Sidlaghatta : ಶಿಡ್ಲಘಟ್ಟ ನಗರದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ.ಪೂಜಾ ಅವರು ಮಾತನಾಡಿದರು.
ಈ ನಾಡಿನ ಎಲ್ಲರಿಗೂ ಸಮಾನವಾದ ಕಾನೂನಿದೆ. ಎಲ್ಲರಿಗೂ ಸಮಬಾಳು ಸಮಪಾಲು ಎಂಬುದು ನಮ್ಮ ಸಂವಿಧಾನದ ಆಶಯವಾಗಿದ್ದು ಅದನ್ನು ಅನುಷ್ಠಾನ ಮಾಡಲು ಸರ್ಕಾರ ಮಾತ್ರ ಪ್ರಯತ್ನಿಸಿದರೆ ಸಾಲದು ಎಲ್ಲರ ಪ್ರಯತ್ನ ಮುಖ್ಯ. ಸಮಾಜದಲ್ಲಿನ ಎಲ್ಲ ವರ್ಗ ಜಾತಿ ಧರ್ಮದವರಿಗೂ ಸಮಾನ ಅವಕಾಶ ಹಾಗೂ ಸವಲತ್ತುಗಳನ್ನು ಸಿಗುವಂತೆ ಮಾಡಬೇಕು. ಇದು ಒಬ್ಬರಿಂದ ಆಗುವ ಕೆಲಸ ಅಲ್ಲ ಎಲ್ಲರೂ ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.
ಜಾತಿ, ಮತ, ಧರ್ಮದ ತಾರತಮ್ಯ ಇಲ್ಲದೆ ಎಲ್ಲರಿಗೂ ಸಮಾನವಾಗಿ ಅವಕಾಶಗಳನ್ನು ಸೃಷ್ಟಿಸಬೇಕು. ಆಗಲೆ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತದೆ. ಇದುವೆ ಸಂವಿಧಾನದ ಸಾಮಾಜಿಕ ಉದ್ದೇಶ ಕೂಡ ಆಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧತೆಯಲ್ಲಿ ಏಕತೆಯ ಕಾರಣಕ್ಕಾಗಿ ಭಾಷೆ ಆಚಾರ ವಿಚಾರ ಸಂಪ್ರದಾಯ ಕುಲ ಕಸುಬುಗಳಲ್ಲಿ ಬಹು ವಿವಿಧತೆ ಇದೆ. ಅದು ಗಳಿಕೆಯಲ್ಲೂ ಲಾಭ ತಂದು ಕೊಡುವುದರಲ್ಲೂ ವ್ಯತ್ಯಾಸಕ್ಕೆ ಕಾರಣವಾಗಿದೆ. ಇದರಿಂದ ಸಮಾನತೆ ಸಾಮಾಜಿಕ ನ್ಯಾಯ ಇನ್ನೂ ಸಹ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಯಾರನ್ನೋ ಹೊಣೆ ಮಾಡಿ ಅವರನ್ನು ದೂರುವ ಬದಲಿಗೆ ಬದಲಾವಣೆ ನಮ್ಮಿಂದಲೆ ಆರಂಭವಾಗಲಿ ಎನ್ನುವ ಭಾವನೆಯಿಂದ ಸರ್ವ ಸಮಾನತೆಯ ಅವಕಾಶಗಳನ್ನು ಒದಗಿಸುವ ಕೆಲಸ ನಮ್ಮಿಂದಲೆ ಆರಂಭವಾಗಲಿ ಎಂದು ಆಶಿಸಿದರು.
ಇದರ ಉಪಯೋಗ ಅಕ್ಷ ರಸ್ಥ ಅನಕ್ಷ ರಸ್ಥ ಬಡವ ಬಲ್ಲಿದ ಎನ್ನದೆ ಈ ದೇಶದಲ್ಲಿ ಜನ್ಮತಳೆದ ಎಲ್ಲರಿಗೂ ಸಿಗಬೇಕಿದೆ ಆವಾಗಲೆ ಸಂವಿಧಾನದ ಆಶಯಗಳು ಈಡೇರಿದಂತಾಗಿದೆ ಎಂದು ಹೇಳಿದರು.
ಅಪರ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಅಲಬೂರ್, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ್ಗೌಡ, ಕಾರ್ಯದರ್ಶಿ ಎಂ.ಬಿ.ಲೊಕೇಶ್ ಹಾಜರಿದ್ದರು.