Home Blog Page 539

ಪ್ರತಿಭಾ ಕಾರಂಜಿಯ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಶಿಡ್ಲಘಟ್ಟದ ವಾಸವಿ ವಿದ್ಯಾಸಂಸ್ಥೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಎಸ್.ಎನ್.ರಚನಾ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ವತಿಯಿಂದ ಬೃಹತ್ ಪಾದಯಾತ್ರೆ

0

ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಮುಖದ ನಾಣ್ಯ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕಿನ ಮೇಲೂರು ಶಾಖೆಯ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ವತಿಯಿಂದ ಶನಿವಾರ ಮೇಲೂರಿನಿಂದ ಶಿಡ್ಲಘಟ್ಟದವರೆಗೂ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.
ವೀರಗಾಸೆ ಮತ್ತು ಡೋಲಿನ ವಾದನಗಳ ಸಮೇತವಾಗಿ ಪಾದಯಾತ್ರೆಯನ್ನು ಮೇಲೂರಿನಿಂದ ನಡೆಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲೂ ಸಂಚರಿಸಿ ಘೋಷಣೆಗಳನ್ನು ಕೂಗುತ್ತಾ ತಾಲ್ಲೂಕು ಕಚೇರಿಯ ಮುಂದೆ ಜನಶಕ್ತಿ ವೇದಿಕೆ ಸದಸ್ಯರು ಸೇರಿದರು.
ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ನಾಡಿಗೆ ನೀಡಿದ ಕೊಡುಗೆ ಅಪಾರವಾದದ್ದು. ಅಂಥ ಮೇರು ವ್ಯಕ್ತಿತ್ವವನ್ನು ನಾಣ್ಯದ ಒಂದು ಮುಖವಾಗಿ ಚಿತ್ರಿಸಿ ಅವರನ್ನು ಗೌರವಿಸಬೇಕು. ಮೊಟ್ಟಮೊದಲ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಅವರನ್ನು ಗೌರವಿಸಬೇಕು ಎಂದು ಒತ್ತಾಯಿಸಿ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಾಡಿಗೆ ಕೊಡುಗೆಯನ್ನು ನೀಡಿರುವ ಮಹಾನ್ ವ್ಯಕ್ತಿಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ. ಈ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವುದಾಗಿ ಹೇಳಿದರು.
ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಅಧ್ಯಕ್ಷ ಎಂ.ಆರ್.ಪ್ರಭಾಕರ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಸಂಚಾಲಕ ಎಂ.ಸಿ.ಚೇತನ್, ಜಂಟಿ ಕಾರ್ಯದರ್ಶಿ ಆರ್.ಬಿ.ಪ್ರತಾಪ್, ಅನಿಲ್ಕುಮಾರ್, ರಾಘವೇಂದ್ರ, ಗಿರೀಶ್ನಾಯಕ್, ಧರ್ಮೇಂದ್ರ, ಕಿರಣ್, ಮಂಜುನಾಥ್, ಭಾರ್ಗವ್, ಆಟೋ ಮಂಜುನಾಥ್, ಚಂದ್ರು ಮತ್ತಿತರರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಎಚ್.ಕ್ರಾಸ್ ನ ಸೀತಾರಾಮಾಂಜಿನೇಯಸ್ವಾಮಿ ಬ್ರಹ್ಮರಥೋತ್ಸವ

0

ತಾಲ್ಲೂಕಿನ ಎಚ್.ಕ್ರಾಸ್ ನಲ್ಲಿರುವ ಸೀತಾರಾಮಾಂಜಿನೇಯಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶನಿವಾರ ಸಂಸದ ಕೆ.ಹೆಚ್.ಮುನಿಯಪ್ಪ ಚಾಲನೆ ನೀಡಿದರು.
ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾಣ ಪ್ರಸಿಧ್ದ ಸೀತಾರಾಮಾಂಜಿನೇಯ ದೇವಾಲಯದಲ್ಲಿ ಪ್ರತಿವರ್ಷದಂತೆ ಬ್ರಹ್ಮರಥೋತ್ಸವ ಕಾರ್ಯಕ್ರಮವನ್ನು ಭಾರಿ ವಿಜೃಂಭಣೆಯಿಂದ ನೆರವೇರಿಸಲಾಯಿತು, ಬೆಳಗಿನಿಂದಲೇ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.
ರಥೋತ್ಸವ ಅಂಗವಾಗಿ ದೇವರಿಗೆ ಧ್ವಜಾರೋಹಣ, ಅಲಂಕಾರ ಸೇವೆ, ಪ್ರಾಕಾರೋತ್ಸವ, ವಾಸುದೇವ ಪುಣ್ಯಾಹ ಅಂಕುರಾರ್ಪಣೆ, ರಕ್ಷಾಬಂಧನ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸವ, ವಿದ್ಯುತ್ ದೀಪಾಲಂಕಾರ, ಶಯನೋತ್ಸವ, ದೇವರ ಪೂಜೆ, ಚಂದ್ರಪ್ರಭಾ, ಗರುಡೋತ್ಸವ, ಸೇರಿದಂತೆ ಹಲವು ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.
ಸಂಸದ ಕೆ.ಎಚ್.ಮುನಿಯಪ್ಪ, ಶಾಸಕ ಎಂ.ರಾಜಣ್ಣ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಸಹಕಾರಿ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಮುಖಂಡರಾದ ಅಯ್ಯಪ್ಪ, ಹಾಗೂ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳು ಹಾಜರಿದ್ದರು.

ಶಿಡ್ಲಘಟ್ಟದ ಸಾಧಕರಿಗೆ ಹುಟ್ಟೂರಲ್ಲಿ ಸನ್ಮಾನ

0

ಸಾಧಕರು ಎಲ್ಲೇ ಇದ್ದು ಸಾಧನೆ ಮಾಡಿದರೂ ಅವರ ಹುಟ್ಟೂರು ಸಂಭ್ರಮಿಸುತ್ತದೆ. ಹುಟ್ಟೂರಿನೊಂದಿಗೆ ತಳುಕು ಹಾಕಿಕೊಂಡ ಅವರ ಹೆಸರಿನಿಂದ ‘ನಮ್ಮ ಊರಿನವರು ಈ ಸಾಧನೆ ಮಾಡಿದ್ದಾರೆ’ ಎಂದು ಊರಿನವರು ಹೆಮ್ಮೆ ಪಡುತ್ತಾರೆ. ಈ ರೀತಿ ಊರಿನ ನಂಟನ್ನು ಹೆಸರಲ್ಲಿ ಇಟ್ಟುಕೊಂಡು ದೂರದೂರುಗಳಲ್ಲಿದ್ದುಕೊಂಡೇ ಸಾಧನೆ ಮಾಡಿರುವವರನ್ನು ಹುಟ್ಟೂರಿಗೆ ಕರೆಸಿ ಗೌರವಿಸುವ ಕೆಲಸ ಅಲ್ಲಲ್ಲಿ ನಡೆಯುತ್ತದೆ.
ಶಿಡ್ಲಘಟ್ಟದಲ್ಲಿಯೂ ಈ ರೀತಿಯ ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹುಟ್ಟಿದ ಊರಿನ ಘನತೆ ಗೌರವವನ್ನು ಹೆಚ್ಚಿಸಿರುವವರನ್ನು ಕರೆಸಿ ಇಂದು ಗೌರವಿಸಲಾಗುತ್ತಿದೆ. ಈ ಸಾಧಕರನ್ನು ಗೌರವಿಸುತ್ತಿರುವವರು ಶಿಡ್ಲಘಟ್ಟದಲ್ಲಿ ಹುಟ್ಟಿದ್ದ ಮತ್ತೊಬ್ಬ ಸಾಧಕ ಇನ್ಫೋಸಿಸ್ ಪ್ರವರ್ತಕ ಡಾ.ಎನ್.ಆರ್.ನಾರಾಯಣಮೂರ್ತಿ ಎಂಬುದು ಮತ್ತೊಂದು ವಿಶೇಷ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಕೃಷ್ಣಮೂರ್ತಿ ವೆಂಕಟರಾಮ್, ಬಿ.ವಿ.ಪಾಂಡುರಂಗರಾವ್, ಎನ್.ಆರ್.ಸಮರ್ಥರಾಮ್, ಕ್ರಮಧಾತಿ ಶ್ರೀಧರ್, ಕ್ಯಾಪ್ಟನ್ ಸುನಿಲ್ ಕುಮಾರ್ ಅವರನ್ನು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಗೌರವಿಸುತ್ತಿದ್ದಾರೆ.
ಡಾ.ಕೃಷ್ಣಮೂರ್ತಿ ವೆಂಕಟರಾಮ್:

