ತಾಲ್ಲೂಕಿನ ಸೊರಕಾಯಲಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಸ್.ಪಿ.ನರಸಿಂಹಯ್ಯ ಹಾಗೂ ಉಪಾಧ್ಯಕ್ಷರಾಗಿ ನಾರಾಯಣಸ್ವಾಮಿ ಆಯ್ಕೆಯಾಗಿದ್ದು, ಇನ್ನುಳಿದಂತೆ ನಿರ್ದೇಶಕರ ಸ್ಥಾನಗಳಿಗೆ ಸಾಮಾನ್ಯ ಸ್ಥಾನದಿಂದ ದ್ಯಾವಪ್ಪ, ಮುನಿವೆಂಕಟಮ್ಮ, ಮುನಿನಾರಾಯಣಪ್ಪ, ಮುನಿಶೆಟ್ಟಿ, ಪರಿಶಿಷ್ಟ ಜಾತಿ ಪಂಗಡದ ಸಂಜೀವಯ್ಯ, ಹಿಂದುಳಿದ ವರ್ಗಗಳ ರಾಜಪ್ಪ, ಸುಗುಣಮ್ಮ, ಮಹಿಳಾ ಮೀಸಲು ಕ್ಷೇತ್ರದಿಂದ ಅಕ್ಕಯಮ್ಮ, ಸಾಕಮ್ಮ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಕಾರಿ ಎ.ಶಂಕರಾಚಾರಿ, ಕಾರ್ಯದರ್ಶಿ ವಿ.ನಾಗಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದಾರ್ಥನಗರದ ನಿವಾಸಿಗಳ ಪ್ರತಿಭಟನೆ
ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ದಲಿತ ಕಾಲೋನಿಗಳ ಜನರು ವಿವಿಧ ಖಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಆರೋಪಿಸಿ ಸಿದ್ದಾರ್ಥನಗರದ ನಿವಾಸಿಗಳು ಮಂಗಳವಾರ ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ನಗರಸಭೆ ಮುಂಭಾಗದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದರು.
ನಗರದ ವಾರ್ಡ್ ಸಂಖ್ಯೆ ೭, ೮, ೯ ನೇ ವಾರ್ಡುಗಳಲ್ಲಿ ಬಹುತೇಕ ದಲಿತ ಕುಟುಂಬಗಳು ವಾಸಿಸುತ್ತಿದ್ದು ಅಲ್ಲಿನ ಜನರು ಕೂಲಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ರಸ್ತೆಗಳಲ್ಲಿ ಕಳೆದ ಒಂದು ವಾರದಿಂದ ಕಸವನ್ನು ವಿಲೇವಾರಿ ಮಾಡದೆ ಇರುವುದರಿಂದ ಕಸ ಹಾಕಿರುವ ಸ್ಥಳದಲ್ಲಿ ಕೊಳೆತು ದುರ್ನಾತ ಬೀರುತ್ತಿದ್ದರೂ ಸಂಬಂದಪಟ್ಟ ಯಾವುದೇ ಅಧಿಕಾರಿಗಳು ಈವರೆಗೂ ವಾರ್ಡಿಗೆ ಭೇಟಿ ನೀಡಿಲ್ಲ. ಕಳೆದ ಮಾರ್ಚ ೨ ನೇ ತಾರೀಖಿನಂದು ವಾರ್ಡಿನ ಕೆಲ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿದ್ದನ್ನು ಹೊರತುಪಡಿಸಿದರೆ, ಪುನಃ ಈ ಕಡೆಗೆ ಯಾವುದೇ ಅಧಿಕಾರಿ ತಿರುಗಿಯೂ ನೋಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮನೆಗಳ ಸಮೀಪದಲ್ಲಿ ತುಂಬಾ ಇಕ್ಕಟ್ಟಾದ ಪರಿಸ್ಥಿತಿ ಇರುವುದರಿಂದ ಕಸವನ್ನು ಬೇರೆ ಕಡೆಗಳಲ್ಲಿ ಹಾಕಲು ಸ್ಥಳಾವಕಾಶವಿಲ್ಲದೆ ನಾಗರಿಕರು ಪರದಾಡುವಂತಾಗಿದೆ. ಮನೆಗಳ ಸಮೀಪದಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳು ಹೇಳುತ್ತಾರಾದರೂ, ವಾರವಾದರೂ ನಗರಸಭೆಯ ಸಿಬ್ಬಂದಿ ಸರಿಯಾಗಿ ಕಸ ವಿಲೇವಾರಿ ಮಾಡುವುದಿಲ್ಲ. ವಾರ್ಡಿನ ಚರಂಡಿಗಳೆಲ್ಲವೂ ತುಂಬಿ ನೀರು ಸರಾಗವಾಗಿ ಮುಂದೆ ಹೋಗದೆ ಸೊಳ್ಳೆಗಳ ಉಗಮ ಸ್ಥಾನಗಳಾಗಿ ಪರಿವರ್ತನೆಯಾಗಿವೆ. ಹೀಗೆ ನಿಂತ ನೀರಿನಿಂದ ದುರ್ವಾಸನೆ ಬರಲು ಆರಂಭವಾಗಿದ್ದು ಇದರಿಂದ ರಾತ್ರಿಯ ಸಮಯದಲ್ಲಿ ಮನೆಗಳಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು ಜನರು ವಿವಿಧ ಖಾಯಿಲೆಗಳಿಗೆ ತುತ್ತಾಗುವಂತಾಗಿದೆ.
ನಗರದ ೦೮ ನೇ ವಾರ್ಡಿನ ಸದಸ್ಯರಾದ ಸುಮಿತ್ರಮ್ಮ ರಮೇಶ್ ನಗರಸಭೆ ಉಪಾಧ್ಯಕ್ಷರಾಗಿದ್ದರೂ ಅಧಿಕಾರಿಗಳು ಅವರ ಮಾತಿಗೆ ಬೆಲೆ ನೀಡುವುದಿಲ್ಲ. ದಲಿತ ಕಾಲೋನಿಗಳ ಬೇಡಿಕೆಗಳಿಗಾಗಿ ಪ್ರತಿಭಟನೆಗಳನ್ನು ಮಾಡಿದಾಗ ಮಾತ್ರ ನ್ಯಾಯ ಒದಗಿಸಿಕೊಡುವ ಭರವಸೆ ನೀಡುವ ಅಧಿಕಾರಿಗಳು ಮತ್ತೆ ಮತ್ತೆ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾಕಾರ ಮನವಿ ಸ್ವೀಕರಿಸಿ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್ ಮಾತನಾಡಿ ಕಳೆದ ಒಂದು ತಿಂಗಳ ಕಾಲ ನಾನು ರಜೆಯ ಮೇಲೆ ತೆರಳಿದ್ದರಿಂದ ಈ ರೀತಿಯ ಹಲವು ಸಮಸ್ಯೆಗಳು ಉದ್ಭವವಾಗಿದ್ದು ಪ್ರತಿನಿತ್ಯ ಅಧಿಕಾರಿಗಳಿಗೆ ಸ್ವಚ್ಚತೆಯ ಬಗ್ಗೆ ಹೆಚ್ಚು ಕಾಳಜಿವಹಿಸುವಂತೆ ಎಚ್ಚರಿಕೆ ನೀಡಲಾಗುತ್ತದೆ.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ತೊಂದರೆಯಾಗಿದ್ದು ಕೂಡಲೇ ನಗರಸಭೆಯ ಎಲ್ಲಾ ಸಿಬ್ಬಂದಿಯನ್ನು ನಗರದ ೭,೮ ಮತ್ತು ೯ ನೇ ವಾರ್ಡುಗಳಿಗೆ ಕಳುಹಿಸಿ ಸಂಗ್ರಹವಾಗಿರುವ ಕಸವನ್ನು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿದರು.
ಎಸ್.ಎಂ.ರಮೇಶ್, ಶ್ರೀನಿವಾಸ್, ನಾಗರಾಜು, ಮುನಿರಾಜು, ದೇವರಾಜು, ಮುನಿಕೃಷ್ಣ, ಸುಬ್ರಮಣಿ, ಮಧು, ಮಂಜುನಾಥ, ವೆಂಕಟರಾಜು, ಶಿವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆಟ ಬೇಕು ಆರೋಗ್ಯಕ್ಕೆ
1. ಶರೀರ ಹಾಗೂ ಮನಸ್ಸು ಆರೋಗ್ಯವಂತರಾಗಿರಲು, ಕ್ರಿಯಾಶೀಲರಾಗಿರಲು ಆಟ (ಕ್ರೀಡೆ) ಎಂಬ ಚಟುವಟಿಕೆ ಅಗತ್ಯ.
2. ಹೊರಾಂಗಣದ ಕ್ರೀಡೆಗಳಾದ ಓಟ, ಕೊಕ್ಕೋ, ಕಬಡ್ಡಿ, ವಾಲಿಬಾಲ್, ಪುಟ್ಬಾಲ್, ಥ್ರೋಬಲ್ನಂಥ ಆಟಗಳು ಹಾಗೂ ಒಳಾಂಗಣದ ಆಟಗಳಾದ ಚದುರಂಗ (ಚೆಸ್), ಕೇರಂ, ಪಗಡೆ, ಚನ್ನೆಮಣೆ, ಚೌಕಾಭಾರದಂಥ ಆಟಗಳು ಆರೋಗ್ಯ ರಕ್ಷಣೆಗೆ ಸಹಕಾರಿ.
3. ಆಯಾಸವಾಗದಷ್ಟು ಪ್ರಮಾಣದಲ್ಲಿ ಆಟಗಳನ್ನು ಆಡಬೇಕು. ಆಟವಾಡುವುದರಿಂದ ಅತಿಯಾದ ಮೈ ಕೈನೋವು, ಅತಿಯಾದ ಆಯಾಸ (ಸುಸ್ತು) ಆಗದಂತೆ ಗಮನವಹಿಸಬೇಕು.
4. ಊಟ ಆದ ತಕ್ಷಣ ಅಥವಾ ಆಹಾರ ಸೇವಿಸಿದ ತಕ್ಷಣ ಅತಿಯಾದ ಬಿಸಿಲಿನಲ್ಲಿ, ಮಹಡಿಯ ಮೇಲೆ ಆಡುವುದು ಒಳ್ಳೆಯದಲ್ಲ.
5. ಹೊರಾಂಗಣದ ಆಟ ಆಡಿದ ತಕ್ಷಣ ನೀರು-ಆಹಾರ ಸೇವನೆ ಒಳ್ಳೆಯದಲ್ಲ, ಹದಿನೈದು ನಿಮಿಷಗಳ ವಿಶ್ರಾಂತಿಯ ನಂತರ ನೀರು-ಲಘು ಆಹಾರವನ್ನು ಸೇವಿಸಬೇಕು.
6. ಬೇಸಿಗೆ ಹಾಗೂ ಚಳಿಗಾಲದಲ್ಲಿ ಹೊರಾಂಗಣದ ಆಟಗಳನ್ನು ಆಡಬಹುದು. ಮಳೆಗಾಲದಲ್ಲಿ ಒಳಾಂಗಣದ ಆಟಗಳನ್ನು ಆಡಬೇಕು.
7. ಆಟದಲ್ಲಿ ಸೋಲು ಗೆಲುವಿಗಿಂತ ಸಂತೋಷವಾಗಿ ಆಡುವುದು ಬಹಳ ಮುಖ್ಯ.
8. ಸಂಜೆ ಹೊತ್ತು ಮುಸ್ಸಂಜೆಗಿಂತ ಮೊದಲು ಹೊರಾಂಗಣದ ಆಟಗಳನ್ನು ಆಡಬೇಕು.
9. ತಂಡದ ಆಟಗಳಲ್ಲಿ ಭಿನ್ನಾಭಿಪ್ರಾಯ ಬಂದಾಗ ನಿಧಾನವಾಗಿ ಶಾಂತಚಿತ್ತದಿಂದ ಪರಸ್ಪರ ಮಾತಿನಲ್ಲಿ ಬಗೆಹರಿಸಿಕೊಳ್ಳಬೇಕು ಹಾಗೂ ಆಟವನ್ನು ಮುಕ್ತಮನಸ್ಸಿನಿಂದ ಮತ್ತೆ ಪ್ರಾರಂಭಿಸಬೇಕು.
10. ಪ್ರತಿದಿನ ಕನಿಷ್ಟ ಅರ್ಧ ಗಂಟೆಯಾದರೂ ಆಟಗಳಲ್ಲಿ ಭಾಗವಹಿಸಬೇಕು. ಹೊರಾಂಗಣ ಹಾಗೂ ಒಳಾಂಗಣದ ಆಟಗಳನ್ನು ಒಂದು ವಾರದಲ್ಲಿ ದಿನಬಿಟ್ಟು ದಿನದಂತೆ ಆಯ್ದುಕೊಂಡು ಆಡುವುದು ಒಳ್ಳೆಯದು.
11. ಆಟವೂ ಒಂದು ಕಲಿಕೆಯ ಸಾಧನ, ಹೊರಾಂಗಣದ ಆಟಗಳಿಂದ ಸುದೃಢವಾದ ಶರೀರ ರೂಪುಗೊಳ್ಳುತ್ತದೆ. ಹಾಗೆಯೇ ಹೊಂದಾಣಿಕೆ ಗುಣವು ಬೆಳೆಯುತ್ತದೆ. ಒಳಾಂಗಣದ ಆಟಗಳಿಂದ ಸಹನೆ, ಗ್ರಹಿಕೆ, ಬುದ್ಧಿವಂತೆಕೆ, ನೆನಪಿನ ಶಕ್ತಿಗಳು ಹೆಚ್ಚಾಗುತ್ತವೆ.
12. ಸದಾ ಉತ್ಸಾಹಶೀಲವಾಗಿರಲು, ಕ್ರಿಯಾಶೀಲರಾಗಿರಲು ಸದಾ ಲವಲವಿಕೆಯಿಂದಿರಲು ಜೀವನದಲ್ಲಿ ಆಟಗಳು ಅತ್ಯಗತ್ಯ.
13. ವಿವಿಧ ರೀತಿಯ ಶಾರೀರಿಕ ವ್ಯಾಯಾಮ, ಯೋಗಾಭ್ಯಾಸವನ್ನು ಮಾಡಬಹುದು.
14. ಉಸಿರಾಟವೆಂಬುದು ಪ್ರಮುಖವಾದ ಶಾರೀರಿಕ ಕ್ರಿಯೆ. ನಿಧಾನಗತಿಯ ಸಮಪ್ರಮಾಣದ ಉಸಿರಾಟದ ಕಡೆಗೆ ಯಾವಾಗಲೂ ಗಮನ ಕೊಡಬೇಕು. ಇದರಿಂದ ಮನಸ್ಸು ಶಾಂತವಾಗುತ್ತದೆ, ಶರೀರವೂ ವಿಶ್ರಾಂತಿಯನ್ನು ಹೊಂದುತ್ತದೆ.
15. ಆಟವಾಡಿದ ನಂತರ ಅಥವಾ ವ್ಯಾಯಾಮ ಮಾಡಿದ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಎಲ್ಲ ಆಯಾಸ ಪರಿಹಾರವಾಗುತ್ತದೆ.
ಡಾ. ಶ್ರೀವತ್ಸ
ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ದಿನಾಚರಣೆ
ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿಯೂ ಸಮಾನತೆ ಕಲ್ಪಿಸಿದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ಹೇಳಿದರು.
ನಗರದ ಸ್ರೀ ಶಕ್ತಿ ಭವನದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ತ್ರೀಯನ್ನು ದೇವತೆಯ ಸ್ಥಾನದಲ್ಲಿ ಪೂಜಿಸುವಂತಹ ಭಾರತ ದೇಶದಲ್ಲಿ ಮಹಿಳೆಯು ಪುರುಷರಷ್ಟೆ ಸಮಾನವಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾಳೆ, ಪುರುಷರಿಗಿಂತ ಯಾವುದೇ ರಂಗದಲ್ಲೂ ಕಡಿಮೆಯಿಲ್ಲದಂತೆ ಭಾಗವಹಿಸುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ ಪ್ರತಿಭಟಿಸಬೇಕು. ಕಾನೂನಿನ ಅಡಿಯಲ್ಲಿ ನ್ಯಾಯವನ್ನು ಪಡೆಯಬೇಕು. ಶೇಕಡಾ ೫೦ ರಷ್ಟು ಮೀಸಲಾತಿಯನ್ನು ಈಗಾಗಲೇ ಮಹಿಳೆಯರಿಗೆ ಕಲ್ಪಿಸಿದ್ದರೂ ಸಹ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಮಹಿಳೆಯರು ಇಲ್ಲದಿರುವುದರಿಂದ ಮಹಿಳೆಯರಿಗೆ ಈವರೆಗೂ ಕೌಟುಂಬಿಕ ಸ್ವಾತಂತ್ರ್ಯ ಲಭಿಸಿಲ್ಲ ಎಂದರು.
ಮಹಿಳಾ ದಿನಾಚರಣೆಯ ಅಂಗವಾಗಿ ಹೆಣ್ಣು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದೇವಾಲಯದ ಆವರಣವನ್ನು ಶುಚಿಗೊಳಿಸಿದ ದಿವ್ಯ ಭಾರತ್ ಕರಾಟೆ ಡೋ ಕರಾಟೆಪಟುಗಳು
ಶಿಡ್ಲಘಟ್ಟದ ಅರಳೇಪೇಟೆಯ ಬಸವೇಶ್ವರ ಸ್ವಾಮಿ ದೇವಾಲಯದ ಆವರಣವನ್ನು ಸೋಮವಾರ ದಿವ್ಯ ಭಾರತ್ ಕರಾಟೆ ಡೋ ಕರಾಟೆಪಟುಗಳು ಮತ್ತು ಶಿಕ್ಷಕ ಅರುಣ್ಕುಮಾರ್ ಶುಚಿಗೊಳಿಸಿದರು.
