ನಗರದ ಅರಳೇಪೇಟೆಯ ಬಸವೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಸಂಸ್ಕಾರ ಭಾರತಿ ವತಿಯಿಂದ ಯುಗಾದಿ ಹಬ್ಬದ ಆಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ ೫ ಗಂಟೆಗೆ ಬ್ರಾಹ್ಮೀ ಮುಹೂರ್ತದಲ್ಲಿ ಸೂರ್ಯಾಭಿಮುಖವಾಗಿ ನಿಂತು ಸೂರ್ಯ ನಮಸ್ಕಾರವನ್ನು ಮಾಡಲಾಯಿತು. ವಿದ್ವಾನ್ ಶ್ಯಾಂಸುಂದರ್ ಮತ್ತು ತಂಡದರು ಪಿಟೀಲು ಮತ್ತು ಕೊಳಲಿನ ವಾದ್ಯವನ್ನು ನುಡಿಸಿದರು.
ಹೊಸವರ್ಷವನ್ನು ಸೂರ್ಯಾಭಿಮುಖವಾಗಿ ಕುಳಿತು ಗಾಯಿತ್ರಿ ಮಂತ್ರದೊಂದಿಗೆ ಸೂರ್ಯದೇವನಿಗೆ ಅರ್ಘ್ಯವನ್ನು ನೀಡಿದರು. ಯುಗಾದಿ ಹಬ್ಬದ ವಿಷೇಶತೆಯನ್ನು ವಿ. ಕೃಷ್ಣ ವಿವರಿಸಿ, ಬೇವು ಬೆಲ್ಲ ಜೀವನದಲ್ಲಿ ಸುಖ ಮತ್ತು ದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವುದರ ಸಂಕೇತ. ಹೋಳಿಗೆಯೂ ಆಯಾ ಋತುಮಾನಕ್ಕೆ ಅನುಗುಣವಾಗಿ ದೇಹಕ್ಕೆ ಬೇಕಾದ ಪ್ರೋಟೀನ್ಸ್ ಮತ್ತು ವಿಟಮೀನ್ಸ್ ಗಳನ್ನು ನೀಡುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಸವೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ಪೂಜೆಯನ್ನು ಸಲ್ಲಿಸಿ ಬೇವು ಬೆಲ್ಲ ಸವಿದು ನಂತರ ಆಗಮಿಸಿದ್ದ ಎಲ್ಲರಿಗೂ ಪ್ರಸಾದದ ರೂಪದಲ್ಲಿ ಹೋಳಿಗೆಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಸಂಚಾಲಕ ಸುಂದರಾ ಚಾರಿ, ತಾಲ್ಲೂಕು ಸಮಿತಿಯ ಅಧ್ಯಕ್ಷ ಶಂಕರಣ್ಣ, ಪ್ರಧಾನ ಕಾರ್ಯದರ್ಶಿ ಪಿ. ಶ್ರೀಕಾಂತ,ಸಂಸ್ಕಾರ ಭಾರತಿಯ ಅಧ್ಯಕ್ಷ ಬಿ.ಸಿ.ನಂದೀಶ್, ಚಂದ್ರಶೇಖರ್, ರವೀಂದ್ರನಾಥ, ಪ್ರಕಾಶ್, ಶಶಿಕಾಂತ್ ನಕ್ಷತ್ರಿ, ನಲ್ಲಿಮರದಹಳ್ಳಿ ಮಂಜುನಾಥ್, ಕಾಶೀನಾಥ ಮತ್ತಿತರರು ಹಾಜರಿದ್ದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಸಂಸ್ಕಾರ ಭಾರತಿ ವತಿಯಿಂದ ಯುಗಾದಿ ಹಬ್ಬದ ಆಚರಣೆ
ಮಂಗಳನ ಅಂಗಳದಲ್ಲಿ ಕುತೂಹಲಿ ಸಂಚಾರಿ – ಭಾಗ 1
ಹೌದು, ಅದರ ಹೆಸರೇ ಕುತೂಹಲಿ ಸಂಚಾರಿ, ಕ್ಯೂರಿಯಾಸಿಟಿ ರೋವರ್. ಅದೊಂದು ರೋಬಾಟ್ ಯಂತ್ರ. ಅದರ ಸ್ವಭಾವವೇ ಸಹಜ ಕುತೂಹಲ, ಕಂಡದ್ದನ್ನು ಒರೆಹಚ್ಚಿ ಕಾಣದ್ದರ ಬಗ್ಗೆ ಮಾಹಿತಿ ಪಡೆಯುವ ಹಂಬಲ ಅದಕ್ಕೆ. ಅದಕ್ಕೆಂದೇ ಅತ್ಯಾಧುನಿಕವಾದ ಸಾಧನಗಳನ್ನು ಒಡಲಲ್ಲಿರಿಸಿಕೊಂಡು ಮಂಗಳನಡಿಗೆಯನ್ನು ಪ್ರಾರಂಭಿಸ ಹೊರಟಿದೆ ಅದು. ಮಂಗಳನ ಮೇಲ್ಮೈ ಹಿಂದೆ ಜೀವಿಗಳಿಗೆ ಇರಲು ಅನುಕೂಲಕರವಾಗಿತ್ತೇ, ಮುಂದೆ ಈ ಕೆಂಪುಗ್ರಹ ಮನುಕುಲಕ್ಕೆ ವಾಸಯೋಗ್ಯವಾಗಲಿದೆಯೇ ಎಂಬುದು ಸಂಶೋಧನೆಯ ಮೂಲ ವಿಷಯ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಎರಡೂವರೆ ನೂರು ಕೋಟಿ ಡಾಲರ್ ವೆಚ್ಚದ ‘ಮಾರ್ಸ್ ವಿಜ್ಞಾನ ಪ್ರಯೋಗಾಲಯ’ವಾದ ಕ್ಯೂರಿಯಾಸಿಟಿ ಬಾನನೌಕೆಯೊಂದರಲ್ಲಿ ಅಚ್ಚುಕಟ್ಟಾಗಿ ಕುಳಿತು ಕಳೆದ ಅಗಸ್ಟ್ ಆರರಂದು ಆಗಸಕ್ಕೆ ಹಾರಿತ್ತು. ಭೂಮಿಯ ಗುರುತ್ವಬಲವನ್ನು ಮೀರಿ ಬಾಹ್ಯಾಕಾಶದಲ್ಲಿ ಮಂಗಳನನ್ನು ಗುರಿಯಾಗಿಸಿ ಸುಮಾರು 566 ದಶಲಕ್ಷ್ಷ ಕಿಮೀ ದೂರದ ಪ್ರಯಾಣವನ್ನು ಎಂಟು ತಿಂಗಳಲ್ಲಿ ಕ್ರಮಿಸಿತ್ತು. ನೌಕೆ ರೊಬಾಟ್ ಯಂತ್ರವನ್ನು ನೆಲಕ್ಕಿಳಿಸುವÀ ವೇಳೆಗೆ ಮಂಗಳನ ಬಾನಂಚಿನ ಕೆಳಗೆ ಸರಿದ ಭೂಮಿಗೆ ನೇರ ಸಂದೇಶಗಳು ತಲುಪುವ ಹಾಗಿರಲಿಲ್ಲ. ಆದರೇನು, ಮಂಗಳನ ಸುತ್ತ ಗಸ್ತು ಹೊಡೆಯುತ್ತಿದ್ದ ರಿಕನ್ಸೈನ್ಸ್, ಒಡಿಸ್ಸಿ ಉಪಗ್ರಹಗಳು ಇಲ್ಲಿನ ಸುದ್ದಿ ತಿಳಿಸಲು ಸಜ್ಜಾಗಿದ್ದವು. ಕೆಲವೇ ದಿನಗಳ ಹಿಂದೆ ಒಡಿಸ್ಸಿ ಉಪಗ್ರಹದ ಕಕ್ಷೆಯನ್ನು ಓರೆಯಾಗಿಸಿ ಈ ಸಂಚಾರಿ ವಾಹನದ ಲ್ಯಾಂಡಿಗ್ನ ದೃಶ್ಯಗಳನ್ನು ಸೆರೆಹಿಡಿವುದಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಅಂತೂ ರಂಗಸಜ್ಜಿಕೆ ತಯಾರಾಗಿತ್ತು. ಲ್ಯಾಂಡಿಗಿನ ಪ್ರತಿಯೊಂದು ಹಂತವೂ ರೋಮಾಂಚಕ, ಮನಮೋಹಕ ದೃಶ್ಯಚಿತ್ರಣವಾಗಿ ತಂತ್ರಜ್ಞರ ಎದುರಿಗಿನ ಪರದೆಯ ಮೇಲೆ ಮೂಡಿ ಬರತೊಡಗಿದವು.
ಸೆಕೆಂಡಿಗೆ ಆರು ಕಿಮೀ ವೇಗದಲ್ಲಿ ವಾತಾವರಣವನ್ನು ಪ್ರವೇಶಿಸುವಾಗ ಕ್ಯೂರಿಯಾಸಿಟಿಯನ್ನು ಸುಮಾರು 2100 ಡಿಗ್ರಿ ಸೆಂಟಿಗ್ರೇಡ್ ಬಿಸಿಯಿಂದ ರಕ್ಷಿಸಿದ್ದು ಬಿಸಿಲುಗುರಾಣಿ ಅಥವಾ ಹೀಟ್ಶೀಲ್ಡ್. ಅದೇ ನೌಕೆಯ ವೇಗ ತಗ್ಗಿಸುವ ಸಾಧನವೂ ಕೂಡ. ವೇಗವನ್ನು ತಗ್ಗಿಸಿಕೊಂಡು ಓರೆಯಾಗಿ 125 ಕಿಮೀ ಎತ್ತರದಲ್ಲಿ ಮಂಗಳನ ವಾತಾವರಣವನ್ನು ಪ್ರವೇಶಿಸಿದ ನೌಕೆಯಿಂದ ಗರಿಬಿಚ್ಚಿಕೊಂಡು ಹೊರಗಿಣುಕಿತು ಪ್ರಯೋಗಾಲಯವನ್ನು ಹೊತ್ತ ದೊಡ್ಡದೊಂದು ಪ್ಯಾರಾಶೂಟ್. ನೆಲದಿಂದ ಎಂಟು ಕಿಮೀ ಎತ್ತರದಲ್ಲಿರುವಾಗ ಬಿಸಿಲುಗುರಾಣಿ ತನ್ನ ಕೆಲಸ ಮುಗಿಯಿತೆಂಬಂತೆ ಕಳಚಿಕೊಂಡಿತು.
ಸುಮಾರು 35 ಮೀಟರ್ ನೇರ ಎತ್ತರದಿಂದ ನೌಕೆ ಸೆಕೆಂಡಿಗೆ 4 ಮೀ ವೇಗದಲ್ಲಿ ಕೆಳಗಿಳಿಯತೊಡಗಿತು. ರೊಬಾಟನ್ನು ಕಚ್ಚಿ ಹಿಡಿದ ಆಚೀಚೆಗೆ ಹಾಗೂ ಮಧ್ಯಕ್ಕೆ ಒಂದರಂತಿದ್ದ ಮೂರು ಟೆಕ್ನೋರಾ ನಾರುಲೋಹದ ಮೂಗುದಾಣಗಳು ಕೆಳಗಿಳಿದವು. ಈಗ ಪ್ಯಾರಾಶೂಟ್ ಪ್ರತ್ಯೇಕಗೊಂಡಿತು. ಕೆಳಕ್ಕಿಳಿಯುತ್ತಾ ಬಂದು ವೇಗ ಸೆಕೆಂಡಿಗೆ ಮುಕ್ಕಾಲು ಮೀಟರಿನಷ್ಟಿರುವಾಗ ನೆಲಕ್ಕೆ ತಾಗಿದವು ರೋವರಿನ ಆರು ಗಾಲಿಗಳು. ಕಡಿವಾಣಗಳ ಮತ್ತು ಸಂಚಾರಿಯ ನಡುವಿನ ಕೊಂಡಿಗಳು ಕಳಚಿಕೊಂಡವು, ಸಂಚಾರಿವಾಹನ ಸ್ವತಂತ್ರವಾಯಿತು, ತನ್ನ ಶೋಧನಾ ಕಾರ್ಯವನ್ನು ಆರಂಭಿಸಿತು. ಕ್ಯೂರಿಯಾಸಿಟಿ ತೆಗೆದ ಚಿತ್ರಗಳು ರೇಡಿಯೋ ಅಲೆಗಳ ರೂಪದಲ್ಲಿ ಒಂದೊಂದಾಗಿ ಭೂಮಿಗೆ ರವಾನೆಯಾಗತೊಡಗಿದವು.
ತಂತ್ರಜ್ಞಾನದ ಖಚಿತತೆಯ ಬಗ್ಗೆ ತಂತಜ್ಞರು ಅದೆಷ್ಟು ವಿಶ್ವಾಸ ಹೊಂದಿದ್ದರೂ ದೂರದ ಬಾನಲ್ಲಿ ಏನೂ ಆಗಬಹುದಿತ್ತು. ಕ್ಯೂರಿಯಾಸಿಟಿ ತನ್ನ ಮಾತೃನೌಕೆಯಿಂದ ಕಳಚಿಕೊಂಡು ಮಂಗಳನೆಲವನ್ನು ಮುಟ್ಟಲು ತೆಗೆದುಕೊಂಡಿದ್ದು ಏಳೇ ಏಳು ನಿಮಿಷಗಳು. ಆವೇಗಕ್ಕೊಳಗಾದ ನಾಸಾದ ಸಿಬ್ಬಂದಿ ಆ ಏಳು ನಿಮಿಷಗಳ ಆತಂಕದ ಅವಧಿ ಕಳೆದು ಕ್ಯೂರಿಯಾಸಿಟಿ ಮಂಗಳನ ನೆಲವನ್ನು ಸ್ಪರ್ಶಿಸಿದಂತೆ ಸಂತಸದಿಂದ ‘ತಂತ್ರಜ್ಞಾನದ ಚಮತ್ಕಾರ ಇದು’ ಎಂದು ಉದ್ಗಾರವೆತ್ತಿದರು.