ಡಾ.ಕೃಷ್ಣಮೂರ್ತಿ ವೆಂಕಟರಾಮ್
ಡಾ.ಕೃಷ್ಣಮೂರ್ತಿ ವೆಂಕಟರಾಮ್

ಶಿಡ್ಲಘಟ್ಟದ ಬ್ಯಾಂಕ್ ಕೃಷ್ಣಮೂರ್ತಿ ಹಾಗೂ ಮೀನಾಕ್ಷಮ್ಮರವರ ಮಗ 80 ವರ್ಷ ವಯಸ್ಸಿನ ಡಾ.ಕೃಷ್ಣಮೂರ್ತಿ ವೆಂಕಟರಾಮ್ ಎಸ್. ಎಸ್. ಎಲ್. ಸಿ ವರೆಗೂ ಓದಿದ್ದು ಶಿಡ್ಲಘಟ್ಟದಲ್ಲಿಯೇ. ಕೆನಡಾ ದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪರಿಣಿತಿ ಎಂಬ ಪ್ರಬಂಧಕ್ಕೆ – ಡಾಲ್ಹೌಸಿ ವಿಶ್ವವಿದ್ಯಾಲಯದಿಂದ ಪಿ. ಹೆಚ್. ಡಿ. ಪದವಿ ಪಡೆದಿದ್ದಾರೆ. ಇಥಿಯೋಪಿಯ ಹಾಗೂ ಬ್ರಿಟಿಷ್ ದೇಶಗಳ ಸಂಬಂಧ ಹಾಗೂ ವಿದೇಶಾಂಗ ನೀತಿಗಳ ಸಂಶೋಧನೆ ನಡೆಸಲು ಇಥಿಯೋಪಿಯಾ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಇಟಲಿ ದೇಶಗಳ ವಿದೇಶಾಂಗ ಕಚೇರಿಗಳಲ್ಲಿ ಅಧ್ಯಯನ ಮಾಡಿದ್ದಲ್ಲದೆ, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಸುಮಾರು ೩೦ ವರ್ಷಗಳ ಕಾಲ ಇಥಿಯೋಪಿಯ, ಉಗಾಂಡ ಹಾಗೂ ಕೆನಡಾ ದೇಶಗಳ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡಿದ್ದಾರೆ. ಇಥಿಯೋಪಿಯ ಹಾಗೂ ಬ್ರಿಟಿಷ್ ದೇಶಗಳ ಸಂಬಂಧ ಕುರಿತು, ಜಗದ್ಗುರು ಚಂದ್ರಶೇಖರ ಸ್ವಾಮೀಜಿ ಬಗ್ಗೆ ಮತ್ತು ಪರಿವರ್ತನೆ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.
ಬಿ.ವಿ.ಪಾಂಡುರಂಗರಾವ್:
ಬಿ.ವಿ.ಪಾಂಡುರಂಗರಾವ್
ಬಿ.ವಿ.ಪಾಂಡುರಂಗರಾವ್

ಶಿಡ್ಲಘಟ್ಟದ ಹಳೆಯ ಆಸ್ಪತ್ರೆ ಕ್ವಾಟರ್ಸ್ನಲ್ಲಿ ಬಾಲ್ಯವನ್ನು ಕಳೆದಿದ್ದ 70 ವರ್ಷ ವಯಸ್ಸಿನ ಬಿ.ವಿ.ಪಾಂಡುರಂಗರಾವ್, ಶಿಡ್ಲಘಟ್ಟದಲ್ಲಿ ವೈದ್ಯರಾಗಿದ್ದ ಡಾ.ಬಿ.ವೆಂಕಟರಾವ್ ಮತ್ತು ಇಂದಿರಾಬಾಯಿ ಅವರ ಮಗ. ಇವರು ಫ್ಲಿಪ್ ಬುಕ್ ಅನಿಮೇಷನ್ನಲ್ಲಿ 6 ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ 6 ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ಮಾಡಿದ್ದಾರೆ. ವಿಶ್ವದ ವಿವಿಧ ದೇಶಗಳು ನಡೆಸಿರುವ ವ್ಯಂಗ್ಯ ಚಿತ್ರ ಸ್ಪರ್ಧೆ ಮತ್ತು ಪ್ರದರ್ಶನಗಳಲ್ಲಿ ಇವರ ಚಿತ್ರಗಳು 53 ಬಾರಿ ಪ್ರಶಸ್ತಿಗೆ ಭಾಜನವಾಗಿವೆ. ದೇಶದ ಹಲವೆಡೆ ಏಕ ವ್ಯಕ್ತಿ ವ್ಯಂಗ್ಯ ಚಿತ್ರ ಪ್ರದರ್ಶನಗಳು ನಡೆದಿವೆ. 2011 ರಲ್ಲಿ ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಅವರಿಂದ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘದ ಅಧ್ಯಕ್ಷರಾಗಿ, ರಾಜ್ಯ ಕ್ರಿಕೆಟ್ ಅಂಪೈರ್ ಆಗಿ ಮಧ್ಯಪ್ರದೇಶ ವಿಭಾಗ ಮತ್ತು ಅಖಿಲ ಭಾರತ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಎನ್.ಆರ್.ಸಮರ್ಥರಾಮ್:
ಎನ್.ಆರ್.ಸಮರ್ಥರಾಮ್
ಎನ್.ಆರ್.ಸಮರ್ಥರಾಮ್

ಶಿಡ್ಲಘಟ್ಟ ತಾಲ್ಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ರಾಮಣ್ಣ ಮತ್ತು ಸೀತಮ್ಮ ದಂಪತಿಗಳ ಮಗ 50 ವರ್ಷ ವಯಸ್ಸಿನ ಎನ್.ಆರ್.ಸಮರ್ಥರಾಮ್ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಭಾರತ ಸರ್ಕಾರದಲ್ಲಿ ಹಿರಿಯ ವಿಜ್ಞಾನಿಯಾಗಿ ರಾಜ್ಯ ಸರ್ಕಾರದ ಜನಸ್ನೇಹಿ ಯೋಜನೆಗಳಾದ ಭೂಮಿ, ನೆಮ್ಮದಿ, ಇ–ಸ್ವತ್ತು ಹಾಗೂ ಇ–ವಿನ್ಯಾಸಗಳನ್ನು ರೂಪಿಸಿ 2011 ರಲ್ಲಿ ಕೇಂದ್ರ ಸರ್ಕಾರದ ‘ಗೋಲ್ಡ್ ಐಕಾನ್’ ಪ್ರಶಸ್ತಿ ಪುರಸ್ಕೃತರು.
ಕ್ರಮಧಾತಿ ಶ್ರೀಧರ್:
ಕ್ರಮಧಾತಿ ಶ್ರೀಧರ್
ಕ್ರಮಧಾತಿ ಶ್ರೀಧರ್

ಶಿಡ್ಲಘಟ್ಟ ತಾಲ್ಲೂಕಿನ ದಡಂಘಟ್ಟ ಗ್ರಾಮದ ಕೃಷ್ಣಮೂರ್ತಿ ಮತ್ತು ಲೀಲಾವತಮ್ಮ ಅವರ ಮಗ 41 ವರ್ಷ ವಯಸ್ಸಿನ ಕ್ರಮಧಾತಿ ಶ್ರೀಧರ್ ಕಳಿಂಗ ವಿಶ್ವವಿದ್ಯಾನಿಲಯದಲ್ಲಿ ಆಡಳಿತ ವ್ಯವಹಾರಗಳ ಮೇಲೆ ಎಂ.ಬಿ.ಎ ಪದವಿ ಪಡೆದಿದ್ದಾರೆ. ಹಾಕಿನ್ ಕುಕ್ಕರ್ಸ್ ಲಿಮಿಟೆಡ್, ಗ್ರಿಂದ್ಲೇ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಕಾರ್ಯನಿರ್ವಹಿಸಿ ಈಗ ಇಂಡಿಯಾ ಇನ್ಫೋಲೈನ್ ಲಿಮಿಟೆಡ್ ನಲ್ಲಿ ದಕ್ಷಿಣ ವಲಯ ಹಿರಿಯ ಉಪಾಧ್ಯಕ್ಷರಾಗಿದ್ದಾರೆ.
ಕ್ಯಾಪ್ಟನ್ ಸುನಿಲ್ ಕುಮಾರ್:
ಕ್ಯಾಪ್ಟನ್ ಸುನಿಲ್ ಕುಮಾರ್
ಕ್ಯಾಪ್ಟನ್ ಸುನಿಲ್ ಕುಮಾರ್

ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ವೆಂಕಟೇಶಮೂರ್ತಿ ಮತ್ತು ವಿಜಯಲಕ್ಷ್ಮಿ ಅವರ ಮಗ 28 ವರ್ಷದ ಕ್ಯಾಪ್ಟನ್ ಸುನಿಲ್ ಕುಮಾರ್, ಓದಿದ್ದು ಮಳ್ಳೂರಿನ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ. ಭಾರತೀಯ ಸೇನೆಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಪಂಚದ ಅತ್ಯಂತ ದುರ್ಗಮ ಕದನ ಪ್ರದೇಶ ಸಿಯಾಚಿನ್ನಲ್ಲಿ ಕಾರ್ಯನಿರ್ವಹಿಸಿರುವ ಇವರು ಕಾಶ್ಮೀರದಲ್ಲಿ ಭಯೋತ್ಪಾದಕರ ನಿಗ್ರಹ ದಳದಲ್ಲೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರ ಕಾರ್ಯಕ್ಷೇತ್ರ ಜಾರ್ಖಂಡ್ನ ರಾಂಚಿಯಾಗಿದ್ದು, ಸಂಗೀತ, ಈಜು, ಟೇಬಲ್ ಟೆನ್ನಿಸ್ ಮುಂತಾದ ಹವ್ಯಾಸಗಳನ್ನು ಹೊಂದಿದ್ದಾರೆ.
–ಡಿ.ಜಿ.ಮಲ್ಲಿಕಾರ್ಜುನ.

ಎಂ.ಶಶಿಧರ್ ಗೆ ರಾಜೀವ್ ಗಾಂಧಿ ಗೋಲ್ಡ್ ಸ್ಟಾರ್ ಪುರಸ್ಕಾರ

0

ಶ್ರೀ ವೆಂಕಟೇಶ್ವರ ಎಂಜಿನಿಯರಿಂಗ್ ಕಾಲೇಜಿನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಎಂ.ಶಶಿಧರ್ ಅವರ ಶಿಕ್ಷಣ ಕ್ಷೇತ್ರದ ಕೊಡುಗೆಯನ್ನು ಗುರುತಿಸಿ ಇಂಡಿಯನ್ ಸಾಲಿಡಿಟರಿ ಕೌನ್ಸಿಲ್ ಈಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಗೋಲ್ಡ್ ಸ್ಟಾರ್ ಪುರಸ್ಕಾರವನ್ನು ಪ್ರಧಾನ ಮಾಡಿದ್ದಾರೆ. ಅಸ್ಸಾಂ ಮತ್ತು ತಮಿಳುನಾಡು ಮಾಜಿ ರಾಜ್ಯಪಾಲರಾದ ಡಾ.ಬಿಷಮ್ ನಾರಾಯಣ ಸಿಂಗ್, ಮಾಜಿ ಮುಖ್ಯ ಚುನಾವಣಾ ಆಯುಕ್ತರಾದ ಡಾ.ಜಿ.ವಿ.ಜಿ.ಕೃಷ್ಣಮೂರ್ತಿ, ಪಂಜಾಬ್ ಮಾಜಿ ರಾಜ್ಯಪಾಲರಾದ ಜಸ್ಟಿಸ್ ಓ.ಪಿ.ವರ್ಮ ಹಾಜರಿದ್ದರು.

ಕಾನೂನು ಅರಿವು-ನೆರವು ಕಾರ್ಯಕ್ರಮ

0

ಈ ಭೂಮಿಯ ಮೇಲೆ ಮನುಷ್ಯ ಬದುಕಲು ಅನ್ನ, ನೀರು, ಗಾಳಿ ಎಷ್ಟು ಮುಖ್ಯವೋ ಕಾನೂನಿನ ತಿಳುವಳಿಕೆ ಹಾಗೂ ಪಾಲನೆಯೂ ಅಷ್ಟೇ ಮುಖ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಶೀಲಾ ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಯ ಆಶ್ರಯದಲ್ಲಿ ಬಶೆಟ್ಟಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಈಚೆಗೆ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲರೂ ಕಾನೂನು ಅರಿತು ತಮ್ಮ ಇತಿಮಿತಿಯಲ್ಲಿ ನಡೆದುಕೊಂಡರೆ ಸುಖ, ಶಾಂತಿ, ನೆಮ್ಮದಿಯ ಬದುಕು ನಡೆಸಬಹುದು. ಆದ್ದರಿಂದಲೆ ಎಲ್ಲ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು, ಗೃಹಣಿಯರು, ವ್ಯಾಪಾರಸ್ಥರು, ಉದ್ಯೋಗಿಗಳುಮ ನೌಕರರು ಸೇರಿ ಎಲ್ಲ ವರ್ಗದವರಿಗೂ ಕಾನೂನಿನ ಅರಿವು ಮೂಡಿಸುವ ಕೆಲಸ ಕಾನೂನು ಸೇವಾ ಸಮಿತಿಯಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯ ದೇವರಾಜ ಅರಸ್ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ಬಗ್ಗೆ ಇನ್ನೂ ಸಾಕಷ್ಟು ಮಂದಿಗೆ ತಿಳಿದಿಲ್ಲ. ಇದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಅಭಿಪ್ರಾಯಪಟ್ಟರು.
ಕಡ್ಡಾಯ ಶಿಕ್ಷಣದ ಹಕ್ಕು ಕುರಿತು ವಕೀಲರಾದ ಬಾಸ್ಕರ್ ಉಪನ್ಯಾಸ ನೀಡಿದರೆ, ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯ ಪೊಸ್ಕೋ ಕಾಯಿದೆ ಕುರಿತು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್ಐ ರಾಘವೇಂದ್ರ ಸವಿವರವಾಗಿ ವಿವರಿಸಿದರು.
ಬಶೆಟ್ಟಹಳ್ಳಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಲಕ್ಷ್ಮಿ, ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಎಸ್ಐ ಪುರುಷೋತ್ತಮ್, ಸರ್ಕಾರಿ ವಕೀಲರಾದ ಈ.ಡಿ.ಶ್ರೀನಿವಾಸ್, ಎಸ್.ಕುಮುದಿನಿ, ವಕೀಲರಾದ ಟಿ.ವಿ.ಚಂದ್ರಶೇಖರ್, ಲೊಕೇಶ್, ಕೆ.ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗಂಗಮ್ಮ ದೇವಿಗೆ ಲಕ್ಷ್ಮೀ ಅಲಂಕಾರ

0

ಪಟ್ಟಣದ ಕಾಮಾಟಿಗರ ಪೇಟೆಯ ಊರ ದೇವತೆ ಗಂಗಮ್ಮ ದೇವಾಲಯದಲ್ಲಿ ಕಾರ್ತೀಕ ಮಾಸದ ಕಡೆಯ ಶುಕ್ರವಾರದಂದು ನೋಟುಗಳನ್ನು ಬಳಸಿ ಲಕ್ಷ್ಮೀ ಅಲಂಕಾರವನ್ನು ಮಾಡಲಾಗಿತ್ತು.
ಭಕ್ತರು ನೀಡಿರುವ ಒಂದು ಲಕ್ಷಕ್ಕೂ ಹೆಚ್ಚು ಹಣದ ನೋಟುಗಳಿಂದ ದೇವಿಯನ್ನು ವಿಶೇಷವಾಗಿ ಅಲಂಕರಿಸಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪೂಜೆಯಲ್ಲಿ ಪಾಲ್ಗೊಳ್ಳಲು ನೂರಾರು ಮಂದಿ ಆಗಮಿಸಿದ್ದರು.
‘ಪ್ರತಿ ಮಂಗಳವಾರ ಮತ್ತು ಶುಕ್ರವಾರ ಗಂಗಮ್ಮನ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಊರ ದೇವತೆಯಾದ ಗಂಗಮ್ಮನ ಭಕ್ತರು ಅಪಾರ. ಕಾರ್ತೀಕ ಮಾಸದ ಕಡೆಯ ಶುಕ್ರವಾರ ದೀಪೋತ್ಸವ, ಲಕ್ಷ್ಮೀ ಅಲಂಕಾರ ವಿಶೇಷವಾಗಿದೆ’ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ತಿಳಿಸಿದರು.
ಕೆ.ಜಯರಾಮ್, ವೆಂಕಟಾದ್ರಿ, ಅಪ್ಪಿ, ಕೃಷ್ಣಮೂರ್ತಿ, ಛಲಪತಿ, ಮುರಳಿ, ಅರ್ಚಕ ರಾಮು ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾಲ್ಲೂಕಿನ ಯಾದವ ಸಂಘದ ಸದಸ್ಯರ ಮನವಿ