ರಾಗಿಮಾಲಕಹಳ್ಳಿಯ ನಾಗರೀಕರಿಂದ ತಹಶೀಲ್ದಾರ್ ಗೆ ಅಭಿನಂದನೆ
ಶಿಡ್ಲಘಟ್ಟದ ತಾಲ್ಲೂಕಿನ ಮೇಲೂರು ಗ್ರಾಮದ ರಾಗಿಮಾಲಕಹಳ್ಳಿಯ ಸರ್ವೆ ನಂಬರ್ ೨೩ ರಲ್ಲಿ ನಾಗರಿಕರಿಗೆ ಸ್ಮಶಾನಕ್ಕೆ ಹೋಗಿಬರಲು ದಾರಿಯನ್ನು ಮಂಜೂರು ಮಾಡಿಕೊಟ್ಟಿದ್ದಕ್ಕೆ ಅಂಬರೀಶ್, ತ್ರಿಮೂರ್ತಿ, ಶ್ರೀನಿವಾಸ್, ತಿಲಕ್ ಮುಂತಾದ ಗ್ರಾಮಸ್ಥರು ಸೋಮವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದರು.
ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸೂಚನೆ
ನಗರದಾದ್ಯಂತ ಸ್ವಚ್ಛತೆಯನ್ನು ಕಾಪಾಡಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳುವಂತೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ನಾಗರಾಜಯ್ಯಶೆಟ್ಟಿ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್ ಅವರಿಗೆ ಸೂಚಿಸಿದರು.
ನಗರದ ಪ್ರಥಮದರ್ಜೆ ಕಾಲೇಜಿನ ಬಳಿಯಲ್ಲಿ ರಸ್ತೆಯ ಇಕ್ಕೆಲುಗಳಲ್ಲಿ ಹಾಕಿದ್ದ ಕಸದ ರಾಶಿ ಹಾಗೂ ಪ್ರಥಮದರ್ಜೆ ಕಾಲೇಜಿನ ಆವರಣವನ್ನು ಸೋಮವಾರ ವೀಕ್ಷಣೆ ಮಾಡಿದ ಅವರು ಪ್ರಥಮದರ್ಜೆ ಕಾಲೇಜಿನ ಮುಂಭಾಗದಲ್ಲಿರುವ ತರಕಾರಿ ಅಂಗಡಿಯನ್ನು ತೆರವುಗೊಳಿಸಿ ಎಂದರು. ನಗರದಾದ್ಯಂತ ಕಾಲ ಕಾಲಕ್ಕೆ ಬ್ಲೀಚಿಂಗ್ ಸಿಂಪಡಣೆ ಮಾಡುವಂತೆ ಸೂಚಿಸಿದರು.
ನಗರದ ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜುಗಳ ಆವರಣ ಹಾಗೂ ಮುಂಭಾಗದಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ಸೂಚಿಸಿದರು. ಕಾಲೇಜಿನ ಆವರಣವನ್ನು ಪರಿಶೀಲನೆ ನಡೆಸಿದ ಅವರು, ಕಾಲೇಜಿನಲ್ಲಿರುವ ಎನ್.ಎಸ್.ಎಸ್ನ ಸಹಯೋಗದಲ್ಲಿ ಕಾಲೇಜಿನ ಆವರಣವನ್ನು ಸ್ವಚ್ಚಗೊಳಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸಲಹೆ ನೀಡಿ, ಪ್ಲಾಸ್ಟಿಕ್ ಬಳಕೆ ಹಾಗೂ ಸ್ವಚ್ಚತೆಯನ್ನು ಕಾಪಾಡದಿದ್ದಲ್ಲಿ ಅಂತಹ ಹೋಟೆಲುಗಳ ಮಾಲೀಕರುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ನಗರಸಭೆಯ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ನಗರಸಭೆ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್, ಪರಿಸರ ಎಂಜಿನಿಯರ್ ದಿಲೀಪ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗು ಎಂದರೆ ನಗಬೇಕೇ?
ಮಗು ಜಾರಿ ಬಿದ್ದು ಸ್ವಲ್ಪ ಗಾಯ ಮಾಡಿಕೊಂಡಿದೆ. ಆಗ ಅಳುವುದು ಸಹಜ ಅಲ್ವಾ? ಅಳು ಗಾಯದ ನೋವನ್ನು ಸಹಿಸಲಾರದ ದು:ಖದಿಂದ ಬಂದಿರುವುದರಿಂದ ಅದು ಮಗುವಿನ ಆ ಕ್ಷಣದ ಭಾವನೆಯ ನೈಜ ಅಭಿವ್ಯಕ್ತಿ. ಬಿದ್ದಾಗ ಗಾಯವೇ ಆಗಿರದಿದ್ದರೂ ಮಗು ಅಳುವ ಸಾಧ್ಯತೆಗಳಿರುತ್ತವೆ. ಆಗ ನೋವಿನ ದು:ಖವಿಲ್ಲದಿದ್ದರೂ ಮಗು ಅಳುವುದಕ್ಕೆ ಕಾರಣ ಏನಿರಬಹುದು?
1. ಮಗು ಬಿದ್ದಿದ್ದನ್ನು ಸುತ್ತಲಿನವರೆಲ್ಲಾ ನೋಡಿರುತ್ತಾರೆ. ಇವರಲ್ಲಿ ಕೆಲವರು ದೊಡ್ಡದಾಗಿ ನಕ್ಕಿರಬಹುದು. ಇದರಿಂದ ಅವಮಾನಗೊಂಡ ಮಗು ಅಳುತ್ತದೆ.
2. ಬೀಳುವುದನ್ನು ಅವಮಾನವೆಂದು ಸ್ವೀಕರಿಸುವ ಮಗುವಿಗೆ ನಕ್ಕವರ ಮೇಲೆ ಸಿಟ್ಟು ಬರಬಹುದು; ದೊಡ್ಡವರ ಮೇಲೆ ತನ್ನ ಸಿಟ್ಟನ್ನು ತೀರಿಸಲಾರದ ಅಸಹಾಯಕತೆಯಿಂದ ಮಗು ಅಳಬಹುದು.
3. ಅತ್ತ ತಕ್ಷಣ ಚಾಕೋಲೇಟ್ ಸಿಗುತ್ತದೆ ಅಥವಾ ಅಮ್ಮ ಮುದ್ದುಮಾಡುತ್ತಾಳೆ ಎಂದು ಕಂಡುಕೊಂಡಿರುವ ಮಗು ಕಣ್ಣೀರೇ ಬರದಿದ್ದರೂ ಕೇರಿಗೆಲ್ಲಾ ಕೇಳುವಂತೆ ಅಳಬಹುದು!
ಹೀಗೆ ಅಳುವೆಂಬ ಒಂದೇ ಅಭಿವ್ಯಕ್ತಿಯ ಹಿಂದೆ ನೋವು, ಅವಮಾನ, ಸಿಟ್ಟು, ಬೇಸರ-ಹೀಗೆ ಬೇರೆ ಬೇರೆ ಭಾವನೆಗಳಿರಬಹುದು. ಇದೇ ರೀತಿ ನಗು, ಬೈಯುವುದು, ಹೊಡೆಯುವುದು, ಮುದ್ದಿಸುವುದು-ಹೀಗೆ ಎಲ್ಲಾ ಅಭಿವ್ಯಕ್ತಿಯ ಹಿಂದೆ ವಿಭಿನ್ನ ಭಾವನೆಗಳಿರಲು ಸಾಧ್ಯ ಎಂದು ಮನಶ್ಯಾಸ್ತ್ರಜ್ಞರು ಹೇಳುತ್ತಾರೆ.
ಇದೆಲ್ಲಾ ಸಂಶೋಧಕರಿಗೆ ಸಂಬಂಧಪಟ್ಟ ವಿಷಯ, ಜನಸಾಮಾನ್ಯರಿಗೇಕೆ ಬೇಕು-ಎಂದು ನೀವು ಅಂದುಕೊಳ್ಳುತ್ತಿರಬಹುದು. ಮಗು ತನ್ನ ಸಹಜ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ನಾವು ಹೇಗೆ ತಡೆಯುತ್ತೇವೆ ಅಥವಾ ಭಾವನೆಗಳನ್ನು ರೂಪಾಂತರಿಸಿಕೊಳ್ಳಲು ನಾವು ಹೇಗೆ ಪ್ರಚೋದಿಸುತ್ತೇವೆ ಮತ್ತು ಇದರಿಂದಾಗಬಹುದಾದ ಪರಿಣಾಮಗಳೇನು ಎಂದು ನಾವೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು.
ಎಂಟು ವರ್ಷದ ಗಂಡು ಮಗು ಬಿದ್ದು ಅಳುತ್ತಾ ಇದೆ ಅಂದ್ಕೊಳ್ಳಿ. ನಾವು “ಛೇ ಎಂತಹ ಗಂಡ್ಸೋ ನೀನು, ಇಷ್ಟಕ್ಕೆಲ್ಲಾ ಅಳುತ್ತಾರಾ. ಎಲ್ಲಿ ನಗು ನೋಡೋಣ” ಅಂತ ಬಲವಂತವಾಗಿ ನಗಿಸುತ್ತೇವೆ. ಆ ಮುಗ್ಧ ಜೀವ ನೋವಿನಲ್ಲೂ ಕಣ್ಣೊರೆಸಿಕೊಳ್ಳುತ್ತಾ ಪೆದ್ದ ನಗು ನಕ್ಕಾಗ ನಾವು “ಶಹಭಾಷ್” ಎನ್ನುತ್ತೇವೆ. ಇದರ ಸಂದೇಶ ಏನು ಅಂದ್ರೆ, ‘ಗಂಡಸಾದ ನಿನಗೆ ಅಳು ಸಹಜ ಅಭಿವ್ಯಕ್ತಿ ಆಗಬಾರದು, ಅದು ಹೆಣ್ಣು ಮಕ್ಕಳಿಗೆ ಸರಿ’ ಎನ್ನುವುದು ಅಂತಲ್ಲವೇ?.
ಇದೇ ರೀತಿ ಹೆಣ್ಣು ಮಗುವೊಂದು ತನ್ನನ್ನು ಅವಮಾನಿಸಿದವರಿಗೆ ಕೋಪದಿಂದ ಕೂಗಾಡಿದಾಗ, ಹೆಣ್ಣು ಸಹಿಸಿಕೊಂಡು, ಹೊಂದಾಣಿಕೆ ಮಾಡಿಕೊಂಡು ಹೋಗಬೇಕು, ಸಿಟ್ಟು ಮಾಡಬಾರದು, ಇದರಿಂದ ಮುಂದೆ ಸಂಸಾರ ಮಾಡುವುದಕ್ಕೆ ತೊಂದರೆಯಾಗುತ್ತದೆ-ಎಂದು ನಾವು ಉಪದೇಶ ಮಾಡುತ್ತೇವೆ.
ಇಂತಹ ನಮ್ಮ ಪ್ರತಿಕ್ರಿಯೆಗಳು ಮಗು ಗಂಡೊ ಹೆಣ್ಣೊ ಅನ್ನುವುದಕ್ಕಷ್ಟೇ ಸೀಮೀತವಾಗಿರುವುದಿಲ್ಲ. ಬೇರೆ ಬೇರೆ ಸಂದರ್ಭದಲ್ಲಿ ಇದನ್ನು ಹೇಗೆ ಮಾಡುತ್ತೇವೆಂಬುದಕ್ಕೆ ಇನ್ನೂ ಕೆಲವು ಉದಾಹರಣೆಗಳನ್ನು ಕೊಡಬಹದು.
1. ಯಾರಾದರೂ ಮೃತರಾದಾಗ ಕಡ್ಡಾಯವಾಗಿ ಅಳಲೇಬೇಕು.
2. ದೊಡ್ಡವರು ಮಾತನಾಡುತ್ತಿರುವಾಗ ಮಕ್ಕಳು ಗಂಭೀರವಾಗಿರಬೇಕು.
3. ಹೆಣ್ಣು ಮಕ್ಕಳು ಸಾರ್ವಜನಿಕವಾಗಿ ದೊಡ್ಡ ಧ್ವನಿಯಲ್ಲಿ ನಗಬಾರದು.
4. ಗಂಡು ಮಕ್ಕಳಿಗೆ ನೋವನ್ನು, ದು:ಖವನ್ನು, ಸಹಿಸಿಕೊಳ್ಳುವ ಶಕ್ತಿ ಇರಲೇಬೇಕು.
5. ಎಲ್ಲರ ಎದುರು ಮಕ್ಕಳು ಗೌರವಯುತವಾಗಿ ನಡೆದುಕೊಳ್ಳಬೇಕು. ಉದಾಹರಣೆಗೆ ಅತಿಥಿಗಳಿಗೆ ಅಂತ ಇಟ್ಟ ತಿಂಡಿಯನ್ನು ಮುಟ್ಟಬಾರದು. ನಮಗೆ ಕ್ಷುಲ್ಲಕ ಅನ್ನಿಸುವ ಅಥವ ಉತ್ತರಿಸಲು ಕಷ್ಟವಾಗುವ ಪ್ರಶ್ನೆಗಳನ್ನು ಎಲ್ಲರೆದುರು ಕೇಳಬಾರದು, ಗಲೀಜಾದ ಬಟ್ಟೆಗಳನ್ನು ಹಾಕಿಕೊಂಡು ಬರಬಾರದು-ಇತ್ಯಾದಿ. ಹೀಗೆ ನಿಯಮಗಳ ದೊಡ್ಡ ಪಟ್ಟಿಯೇ ಇರುತ್ತದೆ.
ಹೀಗೆಲ್ಲಾ ಹೇಳುವಾಗ ಅಥವಾ ಮಾಡುವಾಗ ನಾವು ಮಗುವನ್ನು ಸುಸಂಸ್ಕøತವಾಗಿ ಬೆಳೆಸುತ್ತಿದ್ದೇವೆ ಮತ್ತು ಮಾನಸಿಕವಾಗಿ ಗಟ್ಟಿಗೊಳಿಸುತ್ತ ಇದ್ದೇವೆ ಅಂತ ಅಂದುಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ಹಾಗಾಗುತ್ತದೆಯೇ? ಮನಶ್ಯಾಸ್ತ್ರಜ್ಞರ ಚಿಂತನೆಗಳು ಸ್ವಲ್ಪ ಬೇರೆಯೇ ಆಗಿವೆ.
ನಾವು ದೊಡ್ಡವರ ಪ್ರಪಂಚಕ್ಕೆ ಸೂಕ್ತವೆಂದುಕೊಂಡಿರುವ ನಿಯಮಗಳನ್ನು ಮಗುವಿನ ಮೇಲೆ ಹೇರಿದಾಗ ಅದಕ್ಕೆ ಗಲಿಬಿಲಿಯಾಗುತ್ತದೆ. ಪ್ರತಿಹಂತದಲ್ಲೂ ತಾನೇನೋ ತಪ್ಪು ಮಾಡುತ್ತಿರಬಹುದೇ ಎಂದುಕೊಳ್ಳುತ್ತಾ, ಮಕ್ಕಳು ತಮ್ಮ ಸಹಜ ಕುತೂಹಲದ ಸ್ವಭಾವವನ್ನೇ ಕಳೆದುಕೊಳ್ಳಬಹುದು. ನಮ್ಮ ನೀತಿನಿಯಮಗಳು ಮಕ್ಕಳ ಮೇಲೆ ಬೀರಬಹುದಾದ ಕೆಟ್ಟಪರಿಣಾಮಗಳು ಹೀಗಿರಲು ಸಾಧ್ಯ;
1. ಮಗುವಿಗೆ ತನ್ನ ಸಹಜ ಭಾವನೆಗಳಾದ ಅಳು, ನಗು ಸಿಟ್ಟು, ಬೇಸರ-ಇವೆಲ್ಲವುಗಳನ್ನು ವ್ಯಕ್ತಪಡಿಸಲಾಗದೇ ಹೋದಾಗ ಅದು ಬೆಳೆಯುತ್ತಾ ಬಂದಂತೆ ಭಾವನೆಗಳನ್ನು ಹತ್ತಿಕ್ಕುವ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಇಂತಹ ವ್ಯಕ್ತಪಡಿಸದ ಭಾವನೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ.
2. ನಮಗೆಲ್ಲಾ ಒಂದು ಹಂತದವರೆಗೆ ಮಾತ್ರ ಭಾವನೆಗಳನ್ನು ಮುಚ್ಚಿಡಲು ಸಾಧ್ಯ. ನಂತರ ಅದು ಬೇರೆಬೇರೆ ರೀತಿಗಳಲ್ಲಾದರೂ ಹೊರಬರಲೇಬೇಕು. ಇದು ಕುಡಿಯುವುದು, ಹಿಂಸಾತ್ಮಕ ಕ್ರಿಯೆಗಳು, ಮನೆ ಬಿಟ್ಟು ಓಡಿಹೋಗುವುದು, ತೀರಾ ವಿಷಮ ಪರಿಸ್ಥಿತಿಗಳಲ್ಲಿ ಆತ್ಮಹತ್ಯೆ, ಮುಂತಾದ ರೂಪದಲ್ಲಿರಲು ಸಾಧ್ಯ ಎಂದು ನಾವು ಮರೆಯಬಾರದು.