ಕ್ಯೂರಿಯಾಸಿಟಿ ಕಳಿಸಿದ ಚಿತ್ರಗಳನ್ನು ತಂತ್ರಜ್ಞರು ಎರಡು ಬಗೆಯವಾಗಿ ವಿಂಗಡಿಸಿದ್ದಾರೆ. ಮೊದಲನೆಯದು, ಮಂಗಳನ ಬೆಳಕಿನಲ್ಲಿ ತೆಗೆದ ಚಿತ್ರಗಳು, ಥೇಟ್ ನಮ್ಮ ಸೆಲ್ ಫೋನಿನಿಂದ ತೆಗೆದ ಚಿತ್ರಗಳಂತೆಯೇ ಇರುವಂಥವು. ಎರಡನೆಯಯದು, ಅವೇ ಚಿತ್ರಗಳನ್ನು ಭೂಮಿಯ ಮೇಲಿನ ಬಿಸಿಲಿನ ಹಿನ್ನೆಲೆಯಲ್ಲಿ ತೆಗೆದರೆ ಹೇಗಿರುತ್ತವೋ ಹಾಗಿರುವ ಚಿತ್ರಗಳು, ಅವನ್ನು ‘ವೈಟ್ ಬ್ಯಾಲನ್ಸಿಂಗ್’ ಎನ್ನುತ್ತಾರೆ. ಇವು ವಿಜ್ಞಾನಿಗಳಿಗೆ ಇಲ್ಲಿಯ ಶಿಲಾಚೂರುಗಳಿಗೆ ಹೋಲಿಸಿ ಅಧ್ಯಯನ ನಡೆಸಲು ಅನುಕೂಲವಾಗುತ್ತವೆ.
ಸೆಕೆಂಡಿಗೆ ಒಂದೂವರೆ ಇಂಚು ದೂರವನ್ನು ಕ್ರಮಿಸುವ ಕ್ಯೂರಿಯಾಸಿಟಿ ಹತ್ತಾರು ವಿವಿಧ ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ.
ಕ್ಯಾಮೆರಾಗಳು
1. ಮಸ್ತ್ಕ್ಯಾಮ್: ನಮ್ಮ ಡಿಜಿಟಲ್ ಕ್ಯಾಮೆರಾದಂತೆಯೇ ಇರುವ ಎರಡು ಕ್ಯಾಮೆರಾಗಳನ್ನು ಪ್ರಯೋಗಾಲಯ ಮುಂಭಾಗದಲ್ಲಿ ಎತ್ತರದ ಲೋಹದ ಗೂಟವೊಂದು ಎತ್ತಿ ಹಿಡಿದಿದೆ. ಸಂಚಾರಿ ಮುಂದೆ ಮುಂದೆ ಸಾಗಿದಂತೆ ಮಂಗಳನ ನೆಲದೃಶ್ಯ, ಕಲ್ಲು ಬಂಡೆಗಳು, ವಾತಾವರಣ ಬದಲಾವಣೆ ಇತ್ಯಾದಿಗಳ ದೂರದ ಹಾಗೂ ಸಮೀಪದ ಚಿತ್ರಗಳನ್ನು ತೆಗೆಯಲು ಇದು ಸಹಕಾರಿ.
2. ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್: ಕ್ಯೂರಿಯಾಸಿಟಿ ಕೈಯ್ಯಲ್ಲಿರುವ ಭೂತಗನ್ನಡಿಸಹಿತವಾದ ಕ್ಯಾಮೆರಾ ಇದು. ಒಂದೂವರೆ ಇಂಚಿನ ಈ ಕ್ಯಾಮೆರಾ ಎದುರಾಗುವ ವಸ್ತುಗಳ (ಕೂದಲೆಳೆಗಿಂತ ತೆಳುವಸ್ತುಗಳನ್ನೂ ಬಿಡದೆ) ದೊಡ್ಡದಾದ ಚಿತ್ರಗಳನ್ನು ತೆಗೆಯುತ್ತದೆ. ಮಾಮೂಲು ವರ್ಣಚಿತ್ರಗಳನ್ನಲ್ಲದೆ ಕಲ್ಲಿನ ಚೂರುಗಳಲ್ಲಿ ಇರಬಹುದಾದ ಕಾರ್ಬನ್ ಸಂಯುಕ್ತಗಳ ಪತ್ತೆಗೆ ನೆರವಾಗುವ ಅತಿನೇರಳೆ ಬೆಳಕಿನ ಚಿತ್ರಗಳನ್ನೂ ಇದು ಸೆರೆಹಿಡಿಯುತ್ತದೆ.
ಮಾರ್ಸ್ ಡಿಸೆಂಟ್ ಇಮೇಜರ್
ಸಂಚಾರಿ ವಾಹನ ಬಿಸಿಲುಗುರಾಣಿಯನ್ನು ಹೊರಕ್ಕೆಸೆದು ಕೆಳಗಿಳಿಯುವಾಗ ಎದುರಾದ ಚಿತ್ರಗಳನ್ನು ತೆಗೆದ ಕ್ಯಾಮೆರಾ ಇದು. ಸೆಕೆಂಡಿಗೆ ನಾಲ್ಕು ಫ್ರೇಮಿನಂತೆ ವಿಡಿಯೋ ಮಾಡಿ ವಾಹನ ನೆಲ ಮುಟ್ಟಿದ ನಂತರ ಭೂಮಿಗೆ ಆ ಚಿತ್ರಗಳನ್ನು ಕಳುಹಿಸಿತು. ರೋವರ್ನ ಕೆಳಪಥದ ಚಿತ್ರದೊಂದಿಗೆ ಸುತ್ತಲ ಭೌಗೋಳಿಕ ದೃಶ್ಯಗಳೂ ದೊರೆತಿರುವುದರಿಂದ ಕ್ಯೂರಿಯಾಸಿಟಿ ಇಂಥಲ್ಲೇ ಇದೆ ಎಂದು ಖಚಿತವಾಗಿ ಗುರುತಿಸಲು ಸಾಧ್ಯವಾಗಿದೆ.
ಕ್ಯೂರಿಯಾಸಿಟಿಯಲ್ಲಿ ನಾಲ್ಕು ರೀತಿಯ ಸ್ಪೆಕ್ಟ್ರೋಮೀಟರುಗಳಿವೆ
ಸ್ಪೆಕ್ಟ್ರೋಮೀಟರ್ ಎಂದರೆ ವಿದ್ಯುತ್ ಕಾಂತೀಯ ರೋಹಿತವನ್ನು ಅಳೆಯುವ ಉಪಕರಣ. ಇವುಗಳಲ್ಲೊಂದು ಬಂಡೆಗಲ್ಲುಗಳಲ್ಲಿ ಇರಬಹುದಾದ ಎಕ್ಸ್ರೇಯಂಥಹ ಶಕ್ತಿಕಿರಣಗಳನ್ನು ಗುರುತಿಸಿದರೆ, ಇನ್ನೊಂದು ಕೆಮ್ಕ್ಯಾಮ್ ಎಂಬ ಹೆಸರಿನದು ಲೇಸರ್ ಕಿರಣಗಳನ್ನು ಹಾಯಿಸಿ ಶಿಲೆಗಳನ್ನು ಪುಡಿಮಾಡಿ ಅದರಿಂದ ಹೊರಹೊಮ್ಮುವ ಪ್ಲಾಸ್ಮಾ ಅಥವಾ ಬಿಸಿ ಹೊಗೆಯ ಸೂಕ್ಷ್ಮಾತಿಸೂಕ್ಷ್ಮವಿವರಗಳನ್ನು ಪಡೆಯುತ್ತದೆ. ಮೂರನೆಯದು ಕೆಮ್ಮಿನ್ ಅಥವಾ ಕೆಮಿಸ್ಟ್ರಿ ಎಂಡ್ ಮಿನರಾಲಜಿ ಎಕ್ಸ್ಪರಿಮೆಂಟ್, ಇದು ಶಿಲಾಪುಡಿಗಳಲ್ಲಿರಬಹುದಾದ ರಾಸಾಯನಿಕಗಳ ಪತ್ತೆಗೆ ಪ್ರಯತ್ನಿಸುತ್ತದೆ. ನಾಲ್ಕನೆಯದು ಸ್ಯಾಮ್ ಅಥವಾ ಸ್ಯಾಂಪಲ್ ಎನಲಿಸಿಸ್ ಎಟ್ ಮಾರ್ಸ್. ನಿಜಾರ್ಥದಲ್ಲಿ ಇದೊಂದು ವೈಜ್ಞಾನಿಕ ಪ್ರಯೋಗಾಲಯವೇ. ಏಕೆಂದರೆ ವಿವಿಧ ಉಪಕರಣಗಳ ಮೂಲಕ ಇಲ್ಲಿ ಮಂಗಳನ ಕಲ್ಲು, ಮಣ್ಣು, ಶಿಲಾಚೂರುಗಳೆಲ್ಲವುಗಳ ವಿಶ್ಲೇಷಣೆ ನಡೆಯುತ್ತದೆ. ಮಾಸ್ ಸ್ಪೆಕ್ಟೋಗ್ರಾಫ್ ಎಂಬ ಉಪಕರಣ ಪುಡಿಗಳನ್ನು ಅವುಗಳ ದ್ರವ್ಯರಾಶಿಯ ಆಧಾರದ ಮೇಲೆ ವರ್ಗೀಕರಿಸಿದರೆ, ಗ್ಯಾಸ್ ಕ್ರೊಮ್ಯಾಟೋಗ್ರಾಫ್ ಅವುಗಳನ್ನು ಬಿಸಿಮಾಡಿ ಹೊರಚಿಮ್ಮುವ ಅನಿಲಹಬೆಯನ್ನು ವಿಂಗಡಿಸುತ್ತದೆ ಹಾಗೂ ಲೇಸರ್ ಸ್ಪೆಕ್ಟ್ರೋಮೀಟರ್ ಅವುಗಳಲ್ಲಿ ಮಿಥೇನ್ನಂತಹ ಇಂಗಾಲದ ಸಂಯುಕ್ತಗಳಲ್ಲದೆ ಜಲಜನಕ, ಆಮ್ಲಜನಕ, ಸಾರಜನಕ ಇತ್ಯಾದಿ ಜೀವಿಗಗತ್ಯ ಮೂಲವಸ್ತುಗಳಿಗಾಗಿ ಶೋಧ ನಡೆಸುತ್ತದೆ.
ವಿಕಿರಣಶೋಧಕಗಳು
ಇವುಗಳಲ್ಲಿ ಮೊದಲನೆಯದು ಸಿಲಿಕಾನ್ ಮತ್ತು ಸೀಸಿಯಂ ಅಯೋಡೈಡ್ಗಳುಳ್ಳ ಪುಟ್ಟ ಶೋಧಕಪೆಟ್ಟಿಗೆ. ಮಂಗಳ ಗ್ರಹದ ವಾತಾವರಣದಲ್ಲಿ ಬೀಸಿ ಬರುವ ಶಕ್ತಿಯುತ ಕಿರಣಗಳನ್ನು ಹೀರಿಕೊಂಡು ಅವುಗಳನ್ನು ದಾಖಲಿಸುತ್ತದಷ್ಟೇ ಅಲ್ಲ, ಮಂಗಳನ ನೆಲ, ಶಿಲೆಗಳ ಮೇಲೆ ಈ ವಿಕಿರಣಗಳಿಂದಾದ ಪರಿಣಾಮವನ್ನೂ ಇದು ಅಳೆಯಲಿದೆ. ಇನ್ನೊಂದು ಡೈನಮಿಕ್ ಅಲ್ಬಿಡೋ ಆಫ್ ನ್ಯೂಟ್ರಾನ್ಸ್. ಈ ಉಪಕರಣ ನ್ಯೂಟ್ರಾನ್ ಕಿರಣಗಳನ್ನು ಎರಡೂವರೆ ಅಡಿ ಎತ್ತರದಿಂದ ಮಂಗಳದ ನೆಲ ಹಾಗೂ ಬಂಡೆಗಳ ಮೇಲೆ ಸಿಡಿಸುತ್ತದೆ. ಈ ಕಿರಣಗಳು ಮತ್ತೂ 3-6 ಅಡಿ ನೆಲದೊಳಗೆ ಸಾಗಬಲ್ಲವು. ಅಲ್ಲೇನಾದರೂ ನೀರು ಹಿಮಗಡ್ಡೆಗಳ ರೂಪದಲ್ಲಿ ಅಥವಾ ಬಂಡೆಯ ಖನಿಜಗಳೊಳಗೆ ಸಂಯುಕ್ತವಾಗಿ ಅವಿತಿದ್ದರೆ ನ್ಯೂಟ್ರಾನುಗಳನ್ನು ನೀರಿನಲ್ಲಿರುವ ಜಲಜನಕದ ಅಣುಗಳು ಹೀರಿಕೊಳ್ಳುತ್ತವೆ. ಅಲ್ಲಿಂದ ಪ್ರತಿಫಲಿತಗೊಂಡ ನ್ಯೂಟ್ರಾನ್ಗಳು ಶಕ್ತಿಗುಂದಿರುತ್ತವೆ. ಅವುಗಳ ಬಲವನ್ನು ಅಳೆದು ಆ ಮೂಲಕ ಜಲಪತ್ತೆಗೆ ಈ ಸಾಧನ ನೆರವಾಗುತ್ತದೆ.