0

ಗೊಲ್ಲ ಸಮುದಾಯದ ಕಾಡುಗೊಲ್ಲ, ಹಟ್ಟಿಗೊಲ್ಲ ಉಪ ಪಂಗಡಗಳನ್ನು ಮಾತ್ರ ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆ ಮಾಡಿ ಇತರೆ ಉಪಪಂಗಡಗಳನ್ನು ಕೈಬಿಟ್ಟಲ್ಲಿ ಅನ್ಯಾಯವಾಗುವುದರಿಂದ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ತಾಲ್ಲೂಕು ಯಾದವ ಸಂಘದ ಸದಸ್ಯರು ಶಿರಸ್ತೆದಾರರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಗೊಲ್ಲ ಜನಾಂಗದ ಕಾಡುಗೊಲ್ಲರು, ಹಟ್ಟಿಗೊಲ್ಲರು ಎಂಬ ಉಪ ಪಂಗಡಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆಗೊಳಿಸುವ ಬಗ್ಗೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಅನುಮೋದನೆಗೆ ತರುತ್ತಿದ್ದಾರೆ. ರಾಜ್ಯದ ಎಲ್ಲಾ 29 ಜಿಲ್ಲೆಗಳಲ್ಲಿಯೂ ಗೊಲ್ಲ ಜನಾಂಗದ ಸಮುದಾಯ ಹರಡಿದೆ. ಅವರುಗಳನ್ನು ಗೊಲ್ಲ, ಯಾದವ್, ಯಾದವ, ಆಸ್ಥಾನಗೊಲ್ಲ, ಅಡವಿಗೊಲ್ಲ, ಗೋಪಾಲ, ಗೋಪಾಲಿ, ಗೌಳಿ, ಗಾವ್ಳಿ, ಗಾವಳಿ, ಗಾವ್ಲಿ, ಅನುಬರು, ಅಟನಬರು, ಹಣಬರ್, ಕಾವಡಿ, ಕೊಲಯನ್, ಕೊನಾರ್, ಕೊನ್ನೂರ್, ಕೃಷ್ಣಗೌಳಿ, ಕೃಷ್ಣಗೊಲ್ಲ, ಮಣಿಯಾನಿ ಮುಂತಾದ ಉಪಪಂಗಡಗಲ ಹೆಸರುಗಳಿಂದ ಕರೆಯಲ್ಪಡುತ್ತಾರೆ.
ಅವರ ಮೂಲ ವೃತ್ತಿ ಪಶುಪಾಲನೆ, ಹೈನುಗಾರಿಕೆ, ಕುರಿಸಾಕಾಣಿಕೆ ಹಾಗೂ ಕೃಷಿಯಾಗಿದೆ. ಈ ಸಮಾಜವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿಯೂಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ ಸುಮಾರು 40 ರಿಂದ 45 ಲಕ್ಷದಷ್ಟು ಜನಸಂಖ್ಯೆಯಿದ್ದು, ಜನಾಂಗದವರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು. ರಾಜ್ಯದ ಸಮಸ್ತ ಗೊಲ್ಲ ಸಮುದಾಯ ಹಾಗೂ ಅದರ ಉಪಜಾತಿ ಪಂಗಡಗಳನ್ನು ಪರಿಶಿಷ್ಠ ಪಂಗಡಕ್ಕೆ ಸೇರ್ಪಡೆಗೊಳಿಸಲು ಸಚಿವ ಸಂಪುಟದಲ್ಲಿ ಶಿಫಾರಸು ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕು ಯಾದವ ಸಂಘದ ಅಧ್ಯಕ್ಷ ಕೆ.ಯೋಗಾನಂದ, ಪ್ರಧಾನ ಕಾರ್ಯದರ್ಶಿ ಜಿ.ರಾಮಚಂದ್ರಪ್ಪ, ಜಂಟಿ ಕಾರ್ಯದರ್ಶಿ ಡಿ.ಆರ್.ನರಸಿಂಹರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ಗ್ರಾಮ ಸಭೆ

0

‘ಪ್ಲಾಸ್ಟಿಕ್ ಬಳಸುವುದಿಲ್ಲ. ನಮ್ಮ ಶಾಲೆಯಲ್ಲಿ ಮತ್ತು ಗ್ರಾಮ ಪಂಚಾಯತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸುತ್ತೇವೆ’ ಎಂದು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟವರು ರಾಜ್ಯ ಸರ್ಕಾರದ ಲೋಕ ಅದಾಲತ್ನ ಸದಸ್ಯ ಹಾಗೂ ಪರಿಸರವಾದಿ ಡಾ. ಆ.ನ ಯಲ್ಲಪ್ಪರೆಡ್ಡಿ.
ತಾಲ್ಲೂಕಿನ ಮಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ನಡೆದ ‘ಮಕ್ಕಳ ಗ್ರಾಮ ಸಭೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಕ್ಕಳಿಗೆ ತಿಳುವಳಿಕೆ ನೀಡುವುದರ ಮೂಲಕ ಹಿರಿಯರಿಗೂ ಸಂದೇಶವನ್ನು ರವಾನಿಸಿದರು.
ಮಕ್ಕಳು ಹಾಗೂ ಸಸಿ ಎರಡೂ ಒಂದೆ. ಇಂದು ನಾವು ಬೆಳೆಸಿದ ಸಸಿ ಒಂದಲ್ಲ ಒಂದು ದಿನ ನೆರಳು, ಫಲ ಕೊಟ್ಟೆ ಕೊಡುತ್ತದೆ. ಹಾಗೆಯೆ ನಾವು ಉತ್ತಮವಾಗಿ ಬೆಳೆಸಿದ ಒಬ್ಬ ವಿದ್ಯಾರ್ಥಿ ಇಂದಲ್ಲ ನಾಳೆ ಈ ಸಮಾಜಕ್ಕೆ ಉತ್ತಮ ಕೊಡುಗೆಯಾಗಬಲ್ಲ ಎಂದು ಈ ಸಂದರ್ಭದಲ್ಲಿ ಡಾ. ಆ.ನ ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.
ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಪ್ರೌಢಶಾಲೆಯ ವಿದ್ಯಾರ್ಥಿಗಳು, ಮಳ್ಳೂರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿಗಳು, ಮೇಲೂರು ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದ ‘ಮಕ್ಕಳ ಗ್ರಾಮ ಸಭೆ’ಯಲ್ಲಿ ವಿದ್ಯಾರ್ಥಿಗಳು ತಮ್ಮ ಗ್ರಾಮ, ಶಾಲೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಬಿ.ಕಾವೇರಿ ಅವರ ಮುಂದಿಟ್ಟು ಪರಿಹಾರವನ್ನು ಪಡೆದರು.
ಮತ್ತೂರಿನ ಪ್ರೌಢಶಾಲೆಯಲ್ಲಿ ಹೆಚ್ಚುವರಿ ಶೌಚಾಲಯ ಬೇಕೆಂದಾಗ ತಕ್ಷಣ ಅದಕ್ಕಾಗಿ 35 ಸಾವಿರ ರೂಗಳನ್ನು ಮಂಜೂರು ಮಾಡುವುದಾಗಿ ಸಿಇಒ ಘೋಷಿಸಿದರು. ಮುತ್ತೂರು ಹಾಗೂ ಮಳ್ಳೂರಿನಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ ಎಂದಾಗ ಗ್ರಾಮ ಪಂಚಾಯತಿ ಅಧ್ಯಕ್ಷ ನಿಶಾಂತ್ ಕೊಳವೆ ಬಾವಿಗಳು ಕೊರೆಸಿದರೂ ನೀರು ಸಿಗುತ್ತಿಲ್ಲವೆಂದು ಹತಾಶರಾಗಿ ನುಡಿದರು. ಆಗ ಡಾ. ಆ.ನ ಯಲ್ಲಪ್ಪರೆಡ್ಡಿ ಮಳೆನೀರು ಕೊಯ್ಲಿನ ಯೋಜನೆ ರೂಪಿಸೋಣ ಎಂದು ಆಶಾಭಾವವನ್ನು ತುಂಬಿದರು.
ಅಂಗನವಾಡಿ ಕಟ್ಟಡಗಳ ಸಮಸ್ಯೆ, ಬೀದಿ ದೀಪಗಳ ಸಮಸ್ಯೆ, ನೈರ್ಮಲ್ಯದ ಕುರಿತಂತೆ ಮಕ್ಕಳು ಕೇಳುತ್ತಿದ್ದಂತೆಯೇ ತಕ್ಷಣ ಆಯಾ ಅಧಿಕಾರಿಗಳಿಗೆ ಆ ಬಗ್ಗೆ ಕ್ರಮ ಕೈಗೊಳ್ಳಲು ಸಿಇಒ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಬಿ.ಕಾವೇರಿ, ‘ವಿದ್ಯಾರ್ಥಿಗಳಲ್ಲಿ ನಮ್ಮ ಸುತ್ತ ಮುತ್ತ ಶೈಕ್ಷಣಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ, ಸಾಮಾಜಿಕ ಇನ್ನಿತರೆ ಕ್ಷೇತ್ರಗಳಲ್ಲಿ ಏನು ಅಭಿವೃದ್ದಿಯಾಗುತ್ತಿದೆ, ಇಲ್ಲ ಎನ್ನುವ ವಿಚಾರಗಳು ಗಮನಕ್ಕೆ ಬರುತ್ತವೆಯಲ್ಲದೆ ಅವು ಸಾಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುತ್ತವೆ. ಎಲ್ಲಾ ಮನೆಗಳಲ್ಲೂ ಶೌಚಾಲಯವಿರುವು ಕಡ್ಡಾಯ. ನೈರ್ಮಲ್ಯದಿಂದ ಆರೋಗ್ಯ ವೃದ್ಧಿಸುತ್ತದೆ. ಆಸ್ಪತ್ರೆಗೆ ಖರ್ಚು ಮಾಡುವ ಹಣದಲ್ಲಿ ಶೌಚಾಲಯ ನಿರ್ಮಿಸಬಹುದು’ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೆಶಕಿ ಸುರೇಖಾ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಹಣಾಧಿಕಾರಿ ಗಣಪತಿ ಸಾಕರೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮಿದೇವಮ್ಮ, ಕಾರ್ಮಿಕ ಅಧಿಕಾರಿ ರಾಮಪ್ಪ, ಮಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಿಶಾಂತ್, ಮಳ್ಳೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಗೌರಮ್ಮ, ನಮ್ಮ ಮುತ್ತೂರು ಸಂಸ್ಥೆಯ ಕಾರ್ಯದರ್ಶಿ ಉಷಾಶೆಟ್ಟಿ, ಸಿಎಂಸಿ ಕಾರ್ಯಕರ್ತ ಸುನಿಲ್ಕುಮಾರ್, ನೇತಾಜಿ ರೂರಲ್ ಡೆವಲೆಪ್ಮೆಂಟ್ ಸೊಸೈಟಿಯ ಅಧ್ಯಕ್ಷ ಜಿ.ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು

0

ಮರಾಠರು ಧಾಳಿ ಮಾಡಿದ್ದ ಶೃಂಗೇರಿ ದೇವಸ್ಥಾನಕ್ಕೆ ರಕ್ಷಣೆ ನೀಡಿದ್ದ ಟಿಪ್ಪು ಸುಲ್ತಾನ್ ಸಾಮರಸ್ಯವನ್ನು ಪ್ರತಿಪಾದಿಸುವ ವ್ಯಕ್ತಿತ್ವ ಎಂದು ಕೈವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹಮ್ಮದ್ ಖಾಸಿಂ ತಿಳಿಸಿದರು.
ಪಟ್ಟಣದ ದಿಬ್ಬೂರಹಳ್ಳಿ ರಸ್ತೆಯ ದರ್ಗಾ ಬಳಿ ಟಿಪ್ಪು ಅಭಿಮಾನಿ ಬಳಗದಿಂದ ಗುರುವಾರ ನಡೆದ ಟಿಪ್ಪು ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊಟ್ಟಮೊದಲು ಯುದ್ಧದಲ್ಲಿ ಕ್ಷಿಪಣಿಯ ಪ್ರಯೋಗಿಸಿದ್ದ ಕಾರಣಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯವರು ಟಿಪ್ಪುವಿನ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ. ದೇಶಕ್ಕಾಗಿ ಹೋರಾಡಿ ಮಡಿದ ಟಿಪ್ಪು ಸುಲ್ತಾನ್ ಭಾವಚಿತ್ರವೇ ನಮ್ಮಲ್ಲಿಲ್ಲದಿರುವುದು ದೊಡ್ಡ ದುರಂತ. ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಣೆ ಮಾಡಬೇಕು ಎಂದು ಒತ್ತಾಯಿಸಿದರು.
ಭಗವಂತನ ರಾಜ್ಯದ ಸೇವಕನೆಂದು ತನ್ನನ್ನು ಕರೆದುಕೊಂಡಿದ್ದ ಈ ಧೀಮಂತ ನಾಯಕನನ್ನು ದೇಶದ ದುರಂತ ನಾಯಕನನ್ನಾಗಿ ಪ್ರತಿಬಿಂಬಿಸಿರುವುದು ದುರದೃಷ್ಟಕರ ಎಂದು ಹೇಳಿದರು.
ಟಿಪ್ಪು ಅಭಿಮಾನಿ ಬಳಗದಿಂದ ಟಿಪ್ಪು ವೇಷಧಾರಿ ಹಾಗೂ ಭಾವಚಿತ್ರದೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.
ಪುರಸಭಾ ಸದಸ್ಯ ಶಫೀವುಲ್ಲಾ, ಸಮತಾ ಸೈನಿಕ ದಳದ ಶ್ರೀರಾಮ್, ಟಿಪ್ಪು ಅಭಿಮಾನಿ ಸಂಘದ ಅಬ್ದುಲ್ ರಶೀದ್, ಡಾ.ಸತ್ಯನಾರಾಯಣ್, ಟಿಪ್ಪು ಸೆಕ್ಯುಲರ್ ಸೇನೆ ರಾಜ್ಯ್ಯ ಸಂಚಾಲಕ ಡಾ.ಶಬ್ಬೀರ್, ಮೊಯುದ್ದೀನ್ ಪಾಷ, ರಸೂಲ್, ಮೌಲಾ, ಜೈ ಹಿಂದ್ ಆಟೋ ಚಾಲಕರ ಅಪ್ಪು, ಗಿರಿಧರ್, ರಘು, ಯೂಸುಫ್, ಮಹಬೂಬ್ ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಮಕ್ಕಳ ಸುರಕ್ಷ ಸಮಿತಿ’ಯನ್ನು ಶಾಲೆಗಳಲ್ಲಿ ರಚಿಸಿ

0

ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ತಾಲ್ಲೂಕಿನ ಖಾಸಗಿ, ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹಾಗೂ ಮಹಿಳಾ ಸಿಬ್ಬಂದಿಗಳ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳನ್ನು ತಡೆಯಲು ಸರ್ಕಾರ ಮುಂದಾಗಿದೆ. ಪ್ರತಿಯೊಂದು ಶಾಲೆಯೂ ತನ್ನ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಶಾಲೆಯ ಮಾಹಿತಿ, ಆಡಳಿತ ಮಂಡಳಿಯ ಪದಾಧಿಕಾರಿಗಳ ಹೆಸರು, ವಿಳಾಸ, ಶಿಕ್ಷಕರು ಮತ್ತು ಸಿಬ್ಬಂದಿಗಳ ವಿವರಗಳನ್ನು ಒದಗಿಸಬೇಕು. ಶಾಲಾ ಮಟ್ಟದಲ್ಲಿ ‘ಮಕ್ಕಳ ಸುರಕ್ಷ ಸಮಿತಿ’ಯನ್ನು ರಚಿಸಬೇಕು. ಪೋಷಕರ ಜವಾಬ್ದಾರಿಗಳ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು. ಶಾಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಶಾಲಾ ವಾಹನಗಳ ನಿರ್ವಹಣೆ ಸೇರಿದಂತೆ ವಿವಿಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಮಹಿಳೆಯರ, ಮಕ್ಕಳ ಹಾಗೂ ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು, ಕಿರುಕುಳ, ಅತ್ಯಾಚಾರಗಳು ರಾಜ್ಯದ ವಿವಿದೆಡೆಗಳಲ್ಲಿ ನಡೆಯುತ್ತಿರುವುದನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಮಕ್ಕಳ ಹಿತದೃಷ್ಠಿಯಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳೂ ಪಾಲಿಸಬೇಕೆಂದು ಹೇಳಿದರು.
ಶಿಕ್ಷಣ ಸಂಯೋಜಕರಾದ ರಾಮಣ್ಣ, ಲಕ್ಷ್ಮೀನರಸಿಂಹಗೌಡ, ತಾಲ್ಲೂಕಿನ ಶಿಕ್ಷಣ ಸಂಸ್ಥೆಗಳ ಮುಖ್ಯ ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ಶಿಡ್ಲಘಟ್ಟಕ್ಕೆ 23 ರಂದು ಡಾ.ಎನ್.ಆರ್.ನಾರಾಯಣಮೂರ್ತಿ ಭೇಟಿ

