
Sidlaghatta : ಹಾಲು ಎಲ್ಲ ವಯೋಮಾನದವರೂ ಸೇವಿಸಬಹುದಾದ ಉತ್ಕೃಷ್ಟವಾದ ಪೌಷ್ಟಿಕ ಆಹಾರವಾಗಿದ್ದು ಸುಲಭವಾಗಿಯೂ ಎಲ್ಲ ಕಡೆ ಸಿಗಲಿದೆ. ದಿನ ನಿತ್ಯವೂ ಹಾಲು ಸೇವಿಸಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ KOCHIMUL ನ ಶಿಬಿರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಡಾ.ರವಿ ಕಿರಣ್ ತಿಳಿಸಿದರು.
“ವಿಶ್ವ ಹಾಲು ದಿನ” ಅಂಗವಾಗಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟ(ಕೋಚಿಮುಲ್)ದಿಂದ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಒಳ ರೋಗಿಗಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಹಾಲಿನ ಪ್ಯಾಕೇಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಹಾಲು ಉತ್ಕೃಷ್ಟ, ಪೌಷ್ಟಿಕ ಪದಾರ್ಥ ಮಾತ್ರವಲ್ಲ ನಮ್ಮ ಬದುಕು, ಸಂಪ್ರದಾಯದಲ್ಲಿ ಪವಿತ್ರ ಸ್ಥಾನವನ್ನು ಹೊಂದಿದ್ದು ಆಹಾರವಾಗಿ ಸೇವಿಸುವ ಜತೆಗೆ ಪೂಜೆಯಲ್ಲೂ ಹಾಲನ್ನು ಬಳಸುವುದುಂಟು. ಹಾಲು ಅಷ್ಟರಮಟ್ಟಿಗೆ ಪವಿತ್ರ ಸ್ಥಾನವನ್ನು ಪಡೆದುಕೊಂಡಿದೆ ಎಂದರು.
ಹಾಲಿನಲ್ಲಿ ಅಧಿಕವಾದ ಪ್ರೊಟೀನ್ಸ್, ವಿಟಮಿನ್ಸ್, ಕಾರ್ಬೋ ಹೈಡ್ರೈಟ್ಸ್, ಕ್ಯಾಲ್ಸಿಯಂ ಇನ್ನಿತರೆ ದೈಹಿಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ಅಂಶಗಳು ಕೂಡ ಅಧಿಕ ಪ್ರಮಾಣದಲ್ಲಿದ್ದು ಎಲ್ಲ ವಯೋ ಮಾನದವರು ಕೂಡ ಹಾಲನ್ನು ದಿನ ನಿತ್ಯ ಸೇವಿಸಬಹುದು ಎಂದರು.
ಹುಟ್ಟಿದ ಮಗುವಿನಿಂದ 14 ವರ್ಷದೊಳಗಿನ ಮಕ್ಕಳ ದೈಹಿಕ ಬೆಳವಣಿಗೆಗೆ ಹಾಲು ಪರಿಣಾಮಕಾರಿಯಗಿ ಕಾರ್ಯನಿರ್ವಹಿಸಲಿದ್ದು ಎಲ್ಲ ಹೆತ್ತವರು ತಮ್ಮ 14 ವರ್ಷದೊಳಗಿನ ಮಕ್ಕಳಿಗೆ ಹಾಲನ್ನು ನೀಡಿ ಎಂದು ಮನವಿ ಮಾಡಿದರು.
ಬೇರೆಲ್ಲಾ ಕಂಪನಿಗಳಿಗೆ ಹೋಲಿಸಿದರೆ ನಂದಿನಿ ಹಾಲು ಬಹಳ ಉತ್ಕೃಷ್ಟ, ಗುಣಮಟ್ಟದಿಂದ ಕೂಡಿದ್ದು ಹಾಲು ಸೇರಿದಂತೆ ಎಲ್ಲ ಉತ್ಪನ್ನಗಳನ್ನು ಆರೋಗ್ಯ ದೃಷ್ಟಿಯಿಂದ ಉತ್ಪಾದಿಸಲಾಗುತ್ತಿದೆಯೆ ಹೊರತು ಲಾಭದ ದೃಷ್ಟಿಯಿಂದಲ್ಲ. ಹಾಗಾಗಿ ನಂದಿನ ಹಾಲು ಹಾಗೂ ಇತರೆ ಉತ್ಪನ್ನಗಳನ್ನಷ್ಟೆ ಬಳಸಿ ಎಂದು ಮನವಿ ಮಾಡಿದರು.
ಪ್ರತಿ ವರ್ಷ ಜೂನ್ 1 ರಂದು ವಿಶ್ವ ಹಾಲು ದಿನವನ್ನು ಆಚರಣೆ ಮಾಡಿ ಹಾಲಿನ ಗುಣಮಟ್ಟ, ಹಾಲಿನ ಮಹತ್ವವನ್ನು ವಿವರಿಸಿ ಹಾಲು ಸೇವನೆಯಿಂದ ಆಗುವ ಉಪಯೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಹಾಲು ಬಳಕೆಯ ಪ್ರಮಾಣವನ್ನು ಹೆಚ್ಚಿಸಿ, ಜನ ಸಾಮಾನ್ಯರ ಆರೋಗ್ಯ ಮಟ್ಟ ಸುಧಾರಣೆ ಆಗುವಂತೆ ಮಾಡುವುದೆ ಈ ದಿನದ ಉದ್ದೇಶ ಎಂದು ವಿವರಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಒಳ ರೋಗಿಗಳು, ಗರ್ಭಿಣಿ ಹಾಗೂ ಬಾಣಂತಿಯರಿಗೆ ಹಾಲಿನ ಪ್ಯಾಕೇಟ್ ಗಳನ್ನು ವಿತರಿಸಿ ಹಾಲಿನ ಮಹತ್ವವನ್ನು ವಿವರಿಸಿ ಹೆಚ್ಚು ಹಾಲು ಬಳಕೆ ಮಾಡುವಂತೆ ಮನವಿ ಮಾಡಿದರು. ಆಸ್ಪತ್ರೆಯ ಡಾ.ಮಂಜಯ್ಯ ನಾಯ್ಕ್, ಕೋಚಿಮುಲ್ ಸಿಬ್ಬಂದಿ ಹಾಜರಿದ್ದರು.