ಪರಿಸರ ಸಂವೇದಕಗಳು
ಇದೊಂದು ಮಂಗಳ ಗ್ರಹದ ವಾತಾವರಣವನ್ನು ಸದಾಕಾಲ ಗಮನಿಸುತ್ತಿರುವ ಸಾಧನ. ರೋವರಿನ ಸುತ್ತಮುತ್ತಲ ಪರಿಸರದ ಒತ್ತಡ, ಆದ್ರ್ರತೆ, ಗಾಳಿಯ ವೇಗ ಮತ್ತು ದಿಕ್ಕು, ವಾತಾವರಣದಲ್ಲಿನ ಅತಿನೇರಳೆ ಕಿರಣಗಳು, ವಾಯುಮಂಡಲದ ಉಷ್ಣತೆ ಇವೆಲ್ಲವುಗಳನ್ನು ಇದು ಕಾಲಕಾಲಕ್ಕೆ ದಾಖಲಿಸುತ್ತಿರುತ್ತದೆ. ಇವು ಸಂಚಾರಿ ವಾಹನದ ಪ್ರಮುಖ ಭಾಗಗಳಷ್ಟೇ. ಹಾಗೆ ನೋಡಿದರೆ, ಕ್ಯೂರಿಯಾಸಿಟಿಯ ಪ್ರತಿಯೊಂದೂ ಭಾಗವೂ ಒಂದೊಂದು ಪ್ರಯೋಗ ಉಪಕರಣವೇ ಆಗಿದೆ. ವಿವಿಧ ದೇಶಗಳ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಕ್ಯೂರಿಯಾಸಿಟಿಯ ಯಂತ್ರೋಪಕರಣಗಳು ಹಾಗೂ ತಂತ್ರಾಂಶಗಳನ್ನು ರೂಪಿಸುವಲ್ಲಿ ನೆರವಾಗಿದ್ದಾರೆ. ಹಾಗಾಗಿ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸಾಹಸವೇ ಸರಿ. ಮಂಗಳನನ್ನು ತಲುಪಿದ ಒಂದು ವಾರದ ಬಳಿಕ ಕುತೂಹಲಿಯ ಕಂಪ್ಯೂಟರ್ ಮಿದುಳಿಗೆ ಮತ್ತಷ್ಟು ದೇಶಗಳನ್ನು(ಬ್ರೈನ್ಸ್ಟಾರ್ಮಿಂಗ್) ವಿಜ್ಞಾನಿಗಳು ಕಳುಹಿದ್ದಾರೆ. ಸಂಚರಿಸುವಾಗ ಅಥವಾ ರೊಬಾಟ್ ಕೈ ಚಲಿಸುವಾಗ ಎದುರಾಗುವ ಅಡಚಣೆಗಳನ್ನು ತಾನೇ ನಿವಾರಿಸಿಕೊಳ್ಳುವ ಆದೇಶಗಳು ಅವು. ಉಪಗ್ರಹ ಚಿತ್ರವೊಂದು ಕ್ಯೂರಿಯಾಸಿಟಿಯನ್ನು ಹೊತ್ತೊಯ್ದ ಕೋಟ್ಯಂತರ ಹಣದಿಂದ ತಯಾರಾದ ಬಾನನೌಕೆ, ಬಿಸಿಲು ಗುರಾಣಿ, ಪ್ಯಾರಾಚ್ಯೂಟ್ ಇವುಗಳ ಅವಶೇಷಗಳನ್ನು ತೋರಿಸಿದೆ. ‘ಇವೆಲ್ಲ ಅನಿವಾರ್ಯ’ ಎಂದೆನ್ನುವ ವಿಜ್ಞಾನಿಗಳ ದೃಷ್ಟಿಯಲ್ಲಿ ಕ್ಯೂರಿಯಾಸಿಟಿ ಒದಗಿಸಲಿರುವ ಮಾಹಿತಿ ಕಣಜವೇ ಅತಿ ಹೆಚ್ಚು ಬೆಲೆಬಾಳುವಂಥದ್ದಾಗಿದೆ. ಕುತೂಹಲಿ ಸಂಚಾರಿ ಮಾನವನ ಕುತೂಹಲಗಳಿಗೆ ಮಂಗಳ ಹಾಡುವುದೇ? ಕಾಲವೇ ಉತ್ತರ ಹೇಳಬೇಕು.
ಮನುಕುಲದ ಅಮೋಘ ಸಾಧನೆ, ಶ್ಲಾಘನೆ
ಅಂತರಿಕ್ಷಕ್ಕೆ ಸಾವಿರಾರು ಉಪಗ್ರಹಗಳನ್ನು ಕಳಿಸಲಾಗಿದೆ. ಸೌರಮಂಡಲದ ಅಂಚಿನ ನಸುಗತ್ತಲಲ್ಲಿ ಓಟ ನಡೆಸಿರುವ ಸೂರ್ಯನ ಕಿರುಗ್ರಹ ಪ್ಲೂಟೋದ ಬಗ್ಗೆಯೂ ಸಂಶೋಧನೆಗಳು ನಡೆದಿವೆಯಷ್ಟೇ ಅಲ್ಲ, ಬಾಹ್ಯ ಆಕಾಶದಲ್ಲಿಯೂ ನೂರಾರು ಬಾನನೌಕೆಗಳು ಅಧ್ಯಯನಶೀಲವಾಗಿವೆ. ಆದರೆ ಮೊನ್ನೆಮೊನ್ನೆಯಷ್ಟೇ ಮಂಗಳ ಗ್ರಹಕ್ಕೆ ಹಾರಿ ಅಲ್ಲಿ ಪ್ರಯೋಗ ನಡೆಸುತ್ತಿರುವ ಕ್ಯೂರಿಯಾಸಿಟಿ ಪ್ರಯೋಗಾಲಯವನ್ನು ಮನುಕುಲದ ಅಮೋಘ ಸಾಧನೆ ಎಂದು ಬಣ್ಣಿಸಲಾಗುತ್ತಿದೆ. ಕಳೆದ 50 ವರ್ಷಗಳಿಂದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಜ್ಜೆಹೆಜ್ಜೆಯಾಗಿ ಪ್ರಗತಿ ಸಾಧಿಸಿದ್ದ ಮಾನವ ಈಗಿಟ್ಟಿದ್ದು ದಾಪುಗಾಲೇ ಸರಿ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷ ಒಬಾಮಾ ನಾಸಾದ ವಿಜ್ಞಾನಿಗಳಿಗೆ ಶಹಬ್ಬಾಸ್ ಎಂದಿದ್ದಾರೆ.
ಮಂಗಳನ ಮೇಲೆ ಇಳಿದ ರೋವರ್ ಇದೇ ಮೊದಲನೆಯದೇನೂ ಅಲ್ಲ. 2004 ರಿಂದ ಅಲ್ಲಿ ಅಪಾರ್ಚುನಿಟಿ ಓಡಾಡುತ್ತಲೇ ಇದೆ. ಅವಳಿ ಸಂಚಾರಿಗಳಾದ ಸ್ಪಿರಿಟ್ ಮತ್ತು ಅಪಾರ್ಚುನಿಟಿಗಳು ಸಾಕಷ್ಟು ಮಾಹಿತಿಗಳನ್ನೂ ಕಳಿಸಿಕೊಟ್ಟಿವೆ. ಅದಕ್ಕಿಂತ ಮೊದಲು ಸೋಜರ್ನರ್ ರೋವರ್ ಮಂಗಳನಲ್ಲಿ ನೀರಿದ್ದಿರಬಹುದಾದ ಕುರುಹುಗಳನ್ನು ಕಂಡುಹಿಡಿದಿದೆ. ಹಾಗಿದ್ದರೆ ಈ ಕುತೂಹಲಿ ಸಂಚಾರಿಯಲ್ಲಿ ಅಂಥದ್ದೇನಿದೆ ಹೊಸತು?
ಮುಂದುವರೆಯುವುದು….
ಸರೋಜ ಪ್ರಕಾಶ
ರೇಣೂಕಾ ಯಲ್ಲಮ್ಮ ದೇವಿಯ ಹಸಿ ಕರಗ
ಶಿಡ್ಲಘಟ್ಟದ ಕುಕ್ಕಲಚಿನ್ನಪೇಟೆಯ ರೇಣೂಕಾ ಯಲ್ಲಮ್ಮ ದೇವಿಯ ಹಸಿ ಕರಗವು ಶನಿವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಚೌಡಸಂದ್ರ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಣ್ಣೆ ಅಲಂಕಾರ
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವರಿಗೆ ಶನಿವಾರ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಬೆಣ್ಣೆ ಅಲಂಕಾರವನ್ನು ಮಾಡಲಾಗಿತ್ತು.
ಸುಮಾರು 28 ಕೆಜಿ ಬೆಣ್ಣೆ ಮತ್ತು ಚೆರ್ರಿ ಹಣ್ಣುಗಳನ್ನು ಬಳಸಿ ಆಂಜನೇಯಸ್ವಾಮಿಯನ್ನು ಅಲಂಕರಿಸಿದ್ದು, ಭಕ್ತರು ವರ್ಷದ ಮೊದಲ ದಿನವಾದ ಯುಗಾದಿಯ ದಿನದಂದು ಪೂಜೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆಯ ನಂತರ ಬೇವು ಬೆಲ್ಲ ಹಾಗೂ ಪ್ರಸಾದ ವಿನಿಯೋಗವನ್ನು ನಡೆಸಲಾಯಿತು.
ಆಸನಗಳ ವ್ಯವಸ್ಥೆಯಿಲ್ಲದೆ ಮಣ್ಣಿನಲ್ಲೆ ಕುಳಿತು ಪರೀಕ್ಷೆ ಬರೆದ ಮಕ್ಕಳು
ನಗರದ ಸರಸ್ವತಿ ವಿದ್ಯಾಸಂಸ್ಥೆಯ ಆಂಗ್ಲಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 7 ನೇ ತರಗತಿಯ 43 ಮಂದಿ ವಿದ್ಯಾರ್ಥಿಗಳು ಶುಕ್ರವಾರ ಮಣ್ಣಿನ ನೆಲದಲ್ಲಿ ಕುಳಿತು ಪರೀಕ್ಷೆ ಬರೆದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸರಸ್ವತಿ ಕಾನ್ವೆಂಟ್ ಶಾಲೆಯಲ್ಲಿ ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಅವರಿಗೆ ಸೂಕ್ತವಾದ ಆಸನಗಳ ವ್ಯವಸ್ಥೆಯಿಲ್ಲದಂತಾಗಿದ್ದು, 43 ಮಂದಿ ಮಕ್ಕಳು ಶಾಲೆಯ ಸರ್ಜಾದ ನೆರಳಿನಲ್ಲಿ ಮಣ್ಣಿನಲ್ಲೆ ಕುಳಿತು ಪರೀಕ್ಷೆ ಬರೆದರು.
ವಿಪರ್ಯಾಸವೆಂದರೆ ಈ ಶಾಲೆಯ ಮುಂಭಾಗದಲ್ಲೆ ತಾಲ್ಲೂಕು ಕಚೇರಿ ಸೇರಿದಂತೆ ಅನೇಕ ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದರೂ ಮಕ್ಕಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ. ಪ್ರತಿವರ್ಷ ಸಾವಿರಾರು ರೂಪಾಯಿಗಳ ಹಣವನ್ನು ಕಟ್ಟಿಸಿಕೊಳ್ಳುವ ಶಾಲಾಡಳಿತ ಮಂಡಳಿಯವರು ಮಕ್ಕಳಿಗೆ ಸೂಕ್ತವಾದ ವ್ಯವಸ್ಥೆಯನ್ನು ಮಾಡಿಕೊಟ್ಟಿಲ್ಲ. ಪ್ರತಿಯೊಂದು ಕೊಠಡಿಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಲಾಗುತ್ತಿದ್ದು, ಮಕ್ಕಳು ವ್ಯವಸ್ಥಿತವಾಗಿ ಕಲಿಯುವಂತಹ ವಾತಾವರಣವಿಲ್ಲದಂತಾಗಿದೆ ಎಂದು ಕೆಲ ಪೋಷಕರು ಆರೋಪಿಸಿದ್ದಾರೆ.
ಬಾಲ್ಯವಿವಾಹ ತಡೆಯಬೇಕು – ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ
ಸಣ್ಣ ವಯಸ್ಸಿನಲ್ಲೆ ಮಕ್ಕಳಿಗೆ ಮದುವೆ ಮಾಡುವುದರಿಂದ ಅವರ ಜೀವನವನ್ನು ಕತ್ತಲೆಯ ಕೂಪಕ್ಕೆ ದೂಡಿದಂತಾಗುತ್ತದೆ ಮತ್ತು ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲ್ಲೂಕು ಪಂಚಾಯತಿ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಉತ್ತಮವಾದ ಶಿಕ್ಷಣವನ್ನು ಪಡೆದುಕೊಂಡು ಸಮಾಜದಲ್ಲಿ ಉತ್ತಮವಾಗಿ ವ್ಯಕ್ತಿಗಳಾಗಿ ಬೆಳೆಯಬೇಕಾದಂತಹ ಮಕ್ಕಳಿಗೆ ಬಾಲ್ಯದಲ್ಲಿಯೆ ಮದುವೆಯೆಂಬ ಬಂಧನಕ್ಕೆ ಒಳಪಡಿಸುವುದು ಮಾನಸಿಕ, ದೈಹಿಕ, ಸದೃಢತೆಗೆ ಸಮಸ್ಯೆಯುಂಟಾಗುತ್ತದೆ. ಬಾಲ್ಯದಲ್ಲಿಯೆ ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುವಂತಹ ಚಾಕಚಕ್ಯತೆ ಮಕ್ಕಳಲ್ಲಿ ಇರುವುದಿಲ್ಲ. ಚಿಕ್ಕವಯಸಿನಲ್ಲೆ ಮಕ್ಕಳಾದರೂ ಅವರಿಗೆ ಬಹಳಷ್ಟು ದೈಹಿಕ ನ್ಯೂನ್ಯತೆಗಳು ಕಾಣಿಸಿಕೊಂಡು ಪೌಷ್ಠಿಕಾಂಶದ ಕೊರತೆಯಿಂದಾಗಿ ಸಾವನ್ನಪ್ಪುವಂತಹ ಲಕ್ಷಣಗಳು ಹೇರಳವಾಗಿರುವುದರಿಂದ ಪೋಷಕರು ಮಕ್ಕಳ ಮದುವೆಯ ವಿಚಾರಗಳಲ್ಲಿ ಜಾಗ್ರತೆ ವಹಿಸಬೇಕು ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ ಮಾತನಾಡಿ, ಎಳೆಯ ವಯಸ್ಸಿಗೆ ಮಕ್ಕಳಿಗೆ ಬಲವಂತದ ಮದುವೆ ಮಾಡಿದರೆ ಕಠಿಣವಾದ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ತಾಲ್ಲೂಕಿನಲ್ಲಿ ಹಲವಾರು ಕಡೆಗಳಲ್ಲಿ ಇಂತಹ ವಿವಾಹಗಳು ನಡೆಯುತ್ತಿವೆ. ಇಂತಹ ಘಟನೆಗಳು ನಡೆಯದಂತೆ ಸಮಾಜದ ಎಲ್ಲಾ ವರ್ಗದ ಜನತೆ ಜಾಗೃತರಾಗಬೇಕು. ಕಲ್ಯಾಣಮಂಟಪಗಳನ್ನು ಬಾಡಿಗೆಗೆ ನೀಡುವ ಮುನ್ನಾ ಮಾಲೀಕರು ಮದುವೆಯಾಗುವಂತಹ ಗಂಡು ಮತ್ತು ಹೆಣ್ಣು ಮಕ್ಕಳ ವಯಸ್ಸಿನ ಬಗ್ಗೆ ಸೂಕ್ತವಾದ ದಾಖಲೆಗಳನ್ನು ಪಡೆದುಕೊಳ್ಳಬೇಕು. ಮದುವೆಗಳನ್ನು ಮಾಡಿಸುವಂತಹ ಪುರೋಹಿತರೂ ಕೂಡಾ ವಯಸ್ಸುಗಳ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮಸೀದಿಗಳು, ಚರ್ಚ್ಗಳಲ್ಲಿಯೂ ಕೂಡಾ ಮದುವೆಗಳನ್ನು ಮಾಡಿಸುವ ಮುನ್ನಾ ವಯೋಮಿತಿಯ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದರು.
