶುಪಾಲರಾದ ಎಸ್. ವಿ. ಸುನೀತಾ, ಶಿಕ್ಷಕರಾದ ರವಿಕುಮಾರ್, ನಂದಿನಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.