3. ಹತ್ತಿಕ್ಕಲ್ಪಟ್ಟ ಭಾವನೆಗಳು ಒಮ್ಮೆಲೇ ಅನುಚಿತವಾಗಿ ಸ್ಫೋಟಗೊಳ್ಳುವುದು ಅಪರೂಪವೇನಲ್ಲ. ಇದು ಮಕ್ಕಳಲ್ಲಷ್ಟೇ ಅಲ್ಲ ದೊಡ್ಡವರಲ್ಲೂ ಕೂಡ ಆಗಬಹುದು. ಮಗುವಿನ ಸಣ್ಣಪುಟ್ಟ ತರಲೆಗಳಿಗೆ ಸಿಟ್ಟು ಬಂದಿದ್ದರೂ ನಾವು ತಡೆಯುತ್ತಾ ಬಂದಿರುತ್ತೇವೆ. ಕೊನೆಗೆ ಒಂದು ದಿನ ಎಲ್ಲಾ ಸೇರಿಸಿ ಚನ್ನಾಗಿ ತದುಕುತ್ತೇವೆ! “ನಾನು ನೋಡೋ ಅಷ್ಟು ದಿನ ನೋಡಿದೆ. ಇವನು ಸರಿ ಆಗೋ ಹಾಗೆ ಕಾಣ್ಲಿಲ್ಲ” ಅಂತ ನಮ್ಮ ಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತೇವೆ. ನಾವು ಯಾಕೆ ಮೊದಲನೇ ಸಾರಿ ಮಗು ತಪ್ಪುಮಾಡಿದಾಗಲೇ ಅವನಿಗೆ ಸ್ಪಷ್ಟವಾಗಿ ತಿಳಿಸಿ ಹೇಳಲಿಲ್ಲ ಅಂತ ಯೋಚಿಸುವುದೇ ಇಲ್ಲ. “ಹಾಗೆಲ್ಲಾ ತಕ್ಷಣ ಸಿಟ್ಟು ಮಾಡಬಾರದು ಸಹನೆ ಇಟ್ಟುಕೊಳ್ಳುಬೇಕು” ಎಂದು ನಮಗೆ ಬಾಲ್ಯದಲ್ಲಿ ಕಲಿಸಲಾಗುತ್ತದೆ. ಇದರಿಂದಾಗಿ ನಾವು ಭಾವನೆಗಳನ್ನು ಸಂಗ್ರಹಿಸಿರುತ್ತೇವೆ.
4. ನಮ್ಮ ನಿಯಮಗಳು ಮಕ್ಕಳ ಪ್ರಶ್ನೆ ಕೇಳುವ ಪ್ರವೃತ್ತಿಯನ್ನೇ ಕಡಿಮೆ ಮಾಡಬಹುದು. ಎಲ್ಲರೆದುರು ಪ್ರಶ್ನೆ ಕೇಳಿ, “ಏ ದಡ್ಡಾ ಅಷ್ಟೂ ಗೊತ್ತಾಗೊಲ್ವೇನೋ” ಅಂತ ಹೇಳಿಸಿಕೊಳ್ಳುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಅಂತ ಮಗು ಅಂದುಕೊಂಡರೆ ಜ್ಞಾನದ ಬೆಳವಣಿಗೆಯೇ ಕುಂಟಿತವಾಗಬಹುದು.
ಈ ರೀತಿಯ ಸಮಸ್ಯೆಗಳು ಎಲ್ಲಾ ಮಕ್ಕಳಲ್ಲೂ ಆಗಲೇಬೇಕೆಂದಿಲ್ಲ. ಹಾಗಿದ್ದರೂ ದೊಡ್ಡವರ ನೀತಿ ನಿಯಮಗಳು ಹೆಚ್ಚಾದಷ್ಟೂ ಇದರ ಸಾಧ್ಯತೆಗಳು ಹೆಚ್ಚುತ್ತವೆ.
ಹಾಗಿದ್ದರೆ ಮಕ್ಕಳನ್ನು ಹಾಗೆಯೇ ಬಿಟ್ಟುಬಿಡಬೇಕೇ?, ಅವರಿಗೆ ವಾಸ್ತವಿಕ ಜಗತ್ತನ್ನು ಪರಿಚಯಿಸುವವರು ಯಾರು ಮತ್ತು ಯಾವಾಗ?-ಎನ್ನುವ ಪ್ರಶ್ನೆ ಏಳುವುದು ಸಹಜ.
ನಿಜ ಹೇಳ್ಬೂಕೂಂದ್ರೆ ಈ ದೊಡ್ಡವರದ್ದು ಮಹಾ ಬೂಟಾಟಿಕೆಯ, ನಯವಂಚಕತನದ ಪ್ರಪಂಚ. ನಮಗೆಲ್ಲರಿಗೂ ಮಕ್ಕಳ ತರಹ ನೇರವಾಗಿ, ಸರಳವಾಗಿ ಇರುವುದು ಸಾಧ್ಯವಿದ್ದಿದ್ದರೆ ಇಲ್ಲಿನ ಬದುಕು ಬಹಳ ಸುಂದರವಾಗಿರುತ್ತಿತ್ತು. ಆದರೆ ಸದ್ಯಕ್ಕಂತೂ ಹಾಗಿಲ್ಲವಲ್ಲ, ಏನು ಮಾಡುವುದು?
1. ಮಕ್ಕಳು ಭಾವನೆಗಳನ್ನು ವ್ಯಕ್ತಪಡಿಸುವ ಹಂತದಲ್ಲೇ ಅವರನ್ನು ತಡೆಯಬಾರದು. ಬುದ್ಧಿಯಲ್ಲಿ ಮತ್ತು ಪ್ರಾಪಂಚಿಕ ಜ್ಞಾನದಲ್ಲಿ ಅವರು ದೊಡ್ಡವರಂತೆ ಇರುವುದು ಸಾದ್ಯವಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಹಾಗಾಗಿ ಅವರ ವರ್ತನೆಗಳ ಹಿಂದಿರುವುದು ಮುಗ್ಧತೆಯೇ ಹೊರತು ದಡ್ಡತನವಲ್ಲ ಎಂದುಕೊಳ್ಳಬೇಕು. ಎಲ್ಲರೆದುರು ಮಕ್ಕಳು ಪೆದ್ದುಪದ್ದಾಗಿ ವರ್ತಿಸಿದರೆ ಅದು ನಮಗಾದ ಅವಮಾನ ಎಂದು ತಿಳಿದುಕೊಳ್ಳಬಾರದು.
2. ಅವರು ತಮ್ಮ ಭಾವನೆ, ವರ್ತನೆಗಳಲ್ಲಿ ತಮ್ಮತನವನ್ನು ಸಹಜವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು. ನಿಧಾನವಾಗಿ ಅವರ ಬುದ್ಧಿ ಬಲಿಯುತ್ತಾ ಬಂದಂತೆ ನಮಗೆ ಬೇಕಾದಂತ ಬದಲಾವಣೆಗಳನ್ನು ತರಬಹುದು.
3. ಮಗು ಗಂಡೇ ಆಗಿರಲಿ, ಹೆಣ್ಣೇ ಆಗಿರಲಿ ದುಃಖ ಹತಾಶೆಗಳಂತಹ ಭಾವನೆಗಳನ್ನು ಹೊರಹಾಕಲು ಉತ್ತೇಜಿಸಿ. ಸಾರ್ವಜನಿಕವಾಗಿ ಅಳುವುದು, ಕೂಗಾಡುವುದು ಅವಮಾನಕರ ಎಂದುಕೊಳ್ಳಬೇಕಿಲ್ಲ. ಜೊತೆಗೆ ಕೋಪ, ಭಯ ಮುಂತಾದ ಭಾವನೆಗಳನ್ನು ನಮ್ಮ ಸಂಬಂಧಗಳು ಹಾಳಾಗದಂತೆ ವ್ಯಕ್ತಪಡಿಸುವುದು ಹೇಗೆ ಎನ್ನುವುದರ ತರಬೇತಿಯನ್ನೂ ನೀಡುತ್ತಾ ಹೋಗಬೇಕು.
4. ಹೆಣ್ಣು ಮಕ್ಕಳಿಗೆ ವಿಶೇಷ ನಿಯಮಗಳನ್ನು ಮಾಡಿ ಅವರನ್ನು ದುರ್ಬಲರನ್ನಾಗಿ ಮಾಡಬಾರದು. ಹಾಗೆಯೇ ಗಂಡುಮಕ್ಕಳು ಸೂಕ್ಷ್ಮವಾದ, ನವಿರಾದ ಭಾವನೆಗಳನ್ನು ಹೊಂದಿರಬಾರದು ಎಂದು ಸೂಚಿಸುತ್ತಾ ಅವರನ್ನು ಮೃಗಗಳನ್ನಾಗಿಸಬಾರದು.
ನಾವೆಲ್ಲಾ ಯಾವಾಗಲೂ ನೆನಪಿಡಬೇಕಾದದ್ದು ಮಕ್ಕಳು ನಮ್ಮ ಕಲ್ಪನೆಗೆ ಮೀರಿದ ಸೂಕ್ಷ್ಮ ಜೀವಿಗಳು. ಅವರನ್ನು ನಯವಾಗಿ, ಸೌಜನ್ಯದಿಂದ ನಡೆಸಿಕೊಂಡಷ್ಟೂ ಅವರ ಮುಂದಿನ ಬದುಕು ಸುಂದರವಾಗುತ್ತದೆ. ಜೊತೆಗೆ ನಮ್ಮ ವೃದ್ಧಾಪ್ಯವೂ ಆರಾಮದಾಯಕವಾಗಿರುತ್ತದೆ!
ನಡಹಳ್ಳಿ ವಸಂತ್
ಉರ್ದು ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ನಗರದ ತೈಬಾನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನ ಬಳಸಿಕೊಂಡು ಮನೆ ನಿರ್ಮಾಣ ಸೇರಿದಂತೆ ದೇಹದ ಕಾರ್ಯನಿರ್ವಹಣೆ, ಎಚ್೧ ಎನ್೧ ಖಾಯಿಲೆಯ ಬಗ್ಗೆ ಅರಿವು, ವಿದ್ಯುತ್ ಉತ್ಪಾದನಾ ಮಾದರಿ, ರಾಕೆಟ್, ಅರಣ್ಯ, ಪರಿಸರ ಮತ್ತು ಪ್ರಮುಖವಾಗಿ ಈ ಭಾಗದ ಜನರ ಜೀವನಾಡಿಯಾಗಿರುವ ರೇಷ್ಮೆ ಉತ್ಪಾದನೆ, ನೂಲು ಬಿಚ್ಚಾಣಿಕೆ ಘಟಕಗಳ ಮಾದರಿಗಳನ್ನು ತಯಾರಿಸಿದ್ದು, ವಿವರಣೆ ನೀಡಿ ನೋಡುಗರ ಗಮನ ಸೆಳೆದರು.
ಶಾಲಾ ಮುಖ್ಯಶಿಕ್ಷಕಿ ರಜಿಯಾಖಾನಂ ಮಾತನಾಡಿ, ತಾಂತ್ರಿಕವಾಗಿ ಬೆಳೆಯುತ್ತಿರುವ ಯುಗವನ್ನು ಜ್ಞಾನದ ಯುಗವೆಂದು ಭಾವಿಸಿದ್ದು ಮಕ್ಕಳಿಗೆ ಅಕ್ಷರಾಭ್ಯಾಸ ನೀಡಿದರಷ್ಟೇ ಸಾಲದು ಬದಲಿಗೆ ಸಾಮಾನ್ಯ ಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ವೃತ್ತಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರೆ ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ವೈಜ್ಞಾನಿಕ ಮನೋಭಾವವನ್ನು ಪ್ರದರ್ಶಿಸಲು ವೇದಿಕೆಯಾಗಿದೆ ಎಂದರು.
ಮುಖಂಡರಾದ ಅಮ್ಜದ್, ಅಫ್ಜಲ್ಪಾಷ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಲಿ, ಶಾಲಾ ಶಿಕ್ಷಕರಾದ ಮೂಮೂನಾ ಬಾನು, ಮುಬೀನಾಬೇಗಂ, ಉಮ್ಮೇಜಕಿಯಾ, ಯಾಸ್ಮೀನಾ, ಸೈಯ್ಯದ್ ಜಿಯಾವುಲ್ಲಾ, ಕೃಷ್ಣಪ್ಪ, ಗೋವಿಂದಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಶಕ್ತ ವೃದ್ಧೆಯರಿಗೆ ಮಾಸಾಶನ
ಅಶಕ್ತರು ಮತ್ತು ಬಡವರಿಗೆ ನೆರವು ನೀಡುವ ಮೂಲಕ ಅವರಿಗೆ ಆಸರೆಯಾಗುವುದು ನಮ್ಮ ಯೋಜನೆಯ ಮೂಲ ಉದ್ದೇಶ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ವೃದ್ಧೆಯರಾದ ಪಾರ್ವತಮ್ಮ ಮತ್ತು ನಾರಾಯಣಮ್ಮ ಅವರಿಗೆ ಐದು ನೂರುಗಳ ಮಾಸಾಶನ ಮಂಜೂರಾತಿ ಪತ್ರವನ್ನು ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮದಲ್ಲೂ ನಮ್ಮ ಕಾರ್ಯಕರ್ತರು ಸರ್ವೇಕ್ಷಣೆ ನಡೆಸುತ್ತಿರುವಾಗ ಈ ಹಳ್ಳಿಯಲ್ಲಿ ಯಾವುದೇ ಆಸರೆಯಿಲ್ಲದೆ, ದುಡಿಯಲು ಶಕ್ತಿಯಿಲ್ಲದ ಪರಿಸ್ಥಿತಿಯಲ್ಲಿ ಗುಡಿಸಲಲ್ಲಿ ನೆಲೆಸಿರುವ ವೃದ್ಧೆಯರನ್ನು ಗುರುತಿಸಿದರು. ಅವರಿಗೆ ಬದುಕಲು ಆಸರೆ ಹಾಗೂ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಮಂಜೂರಾತಿ ಪತ್ರವನ್ನು ನೀಡಲಾಗಿದೆ. ಮುಂದೆ ಅದನ್ನು ಒಂದು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಮಳ್ಳೂರಾಂಭ ಸ್ವಸಹಾಯ ಸಂಘದ ಲಕ್ಷ್ಮಮ್ಮ, ಪುಟ್ಟಮ್ಮ, ಪ್ರಿಯದರ್ಶಿನಿ ಸ್ವಸಹಾಯ ಸಂಘದ ಉಮ, ಮಂಜುಳಮ್ಮ, ನವೋದಯ ಸ್ವಸಹಾಯ ಸಂಘದ ವರಲಕ್ಷ್ಮಿ, ಲಕ್ಷ್ಮಮ್ಮ, ಮೇಲ್ವಿಚಾರಕಿ ಮಮತಾ, ಸೇವಾಪ್ರತಿನಿಧಿ ನಂದಿನಿ, ಗ್ರಾಮ ಪಂಚಾಯತಿ ಸದಸಯ ಸೊಣ್ಣಪ್ಪ, ಕೆ.ಆರ್.ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೇಲೂರು ಜೇಸಿಸ್ ವಿಧ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ನಡುವೆ ಕುಳಿತು ಕೇವಲ ಪಾಠ, ಪ್ರವಚನಕ್ಕಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಎಂದು ಚಲನಚಿತ್ರ ನಟ ಶಂಕರ್ ಅಶ್ವಥ್ ಹೇಳಿದರು.
ತಾಲೂಕಿನ ಮೇಲೂರು ಗ್ರಾಮದ ಜೇಸಿಸ್ ವಿಧ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ವಿಚಾರಗಳನ್ನು ಅರ್ಥಮಾಡಿಕೊಳ್ಳುವಂತಹ ಹಂಬಲ ಹೊಂದಿರಬೇಕು ಎಂದರು.
ಪೋಷಕರೂ ಕೂಡಾ ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಷ್ಟೆ ಸೀಮಿತಗೊಳಿಸದೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು.
ಮಕ್ಕಳನ್ನು ಸದಾ ಕ್ರಿಯಾಶೀಲವಾಗಿರುವಂತೆ ಮಾಡಲು ಶಿಕ್ಷಣ ಸಂಸ್ಥೆಗಳು ಕ್ರೀಡಾ ಚಟುವಟಿಕೆಗಳನ್ನು ಆಯೋಜನೆ ಮಾಡುವ ಮೂಲಕ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಾಗಿ ಹೆಚ್ಚಿನ ಪರಿಶ್ರಮ ಹಾಕಬೇಕು.
ವಿದ್ಯಾರ್ಥಿಗಳು ಕೇವಲ ಓದುವುದು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾಗಿ ನಂತರ ಒಂದು ಉದ್ಯೋಗ ಪಡೆಯುವುದಷ್ಟೇ ಜೀವನದ ಗುರಿ ಎಂದು ಭಾವಿಸದೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಗಮನಹರಸುವುದರೊಂದಿಗೆ ಸಾಮಾಜಿಕ ಕಳಕಳಿಯ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಪ್ರಶಾಂತ್ಕುಮಾರ್ ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಸದಸ್ಯರುಗಳು ಹಾಜರಿದ್ದರು.
ಬಾನಕಸ (ಸ್ಪೇಸ್ ಜಂಕ್)
ಬಾನಕಸ ಅಥವಾ ಸ್ಪೇಸ್ ಜಂಕ್ ಎಂದರೆ ಭೂಮಿಯ ಸುತ್ತಲೂ ತಿರುಗುತ್ತಿರುವ ವಿವಿಧ ಆಕಾರ, ಗಾತ್ರಗಳ ಅಸಂಖ್ಯಾತ ಕಸ ಮತ್ತು ಲೋಹದ ಚೂರುಗಳು. ಬೇರೆ ಬೇರೆ ಎತ್ತರಗಳಲ್ಲಿ, ಬೇರೆ ಬೇರೆ ವೇಗಗಳಲ್ಲಿ ತಿರುಗುತ್ತಿರುವ ಇವುಗಳಲ್ಲಿ ಹೆಚ್ಚಿನವು ಮಾನವ ನಿರ್ಮಿತ ಉಪಗ್ರಹಗಳ ಭಗ್ನಾವಶೇಷಗಳು. ಮೊದಮೊದಲು ಅಗಾಧವಾದ ಭೂಸುತ್ತಲ ಅವಕಾಶದಲ್ಲಿ ಈ ಚಿಕ್ಕ, ಪುಟ್ಟ ಕಸಗಳು ಏನೂ ಮಾಡಲಾರವು ಎಂಬ ಭಾವನೆ ಇತ್ತು. ಆದರೆ ಯಾವುದೇ ಗುರಿಯಿಲ್ಲದೆ ಬಾಹ್ಯಾಕಾಶದಲ್ಲಿ ಗಿರಕಿ ಹೊಡೆಯುತ್ತಿರುವ ಬಾನಕಸ ಭೂಮಿಯಿಂದ ಉಡಾವಣೆಯಾಗುತ್ತಿರುವ ಈಗಿನ ಕೃತಕ ಉಪಗ್ರಹಗಳಿಗೆ ಅಪಾಯಕಾರಿ ಎಂಬುದು ಸಾಬೀತಾಗಿದೆ. ಬಾಹ್ಯಾಕಾಶ ಸಂಶೋಧನೆ, ಭೂ ಮತ್ತು ಹವಾಮಾನ ಅಧ್ಯಯನ, ದೂರಸಂಪರ್ಕ ಇತ್ಯಾದಿ ಹಲವಾರು ಕ್ಷೇತ್ರಗಳ ಪ್ರಗತಿಯಿಂದಾಗಿ ದಿನದಿಂದ ದಿನಕ್ಕೆ ಉಪಗ್ರಹಗಳ ಹಾರಾಟ ಹೆಚ್ಚುತ್ತಿದೆ, ಮಾನವಸಹಿತ ಮತ್ತು ಮಾನವರಹಿತ ಬಾನನೌಕೆಗಳು ಬಾಹ್ಯ ಜಗತ್ತಿನ ಶೋಧಕ್ಕೆ ಮುನ್ನುಗ್ಗುತ್ತಿವೆ, ಹಾಗೆಯೇ ಹಳೆಯ, ಆಯಸ್ಸು ಮುಗಿದ ಉಪಗ್ರಹಗಳನ್ನು ಕೈಬಿಡುವುದು ಕೂಡ ಅನಿವಾರ್ಯವಾಗಿದೆ. ಅವು ಭೂಸಂಪರ್ಕ ಕಳೆದುಕೊಂಡರೂ, ಅವುಗಳ ಬಿಡಿಭಾಗಗಳು ಕಳಚಿ ಚೂರಾಗಿ, ಅತಿನೇರಳೆ ಕಿರಣಗಳಿಗೆ ಸತತ ಸಿಕ್ಕು ಸವೆದರೂ ಲಕ್ಷಗಟ್ಟಲೆ ವರ್ಷಗಳವರೆಗೆ ಭೂಮಿಯ ಸುತ್ತ ತಮ್ಮ ಕಕ್ಷೆಯಲ್ಲಿ ಸುತುತ್ತಲೇ ಇರುತ್ತವೆ.