ಸಿ.ಡಿ.ಪಿ.ಓ ಲಕ್ಷ್ಮೀದೇವಮ್ಮ, ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಶಿಕ್ಷಣ ಇಲಾಖೆಯ ಶ್ರೀನಿವಾಸ್, ಸುಷ್ಮಾ, ಸಿ.ಡಿ.ಪಿ.ಓ.ಇಲಾಖೆಯ ಮೇಲ್ವಿಚಾರಕಿ ಗಿರಿಜಾಂಬಿಕೆ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಲಕರಣೆಗಳ ವಿತರಣೆ
ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿ ಭವಿಷ್ಯವನ್ನು ರೂಪಿಸುವ ಪ್ರಮುಖ ಘಟ್ಟ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎದುರಿಸಲಿರುವ 115 ಮಕ್ಕಳಿಗೆ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಕೊಡುಗೆಯಾಗಿ ನೀಡಿದ ರಟ್ಟು, ಜಾಮಿಟ್ರಿ ಬಾಕ್ಸ್, ಲೇಖನ ಸಾಮಗ್ರಿಗಳು ಮುಂತಾದ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಮಕ್ಕಳು ಈ ಪರೀಕ್ಷೆಗೆ ಸನ್ನದ್ಧಗೊಳ್ಳಲು ಪೂರಕ ಸಲಕರಣೆಗಳನ್ನು ನೀಡುವ ಮೂಲಕ ಸಮುದಾಯಿಕ ನೆರವು ಸಿಗುತ್ತಿದೆ. ಶಿಕ್ಷಕರ ಮೂಲಕ ಉತ್ತಮ ಮಾರ್ಗದರ್ಶನ ಕೂಡ ಲಭಿಸುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿ ಒಳ್ಳೆಯ ಫಲಿತಾಂಶಗಳನ್ನು ಪಡೆಯುವ ಮೂಲಕ ತಮಗೆ ಸಹಾಯ ಮಾಡಿದವರಿಗೆ ಧನ್ಯವಾದಗಳನ್ನು ತಿಳಿಸಬಹುದು ಹಾಗೂ ಮುಂದೆ ಪರೀಕ್ಷೆ ಬರೆಯುವವರಿಗೆ ಮಾದರಿಯಾಗಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಮಹಮ್ಮದ್ ತಮೀಮ್ ಸುಮಾರು 25 ಸಾವಿರ ರೂಪಾಯಿಗಳ ಮೌಲ್ಯದ ಸಲಕರಣೆಗಳನ್ನು 115 ವಿದ್ಯಾರ್ಥಿಗಳಿಗೆ ನೀಡಿದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಮಂಜುಳಾ, ಶಿಕ್ಷಕರಾದ ಸರ್ದಾರ್, ಇಷ್ರತ್, ಮಧು, ಬಾಸ್ಕರ್, ಶಿವಕುಮಾರ್, ರಾಮಚಂದ್ರ, ನರಸಿಂಹಮೂರ್ತಿ, ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಡಿ.ಕೆ.ರವಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ದಕ್ಷ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ತಾಲ್ಲೂಕು ವಕೀಲರ ಸಂಘ, ನಾಗರಿಕ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿ ಮತ್ತು ಬಿಜೆಪಿ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಕೋಲಾರದ ಜಿಲ್ಲಾಧಿಕಾರಿಗಳಾಗಿ ಸಮಾಜದ ಹಿತೈಶಿಯಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ದಕ್ಷ ಅಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಸಾವು, ಕೊಲೆಯೋ, ಆತ್ಮಹತ್ಯೆಯೋ ರಾಜ್ಯದ ಜನತೆಗೆ ತಿಳಿಯಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಶೀಘ್ರ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದರು.
ತಾಲ್ಲೂಕು ವಕೀಲರ ಸಂಘದ ಸದಸ್ಯರು ನ್ಯಾಯಾಂಗ ಕಲಾಪವನ್ನು ಬಹಿಷ್ಕರಿಸಿ ಮೆರವಣಿಗೆ ನಡೆಸಿ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿದರು. ನಾಗರಿಕ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಬಸ್ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಪ್ರತಿಭಟಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ವಕೀಲರಾದ ಬೈರಾರೆಡ್ಡಿ, ಸುಬ್ರಮಣಿ, ಲೋಕೇಶ್, ಮಂಜುಕಿರಣ್, ಬಿಜೆಪಿ ಪಕ್ಷದ ಸುರೇಂದ್ರಗೌಡ, ಮುನಿರಾಜು, ಶಿವಕುಮಾರಗೌಡ, ಸೋಮನಾಥ್, ಮಂಜುನಾಥ, ರವಿ, ನಂದೀಶ, ದಾಮೋದರ, ರತ್ನಮ್ಮ, ಸುಜಾತಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಂಕಿ ಆರಿಸಿ, ಗೋಮಾಳ ಉಳಿಸಿ
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯ ವೆಂಕಟಕೃಷ್ಣಮ್ಮನಹಳ್ಳಿಯಲ್ಲಿ ಮಂಗಳವಾರ ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ (ಎಫ್. ಇ. ಎಸ್) ಸಂಸ್ಥೆಯು ಬೆಂಕಿ ತಡೆಗೆ ಜನ ಜಾಗೃತಿ ಆಂದೋಲನವನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಎಫ್.ಇ.ಎಸ್. ಸಂಸ್ಥೆಯ ಕಾರ್ಯಕರ್ತರಾದ ಕೃಷ್ಣಪ್ಪ, ನಿಖತ್, ಯೋಜನಾಧಿಕಾರಿ ಶಿಲ್ಪಾ ಹಾಗೂ ಪ್ರತಿನಿಧಿಗಳಾದ ಗೋಪಿ, ಲೀಲಾವತಿ ಮತ್ತು ಸೌಭಾಗ್ಯ ಅವರು ಬೆಂಕಿಯ ಅನಾಹುತ ಮತ್ತು ಮುಂಜಾಗೃತಾ ಕ್ರಮಗಳ ವಿಷಯದ ಕುರಿತಾಗಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು.
ಬೇಸಿಗೆ ಕಾಲ ಬಂತೆಂದರೆ ಗ್ರಾಮದ ಸಾಮೂಹಿಕ ಆಸ್ತಿಗಳಾದ ಗೋಮಾಳ, ಗುಂಡುತೋಪು, ಬೆಟ್ಟ, ಗುಡ್ಡ ಹಾಗೂ ಅರಣ್ಯಗಳಿಗೆ ಬೆಂಕಿ ಬೀಳುವ ಸಾದ್ಯತೆಗಳು ಹೆಚ್ಚಾಗಿರುವುದರಿಂದ, ಗ್ರಾಮದ ಜನರು ಇಂತಹ ಬೆಂಕಿಯ ಅವಘಡಗಳು ತಡೆಯಲು ಅಗತ್ಯ ಮಂಜಾಗೃತಿ ಕ್ರಮಗಳನ್ನು ತೆಗೆದುಕೊಳ್ಳಲು ಗ್ರಾಮಸ್ಥರಿಗೆ ತಿಳುವಳಿಕೆ ನೀಡಿದರು. ಈ ಕಾರ್ಯಕ್ರಮದಲ್ಲಿ ಜನರಿಗೆ ಹಾಡುಗಳ ಮೂಲಕ ಗ್ರಾಮದ ಆಸ್ತಿ ಸಂರಕ್ಷಣೆಯ ಬಗ್ಗೆ ತಿಳಿಸಿದರು.
ಡಿ.ಕೆ.ರವಿ ಸಾವಿನ ತನಿಖೆ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ
ದಕ್ಷ ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳು ಬುಧವಾರ ನಗರದ ಬಸ್ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಕೋಲಾರದ ಜಿಲ್ಲಾಧಿಕಾರಿಗಳಾಗಿ ಸಮಾಜದ ಹಿತೈಶಿಯಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಾಜಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನರಾಗಿದ್ದ ಡಿ.ಕೆ.ರವಿ ಅವರ ಸಾವು, ಕೊಲೆಯೋ, ಆತ್ಮಹತ್ಯೆಯೋ ತಿಳಿಯದೇ ರಾಜ್ಯದ ಜನತೆ ತಲ್ಲಣಗೊಂಡಿದ್ದಾರೆ. ಒಬ್ಬ ಐಎಎಸ್ ಅಧಿಕಾರಿಗೆ ರಕ್ಷಣೆ ಇಲ್ಲದಿದ್ದ ಮೇಲೆ ಜನಸಾಮಾನ್ಯರ ಗತಿಯೇನು. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಶೀಘ್ರ ತನಿಖೆ ನಡೆಸಿ ಅಪರಾಧಿಗಳನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದರು.
ಭಕ್ತರಹಳ್ಳಿ ಬೈರೇಗೌಡ, ಎ.ಎಸ್.ಚಂದ್ರೇಗೌಡ, ಬಿ.ನಾರಾಯಣಸ್ವಾಮಿ, ಕೆ.ವಿ.ವೇಣುಗೋಪಾಲ್, ಎಸ್.ಎಂ.ನಾರಾಯಣಸ್ವಾಮಿ, ತ್ಯಾಗರಾಜ್, ಅಂಬರೀಷ್, ಸುರೇಶ್, ದೇವರಾಜ್, ರಘು, ಅನಂತ್, ಶಂಕರ್, ವೆಂಕಟೇಶ್, ಅಶ್ವತ್ಥಪ್ಪ, ರವಿ, ಗಂಗಾಧರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ವಾವಲಂಭನೆಯ ಹಾದಿಯಲ್ಲಿ ಸೊಣ್ಣೇನಹಳ್ಳಿಯ ಮಹಿಳೆಯರು
ರೇಷ್ಮೆ ಮತ್ತು ಹೈನುಗಾರಿಕೆಯನ್ನು ನಂಬಿ ತಾಲ್ಲೂಕಿನ ಲಕ್ಷಾಂತರ ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಆದರೆ ನೀರಿನ ಅಭಾವದಿಂದ ಹಲವಾರು ಗ್ರಾಮಗಳಲ್ಲಿ ರೇಷ್ಮೆ ಕೃಷಿ ಕುಂಠಿತಗೊಂಡಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಗ್ರಾಮದ ಮಹಿಳೆಯರು ಸ್ವಾವಲಂಭಿಗಳಾಗಲು ನೆರವಾಗುವಂತೆ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿಯ ಸೊಣ್ಣೇನಹಳ್ಳಿಯಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗುತ್ತಿದೆ.
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಯ ವಯಸ್ಕರ ಶಿಕ್ಷಣ ಇಲಾಖೆ, ಶ್ರೀನಿಧಿ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯೊಂದಿಗೆ 75 ದಿನಗಳ ಹೊಲಿಗೆ ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಗ್ರಾಮದ 20 ಮಂದಿ ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದು, ಮನೆಯಲ್ಲಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡ ನಂತರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ರವರೆಗೆ ತರಬೇತಿ ಪಡೆಯುತ್ತಿದ್ದಾರೆ. ಕೆಲವರು ತಮ್ಮ ಪುಟ್ಟ ಮಕ್ಕಳನ್ನೂ ಕರೆತಂದು ಜೊತೆಯಲ್ಲಿಟ್ಟುಕೊಂಡೇ ಉತ್ಸಾಹದಿಂದ ಕಲಿಯುತ್ತಿದ್ದಾರೆ.
‘ನಮಗೆ ನೀರು ಕಡಿಮೆಯಾದ ನಂತರ ರೇಷ್ಮೆ ಹುಳು ಸಾಕಾಣಿಕೆ ಕುಂಠಿತಗೊಂಡಿತು. ಕೇವಲ ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುವುದು ಕಷ್ಟಕರ. ಇಂಥ ಸಂದರ್ಭದಲ್ಲಿ ನಾವಿರುವ ಗ್ರಾಮದಲ್ಲೇ ಹೊಲಿಗೆ ತರಬೇತಿಯನ್ನು ಪ್ರಾರಂಭ ಮಾಡಿದರು. ಹೊಸ ವಿದ್ಯೆಯನ್ನು ನಾವಿರುವ ಸ್ಥಳದಲ್ಲೇ ಕಲಿಸುವುದರಿಂದ ಮನೆ ಕೆಲಸದೊಂದಿಗೆ ಕಲಿಯತೊಡಗಿದೆವು. ಸುಮಾರು 65 ದಿನಗಳ ನಂತರ ನಮ್ಮಲ್ಲಿ ಒಂದು ರೀತಿಯ ಆತ್ಮಸ್ಥೈರ್ಯ ಬಂದಿದೆ. ಇದರಿಂದ ನಮ್ಮಲ್ಲಿ ಹಲವಾರು ಮಂದಿ ಜೀವನ ನಡೆಸಲು ಸಾಧ್ಯವಿದೆ’ ಎಂದು ತರಬೇತಿಯಲ್ಲಿ ಪಾಲ್ಗೊಂಡ ಮಹಿಳೆ ಮಂಜುಳಮ್ಮ ತಿಳಿಸಿದರು.