0

ಇನ್ಫೋಸಿಸ್ ಸಂಸ್ಥಾಪಕ ಡಾ.ಎನ್.ಆರ್.ನಾರಾಯಣಮೂರ್ತಿ ತಮ್ಮ ಹುಟ್ಟೂರು ಶಿಡ್ಲಘಟ್ಟಕ್ಕೆ ನವೆಂಬರ್ 23 ರ ಭಾನುವಾರದಂದು ಆಗಮಿಸುತ್ತಿದ್ದಾರೆ.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ವಿಪ್ರ ಜನಾಂಗದ ಪ್ರತಿಭಾವಂತರು ಮತ್ತು ಸಾಧಕರಿಗೆ ಸನ್ಮಾನಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಡಿ.ಟಿ.ಸತ್ಯನಾರಾಯಣರಾವ್, ಉದ್ಘಾಟನೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಡಾ.ಬಿ.ಎನ್.ವಿ.ಸುಬ್ರಮಣ್ಯ, ಮುಖ್ಯ ಅತಿಥಿಗಳಾಗಿ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಎಸ್.ಪಿ.ಕುಲಕರ್ಣಿ, ಶಾಸಕ ಎಂ.ರಾಜಣ್ಣ, ಬಿ.ವಿ.ಮಂಜುನಾಥ್, ಬಿ.ಸಿ.ಸೀತಾರಾಮರಾವ್, ಪ್ರಸನ್ನಕುಮಾರ್, ಎನ್.ಕೆ.ಗುರುರಾಜರಾವ್ ಭಾಗವಹಿಸುವರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರರಾದ ಡಾ.ಕೃಷ್ಣಮೂರ್ತಿ ವೆಂಕಟರಾಮ್, ಬಿ.ವಿ.ಪಾಂಡುರಂಗರಾವ್, ಎನ್.ಆರ್.ಸಮರ್ಥರಾಮ್, ಕ್ರಮಧಾತಿ ಶ್ರೀಧರ್, ಕ್ಯಾಪ್ಟನ್ ಸುನಿಲ್ ಕುಮಾರ್ ಅವರನ್ನು ಸನ್ಮಾನಿಸಲಾಗುತ್ತದೆ.

ಶಿಡ್ಲಘಟ್ಟದ ಮುಂಜಾನೆಯ ಮಂಜು

0

ಮುಂಜಾನೆಯ ಮಂಜು..
ಬೆಳಗಿನ ಚುಮು ಚುಮು ಚಳಿ..
ಹಸಿರು ಹುಲ್ಲು ಹಾಸಿನ ಮೇಲೆ ಇಬ್ಬನಿಯ ಹನಿಗಳು..
ಶಿಡ್ಲಘಟ್ಟದಲ್ಲಿ ಗುರುವಾರದ ಮುಂಜಾವು ಸದ್ದಿಲ್ಲದೆ ಮಂಜಿನಲ್ಲಿ ಮೀಯುತ್ತಿತ್ತು. ಡಿಸೆಂಬರಿನ ಕೊರೆಯುವ ಚಳಿ ಹೊಸ್ತಿಲಲ್ಲೇ ಇದೆ ಎಂಬುದನ್ನು ನೆನಪಿಸುವ ರೀತಿಯಲ್ಲಿ ತಾಲ್ಲೂಕಿನಲ್ಲಿ ದಟ್ಟ ಹಿಮವು ಆವರಿಸಿತ್ತು. ಬೆಳಿಗ್ಗೆ ಎಂಟು ಗಂಟೆಯದರೂ ರಸ್ತೆಗಳಲ್ಲಿ ವಾಹನಗಳು ದೀಪ ಉರಿಸುತ್ತಲೇ ಸಂಚರಿಸಬೇಕಾಯಿತು.
ಬೆಳಿಗ್ಗೆ ನಿದ್ದೆಯಿಂದೆದ್ದು ಹೊರಗೆ ಬಂದವರಿಗೆ ಮತ್ತೊಂದು ಬಿಳಿಯ ಕನಸಿನ ಲೋಕ ಕಣ್ಮುಂದೆ ತೆರೆದುಗೊಂಡಿತ್ತು. ಅದು ಕನಸಲ್ಲ, ಉದ್ದಕ್ಕೂ ಹಬ್ಬಿದ ಇಬ್ಬನಿಯ ಇಹದ ಲೋಕ ಎಂದು ತಿಳಿಯಲು ಕೆಲ ಕ್ಷಣಗಳು ಬೇಕಾದವು. ಹೀಗೆ ಚಳಿಗಾಲದ ಪ್ರಾರಂಭವು ಹೊಸ ಬಗೆಯಲ್ಲಿ ಆರಂಭಗೊಂಡಿತು.
ವಾಹನಗಳಲ್ಲಿ ಸಂಚರಿಸುತ್ತಿದ್ದವರ ತಲೆಕೂದಲು ಹಾಗೂ ಮುಖದ ಮೇಲೆಲ್ಲಾ ಮಂಜಿನ ಹನಿಗಳು ಮೂಡಿದ್ದರೆ, ದಾರಿಯುದ್ದಕ್ಕೂ ಬೆಳೆದ ಹುಲ್ಲು, ಗರಿಕೆ, ವನಕುಸುಮಗಳ ಮೇಲೆ ಇಬ್ಬನಿಯು ಮುತ್ತುಗಳಂತೆ ಕಂಗೊಳಿಸುತ್ತಿದ್ದವು. ಗಿಡಗಂಟೆಗಳ ಮೇಲೆ ಹಬ್ಬಿದ ಜೇಡರ ಬಲೆಗಳ ಮೇಲೂ ಮಂಜಿನ ಹನಿಗಳು ಮಣಿಗಳಂತೆ ಮೂಡಿ ಕಿರು ಬಿಸಿಲಿಗೆ ಹೊಳೆಯುತ್ತಿದ್ದವು.
ಎಲ್ಲವೂ ಇಬ್ಬನಿಯ ಹಾಸಿಗೆಯಲ್ಲಿ ಮಲಗಿ ನಿದ್ದೆ ಹೋದಂತೆ ಇತ್ತು. ಎಲ್ಲವೂ ಇದ್ದರೂ ಕಾಣದಂತಿತ್ತು. ದಾರಿಬದಿಯ ಮರಗಳಿಂದ ಇಬ್ಬನಿಯ ತುಂತುರಿನ ಸೋನೆ ಮಳೆಯೂ ಜಿನುಗುತ್ತಿತ್ತು. ಬೆಳಿಗ್ಗೆ ಒಂಬತ್ತರ ವೇಳೆಗೆ ಹೊರ ಬಂದರೂ ಸೂರ್ಯ ಮಂಜಿನ ಮರೆಯಲ್ಲಿ ಚಂದ್ರನಂತೆ ಹೊಳೆಯುತ್ತಿದ್ದ.
ಕಾಲಕ್ಕೆ ತಕ್ಕಂತೆ ವ್ಯಾಪಾರ ಮಾಡುವ ತಳ್ಳು ಗಾಡಿಗಳವರು ಚಳಿಗಾಲದ ಟೊಪ್ಪಿ, ಮಫ್ಲರ್ ಮುಂತಾದ ಉಡುಪುಗಲ ಮಾರಾಟದಲ್ಲಿ ತೊಡಗಿದ್ದರು. ಬೆಳಿಗ್ಗೆ ನಿತ್ಯ ಕಾಯಕದಲ್ಲಿ ನಿರತರಾಗುವ ಕಟ್ಟಡ ಕಾರ್ಮಿಕರು ಬೆಚ್ಚನೆಯ ಉಡುಪುಗಳ ಚೌಕಾಸಿಯಲ್ಲಿ ನಿರತರಾಗಿದ್ದರು.
ಮುಂಜಾನೆಯ ಕೆಲಸದಲ್ಲಿ ತೊಡಗಿಕೊಳ್ಳುವ ಹಾಲು, ಹೂ, ತರಕಾರಿ ಮತ್ತು ಪತ್ರಿಕೆ ವಿತರಕರು ಚಳಿಗೆ ನಡುಗುತ್ತಾ ತಮ್ಮ ಕೆಲಸ ಮಾಡಿದರೆ, ಬೆಳಗಿನ ವಾರ್ತಾ ಪತ್ರಿಕೆ ಓದುತ್ತಾ ಬಿಸಿ ಚಹಾ ಅಥವಾ ಕಾಫಿ ಸೇವಿಸುತ್ತಾ ಹಲವರು ಚಳಿಯ ಸುಖಾನುಭವವನ್ನು ಸವಿದರು.
 