ಬಾನಕಸದ ಮೂಲಗಳು
ಬಾಹ್ಯಾಕಾಶ ತಂತ್ರಜ್ಷಾನ ಅಭಿವೃದ್ಧಿಗೊಂಡು ಅದನ್ನು ಸಂಪರ್ಕಸಾಧನವಾಗಿ ಬಳಸತೊಡಗಿದಾಗಿನಿಂದ ಬಾನಕಸದ ಸಮಸ್ಯೆ ಮನುಕುಲಕ್ಕೆ ಎದುರಾಗಿದೆ. 1957 ರಲ್ಲಿ ಸೋವಿಯೆತ್ ರಷ್ಯಾದ ಸ್ಪುಟ್ನಿಕ್ ಉಡಾವಣೆಯೊಂದಿಗೆ ಆರಂಭಗೊಂಡ ‘ಬಾಹ್ಯಾಕಾಶ ಯುಗ’ ದಲ್ಲಿ ಇದುವರೆಗೆ ಸುಮಾರು 6,000 ಉಪಗ್ರಹಗಳು ಗಗನಕ್ಕೆ ಚಿಮ್ಮಿವೆ. ಈಗ 2465 ಉಪಗ್ರಹಗಳು ಮಾತ್ರವೇ ಕ್ರಿಯಾಶೀಲವಾಗಿದ್ದು ಉಳಿದವೆಲ್ಲವೂ ಬಾನಕಸವಾಗಿ ಹಾರಾಟ ನಡೆಸಿವೆ. ಮಾನವ ಬಾಹ್ಯಾಕಾಶಕ್ಕೆ ಹಾರುವ ಮೊದಲು ‘ಸ್ಪುಟ್ನಿಕ್-2’ ಉಪಗ್ರಹದಲ್ಲಿ ಪರೀಕ್ಷಾರ್ಥವಾಗಿ ಹಾರಿಬಿಟ್ಟ ಲೈಕಾ ನಾಯಿಯ ಅವಶೇಷಗಳೂ ಭೂಮಿಯನ್ನು ಸುತ್ತುಹಾಕುತ್ತಿವೆ.
ಬಹುಹಂತದ ಉಪಗ್ರಹ ಉಡಾವಣೆಯಲ್ಲಿ ರಾಕೆಟ್ಟುಗಳು ಉಪಗ್ರಹದಿಂದ ಕಳಚಿ ಬೀಳುತ್ತವೆ. ಅವುಗಳ ಇಂಧನ ಟ್ಯಾಂಕುಗಳಲ್ಲಿ ಉಳಿದಿರುವ ಅನಿಲರೂಪದ ಇಂಧನ ಹಿಗ್ಗಿ ಟ್ಯಾಂಕು ಸಿಡಿದು ಚೂರುಚೂರಾಗಿ ದೂರ ಹಾರುತ್ತವೆ. ನಿವೃತ್ತಿಗೊಂಡ ಉಪಗ್ರಹಗಳು ಭೂಮಿಯಿಂದ ಸಂಪರ್ಕ ಕಳೆದುಕೊಂಡರೂ ಸತತವಾಗಿ ತಮ್ಮ ಕಕ್ಷೆಯಲ್ಲಿ ಹಾರುತ್ತಲೇ ಇರುತ್ತವೆ. ಇವು ಮುಂದೆ ಬಾನಕಸವಾಗುತ್ತವೆ. ಉಪಗ್ರಹಗಳೊಳಗಿರುವ ಕ್ಯಾಮೆರಾಗಳು, ಮಸೂರಗಳು, ಪ್ಲಾಸ್ಟಿಕ್ ಹಾಳೆಗಳು, ಲೋಹದ ವೈರು ಮತ್ತಿತರ ಉಪಕರಣಗಳು ಇವೆಲ್ಲವೂ ಕಾಲ ಕಳೆದಂತೆ ಬಿಡಿಗೊಂಡು ಬಾನಕಸಕ್ಕೆ ಸೇರ್ಪಡೆಗೊಳ್ಳುತ್ತವೆ. ಉಡಾವಣೆಯಲ್ಲಿ ಬಳಸಿದ ಬಲವರ್ಧಕ ಉಪಕರಣಗಳು, ಭೂವಾತಾವರಣವನ್ನು ಹಾದುಹೋಗುವಾಗ ಉಷ್ಣತೆಯ ಒತ್ತಡಕ್ಕೆ ಸಿಕ್ಕು ಕಿತ್ತೆದ್ದ ಉಪಗ್ರಹದ ಮೇಲ್ಮೈನ ಬಣ್ಣದ ಹೊಪ್ಪಳಿಕೆಗಳು ಇವೂ ಕೂಡ ಬಾನಕಸವೆಂದೆನಿಸಿಕೊಳ್ಳುತ್ತವೆ.
ಭೂಸಮೀಪದ ಕಕ್ಷೆಗಳಲ್ಲಿ ಹಾರಾಡುವ ಬಾನಕಸಗಳಿಗೆ ಭೂಮಿಯ ಆಕರ್ಷಣೆಯ ಸೆಳೆತ ಇದ್ದೇ ಇರುತ್ತದೆ. ವಾಯುಮಂಡಲದ ಅಂಚಿನ ಅಲ್ಪ ಒತ್ತಡದಿಂದಾಗಿ ಅಲ್ಲಿ ಹಾರಾಡುತ್ತಿರುವ ವಸ್ತುಗಳು ದೀರ್ಘಕಾಲದ ನಂತರ ವೇಗವನ್ನು ಕಳೆದುಕೊಳ್ಳುತ್ತ ನಮ್ಮ ವಾಯುಮಂಡಲದೊಳಕ್ಕೆ ಪ್ರವೇಶ ಪಡೆಯುತ್ತವೆ, ಇಲ್ಲಿನ ವಾಯು ಒತ್ತಡದಲ್ಲಿ ಅವು ಉರಿದು ಭಸ್ಮವಾಗುತ್ತವೆ.
ಎತ್ತರದ ಕಕ್ಷೆಗಳಲ್ಲಿ ಈ ಪರಿಣಾಮ ಉಂಟಾಗುವುದಿಲ್ಲ. ಅಲ್ಲಿ ಸುತ್ತುತ್ತಿರುವ ಚೂರುಗಳು ದೀರ್ಘಕಾಲದವರೆಗೆ ಅಂದರೆ ಹತ್ತು, ನೂರು ಅಥವಾ ಸಾವಿರ ವರ್ಷಗಳವರೆಗೂ ಅದೇ ಸ್ಥಿತಿಯಲ್ಲಿರುತ್ತವೆ.
ಅಮೆರಿಕದ ಮಿಲಿಟರಿ ಸಂಸ್ಥೆಯೊಂದು ಭೂಮಿಯ ಮೇಲೆ 25 ಕಡೆ ಸ್ಥಾಪಿಸಿದ ಉಪಕರಣಗಳ ‘ಬಾಹ್ಯಾಕಾಶ ವೀಕ್ಷಣಾ ಜಾಲ’ (Space Surveillance Network) ಕಲೆಹಾಕಿದ ಮಾಹಿತಿಗಳ ಪ್ರಕಾರ 10 ಸೆಮೀಗಿಂತ ದೊಡ್ಡದಾಗಿರುವ ಸುಮಾರು 19 ಸಾವಿರದಷ್ಟು, 1-10 ಸೆಮೀನ ಸುಮಾರು 5 ಲಕ್ಷದಷ್ಟು ಹಾಗೂ 1 ಸೆಮೀಗಿಂತ ಚಿಕ್ಕದಾಗಿರುವ ಕೋಟಿಗಟ್ಟಲೆ ಕೃತಕ ವಸ್ತುಗಳು ಭೂಮಿಯನ್ನು ಸುತ್ತುತ್ತಿವೆ. ಇವುಗಳಲ್ಲಿ ದೊಡ್ಡವು ಟನ್ನುಗಟ್ಟಲೆ ತೂಕ ಹೊಂದಿದರೆ ಚಿಕ್ಕವು ನಾಲ್ಕೈದು ಕೆಜಿಯಷ್ಟಿರಬಹುದೆಂದು ಅಂದಾಜಿದೆ. ಸುಮಾರು 2-4 ಕೆ.ಜಿ.ಯಷ್ಟಿದ್ದ ಚೂರುಗಳು ಅತಿ ಹೆಚ್ಚಿದ್ದು ಇವೇ ಕಾರ್ಯನಿರತ ಉಪಗ್ರಹಗಳಿಗೆ ಅಪಾಯ ಉಂಟುಮಾಡುವ ಸಾಧ್ಯತೆಗಳಿವೆ.
ಈ ಭಗ್ನಾವಶೇಷಗಳಲ್ಲಿ ಹೆಚ್ಚಿನವು ಭೂ ಮೇಲ್ಮೈಯಿಂದ ಎರಡು ಸಾವಿರ ಕಿಮೀ ಸುತ್ತಳತೆಯಲ್ಲಿ ಹಾರಾಡುತ್ತಿವೆ. ಸುಮಾರು 800-850 ಕಿಮೀ ಎತ್ತರದ ವಲಯದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ವಿವಿಧ ಅಳತೆಗಳ ಚೂರುಗಳು ಕಂಡುಬರುತ್ತಿವೆ. ಭೂಸಮೀಪದ ಕಕ್ಷೆಯಲ್ಲಿ ಈ ಚೂರುಗಳು ಸೆಕೆಂಡಿಗೆ ಸುಮಾರು 7-8 ಕಿಮೀ ವೇಗದಲ್ಲಿ ಗಿರಕಿ ಹೊಡೆಯುತ್ತಿವೆ. ಒಂದಕ್ಕೊಂದು ಡಿಕ್ಕಿ ಹೊಡೆದವೋ, ಮತ್ತಷ್ಟು ಚೂರುಗಳಾಗಿ ಅವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ.
ಕಾಲಾಂತರದಲ್ಲಿ ಭೂಮಿಯ ಆಕರ್ಷಣೆಗೆ ಒಳಗಾಗಿ ಬಹುತೇಕ ಚೂರುಗಳು ವಾತಾವರಣವನ್ನು ಪ್ರವೇಶಿಸಿ ಉರಿದು ಭಸ್ಮವಾಗಲಿವೆ, ನಿಜ. ಆದರೆ ಬಾನಕಸ ಉಂಟಾಗುತ್ತಿರುವ ವೇಗಕ್ಕೆ ಹೋಲಿಸಿದರೆ, ಅವು ನಾಶವಾಗುವ ಪ್ರಕ್ರಿಯೆ ತುಂಬ ನಿಧಾನವಾಗಿ ಆಗುತ್ತಿದೆ. ಉದಾಹರಣೆಗೆ, 2007ರಲ್ಲಿ ಚೀನಾ ದೇಶ ‘ಎಂಟಿ ಸೆಟಲೈಟ್ ಆಪರೇಶನ್’ ಪ್ರಯುಕ್ತ ನಿವೃತ್ತಿಗೊಂಡ ಉಪಗ್ರಹವೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿ 1 ಸೆಮೀನಷ್ಟು ಅಗಲದ ಒಂದೂವರೆ ಲಕ್ಷದಷ್ಟು ಚೂರುಗಳನ್ನು ಉಂಟುಮಾಡಿದೆ.
ಕಕ್ಷೆಯಲ್ಲಿರುವಾಗಲೇ ಎರಡು ಉಪಗ್ರಹಗಳು ಢಿಕ್ಕಿ ಹೊಡೆದು ಬಾನಕಸದ ಸಂಖ್ಯೆಯನ್ನು ಅಧಿಕಗೊಳಿಸಿದ ಘಟನೆ 2009 ರಲ್ಲಿ ನಡೆದಿದೆ. ವೇಗವಾಗಿ ಹಾರಾಟ ನಡೆಸಿದ್ದ ಅಮೆರಿಕದ ‘ಇರಿಡಿಯಮ್33’ ಹಾಗೂ ರಷ್ಯಾದ ‘ಕಾಸ್ಮಾಸ್ 2251’ ಉಪಗ್ರಹಗಳು ಒಂದಕ್ಕೊಂದು ಬಡಿದು ಚೂರುಗಳಾಗಿ ಹರಡಿವೆ. ಈ ರೀತಿಯಾಗಿ ಒಂದಕ್ಕೆ ಇನ್ನೊಂದು, ಇನ್ನೊಂದಕ್ಕೆ ಮತ್ತೊಂದು ವಸ್ತು ಅಪ್ಪಳಿಸಿ ಸರಪಳಿ ಕ್ರಿಯೆ ಉಂಟಾಗಿ ಭೂಸುತ್ತಲ ಕಕ್ಷೆಗಳಲ್ಲಿ ಬರೀ ಉಪಗ್ರಹಕಸವೇ ತುಂಬಿ ಹೋಗಬಹುದಾದ ‘ಕೆಸ್ಲರ್ ಸಿಂಡ್ರೋಮ್’ ಎಂಬ ಸಾಧ್ಯತೆಯ ಬಗ್ಗೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಗಗನನಡಿಗೆ ಮತ್ತು ಬಾನಕಸ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೇಲುಸ್ತುವಾರಿಗೆಂದು ನೌಕೆಯ ಹೊರಗಡೆ ಗಗನ ನಡಿಗೆ ನಡೆಸಿದ ತಂತ್ರಜ್ಞರು ಹಲವು ಬಾರಿ ಕೈಯ್ಯಲ್ಲಿದ್ದ ಉಪಕರಣಗಳನ್ನು ಕಳೆದುಕೊಂಡಿದ್ದಾರೆ. ಅವೆಲ್ಲವೂ ಭೂಮಿಯ ಸುತ್ತ ಸುತ್ತುತ್ತಲೇ ಇವೆ. ಕೈಗವುಸು, ಸುನೀತ ವಿಲಿಯಮ್ಸ್ ಕೈಯ್ಯಿಂದ ಜಾರಿದ ಕ್ಯಾಮೆರಾ, ಸೌರಫಲಕವೊಂದರ ಮರುಜೋಡಣೆ ಮಾಡುವಾಗ ಜಾರಿ ಹಾರಿಹೋದ ಫಲಕದ ಹಲಗೆ ಇತ್ಯಾದಿ.
ಹತ್ತು ವರ್ಷಗಳಿಂದ ಭೂವಾತಾವರಣದಿಂದ 250-320 ಕಿಮೀ ಎತ್ತರದಲ್ಲಿ ಹಾರಾಟ ನಡೆಸುತ್ತಿರುವ ‘ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ (ಇದೂ ಕೂಡ ಭೂಪ್ರದಕ್ಷಿಣೆ ಹಾಕುತ್ತಿರುವ ಕೃತಕ ಉಪಗ್ರಹವೇ, ಆದರೆ ಇದರ ವಿಶೇಷತೆ ಏನೆಂದರೆ ಕಳೆದ 10 ವರ್ಷಗಳಿಂದ ಇದರಲ್ಲಿ ಸತತವಾಗಿ ಮಾನವ ವಾಸ್ತವ್ಯ ನಡೆದಿದೆ.) ಅನೇಕ ಬಾರಿ ಈ ಅಪಾಯವನ್ನು ಎದುರಿಸಿದೆ. ದೊಡ್ಡ ಚೂರೊಂದು ನೌಕೆಗೆ ಅಪ್ಪಳಿಸುವ ಸಾಧ್ಯತೆಗಳು ಕಂಡುಬಂದಾಗ ನೌಕೆಯ ಎತ್ತರವನ್ನು ಬದಲಿಸಿ, ಅದರೊಳಗಿರುವ ತಂತ್ರಜ್ಞರು ಸುರಕ್ಷಿತ ಸ್ಥಾನವನ್ನು ಸೇರಿಕೊಳ್ಳುವಂತೆ ಸೂಚಿಸಲಾಗುತ್ತದೆ. ಅತಿ ದೀರ್ಘ ಕಾಲ ಭೂ ಪ್ರದಕ್ಷಿಣೆ ಮಾಡಿದ ಮೀರ್ ಬಾಹ್ಯಾಕಾಶ ನೌಕೆಯ ಮೇಲ್ಮೈ ಅನೇಕ ಕಡೆ ಬಾನಕಸದಿಂದ ಘಾಸಿಗೊಂಡಿರುವ ಗುರುತುಗಳನ್ನು ಚಿತ್ರಗಳು ತೋರಿಸಿವೆ.