‘ಮಹಿಳೆಯರು ಸ್ವಾವಲಂಭಿಗಳಾಗಬೇಕು ಎಂದು ಕೇವಲ ರಾಜಕೀಯ ಭಾಷಣವಾಕ್ಯವಲ್ಲದಂತೆ ನಮ್ಮ ಗ್ರಾಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯವರು ಹೊಲಿಗೆ ತರಬೇತಿ ಕಾರ್ಯಾಗಾರ ನಡೆಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಸ್ಥಾಪಿಸಿರುವ ಗಾರ್ಮೆಂಟ್ ಕೆಲಸಕ್ಕೂ ಇದರಿಂದ ಹಲವಾರು ಮಹಿಳೆಯರು ಹೋಗಿ ದುಡಿಯಬಹುದು. ನಮ್ಮ ಗ್ರಾಮದಲ್ಲಿ ಈ ತರಬೇತಿ ನಡೆಸಲು ಆಂಜಿನಪ್ಪ ಅವರು ಉಚಿತವಾಗಿ ಸ್ಥಳವನ್ನು ಕೊಟ್ಟಿದ್ದಾರೆ. ಮಹಿಳೆಯರಿಗೆ ತರಬೇತಿಯ ನಂತರ ಹೊಲಿಗೆ ಯಂತ್ರಗಳನ್ನು ಶೀಬಿರಾರ್ಥಿಗಳಿಗೆ ಉಚಿತವಾಗಿ ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ತಿಳಿಸಿದರು.
‘ಮಹಿಳೆಯರು ಸೂಕ್ಷ್ಮಗ್ರಾಹಿಗಳು. ಹೊಸ ಕೆಲಸ ಅಥವಾ ವಿದ್ಯೆಯನ್ನು ಉತ್ಸಾಹದಿಂದ ಗ್ರಹಿಸಿ ಕಲಿಯುತ್ತಾರೆ. ಈ ಹೊಲಿಗೆ ತರಬೇತಿ ಕಾರ್ಯಾಗಾರಕ್ಕೆ ವಯಸ್ಸಾಗಲೀ ವಿದ್ಯಾರ್ಹತೆಯಾಗಲೀ ಅವಶ್ಯವಿಲ್ಲ. ಕಲಿಯುವ ಮನಸ್ಥಿತಿಯಿದ್ದರೆ ಸಾಕು. ಈ ವೃತ್ತಿ ಕೌಶಲ್ಯದಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗಬಲ್ಲರು’ ಎನ್ನುತ್ತಾರೆ ತರಬೇತಿ ನೀಡುತ್ತಿರುವ ಶ್ರೀನಿಧಿ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಸರಸ.
ಮಗು ಬೆರಳು ಕಚ್ಚುತ್ತಿದ್ದೆಯೇ?
ಸಾಮಾನ್ಯವಾಗಿ ಮಕ್ಕಳು ಬೆರಳು ಚೀಪುವುದು ಅಥವಾ ಉಗುರನ್ನು ಕಚ್ಚುವುದನ್ನು ಮಾಡುತ್ತಾರೆ. ಆರೋಗ್ಯಕರ ಮನೋದೈಹಿಕ ಬೆಳವಣಿಗೆ ಇರುವ ಮಕ್ಕಳಲ್ಲಿ ಬೆಳೆಯುತ್ತಾ ಬಂದಂತೆ ಇದು ತಾನಾಗಿ ನಿಲ್ಲುತ್ತದೆ. ನಾಲ್ಕೈದು ವರ್ಷಗಳ ನಂತರವೂ ಇದು ಮುಂದುವರೆದರೆ ಪೋಷಕರು ಇದರ ಕಡೆ ಗಮನ ಹರಿಸುವ ಅಗತ್ಯವಿರುತ್ತದೆ.
ಸುಮಾರಾಗಿ ಎಲ್ಲಾ ತಂದೆತಾಯಿಗಳೂ ಎರಡು ವರ್ಷದ ನಂತರದಿಂದಲೇ ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಲು ಯತ್ನಿಸುತ್ತಾರೆ. ಇದನ್ನು ಮಾಡುವ ಅಗತ್ಯವಿದ್ದರೂ ಅವರು ಅನುಸರಿಸುವ ತಂತ್ರಗಳು ಮಾತ್ರ ಸೂಕ್ತವಾಗಿರುವುದಿಲ್ಲ. ಹೆಚ್ಚಿನ ಪೋಷಕರು ಇದೊಂದು ಅವಮಾನಕರ ಅಭ್ಯಾಸ, ಹಾಗಾಗಿ ಸಾರ್ವಜನಿಕವಾಗಿ ಮಕ್ಕಳು ಬೆರಳನ್ನು ಚೀಪುವುದು ತಮ್ಮ ಘನತೆಗೆ ಕುಂದು-ಎಂದುಕೊಳ್ಳುತ್ತಾರೆ. ಆದ್ದರಿಂದ ಬಲವಂತವಾಗಿ ಈ ಅಭ್ಯಾಸವನ್ನು ಬಿಡಿಸಲು ಯತ್ನಿಸುತ್ತಾರೆ. ದೆವ್ವ ಭೂತಗಳ ಭಯ ಹುಟ್ಟುಸುವುದು, ಜನರೆಲ್ಲಾ ನಗುತ್ತಾರೆ ಎಂದು ಹಂಗಿಸುವುದು ಮುಂತಾದ ಅಡ್ಡ ದಾರಿಗಳನ್ನು ಅನುಸರಿಸುತ್ತಾರೆ. ಇದರಿಂದ ಉಪಯೋಗವಾಗದಿದ್ದರೆ ಕೈಮೇಲೆ ಹೊಡೆಯುವುದು ಮುಂತಾದ ದೈಹಿಕ ಶಿಕ್ಷೆಯನ್ನೂ ನೀಡುತ್ತಾರೆ. ಮಕ್ಕಳ ಕೈ ಅಥವಾ ಬೆರಳುಗಳ ಮೇಲೆ ಬಿಸಿ ಮುಟ್ಟಿಸುವ ಕ್ರೂರ ತಂದೆತಾಯಿಗಳೂ ಇದ್ದಾರೆ. ಹೀಗೆ ಭಯ ಹುಟ್ಟಿಸಿ ಬೆರಳು ಚೀಪುವ ಅಭ್ಯಾಸವನ್ನು ನಿಲ್ಲಿಸಿದರೂ, ಇದರಿಂದ ಮಕ್ಕಳ ಮನಸ್ಸಿನ ಮೇಲೆ ಇತರ ದುಷ್ಪರಿಣಾಮಗಳಾಗುತ್ತವೆ ಎನ್ನುವುದನ್ನು ಮರೆಯಬಾರದು.
ಏನಿದರ ಹಿನ್ನೆಲೆ?
ಮೊದಲು ಈ ಅಭ್ಯಾಸದ ಹಿನ್ನೆಲೆಯನ್ನು ಸ್ವಲ್ಪ ನೋಡೋಣ. ಗರ್ಭದಿಂದ ಹೊರಬಂದ ನಂತರ ಮಗು ಸುತ್ತಲಿನ ಹೊರ ಜಗತ್ತಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಗರ್ಭಾಶಯದ ಸುರಕ್ಷಿತ ಕೋಣೆಯಿಂದ ಹೊರಬಂದ ಮಗುವಿಗೆ ಸುತ್ತಲಿನ ಪ್ರಪಂಚ ಅಭದ್ರತೆಯ ಭಾವನೆಯನ್ನು ಕೊಡುತ್ತಿರುತ್ತದೆ. ತಾಯಿಯ ಅಪ್ಪುಗೆ ಮತ್ತು ಸ್ತನಪಾನ ಅದಕ್ಕೆ ಭದ್ರತೆಯನ್ನು ನೀಡುವ ಕ್ಷಣಗಳು. ಇಂತಹ ಭದ್ರತೆಯ ಭಾವವನ್ನು ಮಗು ಬೆರಳನ್ನು ಚೀಪುವುದರಲ್ಲಿಯೂ ಕಂಡುಕೊಂಡಿರುತ್ತದೆ. ಹೊರ ಜಗತ್ತಿಗೆ ಹೊಂದಿಕೊಳ್ಳುತ್ತಾ ಬಂದಂತೆ ಈ ಅಭ್ಯಾಸ ಸಹಜವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆದರೂ ಕೆಲವೊಮ್ಮೆ ಮಗು ಅಭ್ಯಾಸ ಬಲದಿಂದ ಬೆರಳು ಚೀಪುವುದನ್ನು ಮುಂದುವರೆಸಿಯೇ ಇರುತ್ತದೆ.
ಯಾವಾಗ ಇದು ಸಮಸ್ಯೆ?
ಪೋಷಕರು ಗಮನಿಸಬೇಕಾದ ಅಂಶವೆಂದರೆ ಮಗು ಒಂದೇ ಇದ್ದಾಗ, ಅದಕ್ಕೆ ಬೇಸರವಾದಾಗ ಅಥವಾ ಸಕ್ರಿಯವಾಗಿ ಏನನ್ನೂ ಮಾಡದೆ ಇರುವಾಗ ಬೆರಳನ್ನು ಚೀಪುತ್ತದೆ. ಆಟವಾಡುವಾಗ ಅಥವಾ ಸಂತೋಷದಿಂದಿರುವಾಗ ಇದರ ಅಗತ್ಯವಿರುವುದಿಲ್ಲ. ಇದರ ಅರ್ಥವೇನೆಂದರೆ, ನಾಲ್ಕೈದು ವರ್ಷದ ಮಗುವಿಗೆ ಈ ಅಭ್ಯಾಸವಿದ್ದರೆ ಅದು ಬೆರಳು ಚೀಪುವ ಸಂದರ್ಭದಲ್ಲಿ ಮಾನಸಿಕವಾಗಿ ಖುಷಿಯಾಗಿರುವುದಿಲ್ಲ. ಯಾವುದೋ ಮುಜುಗರ ಅಥವಾ ಬೇಸರವನ್ನು ಅನುಭವಿಸುತ್ತಿರುತ್ತದೆ. ಅಷ್ಟು ಸಣ್ಣ ಮಗುವಿಗೆ ಅದೆಂತಹ ಬೇಸರ ಎಂದು ಮೂಗುಮುರಿಯಬೇಡಿ. ಭಾವನೆಗಳನ್ನು ಅನುಭವಿಸುವ ಮೆದುಳಿನ ಭಾಗವಾದ ಅಮಿಗ್ಡಾಲ ಹುಟ್ಟುವಾಗಲೇ ಸಂಪೂರ್ಣ ಬೆಳವಣಿಗೆಯಾಗಿರುತ್ತದೆ. ಆದರೆ ಮಗುವಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಶಬ್ಧಗಳ ಕೊರತೆ ಇರುವುದರಿಂದ ಅದನ್ನು ದೇಹಭಾಷೆಯಲ್ಲಿ ತೋರಿಸುತ್ತದೆ. ಇದನ್ನು ತಿಳಿಯದೆ ಬರಿ ಶಿಕ್ಷೆ, ಬುದ್ಧಿವಾದಗಳಿಂದ ಬದಲಾವಣೆ ಸಾಧ್ಯವಿಲ್ಲ.
ಎಲ್ಲಿದೆ ಪರಿಹಾರ?
1. ತಕ್ಷಣದಿಂದ ಎಲ್ಲಾ ರೀತಿಯ ಶಿಕ್ಷೆಯನ್ನು ನಿಲ್ಲಿಸಬೇಕು. ಇದೊಂದು ದೊಡ್ಡ ಅವಮಾನಕರ ಅಭ್ಯಾಸ ಎನ್ನುವ ಭಾವನೆಯನ್ನು ಮಗುವಿನಲ್ಲಿ ಉಂಟಾಗುವಂತೆ ವರ್ತಿಸಬಾರದು. ಎಲ್ಲರೆದುರು ಮಗುವನ್ನು ಬೈಯುವುದಾಗಲೀ ಅವಮಾನ ಮಾಡುವುದಾಗಲೀ ಸಂಪೂರ್ಣ ನಿಷಿದ್ಧ.
2. ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸ ಒಳ್ಳೆಯದಲ್ಲ ಎಂದು ಪದೇಪದೇ ಮನವರಿಕೆ ಮಾಡಿಕೊಡಬೇಕು.
3. ಮಗು ಬೆರಳು ಚೀಪುತ್ತಿದ್ದರೆ ಅದರ ಗಮನವನ್ನು ಬೇರೆ ಕಡೆ ತಿರುಗಿಸಿ, ಅಂದರೆ ಮಗುವಿಗೆ ಹೆಚ್ಚು ಖುಷಿ ಕೊಡುವ ಅಂಶಗಳ ಬಗೆಗೆ ಗಮನ ಸೆಳೆಯಲು ಯತ್ನಿಸಿದರೆ ಇಂತಹ ಅಭ್ಯಾಸ ಕಡಿಮೆಯಾಗುತ್ತದೆ. ಕೈಬೆರಳುಗಳನ್ನು ಬೇರೆ ಸಂತೋಷಕೊಡುವ ಕ್ರಿಯೆಗಳಲ್ಲಿ ತೊಡಗಿಸಿದಾಗ (ಉದಾ; ಚಂಡಿನ ಆಟ, ಚಪ್ಪಾಳೆ, ನೃತ್ಯ, ಮುಂತಾದವು) ಮಗುವಿಗೆ ಅದನ್ನು ಬಾಯಿಗೆ ಹಾಕುವ ಸಾಧ್ಯತೆ ಇರುವುದಿಲ್ಲ. ಟೀವಿ ನೋಡುವ ಸಮಯವನ್ನು ನಿಯಂತ್ರಿಸದಿದ್ದರೆ ಬೆರಳು ಚೀಪುವ ಅಭ್ಯಾಸ ಮುಂದುವರೆಯುವ ಸಾಧ್ಯತೆಗಳು ಹೆಚ್ಚು.
4. ಮಗು ಯಾವ ಸಂದರ್ಭಗಳಲ್ಲಿ ಈ ಅಭ್ಯಾಸವನ್ನು ಹೆಚ್ಚಾಗಿ ಮಾಡುತ್ತಿದೆ ಎಂದು ಗಮನಿಸುತ್ತಿರಬೇಕು. ಅಂತಹ ಪರಿಸ್ಥಿತಿಗಳಲ್ಲಿ ಮಗುವಿನ ಮನಸ್ಸಿನಲ್ಲಿರಬಹುದಾದ ಬೇಸರ ಆತಂಕಗಳನ್ನು ಅರ್ಥಮಾಡಿಕೊಂಡು ಅದರ ನಿವಾರಣೆಗೆ ಯತ್ನಿಸಬೇಕು.
5. ಪೋಷಕರಿಗೆ ಅಗತ್ಯವಿರುವುದು ಸಹನೆ ಮತ್ತು ಸೂಕ್ಷ್ಮತೆ. ಆದ್ದರಿಂದ ಒರಟಾಗಿ ವರ್ತಿಸಿ ಮುಗ್ಧ ಮಗುವಿನಲ್ಲಿ ಅನಗತ್ಯ ಭಯವನ್ನು ಬಿತ್ತಬಾರದು.