[images title=”ಮುಂಜಾನೆಯ ಮಂಜು” cols=”four” auto_slide=”true” lightbox=”true”]
[image link=”2253″ image=”2253″]
[image link=”2255″ image=”2255″]
[image link=”2254″ image=”2254″]
[image link=”2256″ image=”2256″]
[/images]

ನಾಗಲಮುದ್ದಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

0

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಎದ್ದಲತಿಪ್ಪೇನಹಳ್ಳಿ ಗ್ರಾಮದ ನಾಗಲಮುದ್ದಮ್ಮ ದೇವಾಲಯದಲ್ಲಿ ಕಾರ್ತೀಕ ಮಾಸದ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ದೇವಾಲಯವನ್ನು ಈಚೆಗೆ ಜೀರ್ಣೋದ್ಧಾರ ಮಾಡಿದ್ದು, ಕಾರ್ತೀಕ ಮಾಸದ ಆಚರಣೆಯ ಸಂದರ್ಭದಲ್ಲಿ ಲಕ್ಷ ದೀಪೋತ್ಸವ, ವಿಶೇಷ ಪೂಜೆ ನಡೆಸಲಾಯಿತು. ಅತ್ಯಂತ ಪುರಾತನವಾದ ಈ ದೇವಾಲಯಕ್ಕೆ ಸುತ್ತಮುತ್ತಲ ಗ್ರಾಮಗಳಿಂದಲ್ಲದೆ ದೂರದೂರುಗಳಿಂದಲೂ ಭಕ್ತರು ಆಗಮಿಸಿದ್ದು ಪೂಜೆಯಲ್ಲಿ ಪಾಲ್ಗೊಂಡರು. ಅಭಿಷೇಕ, ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ವೀರಗಾಸೆ, ಕರಡಿ ಸಮ್ಮೇಳನ ಮತ್ತು ನಾಸಿಕ್ ಡೋಲ್ ವಿಶೇಷ ಆಕರ್ಷಣೆಯಾಗಿತ್ತು.

ಸಹಕಾರಿ ಸಪ್ತಾಹ ಸಮಾರಂಭ

0

ಸಹಕಾರಿ ಸಂಘವು ಅಭಿವೃದ್ಧಿಯ ಹಾದಿಯಲ್ಲಿ ಸಾಗಿ ತನ್ನ ವ್ಯಾಪ್ತಿಯನ್ನು ಗ್ರಾಮೀಣ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದರೆ ಜನತೆಯ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪಟ್ಟಣದ ಭೂ ಅಭಿವೃದ್ಧಿ ಬ್ಯಾಂಕಿನ ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಹಕಾರಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿಯೊಂದು ಸಹಕಾರ ಸಂಘಗಳ ಮುಖಾಂತರ ಹಳ್ಳಿಗಳ ಅಭಿವೃದ್ಧಿಯಾಗಬೇಕು. ಸಹಕಾರಿ ಸಂಘಗಳಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು. ಸುಮಾರು ೧೧೦ ವರ್ಷಗಳ ಇತಿಹಾಸವಿರುವ ಸಹಕಾರಿ ಕ್ಷೇತ್ರದ ಉದ್ದೇಶ ಶೋಷಣೆ ರಹಿತ ಸಮಾಜ ನಿರ್ಮಾಣ, ಬಡತನ ನಿವಾರಣೆ, ಸ್ವಾವಲಂಬನೆಗೆ ಒತ್ತು ನೀಡುವುದಾಗಿದೆ. ಸಹಕಾರಿ ಸಂಘದ ಮುಖಾಂತರ ಸ್ವಚ್ಚತೆಯನ್ನು ಕಾಪಾಡುವಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಸಹಕಾರಿ ಸಂಘಗಳ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿ ಲಾಭಯುತ ವ್ಯಾಪಾರಗಳನ್ನು ನಡೆಸಬೇಕು ಎಂದು ಹೇಳಿದರು.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ಸಹಕಾರ ಸಂಘಗಳು ಜನರ ಅಭಿವೃದ್ದಿಯ ಕಡೆಗೆ ಹೆಚ್ಚು ಗಮನ ನೀಡಬೇಕು. ಹಾಲಿನ ಡೈರಿಗಳಲ್ಲಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮುಖಾಂತರ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟುಮಾಡಬೇಕು. ಹಾಲಿನ ಗುಣಮಟ್ಟದಲ್ಲಿ ಶೇ ೯೬ ರಷ್ಟು ಚೇತರಿಕೆ ಕಂಡಿದ್ದು, ಅವಿಭಾಜ್ಯ ಜಿಲ್ಲೆಯಲ್ಲಿ ನಮ್ಮ ತಾಲ್ಲೂಕು ಮೂರನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಶೇ ೧೦೦ ರಷ್ಟು ಗುಣಮಟ್ಟವನ್ನು ಕಾಪಾಡಿ ತಾಲ್ಲೂಕಿಗೆ ಕೀರ್ತಿ ತರಬೇಕು ಎಂದರು.
ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ದಿರುವ ವಂಟೂರು, ಸೀತಹಳ್ಳಿ, ಆನೆಮಡುಗು, ಚೀಮಂಗಲ, ಕುಂದಲಗುರ್ಕಿ, ಜಂಗಮಕೋಟೆ ಸಂಘಗಳ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ನಿರ್ದೇಶಕ ರಮೇಶ್, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಆರ್.ವಿ.ಜಯದೇವ್, ವ್ಯವಸ್ಥಾಪಕ ಸಿ.ಮುನಿಯಪ್ಪ, ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಕೆ.ಜಿ.ಈಶ್ವರಯ್ಯ, ಸಹಕಾರ ಸಂಘಗಳ ಉಪನಿಬಂಧಕಿ ಬಿ.ಜಿ.ಮಂಜುಳಾ, ಸಹಾಯಕ ನಿಬಂಧಕ ಆರಿಫ್ ಉಲ್ಲಾ ಆಸೀಫ್, ವ್ಯವಸ್ಥಾಪಕ ಆರ್. ಲಿಂಗರಾಜು, ನಿರ್ದೇಶಕರಾದ ಎಂ.ಎನ್.ಶಶಿಧರ್, ಲಕ್ಷ್ಮೀಪತಿ, ಕೆ.ಎನ್.ಬಿ.ರೆಡ್ಡಿ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ತಾದೂರು ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