ಪರಿಹಾರ
ಭೂಮಿಗೆ ಬಂದು ಬೀಳಬಹುದಾದ ಬಾನಕಸದ ಬಗ್ಗೆ ಕೆಲವು ಸಂಸ್ಥೆಗಳು ಅಧ್ಯಯನ ನಡೆಸಿವೆ. ಉಪಗ್ರಹ ತಯಾರಿಸುವ ಸಂಸ್ಥೆಗಳು ಬಾನಕಸದ ಢಿಕ್ಕಿಯಿಂದ ತೊಂದರೆಗೊಳಗಾಗದ ಹಾಗೆ ಉಪಗ್ರಹಗಳ ಹೊರಭಾಗಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿವೆ. ಹಾಗೆಯೇ ಮಾನವಕೃತ ಬಾನಕಸ ಅಧಿಕಗೊಳ್ಳದಂತೆ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆಯೂ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ.
ಒಂದು ಪರಿಹಾರವಾಗಿ ಉಪಗ್ರಹಗಳ ಕ್ರಿಯಾಶೀಲತೆ ಕಡಿಮೆಯಾಗುತ್ತಲೇ ಅವುಗಳನ್ನು ಆದಷ್ಟು ಭೂಸಮೀಪದ ಕಕ್ಷೆಗಳಿಗೆ ಇಳಿಸಬೇಕು. ಅಲ್ಲಿ ಅವು ಶೀಘ್ರವಾಗಿ ಭಗ್ನಗೊಂಡು, ಅವಶೇಷಗಳು ವಾಯುಮಂಡಲದ ಪ್ರಭಾವಕ್ಕೆ ಸಿಕ್ಕು ಪತನಗೊಳ್ಳುವ ಸಾಧ್ಯತೆಗಳು ಹೆಚ್ಚು.
ಈಗಿರುವ ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ರಾಷ್ಟ್ರಗಳು ಪ್ರತ್ಯೇಕವಾಗಿ ಬಾನ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತಿಲ್ಲ. ಆದ್ದರಿಂದ ಸಮಸ್ತ ದೇಶಗಳು ಒಂದಾಗಿ ಈ ಸಮಸ್ಯೆಯನ್ನು ಎದುರಿಸಬೇಕಿದೆ.
ಸರೋಜ ಪ್ರಕಾಶ್
ಶ್ರೀ ಪೂಜಮ್ಮ ದೇವಿಯ ಕರಗಮಹೋತ್ಸವ
ಪುರಾಣ ಪ್ರಸಿಧ್ದ ಶ್ರೀ ಪೂಜಮ್ಮ ದೇವಿಯ ದೇವಾಲಯದಲ್ಲಿ ಹುಣ್ಣಿಮೆ ಹಬ್ಬದ ಅಂಗವಾಗಿ ಕರಗಮಹೋತ್ಸವ ಭಾರಿ ವಿಜೃಂಭಣೆಯಿಂದ ನೆರವೇರಿತು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ವಿಜೃಂಭಣೆಯಿಂದ ನಡೆಸಲಾದ ಕರಗ ಮಹೋತ್ಸವದ ಅಂಗವಾಗಿ ನಗರದ ಓ.ಟಿ.ವೃತ್ತ ಹಾಗೂ ಕೋಟೆ ವೃತ್ತಗಳಲ್ಲಿ ಆರ್ಕೆಸ್ಟ್ರಾಗಳನ್ನು ಏರ್ಪಡಿಸಲಾಗಿತ್ತು.
ಕರಗ ಮಹೋತ್ಸವವನ್ನು ನೋಡಲು ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಕರಗ ಹೊತ್ತಿದ್ದ ವಿಜಯಕುಮಾರ್ ನರ್ತನಕ್ಕೆ ಚಪ್ಪಾಳೆ, ಶಿಳ್ಳೆಗಳ ಮುಖಾಂತರ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು.
ಶ್ರೀ ಪೂಜಮ್ಮ ದೇವಾಲಯದಿಂದ ಹೊರಟ ಕರಗ, ಬೈಪಾಸ್ ರಸ್ತೆಯ ಮುಖಾಂತರ ಓ.ಟಿ. ಸರ್ಕಲ್, ಕೋಟೆ ಸರ್ಕಲ್ಗಳಲ್ಲಿ ಆಯೋಜನೆ ಮಾಡಲಾಗಿದ್ದ ಆರ್ಕೆಸ್ಟ್ರಾಗಳಲ್ಲಿ ವಿವಿಧ ಬಗೆಯ ಸಂಗೀತಗಳ ತಾಳಕ್ಕೆ ತಕ್ಕಂತೆ ನೃತ್ಯ ಮಾಡಿದ ನಂತರ ನಗರದ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಪೂಜೆಗಳನ್ನು ಸ್ವೀಕರಿಸಿತು.
ಶಿಡ್ಲಘಟ್ಟ ನಗರದ ಬೈಪಾಸ್ ರಸ್ತೆಯಲ್ಲಿರುವ ಪೂಜಮ್ಮದೇವಾಲಯದಲ್ಲಿ ರಾತ್ರಿ 10.25 ಕ್ಕೆ ಪ್ರಾರಂಭವಾದ ಕರಗ ಮಹೋತ್ಸವದಲ್ಲಿ ಶಾಸಕ ಎಂ.ರಾಜಣ್ಣ ಸೇರಿದಂತೆ ಮಾಜಿ ಸಚಿವ ಹಾಗೂ ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಪೂಜೆ ಸಲ್ಲಿಸಿದರು.
ನಗರಸಭೆ ಉಪಾಧ್ಯಕ್ಷೆ ಸುಮಿತ್ರಮ್ಮರಮೇಶ್, ಸದಸ್ಯರಾದ ಚಿಕ್ಕಮುನಿಯಪ್ಪ, ಜೆ.ಎಂ.ಬಾಲಕೃಷ್ಣ, ಲಕ್ಷ್ಮಯ್ಯ, ಮುಖಂಡರಾದ ಚಿಕ್ಕಮುನಿಯಪ್ಪ, ಮುನಿಪೂಜಮ್ಮ, ಎಸ್.ಎಂ. ರಮೇಶ್, ಯಾಮಾ ನಾರಾಯಣಸ್ವಾಮಿ,ನಾಗನರಸಿಂಹ,ನರಸಿಂಹಮೂರ್ತಿ,ಅಜ್ಜಪ್ಪ,ಕೃಷ್ಣಮೂರ್ತಿ,ಮುನಿನರಸಿಂಹ, ಕೆ.ನಾರಾಯಣಸ್ವಾಮಿ, ಕೆ.ಮಂಜುನಾಥ, ಮತ್ತಿತರರು ಹಾಜರಿದ್ದರು.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಉದ್ಘಾಟನೆ ಹಾಗೂ ದಿನಚರಿ ಬಿಡುಗಡೆ
ದೇಶದ ಬಹುಷ್ಯ ಶಿಕ್ಷಕರ ಕೈಯಲ್ಲಿದ್ದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕೆಂದು ಕ್ಷೇತ್ರದ ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಕೋಟೆ ಬಾಲಕರ ಶಾಲೆಯ ಆವರಣದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಉದ್ಘಾನೆ ಹಾಗೂ ದಿನಚರಿ2015 ಬಿಡುಗಡೆ ಮಾಡಿ ಮಾತನಾಡಿದ ಅವರು ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಆದ್ದರಿಂದ ಮಕ್ಕಳನ್ನು ಬಾಲ್ಯದಿಂದಲೆ ಉತ್ತಮ ಪ್ರಜೆಗಳಾಗುವಂತೆ ರೂಪಿಸಬೆಕಾದ ಕರ್ತವ್ಯ ಶಿಕ್ಷಕರದಗಿದ್ದು ಕಾಯಾವಾಚಮನುಸ ಎಂಬಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.
ಶಿಕ್ಷಕರ ಪಿತಾಮಹ ಶಿಕ್ಷಣ ತಜ್ಞ ತತ್ವಜ್ಯಾನಿ ಸರ್ವಪಲ್ಲಿ ರಾಧಾಕೃಷ್ಣನ್ ರವರ ಆದರ್ಶಗಳನ್ನು ಶಿಕ್ಷಕರು ಪಾಲಿಸಬೇಕೆಂದರಲ್ಲದೆ ಶಿಕ್ಷಕರ ಭವನ ಶೀಘ್ರದಲ್ಲೆ ನಿರ್ಮಾಣ ಮಾಡಲು ಶ್ರಮಿಸುವುದಾಗಿ ಬರವಸೆ ನೀಡಿದರು.
ಮುಖ್ಯ ಅತಿಥಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಎ.ನಾರಯಣಸ್ವಾಮಿ ಮಾತನಾಡಿ ಶಾಲೆಗಳ ಮತ್ತು ಮಕ್ಕಳ ಆಭಿವೃದ್ದಿಯೇ ನಮ್ಮ ಮೂಲ ಉದ್ದೇಶ ವಾಗಿದ್ದು ಜಿಲ್ಲೆಯ ಸಮಸ್ಥ ಶಿಕ್ಷಕರ ಕ್ಷೇಮಾಬಿವೃದ್ದಿ ಕಾಪಾಡುವುದು ನಮ್ಮ ಸಂಘದ ಮೂಲದೆಯೆ ಆಗಿದೆ, ಅದೆ ರೀತಿ ಈ ವರ್ಷದಿಂದ ನಮ್ಮ ಸಂಘ ನೂತನವಾಗಿ ಮಾರ್ಚಿ ತಿಂಗಳಿನಿಂದ ಎಲ್ಲಾ ಶಿಕ್ಷಕರಿಗೆ ವೇತನ ಪ್ರಮಾಣ ಪತ್ರ ನೀಡಬೇಕೆಂದು ಸಂಘದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನ ಮಾಡಿ ಅದರ ಜವಾಬ್ದಾರಿಯನ್ನು ತಾಲ್ಲೂಕು ಸಂಘಗಳು ಉಸ್ತುವಾರಿ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ ಇದರಿಂದ ಶಿಕ್ಷಕರು ಕಚೇರಿ ಬಳಿ ಬರುವ ವಾಡಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯವನ್ನು ಕೈಗೊಂಡಿದ್ದೇವೆ ಮತ್ತು ಕಚೇರಿಗಳಲ್ಲಿ ಭಾಕಿ ಇರುವ 15,20,30 ಸೇವಾ ಆವಧಿಯ ಬಡ್ತಿಯ ಮೂಲ ಭಾಕಿವೆತನ ಶೀಘ್ರವಾಗಿ ಮಾಡಬೆಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಘದ ಪರವಾಗಿ ಮನವಿಯನ್ನು ಮಾಡಿದ್ದೇವೆ ಹಾಗೂ ಇಡೀ ಜಿಲ್ಲೆಯ ಶಿಕ್ಷಕರ ಕುಂದುಕೊರತೆಗಳನ್ನು ಹಂತಹಂತವಾಗಿ ನಾವು ಬಗೆಹರಿಸುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆವರು ಸಂಘದ ಸರ್ವತೋ ಮುಖ ಆಭಿವೃದ್ದಿಗೆ ಸದಾ ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಹಿರಿಯ ಮುಖಂಡ ಮೇಲೂರು ಸೂರ್ಯನಾರಾಯಣಗೌಡ, ಸಂಘದ ಸಂಘಟನಾ ಕಾಂiÀi ್ದರ್ಶಿಗಳಾದ ಸಿ.ವಿ.ವೆಂಕಟರಾಯಪ್ಪ, ರಾಮಚಂದ್ರಪ್ಪ, ಗೌರವ ಆದ್ಯಕ್ಷ ಸಿ.ಎಂ.ಮುನಿರಾಜು ಚಿಂತಾಮಣಿ ತಾಲ್ಲೂಕು ಆದ್ಯಕ್ಷ ಆಶೋಕ್ ಕುಮಾರ್, ಪ್ರ.ಕಾ.ವಸಂತರೆಡ್ಡಿ, ರಾಜ್ಯ ಸಂಘದ ಸದಸ್ಯ ಚೌಡಪ್ಪ ಚಿಂತಾಮಣಿ, ಭಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ವೆಂಕಟರೊಣಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎನ್.ಕೆ.ಗುರುರಾಜ್ ರಾವ್, ಸ.ನೌ.ಸಂ.ಕಾರ್ಯದರ್ಶಿ ಅಕ್ಕಲರೆಡ್ಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿಕ್ಷಕರ ಪ್ರತಿನಿಧಿ ಟಿ.ವಿಜಯಕುಮಾರ್, ಉಪಾದ್ಯಕ್ಷ ಎನ್.ರಾಮಚಂದ್ರಪ್ಪ, ತಾಲ್ಲೂಕು ಸಂಘದ ಕಾರ್ಯದರ್ಶಿ ಬಿ.ಅರ್.ನಾರಾಯಣಸ್ವಾಮಿ, ಟಿ.ವಿ.ನಾಗರಾಜ್, ಮಹಿಳಾ ಉಪಾದ್ಯಕ್ಷಣಿ ಅರುಣಾಚಂದ್ರಶೇಖರ, ಮಹಿಳಾ ಕಾರ್ಯದರ್ಶಿ ಆರ್.ವೇಣುಮಾದವಿ, ನಿವೃತ್ತ ಶಿಕ್ಷಕ ಚಿಕ್ಕಮುನಿಯಪ್ಪ, ಕೆಂಪೇಗೌಡ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
ಹೀಗರಲಿ ಮಕ್ಕಳ ಆಟಿಕೆ
“ಮಕ್ಕಳಿರಲವ್ವ ಮನೆ ತುಂಬ” ಎನ್ನುವುದು ಒಂದು ಜಾನಪದ ರೂಢಿಯ ಮಾತು. “ನಾವಿಬ್ಬರು ನಮಗಿಬ್ಬರು” ಎನ್ನುವುದು ಇಂದಿನ ಆಧುನಿಕ ಶಿಕ್ಷಿತ ಜಗತ್ತಿನ ಒಂದು ಮಂತ್ರ ವಾಕ್ಯ. ಮಕ್ಕಳ ಮನೋರಂಜನೆಗೆ, ಬೌದ್ಧಿಕ ಮನೋ ವಿಕಾಸಕ್ಕೆ, ದೈಹಿಕ ಬೆಳವಣಿಗೆಗೆ ಆಟಿಕೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಶಹರಗಳಲ್ಲಿ ಕೊಳ್ಳು ಬಾಕ ಸಂಸ್ಕøತಿಯು ತಲೆ ಎತ್ತಿರುವ ಕಾರಣ ಮಕ್ಕಳಿಬ್ಬರಿರಲಿ, ಮೂವರಿರಲಿ, ಒಂದೇ ಮಗುವಿರಲಿ ಶಾಪಿಂಗ್ ಮಾಲ್ ಗಳಲ್ಲಿ ಕಂಡ ಕಂಡ ಆಟಿಕೆಗಳನ್ನು ಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಯಾವ ರೀತಿಯ ಆಟಿಕೆಗಳನ್ನು ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳಬೇಕು? ಎನ್ನುವುದರ ಬಗ್ಗೆ ಚರಕಾಚಾರ್ಯರು “ಚರಕ ಸಂಹಿತೆ” ಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
“ಕ್ರೀಡನಕಾನಿ ಖಲು ಕುಮಾರಸ್ಯ ವಿಚಿತ್ರಾಣಿ ಘೋಷಮಂತ್ಯಭಿರಾಮಾಣಿ ಚಾಗ್ರರೂಣಿ ಚಾತೀಕ್ಷ್ಣಾಗ್ರಾಣಿ ಚಾನಾಸ್ಯ ಪ್ರವೇಶೀನಿ ಚಾಪ್ರಾಣ ಹರಾಣಿ ಚಾವಿತ್ರಾಸನಾನಿ ಸ್ಯು||”
ವಿಚಿತ್ರಾಣಿ: ಆಟಿಕೆಗಳು ವಿಭಿನ್ನ ರೀತಿಯದ್ದಾಗಿರಬೇಕು. ಉದಾರಹರಣೆಗೆ, ಆನೆ, ಹುಲಿ, ಕುದುರೆ, ನಾಯಿ ಇತ್ಯಾದಿ ಪ್ರಾಣಿಗಳನ್ನು ಹೋಲುವಂಥದ್ದಾಗಿರಬೇಕು. ಚಿಕ್ಕ ಚಿಕ್ಕ ಚೆಂಡುಗಳು ವಿವಿಧ ರೀತಿಯ ಟೆಡ್ಡಿಬೇರ್ ಗೊಂಬೆಗಳೂ ಕೂಡ ಮಕ್ಕಳಿಗೆ ಉತ್ತಮ ಆಟಿಕೆ ವಸ್ತುಗಳು.
ಘೋಷವಂತಿ: ಮಕ್ಕಳ ಕಿವಿಗೆ ಹಾನಿಯನ್ನುಂಟುಮಾಡದ ರೀತಿಯಲ್ಲಿ ಶಬ್ದ ಮಾಡುವಂತಿರಬೇಕು. ಅತಿ ಹೆಚ್ಚು, ಅತಿ ಕಡಿಮೆ ಅಥವಾ ಕಿವಿಗಡಚಿಕ್ಕುವ ಕರ್ಕಶ ಶಬ್ದವನ್ನುಂಟು ಮಾಡಬಾರದು.
ಅಭಿರಾಮಾಣಿ: ಆಟಿಕೆಗಳು ನೋಡಲು ಸುಂದರವಾಗಿರಬೇಕು ಮಕ್ಕಳನ್ನು ಆಕರ್ಷಿಸುವಂತಿರಬೇಕು.
ಅಗ್ರರೂಣಿ: ಆಟಿಕೆಗಳು ಹಗುರವಾಗಿರಬೇಕು. ಮಕ್ಕಳು ಅನಾಯಾಸವಾಗಿ ಹಿಡಿದು ಆಡಲು ಅನುಕೂಲವಾಗುವಂತಿರಬೇಕು.