ಐದಾರು ವರ್ಷಗಳ ನಂತರವೂ ಇಂತಹ ಅಭ್ಯಾಸ ಮುಂದುವರೆದರೆ ತಜ್ಞರಿಂದ ಆಪ್ತಸಲಹೆ ಪಡೆಯಬಹುದು.
ವಸಂತ್ ನಡಹಳ್ಳಿ
ಈ.ತಿಮ್ಮಸಂದ್ರ ಗ್ರಾಮದ ರಕ್ತದಾನ ಶಿಬಿರದಲ್ಲಿ 83 ಯೂನಿಟ್ ರಕ್ತ ಸಂಗ್ರಹಣೆ
ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದ ಸ್ವಾಮಿ ವಿವೇಕಾನಂದ ಯುವಕರ ಸಂಘ ಮತ್ತು ರೆಡ್ ಕ್ರಾಸ್ ಸೊಸೈಟಿ ಸೋಮವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 83 ಯೂನಿಟ್ ರಕ್ತ ಸಂಗ್ರಹಣೆಯಾಯಿತು.
ಬೋದಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ
ಶಿಡ್ಲಘಟ್ಟ ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಈಚೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ಪ್ರೌಢಶಾಲಾ ಶಿಕ್ಷಕ ಬಿ.ಎಂ.ಕೆಂಪಣ್ಣ ಅವರನ್ನು ಸನ್ಮಾನಿಸಲಾಯಿತು. ಬೋದಗೂರು ವೆಂಕಟಸ್ವಾಮಿರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ ಹಾಜರಿದ್ದರು.
ನಾಗಮಂಗಲ ಗ್ರಾಮದಲ್ಲಿ ನೈರ್ಮಲ್ಯ ಸ್ವಚ್ಛತಾ ಸಪ್ತಾಹ
ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿರುವ ತಾಲ್ಲೂಕಿನಲ್ಲಿ ನೀರನ್ನು ಉಳಿತಾಯ ಮಾಡಿ ನೀರಿನ ಕೊರತೆಯನ್ನು ನೀಗಿಸಲು ಮಹಿಳೆಯರ ಸಹಕರಿಸಬೇಕು ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಎಸ್.ಗುರುಬಸಪ್ಪ ಹೇಳಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ತಾಲ್ಲೂಕು ಪಂಚಾಯತಿ ್ತಿವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ವಚ್ಛತಾ ಸಪ್ತಾಹ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಬೀರ ಸ್ಚರೂಪವನ್ನು ಪಡೆಯುತ್ತಿದ್ದು ಕೊಳವೆಬಾವಿಗಳಲ್ಲಿ ಸುಮಾರು ೧೫೦೦ ಅಡಿಗಳಿಂದ ನೀರು ತೆಗೆಯಲಾಗುತ್ತಿದೆ, ನೀರಿನಲ್ಲಿ ಫ್ಲೋರೈಡ್ನ ಅಂಶ ಹೆಚ್ಚಾಗಿರುವುದರಿಂದ ಈ ಭಾಗದಜನತೆ ಹಲ್ಲುಗಳ ಸವೆತ, ಮೂಳೆಗಳ ಸವೆತ, ಹಾಗೂ ಕ್ಯಾನ್ಸರ್ ಖಾಯಿಲೆಗಳಿಂದ ಬಳಲುವಂತಾಗಿದೆ, ತಾಲ್ಲೂಕಿನಲ್ಲಿ ೧೬ ಗ್ರಾಮಗಳಿಗೆ ಕುಡಿಯುವ ನೀರನ್ನು ಟ್ಯಾಂಕರುಗಳ ಮುಖಾಂತರ ನೀಡುತ್ತಿದ್ದೇವೆ. ೫ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರನ್ನು ಪಡೆಯಲಾಗುತ್ತಿದೆ. ಆದ್ದರಿಂದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆರು ಪ್ರತಿಯೊಂದುಗ್ರಾಮದಲ್ಲಿನಜನರಿಗೆ ತಿಳುವಳಿಕೆಯನ್ನು ಹೇಳಿ ನೀರನ್ನು ಮಿತಬಳಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು. ರೈತರು ಮಳೆಯ ನೀರನ್ನು ತಮ್ಮ ಹೊಲಗಳಲ್ಲಿ ಇಂಗಿಸುವಂತಹ ಕೆಲಸವನ್ನು ಮಾಡಿ, ಅಂತರ್ಜಲದ ವೃದ್ಧಿಗಾಗಿ ಸಹಕಾರ ನೀಡಬೇಕು.
ಪ್ರತಿಯೊಂದು ಮನೆಗೂ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು, ಬಯಲು ಬಹಿರ್ದೇಸೆಯಿಂದಾಗಿಯೂ ಅನೇಕ ಖಾಯಿಲೆಗಳಿಗೆ ಜನರು ತುತ್ತಾಗುತ್ತಿದ್ದಾರೆ ಸರ್ಕಾರದಿಂದ ಶೌಚಾಲಯಗಳ ನಿರ್ಮಾಣಕ್ಕೆ ಬೇಕಾಗುವಂತಹ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು ನಾಗರೀಕರು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಎಇಇ ಗಣಪತಿ ಸಾಕರೆ ಮಾತನಾಡಿ ಲಭ್ಯವಿರುವ ನೀರನ್ನು ಶುದ್ಧೀಕರಿಸಿಕೊಳ್ಳಲು ಜಿಲ್ಲಾ ಪಂಚಾಯತಿಯಿಂದ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲಿ ನೀರಿನ ಶುದ್ಧೀಕರಣ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದರು.
ನೀರಿನ ಮಿತಬಳಕೆ ಹಾಗೂ ನೈರ್ಮಲ್ಯವನ್ನುಕಾಪಾಡುವ ಬಗ್ಗೆ ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಲಾಯಿತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಗ್ರಾಮ ಪಂಚಾಯತಿ ಪಂಚಾಯತಿ ಅಧ್ಯಕ್ಷೆ ರೂಪಶಿವಕುಮಾರ್, ಉಪಾಧ್ಯಕ್ಷ ನಾರಾಯಣಪ್ಪ, ಜಿಲ್ಲಾ ಪಂಚಾಯತಿ ಎಇಇ ಶಿವಾನಂದ, ತಾಲ್ಲೂಕು ಪಂಚಾಯತಿ ಸದಸ್ಯ ಚನ್ನಕೃಷ್ಣಪ್ಪ, ಶ್ರೀನಿವಾಸಗೌಡ, ಕೆ.ಎಂ.ರಾಮಕೃಷ್ಣಪ್ಪ, ಮಮತಾಗೋಪಾಲ್, ಮುನಿರತ್ನಮ್ಮ, ರಾಧಮ್ಮ, ಸ್ವಚ್ಛ ಭಾರತ ಅಭಿಯಾನದ ತಾಲ್ಲೂಕು ಸಂಯೋಜಕ ಬಾಸ್ಕರ್, ಸರೋಜಮ್ಮ, ಪಿ.ಡಿ.ಓ.ಗೋಪಿಗೋಪಾಲಕೃಷ್ಣ, ಕೆಂಪರೆಡ್ಡಿ, ರಘುರಾಮ್, ಟಿ.ಎಂ.ಅಶ್ವಥ್, ಪಿ.ವಿ.ಸಿದ್ದಣ್ಣ, ಗೌಸ್ಫಿರ್, ಶ್ರೀನಿವಾಸ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿವಿಧ ರೋಗಹರ ಹರೀತಕಿ (ಅಣಲೆಕಾಯಿ)
ಆಯುರ್ವೇದ ವೈದ್ಯರನ್ನು ಮತ್ತು ಹಳ್ಳಿಗಳಲ್ಲಿ ಗಿಡಮೂಲಕೆ ಔಷಧಿಗಳನ್ನು ಪಾರಂಪರಾಗತವಾಗಿ ನೀಡುತ್ತಾ ಬಂದಿರುವ ಪಂಡಿತರುಗಳನ್ನು “ಅಣಲೇಕಾಯಿ ಪಂಡಿತರು” ಎಂದು ಕರೆಯುವುದು ವಾಡಿಕೆ. ಹಿಂದೆಲ್ಲ ಬೇರೆ ಬೇರೆ ರೋಗಗಳಿಗೆ ಬೇರೆ ಬೇರೆ ಆಹಾರ ದ್ರವ್ಯಗಳ ಜೊತೆಗೆ (ಉದಾ: ಬೆಲ್ಲ, ಶುಂಠಿಪುಡಿ, ತುಪ್ಪ, ಜೇನುತುಪ್ಪ ಇತ್ಯಾದಿ) ಅಣಲೇಕಾಯಿಯನ್ನು ಕೊಡುವ ಪದ್ಧತಿ ರೂಢಿಯಲ್ಲಿತ್ತು. ಈ ಹರೀತಕಿ (ಅಣಲೇಕಾಯಿ)ಯ ವೈಶಿಷ್ಟ್ಯವೇ ಹಾಗೆ ಬೇರೆ ಬೇರೆ ದ್ರವ್ಯಗಳ ಜೊತೆಗೆ ಸೇರಿ ವಿವಿಧ ರೀತಿಯ ರೋಗಗಳನ್ನು ಗುಣಪಡಿಸುವ ಸಾಮಥ್ರ್ಯ ಇದಕ್ಕಿದೆ.
ಹರೀತಕಿ Combretaceae ಎನ್ನುವ ಕುಟುಂಬ ವರ್ಗಕ್ಕೆ ಸೇರಿದ್ದು, ಇದರ ಸಸ್ಯ ಶಾಸ್ತ್ರೀಯ ಹೆಸರು Terminalia Chebula
ವೃಕ್ಷ ಪರಿಚರ: ಇದು ಮಧ್ಯಮ ಗಾತ್ರದ ವೃಕ್ಷ ಎಲೆಗಳು 4 ರಿಂದ 8 ಇಂಚು ಉದ್ದವಾಗಿದ್ದು, ಸ್ವಲ್ಪ ಮೊಟ್ಟೆಯಾಕಾರದಲ್ಲದ್ದು, ನುಣುಪಾಗಿರುತ್ತದೆ. ಒಣಗಿದ ಫಲಗಳ ಮೇಲೆ 4 ರಿಂದ 5 ಗೆರೆಗಳು ಮೂಡಿರುತ್ತವೆ.
ರಾಸಾಯನಿಕ ಸಂಘಟನೆ: ಫಲದಲ್ಲಿ ಚೆಬುಲಿನಿಕ್ ಆಸಿಡ್ 20-40% ಗ್ಯಾಲಕ್ ಆಸಿಡ್, ಮೈರೋಬಾಲಿನಿನ್, ರಾಳ ಇರುತ್ತದೆ.
ವಿವಿಧ ಹೆಸರುಗಳು:
1. ಅಭಯಾ: ಇದನ್ನು ಸೇವಿಸುವುದರಿಂದ ಯಾವುದೇ ರೋಗಗಳ ಭಯ ಮನುಷ್ಯನಿಗೆ ಇರಲಾರದು.
2. ಅವ್ಯಥಾ: ಇದರ ಸೇವನೆಯಿಂದ ದು:ಖವು ಶಮನವಾಗುವುದು.
3. ಪಥ್ಯಾ: ಇದರ ಸೇವನೆಯು ದೇಹಕ್ಕೆ ಹಿತವನ್ನು ಉಂಟು ಮಾಡುವುದು.
4. ಕಾಯಸ್ಥಾ: ಇದರ ಸೇವನೆಯಿಂದ ಶರೀರವು ದೃಢವಾಗುತ್ತದೆ.
5. ಪೂತನಾ: ಇದು ದೇಹದಲ್ಲಿನ ದೂಷಿತ ವಾಯು ಹಾಗೂ ಮಲವನ್ನು ಹೊರ ಹಾಕುತ್ತದೆ.
6. ಹರೀತಕಿ: ಇದು ರೋಗವನ್ನು ಹೋಗಲಾಡಿಸುವುದು.
7. ಹೈಮವತಿ: ಇದು ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಹೆಚ್ಚಾಗಿ ಬೆಳೆಯುವುದರಿಂದ ಈ ಹೆಸರು.
8. ಚೇತಕಿ: ಇದರಿಂದ ದೇಹದ ಸ್ರೋತಸ್ಸುಗಳು ಶುದ್ಧವಾಗುವವು
9. ಶ್ರೇಯಸಿ: ಇದರ ಸೇವನೆಯು ಶ್ರೇಯಸ್ಸನ್ನುಂಟು ಮಾಡುವುದು.
ಹರೀತಕಿಯ ವಿಧಗಳು
1. ವಿಜಯಾ: ಸೋರೆಕಾಯಿಯಂತೆ ವೃತ್ತಾಕಾರವಾಗಿರುವುದು. ಇದು ಎಲ್ಲ ರೋಗಗಳನ್ನು ಗುಣ ಪಡಿಸುವುದು.
2. ರೋಹಿಣಿ: ವೃತ್ತಾಕಾರವಾಗಿರುತ್ತದೆ. ಯಾವುದೇ ರೀತಿಯ ವ್ರಣ (ಹುಣ್ಣುಗಳನ್ನೂ) ಗುಣಪಡಿಸುವುದು.
3. ಪೂತನ: ದೊಡ್ಡ ಬೀಜವನ್ನು ಹೊಂದಿದ್ದು, ಸೂಕ್ಷ್ಮವಾಗಿರುತ್ತದೆ. ಇದನ್ನು ವ್ರಣಗಳ ಮೇಲೆ ಲೇಪನಕ್ಕೆ ಬಳಸಲಾಗುತ್ತದೆ.
4. ಅಮೃತಾ: ಬೀಜವು ಚಿಕ್ಕದಾಗಿದ್ದು, ಸಿಪ್ಪೆ ಮತ್ತು ಒಳಗಿನ ಭಾಗವು ದಪ್ಪವಾಗಿರುತ್ತದೆ. ದೇಹ ಶುದ್ಧಿಗೆ ಇದನ್ನು ಬಳಸಲಾಗುತ್ತದೆ.
5. ಅಭಯಾ: ಹೊರ ಭಾಗದಲ್ಲಿ ಐದು ಗೆರೆಗಳನ್ನು ಹೊಂದಿರುತ್ತದೆ. ಇದು ಕಣ್ಣಿನ ರೋಗಗಳಿಗೆ ಉತ್ತಮ.