0

ತಾಲ್ಲೂಕಿನ ತಾದೂರು ಗ್ರಾಮದ ವಿನಾಯಕ ಯುವಕರ ಬಳಗದ ವತಿಯಿಂದ ಬುಧವಾರ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು.
ಧ್ವಜಾರೋಹಣ ಮಾಡಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಕನ್ನಡ ನಾಡು, ನುಡಿಯನ್ನು ಉಳಿಸುವ ನಿಟ್ಟಿನಲ್ಲಿ ಯುವಜನತೆ ಒಗ್ಗಟ್ಟಾಗಬೇಕು. ನಮ್ಮ ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವಂತಹ ಕಾರ್ಯಗಳಾಗಬೇಕು. ರಾಜ್ಯೋತ್ಸವ ಸಮಾರಂಭಗಳು ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗಬಾರದು. ವರ್ಷದುದ್ದಕ್ಕೂ ನಮ್ಮ ನಡವಳಿಕೆಯ ಮೂಲಕ ನಡೆಯುವಂತಾಗಬೇಕು, ರಾಜ್ಯದ ಪ್ರತಿಯೊಂದು ಗ್ರಾಮದ ಮನೆ ಮನೆಯಲ್ಲಿಯೂ ಕನ್ನಡ ಹಬ್ಬದ ವಾತಾವರಣ ಮೂಡಬೇಕು’ ಎಂದು ಹೇಳಿದರು.
ಗ್ರಾಮದಲ್ಲಿ ರಾಜ್ಯೋತ್ಸವದ ಅಂಗವಾಗಿ ಯುವಕ ಬಳಗದಿಂದ ಉಚಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ರಮೇಶ್, ಗ್ರಾಮ ಪಂಚಾಯತಿ ಸದಸ್ಯ ಬಿ.ರಘು, ಟಿ.ಎಂ.ಪ್ರಭಾಕರ್, ಡಿ.ಮಂಜುನಾಥ್, ಕೆ.ಮುರಳಿ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಟಿ.ವಿ.ವೇಣುಗೋಪಾಲ್, ರಾಮಾಂಜಿನಪ್ಪ, ಎಸ್.ಎಂ.ನವೀನ್‌ಕುಮಾರ್, ಮುನೇಗೌಡ, ಸಂಪತ್‌ಕುಮಾರ್, ಎಂ.ಗಜೇಂದ್ರ, ಪ್ರಮೋದ್, ಮಧುಕರ್, ಗಂಗರೆಡ್ಡಿ, ಮೂರ್ತಿ, ನರಸಿಂಹಮೂರ್ತಿ, ನಾರಾಯಣಸ್ವಾಮಿ, ನಟರಾಜ್ ಮುಂತಾದವರು ಈ ಸಂದರ್ಭದಲ್ಲಿಹಾಜರಿದ್ದರು.

ಪೊಲೀಸರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಸದಾ ಒತ್ತಡದ ನಡುವೆ ಕೆಲಸ ಮಾಡುವ ಏಕೈಕ ವೃತ್ತಿಯೆಂದರೆ ಅದು ಪೊಲೀಸ್ ವೃತ್ತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾಗೋಪಿನಾಥ್ ಹೇಳಿದರು.
ಪಟ್ಟಣದ ಮಾನಸ ನರ್ಸಿಂಗ್ ಹೋಂ ಆವರಣದಲ್ಲಿ ಮಂಗಳವಾರ ಮಾನಸ ಮೆಡಿಕಲ್ ಟ್ರಸ್ಟ್ ನ ವತಿಯಿಂದ ಪೊಲೀಸ್ ಇಲಾಖೆ ಸಿಬ್ಬಂದಿ ಹಾಗು ಅವರ ಕುಟುಂಬದವರಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸದಾ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುವ ಪೊಲೀಸರು ತಮ್ಮ ಆರೋಗ್ಯದ ಕಡೆ ಗಮನ ವಹಿಸಬೇಕು. ಬರೀ ಕರ್ತವ್ಯ ಎಂದು ಹೇಳಿಕೊಂಡು ಆರೋಗ್ಯ ಹಾಳುಮಾಡಿಕೊಂಡರೆ ನಿಮ್ಮನ್ನೇ ನಂಬಿರುವ ನಿಮ್ಮ ಕುಟುಂಬದ ಸದಸ್ಯರ ಗತಿಯೇನು. ಹಾಗಾಗಿ ಪ್ರತಿಯೊಬ್ಬರು ತಮ್ಮ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾನಸ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಹೆಚ್.ನರಸಾರೆಡ್ಡಿ, ಡಾ.ಮಧುಕರ್, ಸ್ತ್ರೀ ರೋಗ ತಜ್ಞರಾದ ಡಾ.ಸುಷ್ಮಾ ಸಾಮಗ, ಮಕ್ಕಳತಜ್ಞ ಡಾ.ಎಸ್.ಎ.ರೆಡ್ಡಿ, ಕಣ್ಣಿನತಜ್ಞ ಡಾ.ಶರಣ್, ಡಾ.ನವೀನ್, ಡಾ.ಮಹೇಶ್, ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ, ಪುರಸಭೆ ಸದಸ್ಯ ಚಿಕ್ಕಮುನಿಯಪ್ಪ, ಎಸ್.ಎಂ.ರಮೇಶ್. ಮಾನಸ ಆಸ್ಪತ್ರೆಯ ವ್ಯವಸ್ಥಾಪಕ ಎಂ.ವಿ.ಶಿವಪ್ರಕಾಶ್ ಮತ್ತಿತರರು ಹಾಜರಿದ್ದರು.

ಕಾರ್ತಿಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ದೀಪದಾರತಿ

0

ಕಾರ್ತಿಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ಪಟ್ಟಣ ಸೇರಿದಂತೆ ತಾಲ್ಲೂಕಿನ ಶಿವಾಲಯಗಳಲ್ಲಿ ವಿಶೇಷ ಅಲಂಕಾರ ಸಂಭ್ರಮದಿಂದ ನೆರವೇರಿದವು. ತಾಲ್ಲೂಕಿನಾದ್ಯಂತ ವಿವಿಧ ದೇಗುಲಗಳಲ್ಲಿ ಸೋಮವಾರ ಸಂಜೆ ವಿಶೇಷ ಪೂಜೆಗಳು ಹಾಗೂ ದೀಪದಾರತಿಗಳನ್ನು ನಡೆಸಲಾಯಿತು.
ಕಾರ್ತಿಕ ಮಾಸದ ಕಡೆಯ ಸೋಮವಾರ ದೇವಾಲಯಗಳ ಆವರಣವೆಲ್ಲಾ ಸಾಲು-ಸಾಲು ದೀಪಗಳ ವಿನ್ಯಾಸದಿಂದ ಕೂಡಿದ್ದು, ಮುಸ್ಸಂಜೆಯ ಆ ದಿವ್ಯ ಸಹವಾಸ ದೇವಾನು ದೇವತೆಗಳ ಅನುಗ್ರಹಕ್ಕೆಂದು ಮಹಿಳೆಯರು ಶ್ರದ್ಧೆಯಿಂದ ದೀಪಗಳನ್ನು ಹಚ್ಚುತ್ತಿದ್ದರು.
ಪಟ್ಟಣದ ಕೋಟೆ ವೃತ್ತದ ಸೋಮೇಶ್ವರ ಸ್ವಾಮಿ ದೇವಾಲಯ, ಬೂದಾಳ ಗ್ರಾಮದ ಮಲೆ ಮಲ್ಲೇಶ್ವರ ಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯ, ಚೌಡಸಂದ್ರ ಗ್ರಾಮದ ಸೋಮೇಶ್ವರಸ್ವಾಮಿ ದೇವಸ್ಥಾನ ಮುಂತಾದೆಡೆ ವಿಶೇಷ ಪೂಜೆಗಳು ನಡೆದವು.
ಕಡೆಯ ಕಾರ್ತಿಕ ಸೋಮವಾರವಾದ್ದರಿಂದ ದೇವಾಲಯಗಳಿಗೆ ಭೇಟಿ ನೀಡಿದ್ದ ಭಕ್ತಾಧಿಗಳಿಗೆ ದೇವಾಲಯ ಸೇರಿದಂತೆ ವೈಯಕ್ತಿಕವಾಗಿ ಕೆಲ ಭಕ್ತರು ಪ್ರಸಾದ ವ್ಯವಸ್ಥೆ ಏರ್ಪಡಿಸಿದ್ದರು.

ಎಂ.ಡಿ.ಮುಖೇಶ್ ಗೆ ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಎಂ.ಡಿ.ಮುಖೇಶ್ ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾ ಮಟ್ಟದ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಜಪೇಯಿ ಆರೋಗ್ಯಶ್ರೀ ಉಚಿತ ಆರೋಗ್ಯ ಶಿಬಿರ

0

ಶಿಡ್ಲಘಟ್ಟದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಮವಾರ ಉಚಿತ ಆರೋಗ್ಯ ಶಿಬಿರವನ್ನು ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ನಡೆಸಿ 115 ಮಂದಿ ರೋಗಿಗಳ ತಪಾಸಣೆ ನಡೆಸಲಾಯಿತು.