ಅತೀಕ್ಷ್ಣಾಗ್ರಾಣಿ: ಆಟಿಕೆಗಳ ತುಡಿಗಳು ಮೊನಚಾಗಿರಬಾರದು ಆಡುವ ಸಮಯದಲ್ಲಿ ಮೊನಚಾಗಿದ್ದರೆ ಮಕ್ಕಳಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು.
ಅನಾಸ್ಯ ಪ್ರವೇಶೀನಿ: ಮಕ್ಕಳು ಆಟಿಕೆಗಳನ್ನು ಬಾಯಿಯೊಳಗೆ ಹಾಕಿಕೊಳ್ಳುವಂತಿರಬಾರದು. ಯಾವುದೇ ವಸ್ತುಗಳು ಸಿಕ್ಕಾಗಲೂ ಕೂಡ ಆಡುತ್ತಾ ಬಾಯಿಯೊಳಗೆ ಇಟ್ಟುಕೊಳ್ಳುವಂಥದ್ದು ಮಕ್ಕಳ ಸಹಜ ಸ್ವಭಾವ. ಇತ್ತೀಚಿನ ದಿನಗಳಲ್ಲಿ ಕೆಲವು ಆಟಿಕೆಗಳನ್ನು ಸೀಸ ಹಾಗೂ ಇತರೇ ರಾಸಾಯನಿಕ ಪದಾರ್ಥಗಳಿಂದ ಮಾಡಿರುತ್ತಾರೆ. ಇವುಗಳ ಸೇವನೆಯಿಂದ ಕೆಲವು ಶ್ವಾಸಕೋಶ ಸಂಬಂಧಿ, ಜೀರ್ಣಕ್ರಿಯೆ ಸಂಬಂಧಿ ಹಾಗೂ ಚರ್ಮದ ಸೋಂಕುಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಅಪ್ರಾಣ ಹರಾಣಿ: ಮಕ್ಕಳ ಆಟಿಕೆಗಳು ಮೃತ್ಯುವನನ್ನು ಆಹ್ವಾನಿಸುವಂತಿರಬಾರದು, ಇದರಿಂದ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯುಂಟಾಗಬಾರದು.
ಅವಿತ್ರಾಸನಾನಿ: ಆಟಿಕೆಗಳು ಭಯಾನಕವಾಗಿರಬಾರದು. ಮಕ್ಕಳನ್ನು ಹೆದರಿಸುವಂತಿರಬಾರದು, ಕ್ರೂರವಾಗಿರಬಾರದು.
ಈ ರೀತಿ ಮಕ್ಕಳ ಆಟಿಕೆಗಳು ವಿಭಿನ್ನ ರೀತಿಯದ್ದಾಗಿರಬೇಕು.
ಡಾ. ನಾಗಶ್ರೀ.ಕೆ.ಎಸ್.
ಭವಿಷ್ಯವನ್ನು ಇಂದೇ ಕಬಳಿಸುವುದೇ ಅಭಿವೃದ್ಧಿಯೇ?
ಎಂಬತ್ತರ ದಶಕದ ಪ್ರಾರಂಭದಲ್ಲಿ ನಾನು ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾದೆ. ಬರುವ ನಾನೂರು ರೂಪಾಯಿ ಸಂಬಳ ಸಂಪೂರ್ಣ ಖರ್ಚಾಗುತ್ತಿರಲಿಲ್ಲ. ನನ್ನ ಐದಾರು ತಿಂಗಳ ಉಳಿತಾಯದಲ್ಲಿ ಬಹುದಿನಗಳ ಬಯಕೆಯಾಗಿದ್ದ ಪ್ಯಾನಾಸೋನಿಕ್ ಟೂ ಇನ್ ಒನ್ ಖರೀದಿಸಿದೆ. ನಂತರ ನಾನು ಟೀವಿ, ಫ್ರಿಜ್, ವಾಷಿಂಗ್ ಮಷೀನ್-ಏನೆಲ್ಲಾ ಖರೀದಿಸಿದರೂ ಅದು ಉಳಿತಾಯದ ಹಣದಿಂದ ಮಾತ್ರ. ಸಾಲವನ್ನೇ ತೆಗೆಯದ ನಾನು ಸಹೋದ್ಯೋಗಿಗಳಿಗೆ ಒಂತರಾ ಅಚ್ಚರಿಯಾಗಿದ್ದೆ. ಎಷ್ಟೋ ಸಹೋದ್ಯೋಗಿಗಳು ನನ್ನ ಹೆಸರಿನಲ್ಲಿ ತಮಗೆ ಸಾಲ ಕೊಡಿಸಬೇಕೆಂದು, ಅದಕ್ಕೆ ಹೆಚ್ಚಿನ ಬಡ್ಡಿ ಕೊಡುತ್ತೇವೆಂದು ಪುಸಲಾಯಿಸಿ ವಿಫಲರಾಗಿದ್ದರು! ಕೊನೆಗೆ ನಾನು ಸಾಲದ ಬೋಣಿ ಮಾಡಿದ್ದು ಮನೆಕಟ್ಟುವಾಗ!
ಹಾಗೆ ನೋಡಿದರೆ ಮೇಲಿನದು ನನ್ನ ಕಥೆ ಮಾತ್ರವಲ್ಲ, ನನ್ನ ತಲೆಮಾರಿನವರೆಗಿನವರಲ್ಲಿ ಹೆಚ್ಚಿನವರು ಉಳಿತಾಯದಿಂದ ಮಾತ್ರ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದರು. ಇವತ್ತಿನ ಯುವಕರು ಕೆಲಸ ಸಿಕ್ಕೊಡನೆ ಮೊಬೈಲು, ಟೀವಿ, ಬೈಕ್ ಕೊಳ್ಳಲು ಸಾಲದ ಮೊರೆ ಹೊಗುತ್ತಾರೆ. ಸಾಲ ಕೊಡುವವರಿದ್ದಾಗ ತೆಗೆದುಕೊಳ್ಳುವುದೇನು ತಪ್ಪಲ್ಲ ಬಿಡಿ, ಅಂತ ನೀವು ಅಂದುಕೊಳ್ಳಬಹುದು. ಈ ರೀತಿಯ ಸಾಲದಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿ, ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ ಎನ್ನುವುದು ಪಾಶ್ಚಿಮಾತ್ಯ ಆರ್ಥಶಾಸ್ತ್ರಜ್ಞರ ತಿಳಿವಳಿಕೆ. ಹೀಗೆ ಸಾಲ ಕೊಡುವವರು ದೇಶವನ್ನು ಉದ್ಧಾರ ಮಾಡುತ್ತಾರೋ ಇಲ್ಲವೋ ಅನ್ನುವುದು ಚರ್ಚಾಸ್ಪದ. ಆದರೆ ಸಾಲ ತೆಗೆದುಕೊಳ್ಳುವವರು ಮಾತ್ರ ತಮ್ಮ ಆದಾಯದ ಹೆಚ್ಚಿನ ಭಾಗವನ್ನು ತಿಂಗಳು ತಿಂಗಳು ಸಾಲದ ಕಂತುಗಳಿಗಾಗಿ ಮೀಸಲಿಡಬೇಕಾಗುತ್ತದೆ ಎನ್ನುವುದಂತೂ ಖಾತ್ರಿ. ಹೀಗಿದ್ದರೂ ಒಂದು ಸಾಲ ತೀರಿದ ನಂತರ ಮತ್ತೊಂದು, ನಂತರ ಇನ್ನೊಂದು… ಹೀಗೆ ಮುಂದುವರೆಸುತ್ತಲೇ ಇರುತ್ತಾರೆ. ಇವರೆಲ್ಲಾ ಬಿಳಿ ಕಾಲರಿನ ಜೀತದಾಳುಗಳಲ್ಲದೇ ಮತ್ತೇನು?
ಸಾಲ ಕೊಳ್ಳುವುದು ಅವಮಾನಕರ ಎಂದುಕೊಳ್ಳುವ ಕಾಲವೊಂದಿತ್ತು. ಇವತ್ತಿನ ಯುವಕರನ್ನು ಕೇಳಿದರೆ, “ಟಾಟಾ, ಬಿರ್ಲಾ, ಅಂಬಾನಿಗಳೆ ಸಾಲ ತೊಗೊಳ್ತಾರೆ. ಅಷ್ಟೇ ಏನು ಭಾರತ ಸರ್ಕಾರವೇ ಸಾಲದಲ್ಲಿ ನಡೆಯುತ್ತಾ ಇದೆ. ಇನ್ನು ನಮ್ಮದೆಲ್ಲಾ ಯಾವ ಲೆಕ್ಕ” ಎನ್ನುವ ಉಡಾಫೆಯ ಮಾತು ಕೇಳಿಬರುತ್ತದೆ. ಉದ್ಯಮಿಗಳು ಅಥವಾ ಸರ್ಕಾರ ತೆಗೆದುಕೊಳ್ಳುವ ಸಾಲ ಬಂಡವಾಳ ಹೂಡಿಕೆಯ ರೂಪದಲ್ಲಿರುತ್ತದೆ. ಆದರೆ ವ್ಯಕ್ತಿಯೊರ್ವ ವ್ಯಾಪಾರ ವ್ಯವಹಾರಗಳ ಉದ್ದೇಶದ ಹೊರತಾಗಿ ಸಾಲ ಕೊಳ್ಳುವುದು ಅಂದರೆ ನಾವು ನಮ್ಮ ನಾಳೆಯ ಆದಾಯವನ್ನು ಇವತ್ತೇ ಖರ್ಚು ಮಾಡುತ್ತಿದ್ದೇವೆ ಎಂದರ್ಥ. ಇದು ಸಾಲ ಪಡೆದವನನ್ನು ಹೊರತಾಗಿಸಿ ಇನ್ನೆಲ್ಲರನ್ನೂ, ಕೊನೆಗೆ ದೇಶವನ್ನೂ ಉದ್ಧಾರ ಮಾಡುತ್ತದೆ! ಇದರಿಂದಾಗಿ ನಾವು ನಮ್ಮ ಮುಂದಿನ ತಲೆಮಾರಿಗೆ ಆಸ್ತಿಯನ್ನು ಬಿಟ್ಟು ಹೋಗುವ ಬದಲು ಸಾಲದ ಹೊರೆಹೊರಿಸಿ ಹೋಗುವ ಅಪಾಯವೇ ಹೆಚ್ಚಿರುತ್ತದೆ. ಅಪ್ಪ ಅಮ್ಮ ಮಾಡಿದ ಸಾಲ ತೀರಿಸಲು ಮಕ್ಕಳನ್ನು ಜೀತದಾಳುಗಳನ್ನಾಗಿಸುವ ಪದ್ದತಿ ಈಗ ಬೇರೆ ರೂಪದಲ್ಲಿ ಮುಂದುವರೆಯುತ್ತಿದೆ ಅಷ್ಟೆ!
ಹಾಗೆ ನೋಡಿದರೆ ನಾಳೆಗಳನ್ನು ಇಂದೇ ತಿನ್ನುವ ಆಧುನಿಕ ಮಾನವನ ಈ ವಿಕೃತಿ ಬರಿಯ ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ನಾಗರಿಕ ಜಗತ್ತು ಎಂದು ಕರೆಸಿಕೊಳ್ಳುವ ಪಶ್ಚಿಮ ಯೂರೋಪ್ ಮತ್ತು ಉತ್ತರ ಅಮೇರಿಕಾದ ದೇಶಗಳ ಕೈಗಾರಿಕಾ ಕ್ರಾಂತಿಯ ನಂತರದ ಟಿಪಿಕಲ್ ಮನೋಭಾವ ಇದಾಗಿದ್ದು, ಜೀವನದ ಎಲ್ಲಾ ಕ್ಷೇತ್ರಗಳಿಗೂ ಹಬ್ಬಿದೆ. ಮುಂಬರುವ ನೂರಾರು ತಲೆಮಾರುಗಳಿಗಾಗಿ ಉಳಿಸಿ ಹೋಗಬೇಕಾಗಿರುವ ಭೂಮಿಯ ಆಳದಲ್ಲಿ ಸಿಗುವ ನೀರು, ಅದಿರುಗಳು, ತೈಲ ಮುಂತಾದವುಗಳನ್ನೆಲ್ಲಾ ನಾವು ಇಂದೇ ತಿಂಗು ತೇಗುತ್ತಿದ್ದೇವೆ. ಮಿತವಾಗಿ ಬಳಸಿ, ಆದರಲ್ಲಿ ಹೆಚ್ಚಿನದನ್ನು ರೂಪಾಂತರ ಮಾಡದೆ, ಪ್ರಕೃತಿ ಸಹಜವಾಗಿ ಒಪ್ಪಿಕೊಳ್ಳುವಂತ ಸ್ಥಿತಿಯಲ್ಲಿ ಅದಕ್ಕೇ ಹಿಂತಿರುಗಿಸಬೇಕಾದ ನಾವು ಯಕಶ್ಚಿತ್ ಸಾಲಗಾರರಂತೆ ಇಂದೇ ಸಿಕ್ಕಿದ್ದನ್ನು ಬಾಚಿಕೊಳ್ಳುತ್ತಿದ್ದೇವೆ. ಜೊತೆಗೆ ಪ್ರಕೃತಿ ಸಹಜವಾಗಿ ಒಪ್ಪಿಕೊಳ್ಳದಂತಹ ತ್ಯಾಜ್ಯಗಳನ್ನು ನೀಡುತ್ತಿದ್ದೇವೆ. ಲಕ್ಷಾಂತರ ವರ್ಷಗಳ ನಂತರ ಇರಬೇಕಾದ ವಾಯುಮಾಲಿನ್ಯದ ಮಟ್ಟವನ್ನು ಇಂದೇ ತಲುಪಿದ್ದೇವೆ.
ಇಷ್ಟೇ ಅಲ್ಲ, ಭವಿಷ್ಯವನ್ನು ಇಂದೇ ಅನುಭವಿಸುವುದು ನಮ್ಮ ಜೀವನ ಶೈಲಿಯೇ ಆಗಿಬಿಟ್ಟಿದೆ. ಮಕ್ಕಳು ತಮ್ಮ ವಯಸ್ಸಿಗೆ ಮೀರಿದ್ದನ್ನು ಕಲಿತು ಇಂದೇ ವಿದ್ವಾಂಸರಾಗಬೇಕೆಂದು ಅವರ ಮೇಲೆ ಏನೆಲ್ಲ ಒತ್ತಡ ಹೇರುತ್ತೇವೆ. ಚೈಲ್ಡ್ ಪ್ರಾಡಿಜಿ – ಬಾಲ ಪ್ರತಿಭೆಗಳ ಹಣೆಪಟ್ಟಿ ಹಚ್ಚಿ ಟೀವಿ ರಿಯಾಲಿಟಿ ಷೋಗಳು ಮುಗ್ಧ ಮಕ್ಕಳನ್ನು ಏನೆಲ್ಲಾ ಹಿಂಸೆಗೆ ಒಳಪಡಿಸುತ್ತಿವೆ. ಮಕ್ಕಳು ಬಾಲ್ಯವನ್ನೇ ಅನುಭವಿಸದೆ ದೊಡ್ಡವರಂತೆ ವರ್ತಿಸಬೇಕೆಂದು ನಾವು ಅಪೇಕ್ಷಿಸುತ್ತೇವೆ. ದೇಹ, ಮನಸ್ಸುಗಳೆರೆಡೂ ಪ್ರೌಢವಾದ ನಂತರ ಅನುಭವಿಸಬೇಕಾದ ಲೈಂಗಿಕತೆಯನ್ನು ಹದಿನೈದು ವರ್ಷಕ್ಕೆ ಮೊದಲಿನಿಂದಲೇ ಅನುಭವಿಸುವ ಮಕ್ಕಳು ಮುಂದೆ ಅದರ ಆಕರ್ಷಣೆಯನ್ನೇ ಕಳೆದುಕೊಂಡು ಹೊಸ ಹೊಸ ಥ್ರಿಲ್-ರೋಮಾಂಚನಗಳನ್ನು ಹುಡುಕ ಹೊರಡುವುದನ್ನು ಪಾಶ್ಚಿಮಾತ್ಯರು ಸಹಜವಾಗಿ ಒಪ್ಪಿಕೊಂಡಿದ್ದಾರೆ. ಒಲಂಪಿಕ್ ಮೆಡಲ್ಗಳ ಮೇಲಾಟಕ್ಕಾಗಿ ಮಕ್ಕಳನ್ನು ಕೃತಕವಾಗಿ ದೊಡ್ಡವರನ್ನಾಗಿಸಲು ಏನೆಲ್ಲಾ ಹಿಂಸೆ, ವಿಕೃತಿಗಳ ಮೊರೆ ಹೋಗುತ್ತಿದ್ದೇವೆ.
ಹೀಗೆ ಈ ಪ್ರವೃತ್ತಿಗೆ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ನಾಳೆಗಳನ್ನು ಇಂದೇ ಹೆಚ್ಚು ವೇಗವಾಗಿ, ಹೆಚ್ಚು ಪರಿಣಾಮಕಾರಿಯಾಗಿ ಅನುಭವಿಸುವವರು ಹೆಚ್ಚು ಆಧುನಿಕರು, ಮುಂದುವರೆದವರು, ಅಭಿವೃದ್ಧಿ ಹೊಂದಿದವರು ಮತ್ತು ನಾಗರಿಕರು! ಇದು ಪಾಶ್ಚಿಮಾತ್ಯ ದೇಶಗಳು ನಮ್ಮ ಜನಗಳಲ್ಲಿ, ಜನ ನಾಯಕರುಗಳಲ್ಲಿ ಹುಟ್ಟು ಹಾಕಿರುವ ಮನೋವೈಕಲ್ಯ. ಈ ಅಪಾಯಕಾರೀ ಪ್ರವೃತ್ತಿಯಿಂದ ವೈಯುಕ್ತಿಕ ಮಟ್ಟದಲ್ಲಿ ನಾವು ಅಜೀವ ಜೀತದಾಳುಗಳಾದರೆ, ಮನುಕುಲದ ಮಟ್ಟದಲ್ಲಿ, ಲಕ್ಷಾಂತರ ವಷರ್Àಗಳು ಉಪಯೋಗಿಸಬಹುದಾದ ನಮ್ಮ ಪ್ರಾಕೃತಿಕ ಸಂಪನ್ಮೂಲಗಳನ್ನೆಲ್ಲಾ ಇಂದೇ ಬರಿದಾಗಿಸುತ್ತಿದ್ದೇವೆ.
ಪ್ರಕೃತಿಯ ಎಲ್ಲಾ ಚಲನೆಗೂ ಅದರದ್ದೇ ಆದ ವೇಗವಿರುತ್ತದೆ. ಅದನ್ನು ಕೃತಕವಾಗಿ ಹೆಚ್ಚಿಸುವ ಪ್ರಯತ್ನ ಮಾಡಿದಷ್ಟೂ ಮಾನವ ತಾನು ಬಲಶಾಲಿಯಾಗುತ್ತಿದ್ದೇನೆಂಬ ಭ್ರಮೆಯಲ್ಲಿ ನಿಃಶಕ್ತನಾಗುತ್ತಾ ಹೋಗುತ್ತಾನೆ. ಇದೆಲ್ಲದರ ತಾರ್ಕಿಕ ಕೊನೆ ಸರ್ವನಾಶವೆಂದು ಹೇಳಿದವರನ್ನು ಅಭಿವೃದ್ಧಿಯ ವಿರೋಧಿ, ಸಿನಿಕ, ನಿರಾಶವಾದಿಯೆಂದು ಹೀಗಳೆಯಲಾಗುತ್ತಿದೆ.
ನಡಹಳ್ಳಿ ವಸಂತ್
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಕರೆ
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಚೀಮಂಗಲದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನಿಯೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಸೋಲಾರ್ ವಿಜ್ಞಾನಿ ಸಜ್ಜಾದ್ ಅಹವಮದ್ರವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಿ, ಪ್ರತಿಯೊಂದು ವಿಷಯದ ಏಕೆ, ಏನು? ಹೇಗೆ? ಎಂಬುವುದನ್ನು ಪ್ರಾರಂಭಿಸಿ, ಆಗ ನೀವು ಸಹ ವಿಜ್ಞಾನಿಯಾಗಬಹುದು ಎಂದರು. ತಾವು ತಯಾರಿಸಿದ್ದ ಸೋಲಾರ್ ಕಾರನ್ನು ಮಕ್ಕಳಿಗೆ ಪ್ರದರ್ಶಿಸಿದರು. ನಂತರ ಅದರ ಬಗ್ಗೆ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ದೊಡ್ಡನಾಯ್ಕ ಪ್ರಾಸ್ಥಾವಿಕವಾಗಿ ಮಾತನಾಡಿದರು, ಸರ್.ಸಿ.ವಿ. ರಾಮನ್ರವರ ಬಗ್ಗೆ ಶಿಕ್ಷಕರಾದ ಶ್ರೀನಿವಾಸ್ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶಿವಶಂಕ ವಹಿಸಿ ಮಾತನಾಡುತ್ತಾ ಈ ವರ್ಷ ‘ರಾಷ್ಟ್ರೀಯ ವಿಜ್ಞಾನ ದಿನ’ ಮಹತ್ವದ್ದಾಗಿದ್ದು, 2015ರ ಧ್ಯೇಯವಾಕ್ಯ, “ರಾಷ್ಟ್ರ ನಿರ್ಮಾಣ ವಿಜ್ಞಾನ” ವಾಗಿದ್ದು ವಿದ್ಯಾರ್ಥಿಗಳು ಮುಂದಿನ ವರ್ಷಗಳಲ್ಲಿ ವಿಜ್ಞಾನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನವ ಭಾರತ ನಿರ್ಮಾತೃಗಳಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಶ್ರೀಯುತ ಮೋಹನ್ರವರು ಆಗಮಿಸಿದ್ದು, ಶಿಕ್ಷಕರಾದ ಭವ್ಯರವರು, ಸ್ವಾಗತಿಸಿದರು, ಸವಿತರವರು ವಂದಿಸಿದರು. ಶಿಕ್ಷಕ ಎಂ.ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃಧ್ದಿ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
ಶಿಡ್ಲಘಟ್ಟ ತಾಲ್ಲೂಕಿನ ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃಧ್ದಿ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಚೀಮನಹಳ್ಳಿ ಗೋಪಾಲ್ ಉಪಾಧ್ಯಕ್ಷರಾಗಿ ರವಿ.ಎಂ.ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಘೋಷಣೆ ಮಾಡಿದ್ದಾರೆ.
ತಾಲ್ಲೂಕಿನ ಪಿ.ಎಲ್.ಡಿ.ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ 15 ರ ಭಾನುವಾರದಂದು ಚುನಾವಣೆ ನಡೆದಿತ್ತು, ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅರ್ಭರ್ಥಿಗಳೆ ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿತ್ತು, ಅಧ್ಯಕ್ಷ ಸ್ಥಾನಕ್ಕೆ ಅಬ್ಲೂಡು ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿ.ಎಂ.ಗೋಪಾಲ್, ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಜಿಗುಂಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಂ.ಪಿ.ರವಿ ಅವರು ಮಾತ್ರ ಅರ್ಜಿಗಳನ್ನು ಸಲ್ಲಿಸಿದ್ದರಿಂದ ಇಬ್ಬರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನವಾಗಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವವರನ್ನು ಕೆ.ಪಿ.ಸಿ.ಸಿ.ಉಪಾಧ್ಯಕ್ಷ ವಿ.ಮುನಿಯಪ್ಪ ಅಭಿನಂದಿಸಿದರು.
ಜಿ.ಪಂ.ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಕೋಚಿಮುಲ್ ಅಧ್ಯಕ್ಷ ಕೆ.ಗುಡಿಯಪ್ಪ, ಮಾಜಿ ಜಿ.ಪಂ.ಅಧ್ಯಕ್ಷ ವಿ.ಸುಭ್ರಮಣಿ, ಮಾಜಿ ತಾ.ಪಂ.ಅಧ್ಯಕ್ಷ ಮೌಲಾ, ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಗಂಗನಹಳ್ಳಿ ಬಿ.ಸಿ.ವೆಂಕಟೇಶಪ್ಪ, ಮುತ್ತೂರು ಚಂದ್ರೇಗೌಡ, ನಗರಸಭಾ ಸದಸ್ಯರಾದ ಚಿಕ್ಕಮುನಿಯಪ್ಪ, ಜೆ.ಎಂ.ಬಾಲಕೃಷ್ಣ, ಎಂ.ಮುನಿಕೃಷ್ಣಪ್ಪ, ಅಶ್ವಥ್ಥರೆಡ್ಡಿ, ಮಳಮಾಚನಹಳ್ಳಿ ಗ್ರಾ.ಪಂ.ಅಧ್ಯಕ್ಷ ರಾಮಾಂಜಿನಪ್ಪ, ಗುಡಿಹಳ್ಳಿ ನಾರಾಯಣಸ್ವಾಮಿ, ಮಯೂರ, ಕಾಳನಾಯಕನಹಳ್ಳಿ ಮಂಜುನಾಥ್, ಹಾಗೂ ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರುಗಳು ಹಾಜರಿದ್ದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಾಗರೀಕರು ನಿಖರವಾದ ಮಾಹಿತಿಯನ್ನು ನೀಡಬೇಕು
ಏಪ್ರಿಲ್ 11 ರಿಂದ ನಡೆಯುವಂತಹ ಎಲ್ಲಾ ಸಮುಧಾಯಗಳ ಸಾಮಾಜಿಕ, ಶೈಕ್ಷಣಿಕ, ಮತ್ತು ಆರ್ಥಿಕ ಅಭಿವೃದ್ದಿಯ ದೃಷ್ಟಿಯಿಂದ ಕೈಗೆತ್ತಿಕೊಳ್ಳುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ನಾಗರೀಕರು ಹೆಚ್ಚಿನ ಸಹಕಾರ ನೀಡಿ ನಿಖರವಾದ ಮಾಹಿತಿಯನ್ನು ನೀಡಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಕೋರಿದರು.
ನಗರದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಆಯೋಜನೆ ಮಾಡಲಾಗಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ತರಬೇತಿ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಜಾತಿಗಳು ಮತ್ತು ಉಪಜಾತಿಗಳಿದ್ದು, ಎಲ್ಲಾ ಜಾತಿವರ್ಗದ ಜನಾಂಗಗಳ ಅಭಿವೃದ್ದಿಗೆ ಪೂರಕವಾಗಿ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಅನುಧಾನಗಳನ್ನು ಬಿಡುಗಡೆ ಮಾಡಲು ಈ ಸಮೀಕ್ಷಾಕಾರ್ಯವು ಸಹಕಾರಿಯಾಗಲಿದೆ, ರಾಜ್ಯದ ಸರ್ವಾಂಗೀಣ ಅಭಿವೃದ್ದಿಯ ದೃಷ್ಟಿಯಿಂದ ಸರಕಾರ ಸಾಮಾಜಿಕ, ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯ ಕೈಗೊಂಡಿದ್ದು ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡಿ ನಾಗರೀಕರಿಂದ ನಿಖರವಾದ ಮಾಹಿತಿಯನ್ನು ಪಡೆದು ಸರ್ಕಾರಕ್ಕೆ ಸಲ್ಲಿಸಬೇಕು, ಸರ್ಕಾರದಿಂದ ನೀಡಿರುವ ನಮೂನೆಗಳನ್ನು ಭರ್ತಿಮಾಡುವಾಗ ಜಾಗ್ರತೆಯಿಂದ ಭರ್ತಿಮಾಡಿ, ಜಾತಿ, ಮತ್ತು ಉಪಜಾತಿಗಳ ಬಗ್ಗೆ ಸ್ಪಷ್ಟವಾಗಿ ಅರ್ಥವಾಗುವಂತೆ ಜನರಿಗೆ ಮನವರಿಕೆ ಮಾಡಿಕೊಟ್ಟು ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ನಾಗರೀಕರು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಅವರಿಗೆ ತಿಳುವಳಿಕೆ ನೀಡಬೇಕು, ಪ್ರತಿಯೊಂದು ಗ್ರಾಮಗಳಲ್ಲಿರುವ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಈ ಸಮೀಕ್ಷಾ ಕಾರ್ಯದಲ್ಲಿ ಹೆಚ್ಚಿನ ಸಹಕಾರ ನೀಡಬೇಕು, ನಾಗರೀಕರು ಕೂಡಾ ಯಾವುದೇ ಮಾಹಿತಿಯನ್ನು ಗೌಪ್ಯವಾಗಿಡದೆ ನಿಖರವಾದ ಮಾಹಿತಿಯನ್ನು ಗಣತಿದಾರರಿಗೆ ನೀಡುವ ಮುಖಾಂತರ ಗ್ರಾಮೀಣ ಭಾಗಗಳ ಅಭಿವೃದ್ದಿಗೆ ಸಹಕಾರ ನೀಡಬೇಕು ಎಂದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಬಸಪ್ಪ, ಶಿಡ್ಲಘಟ್ಟ ನಗರಸಭೆಯ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್, ಶಿಕ್ಷಣ ಸಂಯೋಜಕ ಹಾಗೂ ಮಾಸ್ಟರ್ ಟ್ರøನರ್ ಮನ್ನಾರಸ್ವಾಮಿ, ಶಂಕರನಾರಾಯಣ, ಹೆಚ್.ನರಸಿಂಹಯ್ಯ, ಸಹಾಯಕ ಸಾಂಖಿಕ ಅಧಿಕಾರಿ ಅನಿಲ್ಕುಮಾರ್ ಮುಂತಾದವರು ಹಾಜರಿದ್ದರು.
ಅನ್ವೇಷಣೆಯ ನಿರಂತರತೆ . . . . . . . .
ನ್ಯೂಟನ್ ಎಂಬ ವಿಜ್ಞಾನಿ ಗುರುತ್ವಾಕರ್ಷಣೆ ಕುರಿತು ಅನ್ವೇಷಣೆಯನ್ನು ಮಾಡಿದ್ದು ಮರದ ಮೇಲಿನಿಂದ ಸೇಬುಹಣ್ಣೊಂದು ನೆಲಕ್ಕೆ ಬಿತ್ತು ಎಂಬುದರಿಂದ ಎಂಬ ಮಾತಿದೆ. ಅದು ಆ ಕ್ಷಣದ ಅರಿವಿನ ಸ್ಪೋಟದಿಂದ ಹುಟ್ಟಿದ ಅನ್ವೇಷಣೆ. ಹೀಗೇ ಹಲವೊಂದು ಅನ್ವೇಷಣೆಗಳು ಥಟ್ಟನೆ ಹೊಳೆದ ಯೋಚನೆಗಳಿಂದಾಗಿ ರೂಪುಗೊಂಡಿದ್ದು. ಅನಂತರ ಕೂಡ ಅವರು ಆ ದಿಶೆಯಲ್ಲಿ ಅನ್ವೇಷಣೆಗಳನ್ನು ಮುಂದುವರಿಸಿದ್ದರ ಪರಿಣಾಮದಿಂದಾಗಿ ನಮಗೆ ಆ ಕುರಿತಾಗಿ ಸೂತ್ರಗಳು ಸಿಗುವಂತಾದದ್ದು. ಮಾನವ ಸ್ವಭಾವತಃ ಕುತೂಹಲವನ್ನು ಹೊಂದಿದ್ದು – ತನ್ನ ಕುತೂಹಲದ ತಣಿಕೆಗಾಗಿ ಪ್ರಯತ್ನಿಸುವುದರಿಂದಲೇ ಅನೇಕ ಅನ್ವೇಷಣೆಗಳು ಸಾಧ್ಯವಾದದ್ದು. ಹೊಸ ಹೊಸ ಅನ್ವೇಷಣೆಗಳ ಕುರಿತಾದ ತುಡಿತ ಮಾನವನ ಸಹಜ ಗುಣವೇ ಆಗಿದ್ದಿರುತ್ತದೆ. ಆದರೆ ಇಂಥ ಅನ್ವೇಷಣೆಗಳಿಗೆ ಪ್ರೇರಕವಾಗುವ ಸಂಗತಿಗಳಾವುವು ಎಂದು ಯೋಚಿಸಿ – ಚಾಲ್ತಿಗೆ ತಂದ ಮಾತುಗಳೆಂದರೆ – Necessity is the mother of invention. ಅವಶ್ಯಕತೆಯೇ ಅನ್ವೇಷಣೆಗೆ ಮೂಲ. ಹಾಗೇ Curiosity is the mother of invention. ಕುತೂಹಲವೇ ಅನ್ವೇಷಣೆಯ ಮೂಲ. Interest is the mother of invention – ಆಸಕ್ತಿಯೇ ಅನ್ವೇಷಣೆಯ ಮೂಲ. ಈ ಎಲ್ಲ ಮಾತುಗಳು ನಿಜ. ಆದರೆ ಎಲ್ಲಿಯವರೆಗೆ ಎಂಬುದೇ ಯಕ್ಷ ಪ್ರಶ್ನೆ.
ಅನ್ವೇಷಣೆಯ ನಿರಂತರತೆಯನ್ನು ಕಾಯ್ದುಕೊಳ್ಳುವುದು ಅಗತ್ಯ. ಹೀಗಿದ್ದಾಗ ‘ಅವಶ್ಯಕತೆಯೇ ಅನ್ವೇಷಣೆಗೆ ಮೂಲ’ ಎಂಬ ತತ್ವ ಬಹುಶಃ ಹೆಚ್ಚು ಬಾಳಿಕೆಗೆ ಬರಲಾರದು. ಏಕೆಂದರೆ ಅವಶ್ಯಕತೆ ಪೂರೈಸಿದಾಕ್ಷಣ ಅನ್ವೇಷಣೆ ನಿಲ್ಲುವ ಸಾಧ್ಯತೆ ಇದೆ. ಅಗತ್ಯಕ್ಕನುಗುಣವಾಗಿ ಕೆಲಸವಾದರೆ ಅನಂತರ ಯಾರೂ ಆ ಕುರಿತು ಚಿಂತಿಸುತ್ತ ಹೋಗುವುದಿಲ್ಲ. ಇನ್ನೊಂದು ಅಗತ್ಯ ಎದುರಾದಾಗಲಷ್ಟೇ ಇನ್ನೊಂದರ ಅನ್ವೇಷಣೆಗೆ ತೊಡಗಬಹುದು! ಹಾಗೇ ತೃಪ್ತಿಪಡುವ ಸಂದರ್ಭವೇ ಅಧಿಕ. ನೀರು ಸೇದಲು ರಾಟೆ ಸಿಕ್ಕ ಕ್ಷಣ ಆ ಅವಶ್ಯಕತೆ ಪೂರ್ಣಗೊಂಡಂತೆ. ಅದನ್ನಷ್ಟು ಉತ್ತಮಗೊಳಿಸಲು ಚಿಂತಿಸಿದರೂ ನಡೆಯುತ್ತದೆ. ಬಿಟ್ಟರೂ ನಡೆಯುತ್ತದೆ ಎಂಬಂತ್ತಾದರೆ ಅನ್ವೇಷಣೆ ನಿರಂತರ ಪ್ರಕ್ರಿಯೆಯಾಗಿ ಉಳಿಯುವುದಿಲ್ಲ. ಒಂದು ಹಂತದ ನಿಲುಗಡೆಗೆ ಬಂದು ತಲಿಪಿದಂತಷ್ಟೇ ಆಗಿಬಿಡಬಲ್ಲದು. ಇದೇ ರೀತಿಯಲ್ಲಿ ‘ಕುತೂಹಲವೇ ಅನ್ವೇಷಣೆಯ ಮೂಲ,’ ಎಂಬುದು ಕೂಡ. ಕುತೂಹಲ ತಣಿದ ಮರುಕ್ಷಣವೇ ಅನ್ವೇಷಣೆಯ ಅಗತ್ಯ ನಿಂತುಬಿಡಬಹುದು! ಒಂದು ಕೇವಲ ತಾತ್ಕಾಲಿಕ ಅನ್ವೇಷಣೆಯೇ ವಿನಃ ನಿರಂತರವಾದ ಪ್ರಕ್ರಿಯೆಯಲ್ಲ. ಹಾಗೇ ‘ಆಸಕ್ತಿಯೇ ಅನ್ವೇಷಣೆಯ ಮೂಲ’ಎಂಬ ಉಕ್ತಿ ಕೂಡ ಕಾಲವನ್ನಾಧರಿಸಿದ್ದು. ಆಸಕ್ತಿ ಕಡಿಮೆಯಾದಂತೆ ಅನ್ವೇಷಣೆಯ ಕುರಿತಾದ ತೀವ್ರತೆಯೂ ಕಡಿಮೆಯಾಗುತ್ತ ಸಾಗಲು ಸಾಧ್ಯ. ಹೀಗಿದ್ದಾಗ ಮೇಲೆ ಉಲ್ಲೇಖಿಸಿದ ಮೂರೂ ವ್ಯಾಖ್ಯೆಗಳಿಗೆ ಒಂದು ಮಿತಿ ದತ್ತವಾಗುತ್ತದೆ. ಅಂದರೆ ಈ ಎಲ್ಲ ಸಂದರ್ಭಗಳಲ್ಲೂ ಅನ್ವೇಷಣೆ ಎಂಬುದು ಆಯಾ ಕಾಲಕ್ಕೆ – ಆ ಕಾಲದ ಆಸಕ್ತಿಗೆ ಅನುಗುಣವಾಗಿ ಮಾತ್ರ ನಡೆಯುತ್ತದೆ. ಅಂದರೆ ಅನ್ವೇಷಣೆಯು ಮುಂದುವರೆಯುವುದಕ್ಕೆ ಸಾಧ್ಯವಾಗದೇ ಹೋಗುವ ಸಂದರ್ಭಗಳೇ ಅಧಿಕ. ಒಂದಾದ ಅನಂತರ ಇನ್ನೊಂದರ ಅನ್ವೇಷಣೆ ಅಥವಾ ಒಂದು ಅನ್ವೇಷಣೆಯ ಅನಂತರ ಅದೇ ಜಾಡಿನಲ್ಲಿ ಇನ್ನಷ್ಟು ಅನ್ವೇಷಣೆಗಳನ್ನು ಕೈಗೊಳ್ಳಬೇಕೆಂದಾದರೆ ಅದಕ್ಕೆ ಬದ್ಧವಾಗುವ ಮನಸ್ಥಿತಿಯೊಂದು ಪ್ರಾಪ್ತವಾಗಬೇಕು. ನಿರಂತರ ಹುಡುಕಾಟದ ಚಲನಶೀಲತೆ ಸದಾ ಜಾಗೃತವಾಗಿರಬೇಕು ಎಂತಾದರೆ ಅನ್ವೇಷಣೆಯ ಕುರಿತಾಗಿ ಅನ್ವೇಷಕನಿಗೆ ಒಂದು ತಲುಬಿರಬೇಕು – ಅದೊಂದು ದಿವ್ಯ ಉನ್ಮಾದವಾಗಬೇಕು ಅಥವಾ ಅನ್ವೇಷಣೆಯೇ ಒಂದು ಹುಚ್ಚು ಯಾ ಗೀಳಾಗಿರುವುದು ಅಗತ್ಯ. ಹಾಗಾಗಿ ಅನ್ವೇಷಣೆಯ ನಿರಂತರತೆಗೆ ಅಗತ್ಯವಾದದ್ದು ಆ ಕುರಿತು ಅನ್ವೇಷಕನಲ್ಲಿ ಸ್ಥಾಯಿಯಾಗಿರುವ – ಸದಾ ಜಾಗೃತವಾಗಿರುವ ತಲುಬಿನ ಸ್ಥಿತಿ. ಹಾಗಿಲ್ಲದೇ ಇದ್ದಲ್ಲಿ ಅನ್ವೇಷಣೆಯೂ ಕೇವಲ ಯಾಂತ್ರಿಕ ಕ್ರಿಯೆಯಾಗುವ ಸಾಧ್ಯತೆಯಿದೆ. ಅಲ್ಲಿ ಸೃಜನಶೀಲತೆಯ ದಿವ್ಯ ಅನುಪಸ್ಥತಿ ಏರ್ಪಡಬಹುದು. ದಿವ್ಯ ಧ್ಯಾನಸ್ಥ ಸ್ಥಿತಿಯೊಳಗೆ ಕ್ರಿಯಾಶೀಲತೆ ಏರ್ಪಡುತ್ತಿರಬೇಕು.
ವೈಜ್ಞಾನಿಕ ಆವಿಷ್ಕಾರಗಳಷ್ಟೇ ಅಲ್ಲದೇ ಕಲೆ ಮತ್ತು ಸಾಹಿತ್ಯದ ಸಂದರ್ಭಗಳಲ್ಲೂ ಅನ್ವೇಷಣೆಯ ನಿರಂತರತೆ ಅಗತ್ಯ. ಒಬ್ಬ ಕಲಾವಿದ ಒಂದೇ ನಾಟಕದ ಒಂದೇ ಪಾತ್ರವನ್ನು ಹಲವು ಬಾರಿ ಅಭಿನಯಿಸಿದಾಗಲೂ ಅದು ಪ್ರತಿ ಬಾರಿಗೂ ಬೇರೆ ಅಥವಾ ಭಿನ್ನವಾಗಿರಲು ಸಾಧ್ಯವಾಗುವುದು ಅವನ ತಲುಬಿಗನುಗುಣವಾಗಿಯೇ. ಕೆಲವೊಮ್ಮೆ ಅಂದಿನ ಅಮಲಿಗೆ ಅನುಗುಣವಾಗಿಯೂ ಇರಲು ಸಾಧ್ಯ. ಅಮಲು ಕೇವಲ ಮದ್ಯ ಮತ್ತಿತರ ಮತ್ತೇರುವುದರಿಂದ ಮಾತ್ರ ಉತ್ಪನ್ನವಾಗುವುದು ಎಂದಷ್ಟೇ ಭಾವಿಸಬೇಕಾಗಿಲ್ಲ. ಪಾತ್ರವೊಂದರಲ್ಲಿ ತನ್ನಷ್ಟಕ್ಕೆ ತಾನೇ ಮೈಮರೆಯುವುದೂ ಒಂದು ತಲುಬು. ನಮ್ಮ ಯಕ್ಷಗಾನದ ಕಲಾವಿದರಲ್ಲಿ ಕೆಲವರಿಗೆ ಅದೇ ಒಂದು ತಲುಬು. ಚಂಡೆ – ಮದ್ದಳೆಯ ಸದ್ದೇ ಅವರಲ್ಲಿ ಹೆಜ್ಜೆ ಹಾಕುವ ಉಮೇದನ್ನು ಹುಟ್ಟಿಸುತ್ತಿರುತ್ತದೆ. ಒಂದು ಪಾಲ್ಗೊಳ್ಳುವಿಕೆಯೇ ತಲುಬಾಗಿ – ಅದೊಂದು ದಿವ್ಯ ವ್ಯಸನವಾಗಲಿಕ್ಕೂ ಸಾಕು. ಕೇವಲ ಕಲಿತ ಲೆಕ್ಕಾಚಾರದೊಳಗೇ ಉಳಿದರೆ ಉತ್ತಮ ಕಲಾವಿದ ಆಗಬಹುದು ಆದರೆ ಶ್ರೇಷ್ಠ ದರ್ಜೆಯವನು ಎನ್ನಿಸಿಕೊಳ್ಳಲು ಆ ಕಲಿತ ಲೆಕ್ಕಾಚಾರವನ್ನೂ ಮಿಕ್ಕಿ ಮೀರುವ ಪ್ರಯತ್ನದಲ್ಲಿ ಸಫಲತೆ ಸಾಧ್ಯವಾಗಬೇಕಾದದ್ದು ಅಗತ್ಯ. ಇಂಥ ತಲುಬಿನಿಂದ ಹಲವು ಬಾರಿ ಮನೆಮಂದಿಗೆ ಮತ್ತು ಸುತ್ತಮುತ್ತಲಿನವರಿಗೆ ಕಿರಿ ಕಿರಿ ಹುಟ್ಟಬಹುದು. ಅವರೆಲ್ಲಾ ದೂಷಿಸಲೂಬಹುದು. ದಿನನಿತ್ಯದ ಮಾಮೂಲಿ ಬದುಕಿಗಿಂತ ಭಿನ್ನವಾದ ಕ್ಷಣದಲ್ಲಿ – ಅವನನ್ನೇ ಒಂದು ವಿಚಿತ್ರ ಪ್ರಾಣಿಯನ್ನಾಗಿಯೋ, ನಿಷ್ಪ್ರಯೋಜಕ ಘಟಕವೆಂತಲೋ, ಕಾಣುವಂತಾಗಲೂ ಸಾಧ್ಯವಿದೆ. ಬೇರೆ ಸಾಮಾನ್ಯರಿಗಿಂತ – ಅವರ ಸಾಮಾನ್ಯ ನಡಾವಳಿಕೆಗಳಿಗಿಂತ ಭಿನ್ನವಾದಲ್ಲಿ ಇಂಥದ್ದು ಸಹಜ. ಆದರೆ ಬೇರೆಯವರಿಗಿಂತ ಭಿನ್ನವಾಗದಿದ್ದಲ್ಲಿ – ಭಿನ್ನವಾದ ಬೇರೊಂದು ಬಗೆಯ ಅನ್ವೇಷಣೆ ಅಸಾಧ್ಯ. ಹೀಗೆ ಬೇರೊಂದು ಬಗೆಯ ಅನ್ವೇಷಣೆ ಎಷ್ಟರ ಮಟ್ಟಿಗೆ ಈ ಸಮಾಜಕ್ಕೆ ಒಳಿತನ್ನು ನೀಡುತ್ತದೆ ಎಂಬುದು ಬೇರೆಯದೇ ಆದ ಪ್ರಶ್ನೆ. ಕಲೆ ಮತ್ತು ಸಾಹಿತ್ಯದ ಸಂದರ್ಭದಲ್ಲಿ ಯೋಚಿಸಿದಾಗ – ಸಾಮಾಜಿಕ ಒಳಿತು ಎನ್ನುವುದು ಅಪ್ರಸ್ತುತವೂ ಆಗಿಬಿಡಬಹುದು. ಅಂತರಂಗದ ಅನಾವರಣ ಪ್ರಕ್ರಿಯೆಯಲ್ಲಿ ಪ್ರಾದುರ್ಭವಿಸುವ ಸಾಹಿತ್ಯ ಅಥವಾ ಕಲೆಗೆ ಸಮಾಜಕ್ಕೆ ಅನ್ನವನ್ನು ನೀಡುವ ಸಾಮಥ್ರ್ಯವಿದೆ ಎಂದು ಭಾವಿಸಲಾಗದು. ಹಾಗಂತ ಅದು ವ್ಯರ್ಥವೆನ್ನಲೂ ಸಾಧ್ಯವಿಲ್ಲ. ಯಾಕೆಂದರೆ ಕೇವಲ ಅನ್ನವನ್ನು ತಿನ್ನುವುದಷ್ಟೇ ಬದುಕಲ್ಲ. ಅಂಥ ಮಿತಿಯೊಳಗಿನ ಬದುಕು ಬಹುಶಃ ನಿಜವಾದ ಬದುಕೂ ಕೂಡ ಅಲ್ಲ.
ಇದೇ ಲೇಖಕನ ಇತ್ತೀಚಿನ ಕವಿತೆ ‘ಕವಳದಂತೆ ಕವಿತೆ’ ಯಲ್ಲಿ ಹೇಳಿದ ಹಾಗೆ ‘ನಿಜವಾದ ತಲುಬುಳ್ಳವ ಮಾತ್ರ ಅಸಲಿ ಕಸುಬಿ’. ಇಲ್ಲಿ ‘ಅಸಲಿ’ ಎಂಬುದು ‘ನಕಲಿ’ ಎಂಬುದರ ವಿರುದ್ಧಾರ್ಥಕ ಪದವಲ್ಲ. ಅಸಲಿ ಎಂದರೆ ‘ಅಪ್ಪಟ’ ಎಂಬುದರೊಟ್ಟಿಗೆ ಕೇವಲ ಕಲಿತದ್ದನ್ನು ಹಾಗೇ ಒಪ್ಪಿಸುವ ಗಿಳಿಪಾಠವಲ್ಲ. ಅನುಕರಣೆಯಲ್ಲ ಎಂಬ ಅರ್ಥದಲ್ಲಿ ಗ್ರಹಿಸುವುದು ಸಾಧ್ಯವಾಗಬೇಕು. ತಲುಬೆನ್ನುವುದು ಕೇವಲ ನಿಶೆಯಲ್ಲ. ನಿಶೆಯಲ್ಲಿ ನಿಷ್ಕ್ರಿಯಗೊಳ್ಳುವುದಲ್ಲ. ಬದಲಿಗೆ ಕ್ರಿಯಾಶೀಲ ಧ್ಯಾನಸ್ಥ ಸ್ಥಿತಿ. ಅನ್ವೇಷಣೆಯ ಮೂಲ ಬಿಂದು. ಅಂಥ ತಲುಬು ಸದಾ ಇದ್ದಾಗ ಸದಾ ಹೊಸತು -ಹೊಸತರ ಹೊಸ ಹೊಸ ಹೊಳಹುಗಳು ಜನ್ಮ ತಾಳಲು ಸಾಧ್ಯ ಮತ್ತು ಅಂಥ ಹೊಳಹುಗಳ ಮೂಲಕವಾಗಿ ಅನ್ವೇಷಣೆಯ ಅನಂತ ಮಾರ್ಗಗಳು ಗೋಚರಿಸುತ್ತಾ ಹೋಗಲು ಸಾಧ್ಯವೆಂದು ಘೋಷಿಸಿದರೆ ಅದು ವ್ಯಾಖ್ಯೆಯಾದೀತೆ ವಿನಃ ಅಪವಾದವಾಗಲಾರದು. ಯಾವುದೇ ವ್ಯಾಖ್ಯೆಗಾದರೂ ಅಪವಾದವಿರುವುದು ಸಹಜ. ಹಾಗಂತ ಅಪವಾದಗಳನ್ನೇ ವ್ಯಾಖ್ಯೆಗಳೆಂದು ಕರೆಯಲಾಗುವುದಿಲ್ಲ.
ಅನ್ವೇಷಣೆಯೊಂದರ ಮೂಲ ಬೇರೆ. ಅನ್ವೇಷಣೆಯೊಂದರ ನಿರಂತರತೆ ಬೇರೆ. ಯಾವುದೇ ಅನ್ವೇಷಣೆ ಒಂದು ಘಟ್ಟವನ್ನು ತಲುಪಿದಾಕ್ಷಣ ಸ್ತಬ್ಧವಾದರೆ – ಅದು ಒಂದು ಉದ್ದೇಶಕ್ಕೆ ಮಾತ್ರ ಮಿತಿಗೊಂಡಂತೆ ಅಥವಾ ಒಂದು ಕುತೂಹಲದ ತಣಿಕೆಗೆ ಮಾತ್ರ ಸೀಮಿತಗೊಂಡಂತೆ. ಹಾಗೇ ಒಂದು ಮಿತಿಗೆ ಮಾತ್ರ ಸೀಮಿತವಾಗದೇ ಸದಾ ಮುಂದುವರೆಯುತ್ತಲೇ ಸಾಗುತ್ತಿರಬೇಕೆಂಬ ಆಶಯವನ್ನು ಹೆಣೆದಿದ್ದರೆ ಅದಕ್ಕೆ ಖಂಡಿತವಾಗಿಯೂ ತಲುಬು ಇರಲೇಬೇಕು. ಅದೇ ಹಗಲು – ರಾತ್ರಿ ಕಾಡುತ್ತ ಕಾಡುತ್ತ ಅತೃಪ್ತಿಯಿಂದ ತೃಪ್ತಿ ಪಡೆಯಬೇಕೆಂಬ ಹಪ ಹಪಿಕೆ ಜೀವಂತವಾಗಿರುವಷ್ಟು ಕಾಲವೂ ಅದರ ನಿರಂತರತೆ ಸಾಧ್ಯವಾಗುತ್ತದೆ. ಇದೇ ದೃಷ್ಟಿಯಿಂದಲೇ ಇರಬೇಕು ಡಾ. ಶಾಂತಿನಾಥ ದೇಸಾಯಿಯವರು ಹೇಳಿದ್ದು ‘ತೃಪ್ತಿಯೆಂದರೆ ಸಾವು. ಅತೃಪ್ತಿಯೆಂದರೆ ಬದುಕು.’ ಒಳಗುದಿಯೊಂದು ಸದಾ ಜಾಗೃತವಾಗಿದ್ದರೆ ಅಥವಾ ಅದನ್ನಷ್ಟು ಜಾಗೃತವಾಗಿಟ್ಟುಕೊಳ್ಳಬೇಕೆಂದು – ಹಿಡಿದದ್ದನ್ನಷ್ಟು ಮುಗಿಸುವುದಷ್ಟೇ ಅಲ್ಲದೇ ಮುಂದೇನು? ಮುಂದೇನು? ಎಂದು ಪ್ರಶ್ನಿಸಿಕೊಳ್ಳುತ್ತಲೇ – ಉತ್ತರಗಳನ್ನು ಕಂಡುಕೊಳ್ಳುತ್ತಲೇ ಮತ್ತೆ ಮುಂದುವರಿಯುವ ಮನುಷ್ಯನ ತಲುಬು – ಭವಿಷ್ಯದಲ್ಲಿ ಮತ್ತಷ್ಟು – ಮಗದಷ್ಟು ಆವಿಷ್ಕಾರಗÀಳಿಗೆ ಇಂಬುಕೊಡುವ ಕ್ರಿಯಾಶಕ್ತಿಯಾಗಬಹುದು. ಎಚ್ಚರಿಕೆಯಿಂದ ಗಮನಿಸಬೇಕಾದ ಅಂಶವೆಂದರೆ ‘ತಲುಬು’ ಬೇರೆ ‘ತೆವಲು’ ಬೇರೆ. ಒಂದು ಧನಾತ್ಮಕವಾದರೆ ಇನ್ನೊಂದು ಋಣಾತ್ಮಕ.
ರವೀಂದ್ರ ಭಟ್ ಕುಳಿಬೀಡು