6. ಜೀಮಂತಿ: ಬಂಗಾರದ ಬಣ್ಣವನನ್ನು ಹೊಂದಿರುತ್ತದೆ. ಎಲ್ಲ ರೋಗಗಳನ್ನು ಗುಣಪಡಿಸುವುದು.
7. ಚೇತಕಿ: ಹೊರ ಭಾಗದಲ್ಲಿ ಮೂರು ರೇಖೆಗಳನ್ನು ಹೊಂದಿರುತ್ತದೆ. ಚೂರ್ಣವನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ.
ಹರೀತಕಿಯ ಗುಣಧರ್ಮಗಳು
1. ಹರೀತಕಿಯು ಐದು ರಸಗಳನ್ನು ಹೊಂದಿದ್ದು, (ಸಿಹಿ, ಹುಳಿ, ಖಾರ, ಕಹಿ, ಒಗರು) ಒಗರು ರಸ ಪ್ರಧಾನವಾಗಿರುತ್ತದೆ.
2. ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ.
3. ರಸಾಯನವಾಗಿ ಕೆಲಸ ಮಾಡುತ್ತದೆ. (ದೇಹದ ಧಾತುಗಳನ್ನು ವರ್ಧಿಸುತ್ತದೆ)
4. ಉಷ್ಣ ವೀರ್ಯವನ್ನು ಹೊಂದಿರುತ್ತದೆ. (ವೀರ್ಯ ಅಂದರೆ ಆಹಾರ ಮತ್ತು ಔಷಧ ದ್ರವ್ಯಗಳು ಜೀರ್ಣವಾಗಿ ಪರಿವರ್ತನೆ ಹೊಂದಿದ ನಂತರ ಶರೀರದಲ್ಲಿ ವ್ಯಕ್ತವಾಗುವ ರಸ)
5. ಮಧುರ ವಿಪಾಕವನ್ನು ಹೊಂದಿರುತ್ತದೆ. (ವಿಪಾಕ ಅಂದರೆ ಆಹಾರ ಮತ್ತು ಔಷಧ ದ್ರವ್ಯಗಳು ಜೀರ್ಣವಾಗುವ ಹಂತದಲ್ಲಿ ವ್ಯಕ್ತವಾಗುವ ರಸ)
6. ಕಣ್ಣಿಗೆ ಹಿತಕರ
7. ಜೀರ್ಣಕ್ಕೆ ಹಗುರವಾದಂಥಹುದು.
8. ದೇಹದ ಧಾತುಗಳಿಗೆ ಪುಷ್ಠಿಯನ್ನು ಕೊಡುವುದು.
9. ದೇಹದಲ್ಲಿನ ದೂಷಿತ ವಾಯು, ಮಲಗಳನ್ನು ಗುದಮಾರ್ಗದ ಮೂಲಕ ಹೊರ ಹಾಕುವುದು.
10. ಶ್ವಾಸ (ದಮ್ಮು), ಕೆಮ್ಮು, ಮಧುಮೇಹ, ಅರ್ಶಸ್ಸು, ಚರ್ಮರೋಗಗಳು, ಬಾವು, ಉದರ ರೋಗ (ascites), ಕ್ರಿಮಿ, ಜೀರ್ಣಕ್ರಿಯೆಗೆ ಸಂಬಂಧ ಪಟ್ಟ ರೋಗಗಳು, ವಾಂತಿ ಹೃದ್ರೋಗ, ಕಾಮಲಾ ಪ್ಲೀಹ ಹಾಗೂ ಯಕೃತ್ ಸಂಬಂಧಿ ರೋಗಗಳು, ಮೂತ್ರ ಅಶ್ಮಂ ಕೆಲವೊಂದು ಮೂತ್ರ ಸಂಬಂಧಿ ರೋಗಗಳಲ್ಲಿ ಇದನ್ನು ಬೇರೆ ಬೇರೆ ದ್ರವ್ಯಗಳ ಜೊತೆಗೆ ಬಳಸಲಾಗುವುದು.
ಉತ್ತಮ ಹರೀತಕಿ ಫಲದ ಲಕ್ಷಣಗಳು
ಗಟ್ಟಿಯಾಗಿದ್ದು, ಜಿಡ್ಡಿನಿಂದ ಕೂಡಿದ್ದು, ವೃತ್ತಾಕಾರವಾಗಿರಬೇಕು, ನೀರಿನಲ್ಲಿ ಹಾಕಿದರೆ ಮುಳುಗಬೇಕು. ಇಂಥಹ ಅಣಲೇಕಾಯಿ ಬಳಕೆಗೆ ಉತ್ತಮ.
ಇತರೇ ಗುಣಗಳು
1. ಹರೀತಕಿ ಫಲವನ್ನು ಅಗಿದು ತಿನ್ನುವುದರಿಂದ ಜೀರ್ಣಶಕ್ತಿಯು ವೃದ್ಧಿಯಾಗುವುದು.
2. ಇದನ್ನು ಕಲ್ಲಿನಲ್ಲಿ ಅರೆದು ಉಪಯೋಗಿಸುವುದರಿಂದ ದೇಹದಲ್ಲಿ ಸಂಗ್ರಹವಾದ ಪುರಾಣ ಮಲವನ್ನು ಶೋಧನ ಮಾಡಿ ಗುದದ್ವಾರದ ಮೂಲಕ ಹೊರಗೆ ಹಾಕುವುದು.
3. ಹರೀತಕಿ ಫಲವನ್ನು ಬೇಯಿಸಿ ಉಪಯೋಗಿಸುವುದರಿಂದ ಮಲ ಬದ್ಧತೆಯನ್ನುಂಟು ಮಾಡುವುದು.
4. ಹರೀತಕಿ ಫಲವನ್ನು ಹುರಿದು ತಿನ್ನುವುದರಿಂದ ವಾತ, ಪಿತ್ತ ಹಾಗೂ ಕಫ ದೋಷಗಳನ್ನು ಶಮನ ಮಾಡುವುದು.
5. ಆಹಾರದ ಜೊತೆ ಸೇವಿಸುವುದರಿಂದ ಬುದ್ಧಿ ಶಕ್ತಿಯನ್ನು ಹೆಚ್ಚಿಸುವುದು. ಬಲವನ್ನು ಹೆಚ್ಚಿಸುವುದು ಮತ್ತು ಇಂದ್ರಿಯಗಳಿಗೆ ಶಕ್ತಿಯನ್ನು ಕೊಡುವುದು.
6. ಆಹಾರದ ನಂತರ ಸೇವಿಸುವುದರಿಂದ ಆಹಾರದಲ್ಲಿ ಏನಾದರೂ ದೋಷಗಳಿದ್ದರೆ ಶಮನ ಮಾಡುವುದು.
7. ಸೈಂಧವ ಲವಣದೊಂದಿಗೆ ಸೇವನೆ ಮಾಡಿದರೆ ಕಫ ದೋಷವನನ್ನು, ಸಕ್ಕರೆಯೊಂದಿಗೆ ಸೇವನೆ ಮಾಡಿದರೆ ಮಾತ ದೋಷವನ್ನು ಹಾಗು ಬೆಲ್ಲದೊಂದಿಗೆ ಸೇವೆನೆ ಮಾಡಿದರೆ ಎಲ್ಲ ರೋಗಗಳನ್ನು ಶಮನ ಮಾಡುವುದು.
ಋತುವಿಗನುಗುಣವಾಗಿ ಹರೀತಕಿಯ ಉಪಯೋಗಗಳು
ವರ್ಷಾ ಋತು – ಸೈಂಧವ ಲವಣ
ಶರದ್ ಋತು – ಸಕ್ಕರೆ
ಹೇಮಂತ ಋತು – ಶುಂಠಿ
ಶಿಶಿರ ಋತು _ ಹಿಪ್ಪಲಿ
ವಸಂತ ಋತು – ಜೇನುತುಪ್ಪ
ಗ್ರೀಷ್ಮ ಋತು – ಬೆಲ್ಲ
ಯಾರಿಗೆ ಹರೀತಕಿ ಸೇವನೆ ನಿಷಿದ್ಧ
ದಣಿದವರು, ದುರ್ಬಲರು, ಒಣ ಶರೀರದವರು, ಕೃಶರು, ಉಪವಾಸ ಮಾಡಿದವರು, ಪಿತ್ತ ಪ್ರಕೃತಿಯವರು, ಗರ್ಭಿಣಿ ಸ್ತ್ರೀ ಇವರೆಲ್ಲರಿಗೆ ಹರೀತಕಿ ಸೇವನೆ ನಿಷಿದ್ಧ.
ರೋಗಗಳಲ್ಲಿ ಹರೀತಕಿ ಪ್ರಯೋಗ
1. ಅರ್ಶಸ್ಸಿನಲ್ಲಿ ಇದರ ಚೂರ್ಣವನ್ನು ಬೆಣ್ಣೆಯಲ್ಲಿ ಕಲಸಿ ಲೇಪಿಸುವುದು ಉತ್ತಮ.
2. ಬಾಯಿ ಹುಣ್ಣು ಆದಾಗ ಹರೀತಕಿ ಚೂರ್ಣದ ಕಷಾಯವನ್ನು ಮಾಡಿ ಆಗಾಗ ಆ ಕಷಾಯದಲ್ಲಿ ಬಾಯಿ ಮುಕ್ಕಳಿಸುತ್ತಿರಬೇಕು.
3. ಹರೀತಕಿಯ ಸೂಕ್ಷ್ಮಚೂರ್ಣವನ್ನು ಹಲ್ಲು ತಿಕ್ಕಲೂ ಕೂಡ ಬಳಸಬಹುದು.
4. ಮಲ ಬದ್ಧತೆ ಉಂಟಾದಾಗ ಬಿಸಿ ನೀರಿಗೆ ಒಂದರಿಂದ ಎರಡು ಚಮಚದಷ್ಟು ಹರೀತಕಿ ಚೂರ್ಣವನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.
5. ಅತಿಯಾಗಿ ಬಿಕ್ಕಳಿಕೆ ಬರುತ್ತಿದ್ದಾಗ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚದಷ್ಟು ಹರೀತಕಿ ಚೂರ್ಣವನ್ನು ಬೆರೆಸಿ ಕುಡಿಯಬೇಕು.
6. ಕೆಲವೊಂದು ರೀತಿಯ ಗಂಟಲಿನ ರೋಗಗಳಲ್ಲಿ ಹರೀತಕಿ ಚೂರ್ಣದಿಂದ ಕಷಾಯವನ್ನು ತಯಾರಿಸಿ ಜೇನುತುಪ್ಪವನ್ನು ಬೆರೆಸಿ ಕುಡಿಯಬೇಕು.
ಹೀಗೆ ದೋಷ, ಪ್ರಕೃತಿ, ರೋಗ, ದೇಶ, ಕಾಲ ಇವೆಲ್ಲವುಗಳನ್ನು ಗಮನಿಸಿಕೊಂಡು ಈ ಹರೀತಕಿ ಫಲದ ಬಳಕೆ ಮಾಡೋಣ.
ಡಾ. ನಾಗಶ್ರೀ ಕೆ.ಎಸ್.
ಡಿ.ಕೆ.ರವಿ ಅವರ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು
‘ಡಿ.ಕೆ.ರವಿ ಅವರ ಈ ಸಾವು ನ್ಯಾಯವೇ?’, ‘ಭೂ ಮಾಫಿಯಾಗೆ ಧಿಕ್ಕಾರ. ಉತ್ತಮ ಅಧಿಕಾರಿಗಳಿಗೆ ರಕ್ಷಣೆ ನೀಡದ ಭ್ರಷ್ಟ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆಗಳನ್ನು ಕೂಗುತ್ತಾ ಒಂದೆಡೆ ರೇಷ್ಮೆ ಗೂಡು ಮಾರುಕಟ್ಟೆಯ ಬಳಿಯಿಂದ ರೈತ ಮುಖಂಡರು ಮೆರವಣಿಗೆ ನಡೆಸಿದರು. ಮತ್ತೊಂದೆಡೆ ಎಸ್.ಎಫ್.ಐ ನೇತೃತ್ವದಲ್ಲಿ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ಕೂಡ ಡಿ.ಕೆ.ರವಿ ಅವರ ಈ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ರೈತಮುಖಂಡರು ತಹಶಿಲ್ದಾರ್ ಕಚೇರಿಯ ಅಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು. ಅಬ್ಲೂಡು ಆರ್.ದೇವರಾಜ್, ಭಕ್ತರಹಳ್ಳಿ ಬೈರೇಗೌಡ, ತ್ಯಾಗರಾಜ್, ರಾಮಚಂದ್ರ, ಚಿಕ್ಕಮಾರಪ್ಪ, ಅಂಬರೀಷ್, ಶ್ರೀನಿವಾಸ್, ಗೋವಿಂದಪ್ಪ, ರಾಜಗೋಪಾಲ್, ಎಸ್.ಎಫ್.ಐ ಮುಖಂಡ ಮುನೀಂದ್ರ, ನರಸಿಂಹಮೂರ್ತಿ, ಆನಂದಕುಮಾರ್, ನವೀನ್, ರಾಜೇಶ್, ಭರತ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ
ಗ್ರಾಮೀಣ ಭಾಗದ ಜನ ಜೀವನದ ಸ್ಥಿತಿ ಗತಿ ಅರಿಯಲು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವು ಅನುಕೂಲವಾಗಲಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ, ಹೆಬ್ಬಾಳ ಸಮೀಪದ ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜು ಹಾಗೂ ರಾಷ್ಟ್ರೀಯ ಸೇವಾ ಯೋಜನೆ(ಎನ್ಎಸ್ಎಸ್)ಯ ಆಶ್ರಯದಲ್ಲಿ ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈ ದೇಶದ ನಿಜವಾದ ಬದುಕು ಗ್ರಾಮೀಣ ಭಾಗದಿಂದಲೆ ಆರಂಭವಾಗುತ್ತದೆ. ಗ್ರಾಮೀಣ ಭಾಗದ ಅಭಿವೃದ್ಧಿಯ ಆಧಾರದ ಮೇಲೆ ನಗರ ಹಾಗೂ ಇಡೀ ದೇಶದ ಅಭಿವೃದ್ಧಿ ಅವಲಂಬಿತವಾಗಿದೆ. ಹಾಗಾಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದ ಜತೆಗೆ ಗ್ರಾಮೀಣ ಭಾಗದ ಜನ ಜೀವನ ಕುರಿತು ತಿಳುವಳಿಕೆಯನ್ನು ಅನುಭವದ ಮೂಲಕವೇ ಕಟ್ಟಿಕೊಡಲು ಈ ಎನ್ಎಸ್ಎಸ್ ಶಿಬಿರ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಎನ್ಎಸ್ಎಸ್ ಶಿಬಿರಾಧಿಕಾರಿ ಪಚಯಪ್ಪನ್ ಶಿಬಿರದ ಕಾರ್ಯಯೋಜನೆಗಳನ್ನು ಕುರಿತು ವಿವರಿಸಿದರು. ಶಿಬಿರದ ಸಂಘಟಕರಾದ ಪ್ರಭುದೇವ್, ಪ್ರಾಧ್ಯಾಪಕರಾದ ಪ್ರೊ.ಪ್ರದೀಪ್ಕುಮಾರ್ ಶಿಂಧೆ, ಪ್ರೊ.ಬಬಿತ ಜೋಸೆಫ್, ಪ್ರೊ.ನಾರಾಯಣಸ್ವಾಮಿ, ಕೋಲಾರ- ಚಿಕ್ಕಬಳ್ಳಾಪುರ ಹಾಲು ಒಕ್ಕೂಟ(ಕೋಚಿಮುಲ್)ದ ನಿರ್ದೇಶಕ ಬಂಕ್ಮುನಿಯಪ್ಪ, ಕೋಚಿಮುಲ್ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಹುಜಗೂರು ರಾಮಯ್ಯ, ಆರ್.ಶ್ರೀನಿವಾಸ್, ಲಕ್ಷ್ಮೀಪತಿರೆಡ್ಡಿ, ಸೂರ್ಯನಾರಾಯಣಗೌಡ, ವಿಶ್ವನಾಥ್, ಸುರೇಂದ್ರಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲಲ್ಯ ಸ್ವಚ್ಛತಾ ಸಪ್ತಾಹ
ಪ್ರತಿಯೊಬ್ಬ ನಾಗರೀಕರು ತಮ್ಮ ಗ್ರಾಮಗಳಲ್ಲಿ ನೈರ್ಮಲ್ಯವನ್ನು ಕಾಪಾಡುವ ಜೊತೆಗೆ ನೀರಿನ ಮಿತಬಳಕೆಯನ್ನು ಮಾಡಿಕೊಂಡು ಬೇಸಿಗೆಯಲ್ಲಿ ನೀರಿನ ಸಮಸ್ಯೆಯನ್ನು ಎದುರಿಸಲು ಸಜ್ಜಾಗಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಮುನಿರತ್ನಮ್ಮ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ಕಾರ್ಯಾಲಯದ ಆವರಣದಲ್ಲಿ ಸೋಮವಾರ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಮತ್ತು ನೈಮರ್ಲಲ್ಯ ಸ್ವಚ್ಛತಾ ಸಪ್ತಾಹ ಆಚರಣೆಯ ಅಂಗವಾಗಿ ಅವರು ಮಾತನಾಡಿದರು.
ಬೇಸಿಗೆ ಸಮೀಪಿಸುತ್ತಿದ್ದು ಜನರು ಸೇರಿದಂತೆ ಜಾನುವಾರುಗಳು ಕುಡಿಯುವ ನೀರಿನ ಸಮಸ್ಯೆಗೆ ಒಳಗಾಗುತ್ತಿದ್ದು, ಕೊಳವೆಬಾವಿಗಳಲ್ಲಿ ಲಭ್ಯವಿರುವ ನೀರನ್ನು ವ್ಯರ್ಥಮಾಡದೆ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು. ರಾಜ್ಯಾಧ್ಯಂತ ಎಚ್೧ಎನ್೧ ಖಾಯಿಲೆ ಸಹಾ ಕಾಣಿಸಿಕೊಂಡು ಅನೇಕ ಮಂದಿ ಸಾವನ್ನಪ್ಪಿರುವ ಘಟನೆಗಳು ನಡೆಯುತ್ತಿದ್ದು, ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸಬೇಕು, ಮನೆಗಳ ಸಮೀಪದಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅವರಿಗೆ ತಿಳುವಳಿಕೆ ಹೇಳಬೇಕು, ನೀರನ್ನು ಹೆಚ್ಚು ಕಾಲ ಶೇಖರಣೆ ಮಾಡಿ ಇಡದಂತೆ ಮನವರಿಕೆ ಮಾಡಿಕೊಡಬೇಕು ಎಂದರು.
ಸ್ವಚ್ಚತೆಯ ಬಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಂದ ಮೆರವಣಿಗೆ ಮುಖಾಂತರ ಜಾಗೃತಿ ಮೂಡಿಸಲಾಯಿತು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪಿ.ವಿ.ಸಿದ್ದಣ್ಣ, ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರಿ ಶಾಲೆಗಳ ಶಿಕ್ಷಕರು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತ್ಯಾಜ್ಯ ನೀರಿನ ಹರಾಜಿಗಾಗಿ ರೈತರ ಒತ್ತಾಯ
ನಗರಸಭಾ ಕಾರ್ಯಾಲಯದಿಂದ ಸೋಮವಾರ ನಡೆಯಬೇಕಿದ್ದ ಒಳಚರಂಡಿ ಶುದ್ಧೀಕಣ ಘಟಕದ ತ್ಯಾಜ್ಯ ನೀರಿನ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸಿದ ಹಿನ್ನೆಲೆಯಲ್ಲಿ ಹಿತ್ತಲಹಳ್ಳಿಯ ಹಾಗೂ ಇನ್ನಿತರ ರೈತರು ನಗರಸಭೆ ಕಚೇರಿಗೆ ಆಗಮಿಸಿ ಅಧಿಕಾರಿಗಳು ಹಾಗೂ ರೈತಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.
ನಗರಸಭೆ ವ್ಯಾಪ್ತಿಯ ತಾಲ್ಲೂಕಿನ ಹಿತ್ತಲಹಳ್ಳಿ ಬಳಿಯಿರುವ ಒಳಚರಂಡಿ ಶುದ್ಧೀಕರಣ ಘಟಕದಲ್ಲಿ ಸುಮಾರು 3.1 ಎಂ.ಎಲ್.ಡಿ ತ್ಯಾಜ್ಯ ನೀರು ಶೇಖರಣೆಯಾಗುತ್ತಿದ್ದು, ವ್ಯವಸಾಯದ ಉಪಯೋಗಕ್ಕಾಗಿ ಈ ನೀರನ್ನು ಸಾರ್ವಜನಿಕ ಹರಾಜು ಮೂಲಕ ವಿಲೇ ಮಾಡಲು ಯೋಜಿಸಿ ಕರಪತ್ರ ಹಂಚಲಾಗಿತ್ತು. ಆದರೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಂದಿದ್ದ ರೈತರು ಹರಾಜು ಮುಂದೂಡಿರುವುದಾಗಿ ನಗರಸಭೆ ಮುಖ್ಯಾಧಿಕಾರಿಗಳ ಪತ್ರ ಕಂಡು ಅಸಮಧಾನಗೊಂಡರು. ಕೆಲ ರೈತರ ಆಕ್ಷೇಪಣೆ ಮೇರೆಗೆ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಸೂಚಿಸಿರುವಂತೆ ಹರಾಜು ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದಾಗಿ ಈ ಸಂದರ್ಭದಲ್ಲಿ ನಗರಸಭೆ ಮುಖ್ಯಾಧಿಕಾರಿ ತಿಳಿಸಿದರು.
ನಗರಸಭಾ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ರೈತರು, ಹಿತ್ತಲಹಳ್ಳಿ ಗ್ರಾಮದ ಪ್ರಭಾವಿ ರೈತರೊಬ್ಬರು ಸರ್ಕಾರದ ಭೂಮಿಯಲ್ಲಿ ಅಕ್ರಮವಾಗಿ ಉಳುಮೆ ಮಾಡಿಕೊಂಡು ನಗರಸಭೆಯ ಯುಜಿಡಿಯಿಂದ ನೀರನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆದುಕೊಳ್ಳುತ್ತಿದ್ದಾರೆ, ಕಳೆದ 1೦ ವರ್ಷಗಳಿಂದ ಪುರಸಭೆಗೆ ಒಂದು ರೂಪಾಯಿಯಷ್ಟು ಆದಾಯವನ್ನು ನೀಡಿಲ್ಲ, ಸುಮಾರು ೧೫೦ ಮಂದಿ ಸಣ್ಣ ರೈತರು ಈಗ ಲಕ್ಷಾಂತರ ರೂಪಾಯಿಗಳ ಹಣವನ್ನು ಸಾಲಮಾಡಿಕೊಂಡು ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದ್ದರೂ ಕೂಡಾ ಒಂದಿಂಚು ನೀರು ಲಭ್ಯವಾಗುತ್ತಿಲ್ಲ, ಇಂತಹ ಪರಿಸ್ಥಿತಿಗಳಲ್ಲಿ ನಗರಸಭೆಯಿಂದ ತ್ಯಾಜ್ಯ ನೀರನ್ನು ಹರಾಜು ಮಾಡುವ ಪ್ರಯತ್ನ ಮಾಡಿದ್ದು, ಶ್ರೀಮಂತ ರೈತನ ಪರವಾಗಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಅವರು ಬೇರೆ ರೈತರನ್ನು ಪರಿಗಣನೆಗೆ ತೆಗೆದುಕೊಳ್ಳದೆ, ಕೇವಲ ಒಬ್ಬ ರೈತನ ಹಿತವನ್ನು ಕಾಪಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರಿಂದ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಹರಾಜಿನ ಮೂಲಕ ನೀರು ಪಡೆಯುವಂತಾಗಬೇಕು ಎಂದು ರೈತರು ಒತ್ತಾಯಿಸಿದರು.
ನಡೆದ ಹರಾಜು – ೧೫ ಲಕ್ಷ ೧೦ ಸಾವಿರ ರೂಪಾಯಿಗಳಿಗೆ ತ್ಯಾಜ್ಯ ನೀರು
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹಾಗೂ ಪುರಸಭಾ ಸದಸ್ಯ ಲಕ್ಷ್ಮಯ್ಯ ಅವರ ನಡುವೆ ಮನವಿ ಪತ್ರದ ವಿಚಾರವಾಗಿ ಮಾತಿನ ಚಕಮಕಿ ನಡೆಯಿತು, ನಂತರ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ನಗರಸಭೆಯಿಂದ ಹರಾಜು ಪ್ರಕ್ರಿಯೆಗೆ ಸಿದ್ದತೆ ಮಾಡಿಕೊಂಡಿರುವ ಬಗ್ಗೆ ರೈತ ಎಚ್.ಕೆ.ರಮೇಶ್ ಅವರ ಮನವಿಯಂತೆ ಜಿಲ್ಲಾಧಿಕಾರಿಗಳ ಬಳಿಯಲ್ಲಿ ಚರ್ಚೆ ನಡೆಸಿ ಎರಡು ತಿಂಗಳ ಕಾಲಾವಕಾಶವನ್ನು ಕೇಳಿ ಮನವಿ ಕೊಟ್ಟಿರುವುದು ನಿಜ, ಆದರೆ ಹರಾಜು ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಹೇಳಿಲ್ಲ ಎಂದು ಸಮಜಾಯಿಶಿ ನೀಡಿದರು. ಇಷ್ಟಕ್ಕೆ ತೃಪ್ತರಾಗದ ರೈತರು ಹರಾಜು ಪ್ರಕ್ರಿಯೆಯನ್ನು ನಡೆಸಲೇಬೇಕು ಎಂದು ಪಟ್ಟುಹಿಡಿದಾಗ ನಗರಸಭೆಯ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್ ಅವರು ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆದುಕೊಂಡು ನಗರಸಭೆಯ ಸಭಾಂಗಣದಲ್ಲಿ ರೈತರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆಯನ್ನು ನಡೆಸಿದರು. ಹಿತ್ತಲಹಳ್ಳಿಯ ರೈತ ಎಚ್.ಕೆ.ರಮೇಶ್ ಅವರು ೧೫ ಲಕ್ಷ ೧೦ ಸಾವಿರ ರೂಪಾಯಿಗಳಿಗೆ ಒಂದು ವರ್ಷದ ಅವಧಿಗೆ ಹರಾಜಿನಲ್ಲಿ ಕೂಗಿ ಪಡೆದರು.
ರೈತರಾದ ಚಿಕ್ಕಮುನಿಯಪ್ಪ, ಎಚ್.ಜಿ.ಗೋಪಾಲಗೌಡ, ನಂಜುಂಡಪ್ಪ, ಜಿ.ಗೋಪಾಲಪ್ಪ, ಮುರಳಿ, ಪಿ.ವೇಣು, ರಾಮಾಂಜಿನಪ್ಪ, ಲೋಕೇಶ್, ನಗರಸಭಾ ಸದಸ್ಯ ಲಕ್ಷ್ಮಯ್ಯ, ಷಫಿ ಮುಂತಾದವರು ಹಾಜರಿದ್ದರು.
ನಗರಸಭೆಯಲ್ಲಿ ನಡೆದಿದೆ ಲೆಕ್ಕಾಚಾರ
ಕೇವಲ ಒಂದು ವರ್ಷದ ಅವಧಿಗೆ ೧೫ ಲಕ್ಷ ೧೦ ಸಾವಿರ ರೂಪಾಯಿಗಳಷ್ಟು ತ್ಯಾಜ್ಯದ ನೀರು ಹರಾಜಿನಲ್ಲಿ ಬಂದಿರುವುದರಿಂದ ಕಳೆದ ಹತ್ತು ವರ್ಷದಿಂದ ಎಷ್ಟು ಹಣ ಬರಬಹುದಿತ್ತು ಎಂಬ ಲಕ್ಕಾಚಾರೆ ನಡೆದಿದೆ. ಈ ತ್ಯಾಜ್ಯದ ನೀರು ಬಳಸುವುದರಿಂದ ಬೇಸಾಯದ ಅಗತ್ಯವಿರುವುದಿಲ್ಲ. ನೀರು ಹೋದ ನಂತರ ಉಳಿಯುವ ಘನತ್ಯಾಜ್ಯವೂ ನಗರಸಭೆಗೆ ಲಕ್ಷಾಂತರ ಆದಾಯ ತರಲಿದೆ.

