
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೇ ಪ್ರಪ್ರಥಮ ಬಾರಿಗೆ ನಗರದ 11ನೇ ವಾರ್ಡಿನ ನಗರಸಭಾ ಸದಸ್ಯ ಎಲ್.ಅನಿಲ್ ಕುಮಾರ್ ಅವರು ತಮ್ಮ ವಾರ್ಡಿನಲ್ಲಿ ಶೇ 99.36 ರಷ್ಟು ಲಸಿಕೆ ಹಾಕಿಸಿ, ಅದರ ದಾಖಲೀಕರಣ ಮಾಡಿ ತಾಲ್ಲೂಕು ಆಡಳಿತಕ್ಕೆ ನೀಡುತ್ತಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ, ನಗರದ 11ನೇ ವಾರ್ಡಿನ ಲಸಿಕೆ ಹಾಕಿಸಿಕೊಂಡ ಜನರ ಮಾಹಿತಿಯುಳ್ಳ ದಾಖಲೆಯನ್ನು ತಂದೊಪ್ಪಿಸಿದ ನಗರಸಭೆ ಸದಸ್ಯ ಎಲ್.ಅನಿಲ್ ಕುಮಾರ್ ಅವರನ್ನು ಗೌರವಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ವಾರ್ಡಿನಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ಪ್ರತಿಯೊಬ್ಬರಿಗೂ ಮನವೊಲಿಸಿ ಲಸಿಕೆ ಹಾಕಿಸಿರುವ ಕಾರ್ಯ ಶ್ಲಾಘನೀಯ, ಎಲ್ಲಾ ನಗರಸಭೆ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದೇ ರೀತಿ ಕೆಲಸ ಮಾಡಿ ತಾಲ್ಲೂಕಿನಲ್ಲಿ ಎಲ್ಲರಿಗೂ ಲಸಿಕೆ ಹಾಕಿಸಿ, ಆ ಮೂಲಕ ಕೊರೊನಾ ಬರದ ಹಾಗೆ ಶ್ರಮಿಸಬೇಕು ಎಂದರು.
ನಗರ ಸಭೆ ಪೌರಯುಕ್ತ ಶ್ರೀಕಾಂತ್ ಮಾತನಾಡಿ, ನಗರದ 11ನೇ ವಾರ್ಡಿನ ಸದಸ್ಯ ಎಲ್.ಅನಿಲ್ ಕುಮಾರ್ ಅವರು ತಮ್ಮ ವಾರ್ಡಿನಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸಿದ್ದಾರೆ. ಕೊರೊನ ಲಸಿಕೆ ಹಾಕಲು ಪ್ರಾರಂಭಿಸಿದ ದಿನದಿಂದಲೂ ಸಕ್ರಿಯವಾಗಿ ಜನರಿಗೆ ಮನವೊಲಿಸಿ, ವಾಹನ ಸೌಕರ್ಯವಿಲ್ಲದವರಿಗೆ ಆಟೋ ಮುಂತಾದ ವಾಹನಗಳಲ್ಲಿ ಕರೆದುಕೊಂಡು ಹೋಗಿ ಲಸಿಕೆ ಹಾಕಿಸಿ ಪುನಃ ಅವರ ಮನೆಯ ಬಳಿ ಬೀಡುವ ಕೆಲಸ ಮಾಡಿದ್ದಾರೆ. ಅವರ ವಾರ್ಡಿನಲ್ಲಿ ಯಾವುದೇ ಕುಂದು ಕೊರತೆ ಇದ್ದರೂ ತಕ್ಷಣ ಅದನ್ನು ಬಗೆಹರಿಸಲು ಶ್ರಮಿಸುತ್ತಾರೆ. ಇದೇ ರೀತಿ ತಾಲ್ಲೂಕಿನಾದ್ಯಂತ ಎಲ್ಲಾ ಜನಪ್ರತಿನಿಧಿಗಳೂ ಲಸಿಕೆ ಹಾಕಿಸಬೇಕೆಂದರು.
ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, ಜಿಲ್ಲಾಧಿಕಾರಿಗಳು ಪ್ರತಿಯೊಂದು ವಾರ್ಡುಗಳಲ್ಲೂ ಎಷ್ಟು ಮಂದಿ ಇದ್ದಾರೆ, ಗಂಡಸರು ಮತ್ತು ಹೆಂಗಸರು ಎಷ್ಟು, 18 ವರ್ಷಕ್ಕಿಂತ ಮೇಲ್ಪಟ್ಟವರು ಎಷ್ಟು ಮಂದಿ, ಲಸಿಕೆ ಹಾಕಿಸಿರುವವರು ಯಾರು, ಅವರ ದೂರವಾಣಿ ಸಂಖ್ಯೆ, ಲಸಿಕೆ ಹಾಕಿಸದಿದ್ದರೆ ಕಾರಣವೇನು, ಮೊದಲಾದ ಮಾಹಿತಿಯುಳ್ಳ ದಾಖಲೀಕರಣವನ್ನು ಪ್ರತಿಯೊಬ್ಬ ನಗರಸಭೆ ಸದಸ್ಯರು ಮಾಡಬೇಕೆಂದು ಸೂಚಿಸಿರುವರು. ನಗರದ 11ನೇ ವಾರ್ಡಿನ ಸದಸ್ಯ ಎಲ್.ಅನಿಲ್ ಕುಮಾರ್, ಈ ದಾಖಲೀಕರಣವನ್ನು ಅಚ್ಚುಕಟ್ಟಾಗಿ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಎಲ್.ಅನಿಲ್ ಕುಮಾರ್, ನಗರ ಸಭೆ ಸಿಬ್ಬಂದಿ ಮುರಳಿ, ನಗರ ಸಾರ್ವಜನಿಕ ಆಸ್ಪತ್ರೆಯ ಲೋಕೇಶ್, ಮುಖಂಡರಾದ ಮನೋಹರ್, ರಾಮಕೃಷ್ಣಪ್ಪ, ಎಲ್.ಮಧು, ಜಯರಾಮ್, ನಾಗರಾಜು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi